Homeಮುಖಪುಟಮಹಿಳಾ ಪೊಲೀಸ್‌ ಮೇಲೆ ಹಲ್ಲೆ: ಅರ್ನಾಬ್ ಸೇರಿ ಪತ್ನಿ & ಮಗನ ವಿರುದ್ಧ ಹೊಸ ಎಫ್‌ಐಆರ್!

ಮಹಿಳಾ ಪೊಲೀಸ್‌ ಮೇಲೆ ಹಲ್ಲೆ: ಅರ್ನಾಬ್ ಸೇರಿ ಪತ್ನಿ & ಮಗನ ವಿರುದ್ಧ ಹೊಸ ಎಫ್‌ಐಆರ್!

ಅಲಿಬಾಗ್ ಪೊಲೀಸರ ತಂಡ, ಅರ್ನಾಬ್ ಗೋಸ್ವಾಮಿಯನ್ನು ಇಂದು ಬೆಳಿಗ್ಗೆ ಬಂಧಿಸಲು ಹೋದಾಗ ಮಹಿಳಾ ಪೊಲೀಸ್‌ ಮೇಲೆ ಅರ್ನಾಬ್, ಪತ್ನಿ ಮತ್ತು ಮಗ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಲಾಗಿದೆ.

- Advertisement -
- Advertisement -

ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ, ಅವರ ಪತ್ನಿ, ಮಗ ಮತ್ತು ಇನ್ನಿಬ್ಬರ ವಿರುದ್ಧ ಮುಂಬೈ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

2018 ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅರ್ನಾಬ್ ಗೋಸ್ವಾಮಿಯನ್ನು ಬೆಳಿಗ್ಗೆ ಬಂಧಿಸಲು ಅಲಿಬಾಗ್ ಪೊಲೀಸರ ತಂಡ ಹೋದಾಗ ಈ ಘಟನೆ ನಡೆದಿದೆ.

ಮಹಿಳಾ ಪೊಲೀಸ್ ಅಧಿಕಾರಿಯ ದೂರಿನ ನಂತರ, ಅರ್ನಾಬ್ ಗೋಸ್ವಾಮಿ ಮತ್ತು ಇತರರ ವಿರುದ್ಧ ಮುಂಬೈನ ಎನ್ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ಸ್ 353 (ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಣೆಯಿಂದ ತಡೆದು ಹಲ್ಲೆ), 504 (ಉದ್ದೇಶಪೂರ್ವಕ ಶಾಂತಿ ಕದಡುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪೋಲಿಸ್ ವ್ಯಾನ್‌ಗೆ ತಳ್ಳಲ್ಪಟ್ಟಿದ್ದ ಅರ್ನಾಬ್ ಗೋಸ್ವಾಮಿ, ತನ್ನ ಮನೆಯಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆಂದು ಹೇಳಿಕೊಂಡರು.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಾಬ್ ಬಂಧನ ಸಂತೋಷ ತಂದಿದೆ: ಅನ್ವಯ್ ನಾಯಕ್ ಕುಟುಂಬ!

ಈ ಪ್ರಕರಣದಲ್ಲಿ ಅನ್ವಯ್ ನಾಯಕ್ 2018 ರಲ್ಲಿ ಬರೆದಿದ್ದರು ಎನ್ನಲಾಗುವ ಆತ್ಮಹತ್ಯಾ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ (80 ಲಕ್ಷ), ಐಕಾಸ್ಟ್ ಎಕ್ಸ್‌ನ ಫಿರೋಜ್ ಶೇಖ್ (4 ಕೋಟಿ) ಮತ್ತು ಸ್ಮಾರ್ಟ್‌ವರ್ಕ್‌ ನಿತಿಶ್ ಸರ್ದಾ (55 ಲಕ್ಷ) ಅವರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರಲ್ಲಿ ಮೂರು ಕಂಪನಿಗಳ ಮಾಲೀಕರು 5.35 ಕೋಟಿ ಹಣ ಪಾವತಿ ಮಾಡದೇ ಇರುವುದರಿಂದ ಈ ಕಠಿಣ ನಿರ್ಧಾರಕ್ಕೆ ಬರುತ್ತಿದ್ದೇವೆ ಎಂದು ಬರೆಯಲಾಗಿದೆ.

2018 ರಲ್ಲಿ ನಡೆದ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಸಾವಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ ಪೊಲೀಸರು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಇಂದು ಬೆಳಿಗ್ಗೆ ವಶಕ್ಕೆ ಪಡೆದುಕೊಂಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅರ್ನಾಬ್‌‌ನನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದ್ದು, ಮುಂಬೈಯಲ್ಲಿ ಅರ್ನಾಬ್ ವಿರುದ್ಧ ಟಿಆರ್‌ಪಿ ಹಗರಣ ತನಿಖೆ ನಡೆಯುತ್ತಿರುವ ಸಮಯದಲ್ಲೇ ಈ ಬಂಧನ ನಡೆದಿದೆ.

ಇದನ್ನೂ ಓದಿ: ಟಿಆರ್‌ಪಿ ಹಗರಣ: ವೀಕ್ಷಕರ ಸಂಖ್ಯೆ ಹೆಚ್ಚಿಸಲು 15 ಲಕ್ಷ ಪಾವತಿ ಮಾಡಿದ್ದ ರಿಪಬ್ಲಿಕ್ ಟಿವಿ!

2018 ರಲ್ಲಿ ಅಲಿಬಾಗ್ ಪೊಲೀಸರು ಪ್ರಕರಣ ದಾಖಲಿಸಿದ್ದರಾದರೂ 2019 ರಲ್ಲಿ ಪ್ರಕರಣವನ್ನು ರಾಯಗಡ್ ಪೊಲೀಸರು ಮುಚ್ಚಿದ್ದರು.

2020 ಮೇ ತಿಂಗಳಲ್ಲಿ ಅನ್ವಯ್ ನಾಯಕ್ ಅವರ ಪುತ್ರಿ ಅದ್ನ್ಯಾ ನಾಯಕ್ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಸಂಪರ್ಕಿಸಿ, ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿಯು ಬಾಕಿ ಪಾವತಿಸದಿರುವ ಬಗ್ಗೆ ಅಲಿಬಾಗ್ ಪೊಲೀಸರು ತನಿಖೆ ನಡೆಸಿಲ್ಲ ಎಂದು ದೂರಿದ ನಂತರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು.

ಅನ್ವಯ್ ನಾಯಕ್ ಕಾನ್ಕಾರ್ಡ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಕಂಪೆನಿಯು ರಿಪಬ್ಲಿಕ್ ಟಿವಿಗೆ ಕೆಲವು ಸೇವೆಗಳನ್ನು ನೀಡಿತ್ತು. ಅನ್ವಯ್ ಅವರ ತಾಯಿ ಸಹ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿದ್ದರು. ಅನ್ವಯ್ ಅವರ ಪತ್ನಿ ಸೂಸೈಡ್ ನೋಟ್‌‌ನಲ್ಲಿ ಇರುವ ಹೆಸರಿನ ಆಧಾರದಲ್ಲಿ ಅರ್ನಾಬ್ ಸೇರಿದಂತೆ ಇತರರ ಮೇಲೆ ಕೇಸು ದಾಖಲಿಸಿದ್ದರು.

ಆ ಸಮಯದಲ್ಲಿ ರಿಪಬ್ಲಿಕ್ ಟಿವಿಯು ತನ್ನ ಬಾಕಿ ಪಾವತಿಯ ಆರೋಪಗಳನ್ನು ರದ್ದುಗೊಳಿಸಿ, ಇದು ದುರುದ್ದೇಶಪೂರಿತ ಅಭಿಯಾನ ಎಂದು ಹೇಳಿತ್ತು. ಒಪ್ಪಂದದ ಪ್ರಕಾರ ಪಾವತಿಸಬೇಕಾದ ಎಲ್ಲಾ ಮೊತ್ತವನ್ನು ರಿಪಬ್ಲಿಕ್ ಟಿವಿ ಕನ್‌ಕಾರ್ಡ್ ಡಿಸೈನ್ಸ್‌‌ಗೆ ಪಾವತಿಸಿದೆ ಎಂದು ಅದು ಹೇಳಿಕೊಂಡಿತ್ತು.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಪತ್ರಕರ್ತರನ್ನು ಬಲಿಪಶು ಮಾಡಬೇಡಿ: ಎಡಿಟರ್ಸ್ ಗಿಲ್ಡ್

ಅರ್ನಾಬ್ ಗೋಸ್ವಾಮಿಯ ಬಂಧನವು ರಾಜಕೀಯ ಮೇಲಾಟಗಳಿಗೆ ಸಾಕ್ಷಿಯಾಯಿತು. ಬಿಜೆಪಿಯ ಉನ್ನತ ನಾಯಕರು ಇದರ ವಿರುದ್ಧ ಕಿಡಿ ಕಾರಿದ್ದು, ಇದು ಕಾಂಗ್ರೆಸ್ ಮತ್ತು ಶಿವಸೇನೆಯ ಪ್ರಜಾಪ್ರಭುತ್ವವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಇದನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ಕರೆದಿದ್ದಾರೆ.

ಈ ಆರೋಪಗಳನ್ನು ನಿರಾಕರಿಸಿದ ಶಿವಸೇನೆ, “ಇದು ಪತ್ರಿಕೋದ್ಯಮ ಮತ್ತು ಪತ್ರಕರ್ತರ ಮೇಲಿನ ದಾಳಿಯಲ್ಲ. ಬದಲಿಗೆ ಅವರ ಮೇಲಿನ ವೈಯಕ್ತಿಕ ಆರೋಪಗಳ ಆಧಾರದ ಮೇಲೆ ಆಗಿರುವ ಬಂಧನವಾಗಿದ್ದು, ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸಲಿದೆ” ಎಂದು ಹೇಳಿದೆ.

ಇನ್ನು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಬಿಜೆಪಿಯವರ ಪ್ರತಿರೋಧಗಳು ಅವಕಾಶವಾದಿತನದ್ದಾಗಿದೆ. ಇವರು ಎಲ್ಲಾ ಪ್ರಕರಣಗಳಲ್ಲೂ ಹೀಗೇ ವರ್ತಿಸುವುದಿಲ್ಲ” ಎಂದು ಬಿಜೆಪಿ ನಾಯಕರ ಕಾಲೆಳೆದಿದೆ.

ಇನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅರ್ನಾಬ್ ಬಂಧನದ ಬಗ್ಗೆ ಪರ-ವಿರೋಧದ ಚರ್ಚೆಗಳು ಭುಗಿಲೆದ್ದಿವೆ.


ಇದನ್ನೂ ಓದಿ: ರಿಪಬ್ಲಿಕ್ ಟಿವಿಯಲ್ಲಿ TRP ಹಗರಣದ ಸುದ್ದಿ ಪ್ರಸಾರವನ್ನು ತಡೆಯುವಂತೆ ಕೋರ್ಟ್‌ಗೆ‌‌ ಅರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...