Homeಚಳವಳಿಶಾಲೆಗಳ ವಿಲೀನದ ಬಗ್ಗೆ ದನಿಯೆತ್ತಿದ ಶಿಕ್ಷಕ ವೀರಣ್ಣ ಮಡಿವಾಳರಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

ಶಾಲೆಗಳ ವಿಲೀನದ ಬಗ್ಗೆ ದನಿಯೆತ್ತಿದ ಶಿಕ್ಷಕ ವೀರಣ್ಣ ಮಡಿವಾಳರಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

13,800 ಶಾಲೆಗಳನ್ನು ವಿಲೀನ ಮಾಡಲಾಗುವುದು ಎಂಬ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆಗೆ ವೀರಣ್ಣ ಮಡಿವಾಳರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು.

- Advertisement -
- Advertisement -

13,800 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ರವರು ನೀಡಿದ್ದ ಹೇಳಿಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಶಿಕ್ಷಕ ವೀರಣ್ಣ ಮಡಿವಾಳರಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ರಾಯಭಾಗದ ನಿಡಗುಂದಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ವೀರಣ್ಣ ಮಡಿವಾಳರು ಆ ಶಾಲೆಯ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸಿ ಹೆಸರು ಗಳಿಸಿದ್ದಾರೆ. ದಾನಿಗಳ ನೆರವಿನಿಂದ ತಮ್ಮ ಶಾಲೆಯನ್ನು ಆಕರ್ಷಕ ಮತ್ತು ಕಲಿಕಾ ಸ್ನೇಹಿ ಶಾಲೆಯನ್ನಾಗಿ ಮಾಡುವುದರಲ್ಲಿ ಅವರ ಪಾತ್ರ ದೊಡ್ಡದು. ಅಂತಹ ಶಿಕ್ಷಕರು ಶಾಲೆ ವಿಲೀನ ಮಾಡಬೇಡಿ ಎಂದು ಹೇಳಿದ್ದಕ್ಕೆ ನೋಟಿಸ್ ನೀಡುರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಒಟ್ಟು 48,000 ಸರ್ಕಾರಿ ಶಾಲೆಗಳಿದ್ದು 13,800 ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಆ ಶಾಲೆಗಳನ್ನು ಹೋಬಳಿ ಮಟ್ಟದಲ್ಲಿ ವಿಲೀನ ಮಾಡಿ ಮಕ್ಕಳು ಓಡಾಡಲು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದರು. ಅದನ್ನು ವಿರೋಧಿಸಿ ವೀರಣ್ಣ ಮಡಿವಾಳರು, ಕನ್ನಡ ಪ್ರಭ ಪತ್ರಿಕೆಯ ವರದಿಯನ್ನು ಪೋಸ್ಟ್ ಮಾಡಿ “13800 ಶಾಲೆ ವಿಲೀನ ಅಲ್ಲ…. ಅಷ್ಟು ಶಾಲೆಗಳ ಹತ್ಯಾಕಾಂಡ…. ಸರಕಾರಿ ಶಾಲಾ ಮಕ್ಕಳ ಭವಿಷ್ಯದ ಮಾರಣಹೋಮ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಎಲ್ ಹಂಚಾಟೆಯವರು 2022ರ ಜುಲೈ 22ರಂದು ನೋಟಿಸ್ ಕಳಿಸಿದ್ದು, ಅದರಲ್ಲಿ “13,800 ಸರ್ಕಾರಿ ಶಾಲೆ ವಿಲೀನ ಎಂಬ ತಲೆಬರಹದಡಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ನೀಡಿದ್ದ ಹೇಳಿಕೆಗೆ 13,800 ಶಾಲೆ ವಿಲೀನ ಅಲ್ಲ ಅಷ್ಟು ಶಾಲೆಗಳ ಹತ್ಯಾಕಾಂಡ, ಸರ್ಕಾರಿ ಶಾಲಾ ಮಕ್ಕಳ ಮಾರಣ ಹೋಮ ಎಂದು ಸರ್ಕಾರದ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ನಿಮ್ಮ ಅಭಿಪ್ರಾಯವನ್ನು ಸಾಮಾಜಿಕ ಅಂತರ್ಜಾಲದಲ್ಲಿ ಹರಿಬಿಟ್ಟಿದ್ದು ಇದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ನೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದ್ದು, ಅಲ್ಲದೆ ನಡತೆ ನಿಯಮಗಳು 1966ರ ನಿಯಮ 3ನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದ್ದು ಈ ಕುರಿತು ನಿಮ್ಮ ಮೇಲೆ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂಬುದಕ್ಕೆ ನೋಟಿಸ್ ನೀಡಿದ 03 ದಿನಗಳ ಒಳಗೆ ನಿಮ್ಮ ಸ್ಪಷ್ಟವಾದಿ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಬೇಕು. ಉತ್ತರ ಬಾರದೆ ಇದ್ದಲ್ಲಿ ನಿಮ್ಮ ಹೇಳಿಕೆ ಏನೂ ಇಲ್ಲ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಾಗುವುದು” ಉಲ್ಲೇಖಿಸಲಾಗಿದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಶಿಕ್ಷಕ ವೀರಣ್ಣ ಮಡಿವಾಳರು, “ನಾನೊಬ್ಬ ಶಿಕ್ಷಕನಾಗಿ, ಬರಹಗಾರನಾಗಿ ಸರ್ಕಾರಿ ಶಾಲೆಗಳು ಉಳಿವಿನ ಪರ ದನಿ ಎತ್ತುವುದು ನನ್ನ ಕರ್ತವ್ಯ. ಹಾಗಾಗಿ ಕವಿ ಭಾಷೆಯಲ್ಲಿಯೇ ಎರಡು ಸಾಲು ಬರೆದಿದ್ದೇನೆ. ಈ ಕೆಲಸವನ್ನು ನಾನು ಮಾಡದಿದ್ದರೆ ಮತ್ಯಾರು ಮಾಡಬೇಕು? ಹಾಗಾಗಿ ನೋಟಿಸ್‌ಗೆ ಹೆದರುವ ಪ್ರಶ್ನೆ ಇಲ್ಲ ಎಂದರು.

ಇದುವರೆಗೂ ಮಕ್ಕಳ ಸಂಖ್ಯೆಯ ನೆಪವೊಡ್ಡಿ ಆಶ್ರಮ ಶಾಲೆಗಳನ್ನು ಮುಚ್ಚಲಾಗಿದೆ. ಹಾಸ್ಟೆಲ್‌ಗಳನ್ನು ಮುಚ್ಚಲಾಗಿದೆ. ಅಲ್ಲೆಲ್ಲ ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇವೆ. ಆ ನೋವಿನಲ್ಲಿ ನನ್ನ ಪ್ರತಿಕ್ರಿಯೆ ನೀಡಿದ್ದೇನೆ ಅದರಿಂದ ಹಿಂದೆ ಸರಿಯುವುದಿಲ್ಲ ಎಂದರು.

“ಈ ಹಿಂದೆಯೂ 2010ರಲ್ಲಿ ಭಂಗಿಜೋಳ ಸಮುದಾಯಕ್ಕೆ ಅನ್ಯಾಯವಾಗುತ್ತಿರುವಾಗ ನಾನು ಅವರ ಜೊತೆ ನಿಂತು  ಆ ಕುರಿತು ಬರೆಯದೆ ಇದ್ದರೆ ಇಂದು ಆ ಸಮುದಾಯದ 18 ಜನರಿಗೆ ಸರ್ಕಾರಿ ನೌಕರಿ ಸಿಗುತ್ತಿರಲಿಲ್ಲ. ಅದೇ ರೀತಿ ನಾಯಕನೂರಿನ ದಲಿತರ ಮೇಲೆ ದೌರ್ಜನ್ಯದ ಕುರಿತು ನಾನು ಪ್ರಜಾವಾಣಿಯಲ್ಲಿ ಬರೆಯದೆ ಇದ್ದಿದ್ದರೆ ಅವರಿಗೆ ನ್ಯಾಯ ಮತ್ತು 17 ಎಕರೆ ಜಮೀನು ದೊರಕುತ್ತಿರಲಿಲ್ಲ. ಹಾಗಾಗಿ ನಾನು ಈ ಕೆಲಸ ಮಾಡದಿದ್ದರೆ ಬೇರೆಯವರು ಸಹ ಹಿಂದೆ ಸರಿಯುತ್ತಾರೆ ಎಂದರು.

ಈ ಹಿಂದೆಯೂ ನನ್ನನ್ನು ಅಮಾನತ್ತು ಮಾಡುವುದಾಗಿ, ವಜಾ ಮಾಡುವುದಾಗಿ ಬೆದರಿಸಲಾಗಿತ್ತು. ಆಗ ಹಲವಾರು ಹೋರಾಟಗಾರರು ನನ್ನ ಜೊತೆ ನಿಂತರು. ಈ ದೇಶದ ಮತ್ತು ಈ ರಾಜ್ಯದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯನ್ನು ಸರ್ಕಾರವೇ ಕೊಟ್ಟಿದೆ. ಒಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೆಂಬಲಿಸುವ ಅದೇ ಸರ್ಕಾರ ಮತ್ತೊಂದೆಡೆ ಸರ್ಕಾರಿ ಶಾಲೆ ಉಳಿಸಿ ಎಂದರೆ ನೋಟಿಸ್ ನೀಡುವುದು ವಿಪರ್ಯಾಸವಾಗಿದೆ ಎಂದರು.

ಶಿಕ್ಷಣ ಸಚಿವರಾಗಿದ್ದ ಮಾನ್ಯ ಸುರೇಶ್ ಕುಮಾರ್ ರವರೂ ಕರೆ ಮಾಡಿ ನಮ್ಮ ಶಾಲೆ ಉಳಿಸುವ ಕೆಲಸವನ್ನು ಶ್ಲಾಘಿಸಿದ್ದರು, ಸರ್ಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ಯವರು ನಮ್ಮ ಬೆಳವಣಿಗೆ ಗಮನಿಸಿ ಅಭಿನಂದಿಸಿ ಹೃದ್ಯ ಪತ್ರ ಬರೆದಿದ್ದರು, ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ನಮ್ಮ ಕೆಲಸ ಕಾರ್ಯ ಬೆಂಬಲಿಸಿ ಅಭಿನಂದಿಸಿ ಪತ್ರ ಬರೆದು ಬೆನ್ನು ತಟ್ಟಿದ್ದರು. ಈಗ ಮಾನ್ಯ ಡಿಡಿಪಿಐ ಸಾಹೇಬರು ಕಾರಣ ಕೇಳಿ ನನಗೆ ನೋಟೀಸ್ ನೀಡಿದ್ದಾರೆ. ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಸರಕಾರಿ ಶಾಲೆಯೊಂದರ ಶಿಸ್ತು ಸುಂದರತೆ ಮತ್ತು ಅರ್ಥವಂತಿಕೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು ನಾವು, ಈಗ ನನ್ನ ಮೇಲೆಯೇ ಶಿಸ್ತುಕ್ರಮ ಜರುಗಿಸುವುದಾದರೆ…. ಅದೂ ಕೂಡ ನಡೆಯಲಿ, ಅದಕ್ಕೆ ನಾನು ಸಿದ್ದನಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ; ಪ್ರಾತಿನಿಧ್ಯದ ದಿಟ್ಟ ಪ್ರಶ್ನೆಗಳಿಗೆ ಒತ್ತರಿಸಿ ನಡೆಯುವುದು ಉತ್ತರವಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...