ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಕೋರುವವರು ತಮ್ಮ ಅರ್ಜಿಗಳೊಂದಿಗೆ 11,000 ರೂ.ಗಳನ್ನು ಜಮಾ ಮಾಡುವಂತೆ ಉತ್ತರ ಪ್ರದೇಶ ಕಾಂಗ್ರೆಸ್ ತಿಳಿಸಿದೆ.
ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದ ಅಭ್ಯರ್ಥಿಗಳನ್ನು ದೂರವಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
“ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಗಳನ್ನು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಅಧಿಕೃತ ವ್ಯಕ್ತಿಗಳಿಗೆ, ಕೊಡುಗೆ ಮೊತ್ತ(contribution amount) 11,000 ರೂಗಳ ಜೊತೆಗೆ ಸೆಪ್ಟೆಂಬರ್ 25, 2021 ರೊಳಗೆ ಸಲ್ಲಿಸಬೇಕು” ಎಂದು ಮಂಗಳವಾರ ಆದೇಶ ಹೊರಡಿಸಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯು (ಯುಪಿಸಿಸಿ) ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.
ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅವಮಾನ: BJP ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಿರುದ್ದ ಪ್ರಕರಣ
ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಅಧಿವೇಶನದ ನಂತರ ಕಳೆದ ವಾರ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು.
“ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಕಾರ್ಯಕರ್ತರು ರಾಜ್ಯ ಅಥವಾ ಜಿಲ್ಲಾ ಕೇಂದ್ರದಲ್ಲಿ ತಮ್ಮ ಅರ್ಜಿಗಳನ್ನು ನೀಡಬಹುದು” ಎಂದು ಕಾಂಗ್ರೆಸ್ ವಕ್ತಾರರಾದ ಡಾ.ಉಮಾ ಶಂಕರ್ ಪಾಂಡೆ ಶನಿವಾರ ಹೇಳಿದ್ದರು.
ಕೊಡುಗೆ ಮೊತ್ತವನ್ನು ಕೇಳುವ ನಿರ್ಧಾರವನ್ನು ವಿವರಿಸಿರುವ ಪಕ್ಷದ ವಕ್ತಾರ ಅಶೋಕ್ ಸಿಂಗ್, ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದ ಅಭ್ಯರ್ಥಿಗಳನ್ನು ದೂರವಿಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದರು.
ಆರ್ಟಿಜಿಎಸ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಮೂಲಕ ಠೇವಣಿ ಇಡಬಹುದು. ಇದಕ್ಕ ರಸೀದಿಯನ್ನು ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯುಪಿಸಿಸಿ ಮಾಧ್ಯಮ ಸಂಚಾಲಕ ಲಾಲನ್ ಕುಮಾರ್, ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸಲು ಮತ್ತು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಜೊತೆಗೆ ಪ್ರಾದೇಶಿಕ ಪಕ್ಷಗಳು ತಯಾರಾಗುತ್ತಿವೆ. ಇದರ ನಡುವೆ ಬಿಜೆಪಿಯನ್ನು ರಾಜಕೀಯವಾಗಿ ಮಣಿಸಲು ನಿರ್ಧರಿಸಿರುವ ರೈತರು ಮಿಷನ್ ಉತ್ತರ ಪ್ರದೇಶ, ಮಿಷನ್ ಉತ್ತರಾಖಂಡ ಮೂಲಕ ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ತಯಾರಾಗಿದ್ದಾರೆ.
ಇದನ್ನೂ ಓದಿ: ಅಸಾದುದ್ದೀನ್ ಒವೈಸಿ ಬಿಜೆಪಿಯ ‘ಚಾಚಾ ಜಾನ್’, ಅವರಿಬ್ಬರೂ ಒಂದೇ ತಂಡ: ಟಿಕಾಯತ್


