ಸಿನಿಮಾ ಕ್ಷೇತ್ರದ ಪ್ರತಿಷ್ಠತ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ಸ್’ ಕೆಟಗೆರಿಗೆ ಭಾರತದಿಂದ ತಮಿಳಿನ ಕೂಜಂಗಲ್ ಸಿನಿಮಾವನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ವಿಕ್ಕಿ ಕೌಶಲ್ ನಟನೆಯ ಸರ್ದಾರ್ ಉಧಮ್ ಸಿನಿಮಾವು ಇತ್ತು. ಆದರೆ ಈ ಸಿನಿಮಾವನ್ನು ಆಸ್ಕರ್ ಸ್ಪರ್ಧೆಗೆ ಏಕೆ ಆಯ್ಕೆ ಮಾಡಲಿಲ್ಲ ಎಂದು ವಿವರಿಸಿರುವ ಜ್ಯೂರಿಯ ಸದಸ್ಯರಲ್ಲಿ ಒಬ್ಬರಾದ ಇಂದ್ರದೀಪ್ ದಾಸ್ಗುಪ್ತ, ’ಈ ಸಿನಿಮಾವು ಬ್ರಿಟಿಷರ ಮೇಲಿನ ನಮ್ಮ ದ್ವೇಷವನ್ನು ಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.
ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಸಿನಿಮಾಗಳ ಅಧಿಕೃತ ಪ್ರವೇಶವನ್ನು ನಿರ್ಧರಿಸಿದ ಜ್ಯೂರಿ ಸದಸ್ಯರಾದ ಇಂದ್ರದೀಪ್ ದಾಸ್ಗುಪ್ತ ಅವರು ದಿನಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ, ’ಸರ್ದಾರ್ ಉಧಮ್’ ಸಿನಿಮಾದಲ್ಲಿ ಜಲಿಯನ್ ವಾಲಾಬಾಗ್ ಘಟನೆಯೂ ದೀರ್ಘವಾಗಿದ್ದು, ಹೆಚ್ಚು ಎಳೆಯಲಾಗಿದೆ. ಭಾರತೀಯ ಸ್ವಾತಂತ್ಯ್ರ ಹೋರಾಟದ ಅಸಾಧಾರಣ ನಾಯಕನ ಮೇಲೆ ಅದ್ದೂರಿ ಚಿತ್ರ ನಿರ್ಮಿಸುವುದು ಪ್ರಾಮಾಣಿಕ ಪ್ರಯತ್ನ. ಆದರೆ ಈ ಪ್ರಕ್ರಿಯೆಯಲ್ಲಿ ಮತ್ತೆ ಬ್ರಿಟಿಷರ ಮೇಲೆ ನಮ್ಮ ದ್ವೇಷವನ್ನು ಬಿಂಬಿಸುತ್ತದೆ. ಜಾಗತೀಕರಣದ ಈ ಯುಗದಲ್ಲಿ ದ್ವೇಷವನ್ನು ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ
ಉಧಮ್ ಸಿಂಗ್ ಸಿನಿಮಾ ಬಗ್ಗೆ ಮಾತನಾಡಿರುವ ಅವರು ಚಿತ್ರದ ಛಾಯಾಗ್ರಹಣಣವನ್ನೂ ಶ್ಲಾಘಿಸಿದ್ದು, ‘ಸಿನಿಮಾ ನಿರ್ಮಾಣವು ಅಂತರಾಷ್ಟ್ರೀಯ ಗುಣಮಟ್ಟಕೆ ಅನುಗುಣವಾಗಿದೆ’ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಉಧಮ್ ಸಿನಿಮಾ ಪ್ರೇಮಿಗಳು ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಜ್ಯೂರಿಯ ಮತ್ತೊಬ್ಬ ಸದಸ್ಯರಾದ ಸುಮಿತ್ ಬಸು ಮಾತನಾಡಿ, ’ಉಧಮ್ ಸಿನಿಮಾದಲ್ಲಿನ ಛಾಯಾಗ್ರಹಣ, ಸಂಕಲನ, ಧ್ವನಿ ವಿನ್ಯಾಸ ಮತ್ತು ಆ ಕಾಲಘಟ್ಟದ ಚಿತ್ರಣ ಸೇರಿದಂತೆ ಸಿನಿಮಾದ ಗುಣಮಟ್ಟಕ್ಕಾಗಿ ಅನೇಕರು ಈ ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಈ ಸಿನಿಮಾವೂ ದೀರ್ಘವಾಗಿರುವುದೇ ಸಮಸ್ಯೆ ಎಂದು ನಾನು ಭಾವಿಸಿದೆ. ಈ ಸಿನಿಮಾವು ತುಂಬಾ ತಡವಾದ ಕ್ಲೈಮ್ಯಾಕ್ಸ್ ಹೊಂದಿದ್ದು, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಹುತಾತ್ಮರಾದ ನೋವನ್ನು ಅನುಭವಿಸಲು ವೀಕ್ಷಕನಿಗೆ ಸಾಕಷ್ಟು ಸಮಯ ಬೇಕಾಗುತ್ತದೆ’ ಎಂದಿದ್ದಾರೆ.
ಶೂಜಿತ್ ಸಿರ್ಕಾರ್ ನಿರ್ದೇಶನದ ಸರ್ದಾರ್ ಉಧಮ್ ಸಿನಿಮಾವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಮೈಕೇಲ್ ಓ ಡಯರ್ನನ್ನು ಕೊಂದ ಸ್ವಾತಂತ್ಯ್ರ ಹೋರಾಟಗಾರ ಸರ್ದಾರ್ ಉದಾಮ್ ಸಿಂಗ್ ಅವರ ಜೀವನ ಮತ್ತು ಹೋರಾಟಗಳನ್ನು ಚಿತ್ರಿಸಿದೆ. ಲಂಡನ್ನ ಕ್ಯಾಕ್ಸ್ಟನ್ ಹಾಲ್ನಲ್ಲಿ ನಡೆಯುತ್ತಿದ್ದ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷ್ಯನ್ ಸೊಸೈಟಿಯ ಜಂಟಿ ಸಭೆಯಲ್ಲಿ ಉದಮ್ ಸಿಂಗ್ ಡಯರ್ಗೆ ಗುಂಡು ಹಾರಿಸಿದ್ದರು.
ಅಕಾಡೆಮಿ ಪ್ರಶಸ್ತಿಗಳಿಗೆ ಭಾರತದ ಸಿನಿಮಾವನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಆಯ್ಕೆ ಮಾಡುತ್ತದೆ. ಈ ವರ್ಷ 15 ಸದಸ್ಯರಿರುವ ಜ್ಯೂರಿಗೆ ಚಲನಚಿತ್ರ ನಿರ್ಮಾಪಕ ಶಾಜಿ ಎನ್. ಕರುಣ್ ನೇತೃತ್ವ ವಹಿಸಿದ್ದರು. 94ನೇ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಮ್ಸ್’ ಕೆಟಗೆರಿಯಲ್ಲಿ ಸ್ಫರ್ಧಿಸಲು ಭಾರತದಿಂದ ತಮಿಳು ಭಾಷೆಯ ’ಕೂಜಂಗಲ್ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು.
ಇದನ್ನೂ ಓದಿ: ಸರ್ದಾರ್ ಉಧಮ್: ಇದು ಶೂಜಿತ್ ನ ಗೆಲುವು ಮತ್ತು ಪ್ರಜಾಪ್ರಭುತ್ವದ ಗೆಲುವು