ಅಯೋಧ್ಯೆ ವಿವಾದ ತೀರ್ಪು ನವೆಂಬರ್ 17ರಂದು ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ವಿಚಾರಣೆ ಮುಕ್ತಾಯಗಳಿಸಿರುವ ಸುಪ್ರೀಂಕೋರ್ಟ್, ತೀರ್ಪನ್ನು ಕಾಯ್ದಿರಿಸಿದ್ದು, ನ.17ರಂದು ಪ್ರಕಟಿಸುವ ನಿರೀಕ್ಷೆಯಿದೆ. ತೀರ್ಪು ಪ್ರಕಟಗೊಳ್ಳುವ ಮೊದಲೇ ಅಯೋಧ್ಯೆ, ಗೋರಖ್ ಪುರ, ರಾಂಪುರ ಸೇರಿದಂತೆ ಹಲವು ಭಾಗಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ತೀರ್ಪಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಉತ್ತರ ಪ್ರದೇಶ ಪೊಲೀಸರು ನಾಲ್ಕು ಹಂತಗಳಲ್ಲಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಎಲ್ಲಿಯಾದರೂ ಭದ್ರತೆ ಕುರಿತ ಯೋಜನೆ ವಿಫಲವಾದರೆ ಮತ್ತೊಂದು ಪಡೆಯನ್ನು ನಿಯೋಜಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಅಯೋಧ್ಯೆ ದೇಗುಲದ ಸುತ್ತಮುತ್ತ 12 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅರೆ ಸೈನಿಕ ಪಡೆ, ಪ್ರಾಂತೀಯ ಸಶಸ್ತ್ರ ಪಡೆಯನ್ನು ನಿಯೋಜಿಸಲಾಗಿದೆ. ಇನ್ನು ಅಯೋಧ್ಯೆಯಲ್ಲಿ ಕರ್ಪ್ಯೂ ಹೇರುವ ಅಥವಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವ ಯಾವುದೇ ಯೋಜನೆಯಿಲ್ಲ. ಎಲ್ಲಾ ತೀರ್ಪಿನಂತೆ ಇದೂ ಸಹ ಸಾಮಾನ್ಯ ತೀರ್ಪು ಆಗಿರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಅಲ್ಲದೇ ಮೊಬೈಲ್ ಕರೆಗಳು, ಸಂದೇಶಗಳು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಸುದ್ದಿಗಳ ಮೇಲೂ ನಿಗಾ ಇರಿಸಲಾಗಿದೆ. ಶಾಂತಿಗೆ ಧಕ್ಕೆಯಾಗದಂತೆ, ಪ್ರಚೋದನಾತ್ಮಕ ಸಂದೇಶಗಳು, ದೃಶ್ಯಗಳು ಹರಿದಾಡದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಉತ್ತರಪ್ರದೇಶದ 1600 ಹಳ್ಳಿಗಳಲ್ಲಿ ಪೊಲೀಸರು 1600 ಸ್ವಯಂ ಸೇವಕರನ್ನು ಸಂಪರ್ಕಿಸುವ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಸ್ಥಳೀಯ ಮಟ್ಟದ ಸ್ಥಿತಿಗತಿ ಹೇಗಿದೆ, ಯಾವ ರೀತಿ ವಾತಾವರಣವಿದೆ ಎಂಬುದನ್ನು ತಿಳಿಸುತ್ತದೆ.
ಇತ್ತ ಅಯೋಧ್ಯೆ ತೀರ್ಪಿಗಾಗಿ ಸಂಪೂರ್ಣ ಸಿದ್ಧಗೊಂಡಿದ್ದೇವೆ. ಎಲ್ಲಾ ಸಮಯದಲ್ಲೂ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಶಾಂತಿ ಸಭೆಗಳನ್ನು ನಡೆಸುವ ಮೂಲಕ ಶಾಂತಿಯಿಂದಿರುವಂತೆ ಮನವರಿಕೆ ಮಾಡಿ ಕೊಡಲಾಗುತ್ತಿದೆ. ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಗುಪ್ತಚರ ಸಂಸ್ಥೆ ಸಕ್ರಿಯವಾಗಿದೆ. ಸಾಮಾಜಿಕ ವಿರೋಧಿ ಅಂಶಗಳು ಹರಿದಾಡದಂತೆ ಕ್ರಮ ಕೈಗೊಂಡಿರುವುದಾಗಿ ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ಒ.ಪಿ.ಸಿಂಗ್ ಹೇಳಿದರು.
ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದದ ತೀರ್ಪು ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಜಮಿಯತ್ ಉಲಾಮ ಇ ಹಿಂದ್ ಸಂಘಟನೆ ಅಧ್ಯಕ್ಷ ಸೈಯದ್ ಅರ್ಷದ್ ಮದಾನಿ ನವದೆಹಲಿಯಲ್ಲಿಂದು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.
ಇನ್ನು ತುಮಕೂರಿನಲ್ಲಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದದ ತೀರ್ಪು, ಟಿಪ್ಪು ಜಯಂತಿ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆಯ ಕುರಿತು ತುಮಕೂರಿನ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಮುಸ್ಲೀಂ ಮುಖಂಡರು, ಡಿಎಸ್ಎಸ್ ಮುಖಂಡರೊಂದಿಗೆ ಪೊಲೀಸರು ಶಾಂತಿ ಸಭೆ ನಡೆಸಿದರು. ಸಭೆಯಲ್ಲಿ ಈ ಮೂರು ವಿಷಗಳ ಕುರಿತು ಚರ್ಚೆ ನಡೆಯಿತು.
ಮುಸ್ಲೀಂ ಸಮುದಾಯದ ಹಿರಿಯರು, ಧರ್ಮಗುರುಗಳು, ವಿವಿಧ ಸಂಘಟನೆಗಳ ಮುಖಂಡರು, ದಲಿತ ಸಂಘರ್ಷ ಸಮಿತಿಯ ಮುಖಂಡರು ಕೂಡ ಸಭೆಯಲ್ಲಿ ಭಾಗವಹಿಸಿ ಶಾಂತಿ ಕಾಪಾಡುವ ಕುರಿತು ಸಲಹೆ ನೀಡಿದರು. ಟಿಪ್ಪು ಜಯಂತಿ ಆಚರಣೆ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ಕೆಲವು ಆಕ್ಷೇಪ ವ್ಯಕ್ತಪಡಿಸಿ ಅಸಮಾಧಾನ ಹೊರ ಹಾಕಿದರು.
ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ತೀರ್ಪು ಯಾರ ಪರವೇ ಬರಲಿ ಸಮಾಜದಲ್ಲಿ ಶಾಂತಿ ಕಾಡಿಕೊಳ್ಳುವುದಾಗಿ ಮುಸ್ಲೀಂ ಮುಖಂಡರು ಭರವಸೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೋಲೀಸ್ ವರಿಷ್ಠ ಡಾ. ವಂಶಿಕೃಷ್ಣ ಕೂಡ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಸಮುದಾದ ಮುಖಂಡರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಹೆಚ್ಚವರಿ ಎಎಸ್ಪಿ ಉದೇಶ ಟಿ.ಜೆ., ಬೆಸ್ಕಾಂ ಇಲಾಖೆಯ ಅದಿಕಾರಿ ಗೋವಿಂದಪ್ಪ, ಮಹಾನಗರ ಪಾಲಿಕೆಯ ಆರೋಗ್ಯ ಅದಿಕಾರಿ ನಾಗೇಶ್ ,ನಗರದ ಪೊಲೀಸ್ ಅದಿಕಾರಿಗಳು ಉಪಸ್ಥಿತಿತರಿದ್ದರು.