ಉತ್ತರ ಪ್ರದೇಶದಲ್ಲಿ ಕಳೆದ ಆರು ತಿಂಗಳ ಹಿಂದೆ ಅತ್ಯಾಚಾರಕ್ಕೆ ಒಳಗಾಗಿದ್ದ 20 ವರ್ಷದ ದಲಿತ ಯುವತಿ ಗರ್ಭಪಾತದ ವೇಳೆ ಮೃತಪಟ್ಟಿದ್ದಾರೆ. ಅತ್ಯಾಚಾರದ ಆರೋಪಿ, ಆತನ ತಂದೆ, ಚಿಕ್ಕಪ್ಪ ಮತ್ತು ಗರ್ಭಪಾತ ನಡೆಸುತ್ತಿದ್ದ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಹಮೀರ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ನಡೆಸಲಾಗುತ್ತಿತ್ತು. ಈ ವೇಳೆ ಸಂತ್ರಸ್ತೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಲಿತ ಯುವತಿ ಕಳೆದ ಆರು ತಿಂಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಅತ್ಯಾಚಾರಕ್ಕೊಳಗಾಗಿದ್ದರು. ಆದರೆ, ಆಕೆ ದೂರು ನೀಡದ ಕಾರಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಮಹಿಳಾ ಕಾನ್ಸ್ಟೇಬಲ್ ಮೇಲೆ ಅತ್ಯಾಚಾರ-ಇಬ್ಬರ ಬಂಧನ
ರಕ್ತಸ್ರಾವದಿಂದಾಗಿ ನರಳುತ್ತಿದ್ದ ಸಂತ್ರಸ್ತೆಯನ್ನು ಸೆಪ್ಟಂಬರ್ 25 ರಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಆಕೆ ಗರ್ಭಿಣಿ ಎಂದು ಕುಟುಂಬ ಸದಸ್ಯರಿಗೆ ತಿಳಿದಿದೆ. ಮರುದಿನ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶೈಲೇಂದ್ರ ಸಿಂಗ್ ವಿರುದ್ಧ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಗರ್ಭಪಾತಕ್ಕೆ ಒತ್ತಡ ಹಾಕಿದ್ದ ಆರೋಪಿಯ ತಂದೆ ರಾಮ್ ನಾರಾಯಣ್ ಮತ್ತು ಚಿಕ್ಕಪ್ಪ ಶಿವ ನಾರಾಯಣ್ ಅವರನ್ನು ಬಂಧಿಸಲಾಗಿದೆ.
ಗರ್ಭಪಾತ ನಡೆಸಿದ್ದರಿಂದ ಸಂತ್ರಸ್ತೆ ಸಾವನ್ನಪ್ಪಿದ್ದಾರೆ ಹೀಗಾಗಿ ಖಾಸಗಿ ಆಸ್ಪತ್ರೆ ವೈದ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, 26 ಆರೋಪಿಗಳ ಬಂಧನ