Homeಅಂಕಣಗಳುನಾಗಸುಧೆ ಜಗಲಿಯಿಂದಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ತಮ್ಮ 37 ನೇ ವಯಸ್ಸಿಗೆ ವಿದೇಶದಲ್ಲಿ ನೆಲೆಸಿದರೂ ಇವರ ಕನ್ನಡ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಬಹುಶಃ ಡಾ. ಶಿವರಾಮ ಕಾರಂತರ ಕೋಟದ ಮಣ್ಣಿನ ಸೆಳೆತವೇ ಹೀಗಿತ್ತೋ ಏನೋ!

- Advertisement -
- Advertisement -

ಉಡುಪಿ ಜಿಲ್ಲೆಯ ಕೋಟದ ನಾಗಪ್ಪಯ್ಯ ತಮ್ಮ 37 ನೆಯ ವಯಸ್ಸಿನಲ್ಲಿ ಅಮೇರಿಕಾ ದೇಶಕ್ಕೆ ಬಂದು “ನಾಗ ಐತಾಳ” ಆಗಿ ಸಪ್ತ ಸಾಗರದಾಚೆಯ ಆ ನಾಡಲ್ಲಿ ಕನ್ನಡದ ಕಹಳೆಯೂದುತ್ತಿರುವದು ನಿಜವಾಗಿಯೂ ಬೆರಗಿನ ವಿಷಯವೇ! ತಮ್ಮ ತೊಂಬತ್ತನೆಯ ಈ ವಯಸ್ಸಿನಲ್ಲಿಯೂ ಅದೇ ಹರಯ ಲವಲವಿಕೆ; ಜೀವನ ಪ್ರೀತಿ.

1932 ರಲ್ಲಿ ಹುಟ್ಟಿದ ನಾಗಪ್ಪಯ್ಯ ಭಾರತದಲ್ಲಿ ಪಿಎಚ್ಡಿ ಪಡೆದು ನಂತರ ಬಯೋಕೆಮೆಸ್ಟ್ರಿಯಲ್ಲಿ ಹೆಚ್ಚಿನ ತರಬೇತಿ ಪಡೆಯಲು ಅಮೇರಿಕಾ, ಕೆನಡಾಕೆ ಬಂದು 27 ವರ್ಷ ಶಿಕಾಗೋ ಯುನಿವರ್ಸಿಟಿಯಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತಿಹೊಂದಿದ್ದಾರೆ. ಇಂದು ಮಡದಿ, ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ತುಂಬು ಸಂಸಾರದಲ್ಲಿ ಆ ನೆಲದಲಿ ನೆಲೆಸಿ ಎಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆ ಹವ್ಯಾಸಕೆ ಕನ್ನಡದ ಬರಹದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ತಾವೂ ಬೆಳೆದು, ಕಿರಿಯರಿಗೂ ಬೆನ್ನೆಲುವಾಗಿ ಈ ಉತ್ಸಾಹೀ ಯುವಕ ತಾಯ್ನೆಲ ಬಿಟ್ಟು ಕಡಲಾಚೆ ನೆಲೆಸಿ ಇಂದಿಗೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದರೂ, ಇವರ ಎದೆಯಲ್ಲಿ ಊರ ನೆನಪು ಸದಾ ಹಚ್ಚ ಹಸಿರು.

ನಾಗ ಐತಾಳರ “ಸ್ಮರಣೆ ಸಾಲದೆ” ಎಂಬ ಅವರ ಬದುಕಿನ ಅನುಭವಗಳ ಪುಸ್ತಕ ಓದುತ್ತಿದ್ದಂತೆಯೇ ಅವರಿಗೆ ಎರಡು ಜಗತ್ತುಗಳಿವೆ ಎಂಬ ವಿಷಯ ಅರಿವಿಗೆ ಬರುತ್ತದೆ. ಒಂದು ಬಾಲ್ಯದ ಕೋಟದ ಜಗತ್ತು. ಇದು ಅವರ ವ್ಯಕ್ತಿತ್ವವನ್ನು ರೂಪಿಸಿದ್ದು. ಎಳೆಯ ಮನಸ್ಸು ತನ್ನ ಸುತ್ತಲಿನ ಪರಿಸರಕ್ಕೆ ಸ್ಪಂದಿಸುತ್ತಲೇ ತನ್ನ ಗುರಿ ದಾರಿಗಳನ್ನು ಗುರುತಿಸಿಕೊಳ್ಳಲು ಇದು ನೆರವು ನೀಡಿದೆ. ಚಿಕ್ಕಂದಿನಲಿ ಎದುರಿಸಿದ ಅನೇಕ ಬಿಕ್ಕಟ್ಟುಗಳು ಇದರಲ್ಲಿ ಒಳಗೊಂಡಿದೆ. ಮತ್ತೊಂದು ಅವರ ವೃತ್ತಿ ಬದುಕನ್ನು ರೂಪಿಸಿದ ಅಮೇರಿಕೆಯ ಜಗತ್ತು. ಕನ್ನಡ ಕರಾವಳಿಯ ಹುಡುಗನೊಬ್ಬ ಕಡಲನ್ನು ದಾಟಿ ಅಪರಿಚಿತ ಖಂಡ ಪ್ರವೇಶಿಸಿ ತನ್ನ ಬದುಕನ್ನು ಕಟ್ಟಿಕೊಂಡ ಅನೇಕ ಸಂದರ್ಭಗಳಲ್ಲಿ ಇವರ ಕೆಲಸ ಕಾರ್ಯಗಳ ಕಂಡು ಇಲ್ಲಿಯ ಜನರಿಂದಲೂ ಭೇಷ್ ಎನಿಸಿ ಕೊಂಡ ರೋಮಾಂಚಕ ಸಂಗತಿಗಳಿಗೆ ನಿಜವಾಗಿಯೂ ನಾಗ್ ಅಭಿನಂದನಾರ್ಹರು. 2001 ರಲ್ಲಿ ನಿವೃತ್ತರಾದ ಇವರು ಅಂದಿನಿಂದ ಇಂದಿನ ತನಕವೂ ಆ ನೆಲದಲ್ಲಿ ಕನ್ನಡ ಕಟ್ಟುವ ಅಪೂರ್ವ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ.

“ಸ್ಮರಣೆ ಸಾಲದೆ” ಈ ನೆನಪಿನ ಹೊತ್ತಿಗೆಯನ್ನು ಬೆಂಗಳೂರಿನ “ಅಭಿನವ” ಹಾಗೂ ಕೆಲಿಫೋರ್ನಿಯಾದ ‘ಸಾಹಿತ್ಯಾಂಜಲಿ’ ಪ್ರಕಾಶಿಸಿದ್ದು 172 ಪುಟದೊಳಗೆ 50 ನೆನಪಿನ ಅಧ್ಯಾಯಗಳು ಹೊಳೆಯುತ್ತಿವೆ. ನಾಗ ಐತಾಳರು ಈ ಪುಸ್ತಕವನ್ನು ಕನ್ನಡದ ಪ್ರಮುಖ ಬರಹಗಾರ್ತಿ ಸುನಂದಾ ಬೆಳಗಾಂವಕಾರ ಇವರ ದಿವ್ಯ ಸ್ಮರಣೆಗೆ ಅರ್ಪಿಸಿದ್ದು, ನಾಮಾಂಕಿತ ಬರಹಗಾರರಾದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯರು ಪ್ರಬುದ್ಧ ಮುನ್ನುಡಿಯ ಕಳಸವಿಟ್ಟಿರುವರು. ಇಲ್ಲಿಯ ನೆನಪಿನ ಬುತ್ತಿಯನ್ನು ಒಂದೊಂದೇ ಬಿಚ್ಚುತ್ತಾ ಹೋದಂತೆ ಐವತ್ತೂ ಅಧ್ಯಾಯಗಳಲ್ಲಿ ನಾಗ್ ಐವತ್ತು ಸೊಗಸು ಬೆರಗು ಅದ್ಭುತಗಳನ್ನು ನಮಗೆ ಉಣಬಡಿಸಿರುವರು.

ಈ ನೆನಪುಗಳೇ ಹೀಗೆ: ಅವು ಸಿಹಿಯಾಗಿರಲಿ ಕಹಿಯಾಗಿರಲೀ ಅವೆಲ್ಲವೂ ಬದುಕನ್ನು ರೂಪಿಸಲು ಸಹಾಯಕವಾಗುವುದು. ‘ತುಂಗ್ರು ಮೇಷ್ಟ್ರು’ ಎಂಬ ಸೌಜನ್ಯ ತುಂಬಿದ ಗುರುಗಳನ್ನು ನೆನೆಯುತ್ತ ಅವರು ಎರಡು ಮೂರು ದಿನ ರಜೆಯಲ್ಲಿದ್ದಾಗಿನ ಅವಾಂತರವನ್ನು ಮನ ಬಿಚ್ಚಿ ಹೇಳಿಕೊಂಡಿರುವರು. ಊರ ನೆಲದಲ್ಲಿಯ ‘ತಿರಿ’ ‘ಮುಡಿ’ಗಳನ್ನು ಮನಸಾರೆ ನೆನಯುತ್ತ ಅಂದಿನ ಕೆಲ ಸಂಪ್ರದಾಯಿಕಗಳು ಇಂದು ಮಾಯವಾಗುತ್ತಿದೆ ಎಂದು ಮಮ್ಮಲ ಮರುಗಿರುವರು. ‘ನಂ ಸೆಪರೇಷನ್’ ವೃತ್ತಾಂತದಲ್ಲಿ ಮೊಮ್ಮಗನ ಆಗಮನಕ್ಕಾಗಿ ತಾವಿಬ್ಬರೂ ಒಂದು ವರ್ಷ ದೂರವಿದ್ದಾಗಿನ ಸುದ್ದಿ ಆಫೀಸಿಗೆಲ್ಲ ಹರಡಿ, ಸತ್ಯ ತಿಳಿದ ನಂತರ ಎಲ್ಲರೂ ನಗೆಗಡಲಲ್ಲಿ ತಿಳಿಹಾಸ್ಯ ಘಟನೆಯ ವಿವರ ಸೊಗಸಾಗಿ ಮೂಡಿಬಂದಿದೆ. ಐತಾಳರ ‘ಬಾತ್ರೂಮ ಸಂಗೀತ’ ‘ಗೂಟದ ಜನಿವಾರ’ದ ಪ್ರಸಂಗಗಳು ಇವರ ಮನೋವೈಶಾಲ್ಯತೆಯ ಸಂಕೇತವಾಗಿದೆ. ಎಂಥ ವಿಪರ್ಯಾಸ! ಒಂದೆಡೆ ಇಂಗ್ಲೀಷ್ ಮಾದ್ಯಮದ ಅಮೇರಿಕೆಯಲ್ಲಿ ಕನ್ನಡಿಗರೊಬ್ಬರು ನಾಯಿಯ ಜೊತೆಗೂ ಕನ್ನಡದಲ್ಲೇ ಸಂಭಾಷಿಸುವ ಅಭ್ಯಾಸ ಮಾಡಿಕೊಂಡಿದ್ದರೆ, ಇನ್ನೊಂದೆಡೆ ಕನ್ನಡವೇ ಮಾತೃಭಾಷೆಯಾಗಿರುವ ಬೆಂಗಳೂರಿನಲ್ಲಿ ನಾಯಿಗಳಿಗೂ ಕನ್ನಡವೇ ಅರ್ಥವಾಗದಿರುವ ಸಂದರ್ಭ ನಮ್ಮ ಮನಸ್ಸಾಕ್ಷಿಯ ದುರಂತಕ್ಕೆ ಕೈಗನ್ನಡಿಯಾಗಿದೆ.

ಇವರ ನೇತೃತ್ವ ಮತ್ತು ಸಂಘಟನೆಯಲ್ಲಿ “ಕನ್ನಡ ಸಾಹಿತ್ಯ ರಂಗ” ಅಮೇರಿಕೆಯ ಕನ್ನಡಿಗರ ಜೀವನಾಡಿಯಾಗಿದೆ. ಅಮೇರಿಕೆಯಲ್ಲಿ ಸಾಹಿತ್ಯಕ್ಕೆಂದೇ ಮೀಸಲಾದ ಕನ್ನಡದ ನಾಡಿ ಮಿಡಿತ ಇದು. ಇದರ ಸ್ಥಾಪಕ ಸದಸ್ಯರು ಮತ್ತು ಈಗಿನ ಆಡಳಿತ ಮಂಡಳಿಯ ಅಧ್ಯಕ್ಷರೂ ಐತಾಳರೇ. 2003 ರಲ್ಲಿ ಕನ್ನಡ ಸಾಹಿತ್ಯ ರಂಗ ಶುರುವಾಗಿ ಪ್ರತೀ ಎರಡು ವರ್ಷಕ್ಕೊಮ್ಮೆ ಕನ್ನಡದ ಕಂಪು ಅಮೇರಿಕೆಯ ತುಂಬಾ ಸೊಂಪಾಗಿ ಘಮ ಘಮಿಸುತ್ತದೆ. ಫಿಲಡೆಲ್ಫಿಯಾ, ಲಾಸ್ ಏಂಜಲೀಸ್, ಶಿಕಾಗೊ, ವಾಷಿಂಗ್ಟನ್ ಡಿಸಿ, ಸ್ಯಾನ್ ಫ್ರಾನ್ಸಿಸ್ಕೋ, ಹ್ಯೂಸ್ಟನ್, ಸೈಂಟ್ ಯೂಯಿಸ್, ಬಾಸ್ಟನ್ ಮತ್ತು 2019 ರಲ್ಲಿ ನ್ಯೂಜೆರ್ಸಿಯಲ್ಲಿ ಅತ್ಯಂತ ಶಿಸ್ತುಬದ್ದವಾಗಿ ಸಮರ್ಪಕವಾಗಿ ಕನ್ನಡದ ಕಾರ್ಯಕ್ರಮ ನಡೆಸಿದ ಕೀರ್ತಿಯಲ್ಲಿ ಇವರ ಪಾಲೂ ಹೆಚ್ಚಿನದೇ. ಪ್ರಭುಶಂಕರ್, ಬರಗೂರು ರಾಮಚಂದ್ರಪ್ಪ, ಎನ್.ಎಸ್. ಲಕ್ಷ್ಮಿನಾರಾಯಣಭಟ್ಟ, ಅ.ರಾ.ಮಿತ್ರ, ಎಚ್.ಎಸ್. ರಾಘವೇಂದ್ರರಾವ್, ವೈದೇಹಿ, ವೀಣಾ ಶಾಂತೇಶ್ವರ, ಸುಮತೀಂದ್ರ ನಾಡಿಗ್, ಭುವನೇಶ್ವರಿ ಹೆಗಡೆ, ಕೆ ವಿ.ತಿರುಮಲೇಶ್, ಪ್ರಧಾನ ಗುರುದತ್ತ, ಲಕ್ಷ್ಮೀಶ ತೋಳ್ಪಾಡಿ ಹೀಗೆ ಅನೇಕಾನೇಕ ಕನ್ನಡದ ದಿಗ್ಗಜರು ಈ ಕನ್ನಡ ಸಾಹಿತ್ಯ ರಂಗದ ಮೂಲಕ ಕನ್ನಡದ ರಂಗನ್ನು ಕಡಲಾಚೆಯಲಿ ಭಿತ್ತರಿಸಿದರು.

ಕಳೆದ ವರ್ಷ ನಮ್ಮ ವಿಸ್ಮಯನ “ವಿಸ್ಮಯ”ದಿಂದಾಗಿ ಆದೇ ಸಮಯಕೆ ನಾವೂ ನ್ಯೂಜೆರ್ಸಿಯಲ್ಲಿಯೇ ಇದ್ದೆವು. ಒಂಬತ್ತನೆಯ ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವದ ಆಡಳಿತ ಮಂಡಳಿಯ ಅಧ್ಯಕ್ಷರೂ ನಾಗ ಐತಾಳರೇ ಇದ್ದು ಕನ್ನಡದ ನಾಮಾಂಕಿತ ಬರಹಗಾರರಾದ ವಸುಧೇಂದ್ರ, ವಸುಂಧರಾ ಭೂಪತಿ ಮತ್ತು ಸುನಂದಾರೊಂದಿಗೆ ನಾನೂ ಅತಿಥಿಯಾದದ್ದು ಬದುಕಿನಲಿ ಮರೆಯದ ಕ್ಷಣಗಳಲ್ಲೊಂದು. ಆ ಅದ್ಭುತ ವೇದಿಕೆಯಲ್ಲಿ ನಾಗ ಐತಾಳರ “ಸ್ಮರಣೆ ಸಾಲದೇ” ಪುಸ್ತಕ ಪರಿಚಯ ಮಾಡಿದ್ದು ನನ್ನ ಸಾಹಿತ್ಯದ ಬದುಕಿನ ಮೈಲಿಗಲ್ಲೆಂದು ಪರಿಗಣಿಸುವೆನು. ಮೈ.ಶ್ರೀ ನಟರಾಜ್, ನಳಿನಿ ಮೈಯ, ಗುರುಪ್ರಸಾದ ಕಾಗಿನೆಲೆ, ಶ್ರೀಕಾಂತ ಬಾಬು, ಗುಂಡು ಶಂಕರ್, ತ್ರಿವೇಣಿ ಶ್ರೀನಿವಾಸರಾವ್, ಮೀರಾ ರಾಜಗೋಪಾಲ್, ವೈಶಾಲಿ ಹೆಗಡೆ, ಪ್ರಕಾಶ ನಾಯಕ, ಶಂಕರ್ ಹೆಗಡೆ ಇವರೆಲ್ಲ ನಾಗ ಐತಾಳರ ನೇತೃತ್ವದಲ್ಲಿ ಹಗಲಿರಳೂ ದುಡಿದು ಈ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು, ಸಪ್ತಸಾಗರದ ಆ ನಾಡಲ್ಲಿ
ನಾಗ ಐತಾಳರ ಕನ್ನಡದ ಕಹಳೆಗೆ ಸಾಕ್ಷಿಯಾಯಿತು.

ಇವರ ಶಿಕ್ಷಣವೆಲ್ಲಾ ಸಂಪೂರ್ಣ ಇಂಗ್ಲಿಷ್‌ಮಯವಾದರೂ, ತಮ್ಮ 37 ನೆಯ ವಯಸ್ಸಿಗೆ ವಿದೇಶಕ್ಕೆ ಬಂದು ನೆಲೆಸಿದರೂ ಇವರ ಕನ್ನಡ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಬಹುಶಃ ಡಾ. ಶಿವರಾಮ ಕಾರಂತರ ಕೋಟದ ಮಣ್ಣಿನ ಸೆಳೆತವೇ ಹೀಗಿತ್ತೋ ಏನೋ! ಬದುಕಿನಲ್ಲಿ ನಡೆದ, ಕಂಡುಂಡ ಅನೇಕ ಸಂಗತಿಗಳು ನೆನಪಿನಿಂದ ಜಾರುವುದು ಸ್ವಾಭಾವಿಕವೇ. ಅವುಗಳಲ್ಲಿ ಕೆಲವು ಮಾಸಿದ್ದರೂ, ಅವುಗಳನ್ನು ನೆನಪಿನಾಳದಿಂದ ಅಗೆದು ದಾಖಲಿಸುವದು ಅತೀ ಅವಶ್ಯ. ಇದಕಾಗಿಯೇ ನಾನು ಬರಹಗಾರನಾದೆ ಎನ್ನುವ ನಾಗ್ ಕನ್ನಡ ಸಾಹಿತ್ಯ ಕಣಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವರು. ಅಮೆರಿಕ ಕನ್ನಡಿಗನೊಬ್ಬನ ದಿನಚರಿಯಿಂದ (ಅಮೇರಿಕದ ಅನುಭವ ಕಥನ) ಕಾದೇ ಇರುವಳು ರಾಧೆ (ಕಿರುಕಾದಂಬರಿ) ಒಂದಾನೊಂದು ಕಾಲದಲ್ಲಿ (ಕಟ್ಟುಕಥೆಗಳ ಸಂಗ್ರಹ) ಕಲಬೆರಕೆ (ಪ್ರಬಂಧ ಸಂಕಲನ) ದೂರ ತೀರದಿಂದ ಹರಿದು ಬಂದ ಕತೆಗಳು (ಕಥಾಸಂಕಲನ) ಜೀವನ ರಹಸ್ಯ (ವೈಜ್ಞಾನಿಕ ಗ್ರಂಥ) ತಲೆಮಾರ ಸೆಲೆ(ಕಾದಂಬರಿ) ಅಮೇರಿಕದಲ್ಲಿ ಕಂಡಕನಸು ಕಟ್ಟಿದ ನೆನಪು (ಅನುಭವ ಕಥನ), ಸಾಹಿತ್ಯ ಸ್ಪಂದನ (ವಿಮರ್ಶಾ ಲೇಖನಗಳು) ಸ್ಮರಣೆ ಸಾಲದೇ (ಕೆಲವು ನೆನಪುಗಳು) ಇವು ಪ್ರಕಟಿತ ಕೃತಿಗಳಾದರೆ ಸುಮಾರು ಹತ್ತಕ್ಕೂ ಹೆಚ್ಚು ಸಂಪಾದಿತ ಪುಸ್ತಕಗಳನ್ನು ಹೊರತಂದಿರುವರು. ಇದಕ್ಕೂ ಹೊರತಾಗಿ ತಮ್ಮ ವೃತ್ತಿ ಜೀವನದಲ್ಲಿ 42 ಕ್ಕೂ ಮಿಕ್ಕಿ ಸಂಶೋಧನಾ ಪ್ರಬಂಧಗಳನ್ನು ವಿವಿಧ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಿಸಿರುತ್ತಾರೆ.

ತನ್ನ 28 ನೆಯ ವಯಸ್ಸಿನಲ್ಲಿ ಸಹ ಧರ್ಮಿಣಿಯಾಗಿ ಬಂದು ಇಂದಿಗೂ ಬದುಕಿನಾಸರೆಯಾಗಿ ನಿಂತ ತಮ್ಮ ಲಕ್ಷ್ಮಿಯನ್ನು ನೆನೆಯುತ್ತಾ “ನನ್ನ ಬದುಕು ರೂಪುಗೊಳ್ಳಲು, ಅವಳ ಸ್ಥಾನ ವಿಶಿಷ್ಟವಾದುದು” ಎನ್ನುವಾಗ ಭಾವುಕ ಪ್ರಪಂಚವೇ ನಮ್ಮೆದಿರು ನಿಲ್ಲುವದು. ಆ ನೆಲದಲ್ಲೇ ನೆಲೆಸಿದ ನಮ್ಮ ಮಗಳು ಕಾವ್ಯಾ, ಈ ಹಿರಿಯ ಜೀವವನ್ನು ಕಂಡಾಗ, ಅವರು ಮಾತನಾಡಿಸುವ ಪರಿಯನ್ನು ನೆನೆದು ನನ್ನ “ಕಡಮೆಯ ಅಜ್ಜ” ಇನ್ನೂ ಇಲ್ಲೇ ಜೀವಂತವಾಗಿರುವರು ಎಂದಾಗ ನಾನೂ ಕ್ಷಣ ಭಾವುಕನಾದೆ.

ಈಗಲೂ ತಮ್ಮ ತಾಯ್ನೆಲದ ಪ್ರೀತಿಯ ತೊಂಬತ್ತರ ನಾಗ ಐತಾಳರಿಗೆ ಬರೆಯುವ ಒಲವಿದೆ; ಛಲವಿದೆ. ಭಾಷೆಯ ಪ್ರೌಢಿಮೆ ಸೊಗಸಾಗಿದೆ. ಅವರ ಬರಹದಲ್ಲಿ ಉಕ್ಕುವ ಹಾಸ್ಯ, ಜೀವನೋತ್ಸಾಹ, ಗ್ರಾಮೀಣ ಶಬ್ದ ಭಂಡಾರ, ಅವರ ನೆನಪಿನ ಶಕ್ತಿ, ಮನುಷ್ಯ ಸಂಬಂಧದ ಆ ಹೊಳೆವ ಕಂಗಳು ನಮಗೆ ಬೆರಗು ಹುಟ್ಟಿಸುತ್ತದೆ. ಸರ್, ತಮ್ಮ ಬದುಕು ಬರಹಕ್ಕೆ ಅಭಿನಂದಿಸುತ್ತಾ ನೂರ್ಕಾಲ ಬಾಳಿ ಎಂದು ಹಾರೈಸುವೆ.

-ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಅಪಸ್ವರ ಇಲ್ಲದ ಆಲಾಪದ ಪದಗಳು – ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...