ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಂಜಾಬ್ ಸಿಎಂ ಯಾರಾಗಲಿದ್ದಾರೆಂಬ ಕುತೂಹಲ ಮೂಡಿದೆ. ಸುಖ್ಜಿಂದರ್ ಸಿಂಗ್ ರಾಂಧ್ವಾ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗಿದೆ.
62 ವರ್ಷಗಳ ಸುಖ್ಜಿಂದರ್ ಸಿಂಗ್ ರಾಂಧ್ವಾ ಮೂರು ಬಾರಿ (2002, 2007 ಮತ್ತು 2017) ಎಂಎಲ್ಎ ಆದವರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಮಂತ್ರಿ ಮಂಡಲದಲ್ಲಿ ಕಾರಾಗೃಹಗಳು ಹಾಗೂ ಸಹಕಾರ ಸಚಿವರಾಗಿದ್ದರು.
ಪಂಜಾಬ್ನ ಗುರ್ದಾಸ್ಪುರ ಜಿಲ್ಲೆಯ ಮಾಜ್ಹಾ ಪ್ರಾಂತ್ಯದವರು. ಅವರು ಪಂಜಾಬ್ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇವರ ತಂದೆ ಸಂತೋಖ್ ಸಿಂಗ್ ಅವರು ಎರಡು ಬಾರಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಅಲ್ಲದೇ ಮಜ್ಹಾ ಪ್ರಾಂತ್ಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು.
2015ರಲ್ಲಿ ಪಂಜಾಬಿನಲ್ಲಿ ನಡೆದ ಗುರು ಗ್ರಂಥ ಸಾಹೀಬ ಹತ್ಯಾಕಾಂಡ ಪ್ರಕರಣಗಳಲ್ಲಿನ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದೇ ಇರುವುದನ್ನು ಖಂಡಿಸಿ ರಾಂಧವ ಅವರು ಸರ್ಕಾರವನ್ನು ಟೀಕಿಸಿದ್ದರು. ಸದರಿ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದನ್ನು ಪ್ರಸ್ತಾಪಿಸಿದ್ದರು.
ನವಜೋತ್ ಸಿಂಗ್ ಸಿಧು ಜೊತೆ ಕೈಜೋಡಿಸಿದ್ದ ಇವರು, 2017ರ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಿಲ್ಲವೆಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಸಮರ ಸಾರಿದ್ದರು.
ಇದನ್ನೂ ಓದಿ: ಪಂಜಾಬ್: ಸುಖ್ಜಿಂದರ್ ರಾಂಧ್ವಾ ಮುಂದಿನ ಮುಖ್ಯಮಂತ್ರಿ?