ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್ಎ) ಆರೋಪಿಸಿರುವ ನಿಖಿಲ್ ಗುಪ್ತಾ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿದ್ದು, ಜೆಕ್ ಗಣರಾಜ್ಯದಲ್ಲಿ ಬಂಧಿತರಾಗಿರುವ ಗುಪ್ತಾ ವಿಚಾರದಲ್ಲಿ ಭಾರತ ಸರ್ಕಾರ ಮಧ್ಯಪ್ರವೇಶಿಸಲು ನಿರ್ದೇಶನ ನೀಡುವಂತೆ ಕೋರಲಾಗಿದೆ.
ನಿಖಿಲ್ ಗುಪ್ತಾ ಕಾನೂನು ಪರಿಪಾಲಿಸುವ ವ್ಯಕ್ತಿಯಾಗಿದ್ದು, ಅಮೆರಿಕದ ಸೂಚನೆಯಂತೆ ಅವರನ್ನು ಜೆಕ್ ಗಣರಾಜ್ಯದ ಪ್ರಾಗ್ನಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ. ಅವರ ಜೀವಕ್ಕೆ ಅಪಾಯವಿದೆ ಎಂದು ನಿಖಿಲ್ ಗುಪ್ತಾ ಕುಟುಂಬ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ.
ಇಂದು (ಡಿಸೆಂಬರ್ 15) ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಜನವರಿ 4, 2024ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ಪೀಠವು ಆರಂಭದಲ್ಲಿ ಅರ್ಜಿಯನ್ನು ಪರಿಗಣಿಸಲು ನಿರಾಸಕ್ತಿ ವ್ಯಕ್ತಪಡಿಸಿತ್ತು. ಬಳಿಕ ಪ್ರಕರಣ ಸಂಬಂಧ ಜೆಕ್ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಗುಪ್ತಾ ಕುಟುಂಬಕ್ಕೆ ಸಲಹೆ ನೀಡಿದೆ.
ಗುಪ್ತಾ ಕುಟುಂಬದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಎ ಸುಂದರಂ, “ನಿಖಿಲ್ ಗುಪ್ತಾ ಭಾರತದ ಪ್ರಜೆಯಾಗಿದ್ದು ಜೆಕ್ ಗಣರಾಜ್ಯದ ಭಾರತೀಯ ದೂತವಾಸದ ಮೂಲಕ ಸಹಾಯ ಕೋರಿದ್ದಾರೆ. ಗುಪ್ತಾ ತನ್ನ ಕುಟುಂಬದ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ನಾವು ಪರಿಹಾರವನ್ನು ಮಾತ್ರ ಸೂಚಿಸುತ್ತೇವೆ. ಯಾವುದೇ ಸಚಿವಾಲಯವು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಹುದು. ಆದರೆ, ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದ್ದಾರೆ.
ಕಡತ ತಡವಾಗಿ ಬಂದಿದ್ದರಿಂದ ಅದನ್ನು ವಿವರವಾಗಿ ಓದಲು ಪೀಠಕ್ಕೆ ಸಮಯವಿಲ್ಲ. ಚಳಿಗಾಲದ ರಜೆಯ ನಂತರ ವಿಷಯವನ್ನು ಪರಿಗಣಿಸಲಾಗುವುದು ಎಂದು ಹೇಳಿ ವಿಚಾರಣೆ ಮುಂದೂಡಿದ್ದಾರೆ.
ನಿಖಿಲ್ ಗುಪ್ತಾ ಅವರು ಭಾರತ ಸರ್ಕಾರದ ಅಧಿಕಾರಿಯೊಬ್ಬರ ಜೊತೆಗೂಡಿ ಯುಎಸ್ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಪನ್ನುನ್ (ಯುಎಸ್ ಪ್ರಜೆ) ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ನವೆಂಬರ್ 29 ರಂದು ಯುಎಸ್ ನ್ಯಾಯಾಂಗ ಇಲಾಖೆಯು ಆರೋಪಿಸಿದೆ.
ಯುಎಸ್ ಮತ್ತು ಜೆಕ್ ಗಣರಾಜ್ಯದ ನಡುವಿನ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದದ ಅನುಸಾರವಾಗಿ ಜೂನ್ 30, 2023 ರಂದು ಜೆಕ್ ಅಧಿಕಾರಿಗಳು ಗುಪ್ತಾರನ್ನು ಬಂಧಿಸಿದ್ದು, ಯುಎಸ್ಗೆ ಗಡಿಪಾರು ಮಾಡಲು ಮುಂದಾಗಿದ್ದಾರೆ. ಗುಪ್ತಾ ಅವರನ್ನು ಯುಎಸ್ಗೆ ಹಸ್ತಾಂತರಿಸಿದರೆ ಅವರ ಜೀವಕ್ಕೆ ಅಪಾಯವಿದೆ ಎಂದು ಕುಟುಂಬ ಕಳವಳ ವ್ಯಕ್ತಪಡಿಸಿದೆ. ಈ ವಿಚಾರದಲ್ಲಿ ಭಾರತ ಸರ್ಕಾರ ಮಧ್ಯಪ್ರವೇಶಿಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಗುಪ್ತಾ ಕುಟುಂಬ ಜೆಕ್ ನ್ಯಾಯಾಲದ ಮೊರೆ ಹೋಗುವುದು ಉತ್ತಮ ಎಂದು ಸಲಹೆ ನೀಡಿದೆ.
ಇದನ್ನೂ ಓದಿ: ಜೀವನ ಕೊನೆಗೊಳಿಸಲು ಅನುಮತಿ ನೀಡಿ; ಲೈಂಗಿಕ ಕಿರುಕುಳದಿಂದ ನೊಂದು ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ!