ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಎರಡೂ ಸದನಗಳಲ್ಲಿ ಪಾಸು ಮಾಡಿದ ನಂತರ ಬಿಜೆಪಿಗೆ ದಿನೇ ದಿನೇ ಅದರ ವಿರುದ್ಧದ ಪ್ರತಿಭಟನೆಗಳು ಚಿಂತೆಗೀಡುಮಾಡಿವೆ. ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಈಗ ಅದರ ಮಿತ್ರಪಕ್ಷ ಎಜಿಪಿ (ಅಸ್ಸಾಂ ಗಣ ಪರಿಷತ್) ಉಲ್ಟಾ ಹೊಡೆದಿದೆ. ಇದು ಬಿಜೆಪಿಯನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿದೆ.
ಪೌರತ್ವ ಕಾಯ್ದೆಯನ್ನು ಬೆಂಬಲಿಸಿದ್ದ ಈಶಾನ್ಯದ ಪ್ರಮುಖ ಬಿಜೆಪಿ ಮಿತ್ರ ಪಕ್ಷ ಎಜಿಪಿ ಈಗ ಅದನ್ನು ವಿರೋಧಿಸಲು ನಿರ್ಧರಿಸಿದೆ. ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ ನಿರ್ಣಾಯಕ ಸಭೆಯ ನಂತರ ಅಸ್ಸಾಂ ಗಣ ಪರಿಷತ್ (ಎಜಿಪಿ) ತನ್ನ ನಿಲುವನ್ನು ಪ್ರಕಟಿಸಿದ್ದು, ವಿವಾದಾತ್ಮಕ ಕಾನೂನಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ. ಸದ್ಯ ಎಜಿಪಿ ಪಕ್ಷವು ಅಸ್ಸಾಂನಲ್ಲಿ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಮೂವರು ಮಂತ್ರಿಗಳನ್ನು ಹೊಂದಿದೆ.
ಅಸ್ಸಾಂ ಗಣ ಪರಿಷತ್ ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ತನ್ನ ಬೆಂಬಲವನ್ನು ಘೋಷಿಸಿತ್ತು. ಆದರೆ ಯಾವಾಗ ರಾಜ್ಯದಲ್ಲಿ ಅದರ ವಿರುದ್ಧ ನಿರಂತರ ಪ್ರತಿಭಟನೆಗಳು ಶುರುವಾದವೋ ಆಗ ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಅನೇಕ ಪಕ್ಷದ ಕಾರ್ಯಕರ್ತರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಪಕ್ಷದ ನಾಯಕತ್ವದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ಎಜಿಪಿ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ.
ಇನ್ನೊಂದೆಡೆ ರಾಜ್ಯ ಬಿಜೆಪಿಯಲ್ಲಿಯೂ ರಾಜೀನಾಮೆ ಪರ್ವ ಮುಂದುವರೆದಿದೆ. ಅಸ್ಸಾಂ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನ ಅಧ್ಯಕ್ಷರೂ ಆಗಿದ್ದ ಬಿಜೆಪಿಯ ಹಿರಿಯ ಮುಖಂಡ ಜಗದೀಶ್ ಭುಯಾನ್ ಅವರು ಪಕ್ಷ ಮತ್ತು ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಪೌರತ್ವ ಕಾಯ್ದೆಯನ್ನು ವಿರೋಧಿಸಿ ರಾಜ್ಯದ ಚಲನಚಿತ್ರ ಹಣಕಾಸು ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಅಸ್ಸಾಂನ ಸೂಪರ್ ಸ್ಟಾರ್ ನಟ ಜತಿನ್ ಬೋರಾ ಗುರುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ “ರತ್ನಕರ್” ಎಂಬ ಹಿಟ್ ಚಿತ್ರದಲ್ಲಿ ನಟಿಸಿದ ಬೋರಾ ಅವರು 2014 ರಲ್ಲಿ ಬಿಜೆಪಿಗೆ ಸೇರಿದ್ದರು.