ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಬೆಂಬಲವಿದೆ. ಮುಸ್ಲಿಮರನ್ನು ಓಲೈಸಲು ಅವರು ಧಾರ್ಮಿಕ ಮತಾಂತರಕ್ಕೂ ಸಿದ್ಧರಿದ್ದಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಸಚಿವ ಆನಂದ್ ಸ್ವರೂಪ್ ಶುಕ್ಲಾ ಆರೋಪಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಖಿಲೇಶ್ ಅವರು ನೆರೆಯ ದೇಶದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನಿಂದ ಆರ್ಥಿಕ ಬೆಂಬಲವನ್ನು ಪಡೆಯುತ್ತಿರಬಹುದು ಎಂದು ಆರೋಪಿಸಿದ್ದಾರೆ.
‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಸ್ಲಾಮಿಕ್ ಜಗತ್ತಿಗೆ ಸವಾಲಾಗಿದ್ದಾರೆ. ಅಖಿಲೇಶ್ ಐಎಸ್ಐನಿಂದ ಪ್ರೋತ್ಸಾಹ ಮತ್ತು ಸಲಹೆ ಪಡೆಯುತ್ತಿದ್ದಾರೆ. ಇದರಿಂದ ಅವರಿಗೆ ಆರ್ಥಿಕ ಬೆಂಬಲವೂ ಸಿಗುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಶುಕ್ಲಾ ಹೇಳಿದ್ದಾರೆ.
ಭಾನುವಾರ ಹರ್ದೋಯಿಯಲ್ಲಿ ಮಾಡಿದ ಭಾಷಣದಲ್ಲಿ ಯಾದವ್ ಅವರು ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಜವಾಹರ್ಲಾಲ್ ನೆರು ಮತ್ತು ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರು ಭಾರತದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ನಾಯಕರು ಮಾತನಾಡಿದ್ದರು. ಇದರ ಬೆನ್ನಲ್ಲೆ ಶುಕ್ಲಾ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮುಸ್ಲಿಮರನ್ನು ಓಲೈಸಲು ಯಾದವ್ ಅವರು ನಮಾಜ್ ಮತ್ತು ಉಪವಾಸ ಆಚರಿಸಿದರು. ಮುಸ್ಲಿಮರ ಮತಗಳನ್ನು ಪಡೆಯಲು ಅವರು ‘ಮತಾಂತರ’ ಮತ್ತು ‘ಖತ್ನಾ’ ವನ್ನು ಆಚರಿಸಬಹುದು’ ಎಂದು ಅವರು ತಿಳಿಸಿದ್ದಾರೆ.
ಐಎಸ್ಐ ನಿರ್ದೇಶನದ ಮೇರೆಗೆ ಯಾದವ್, ಜಿನ್ನಾ ಅವರನ್ನು ವೈಭವೀಕರಿಸುತ್ತಿದ್ದಾರೆ. ಪಾಕಿಸ್ತಾನ ಮತ್ತು ತಾಲಿಬಾನ್ಗೆ ಬೇಕಾದಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಶುಕ್ಲಾ ಆರೋಪಿಸಿದ್ದಾರೆ.
ಅಖಿಲೇಶ್ ಯಾದವ್ ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಜಿನ್ನಾ ಅವರೊಂದಿಗೆ ಹೋಲಿಸಿರುವುದು ಖಂಡನೀಯ ಮತ್ತು ಅವರು ಅದಕ್ಕಾಗಿ ಪಶ್ಚಾತ್ತಾಪ ಪಡಬೇಕು ಎಂದಿದ್ದಾರೆ.
ಹರ್ದೋಯಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಅವರು, ’ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಜಿನ್ನಾ ಒಂದೇ ಸಂಸ್ಥೆಯಲ್ಲಿ ಕಲಿತು ಬ್ಯಾರಿಸ್ಟರ್ಗಳಾದರು. ಅವರು ಭಾರತ ಸ್ವಾತಂತ್ಯ್ರ ಪಡೆಯಲು ಸಹಾಯ ಮಾಡಿದರು’ ಎಂದು ತಿಳಿಸಿದ್ದರು.
1948ರಲ್ಲಿ ಗೃಹ ಸಚಿವರಾಗಿದ್ದ ಪಟೇಲ್ ಅವರು ಗಾಂಧಿಯವರ ಹತ್ಯೆಯ ನಂತರ ಸ್ವಯಂಸೇವಕ ಸಂಘದ ಮೇಲೆ ವಿಧಿಸಿದ್ದ ನಿಷೇಧದ ಬಗ್ಗೆಯೂ ಯಾದವ್ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಲಸಿಕೆ ಸರ್ಟಿಫಿಕೇಟ್ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್