ಪಶ್ಚಿಮ ಬಂಗಾಳದ ಗರುಲಿಯಾ ಪುರಸಭೆ ಚುನಾವಣೆಯಿಂದ ನಾಮಪತ್ರ ಹಿಂಪಡೆದಿದ್ದ ಮೂವರು ಬಿಜೆಪಿ ನಾಯಕರು ಭಾನುವಾರ ತೃಣಮೂಲ ಕಾಂಗ್ರೆಸ್ಗೆ ವಾಪಸ್ ಬಂದಿದ್ದಾರೆ. ಬಿಜೆಪಿ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗರುಲಿಯಾ ಸೇರಿದಂತೆ ಪಶ್ಚಿಮ ಬಂಗಾಳದ 108 ಪುರಸಭೆಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಈ ಮೂವರನ್ನು ಬಿಜೆಪಿಯಿಂದ ಗರುಲಿಯಾ ಪುರಸಭೆಯ ವಾರ್ಡ್ ಸಂಖ್ಯೆ 12, 17 ಮತ್ತು 18 ರಿಂದ ಕಣಕ್ಕಿಳಿಸಲಾಗಿತ್ತು.
ಬಿಜೆಪಿಯ ಬ್ಯಾರಕ್ಪೋರ್ ಸಂಸದ ಅರ್ಜುನ್ ಸಿಂಗ್ ಅವರ ಸಂಬಂಧಿಕರಾದ ಮಾಜಿ ಶಾಸಕ ಸುನಿಲ್ ಸಿಂಗ್, ಅವರ ಮಗ ಆದಿತ್ಯ ಮತ್ತು ಗರುಲಿಯಾ ಪುರಸಭೆಯ ಮಾಜಿ ಅಧ್ಯಕ್ಷ ಸೌರಭ್ ಸಿಂಗ್ ಶನಿವಾರ ಬಿಜೆಪಿಯಿಂದ ಸಲ್ಲಿಸಿದ್ದ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದರು. ಇಂದು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಸಚಿವ ಜ್ಯೋತಿಪ್ರಿಯೋ ಮಲ್ಲಿಕ್ ಮತ್ತು ನೈಹಾಟಿ ಶಾಸಕ ಪಾರ್ಥ ಭೌಮಿಕ್ ಅವರ ಸಮ್ಮುಖದಲ್ಲಿ ತಿತಾಘರ್ ಪಕ್ಷದ ಕಚೇರಿಯಲ್ಲಿ ಟಿಎಂಸಿಗೆ ಮರು ಸೇರ್ಪಡೆಗೊಂಡರು.
ಇದನ್ನೂ ಓದಿ: ಮೋದೀಜಿ, ಇದೇನಾ ಭಾರತೀಯ ಸಂಸ್ಕೃತಿ?: ಅಸ್ಸಾಂ ಸಿಎಂ ವಜಾಕ್ಕೆ ತೆಲಂಗಾಣ ಸಿಎಂ ಆಗ್ರಹ
“ಬಿಜೆಪಿಯ ಉತ್ತರ 24 ಪರಗಣ ಘಟಕವು ಕಾರ್ಯನಿರ್ವಹಿಸುತ್ತಿರುವ ರೀತಿಯ ಬಗ್ಗೆ ನಮಗೆ ಅತೃಪ್ತಿ ಇದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನಾ ನೆಲೆ ವೇಗವಾಗಿ ಕುಗ್ಗುತ್ತಿರುವಾಗಲೇ ಸ್ವಪಕ್ಷೀಯ ನಾಯಕರ ಸಂಖ್ಯೆ ಹೆಚ್ಚಿದೆ. ಅಂತಹ ಪಕ್ಷದೊಂದಿಗೆ ನಾವು ಸಂಬಂಧ ಹೊಂದಲು ಬಯಸುವುದಿಲ್ಲ” ಎಂದು ಸೌರಭ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟಿಎಂಸಿ ತೊರೆದು ಬಿಜೆಪಿ ಸೇರಿದ್ದು ನಮ್ಮ ಕಡೆಯಿಂದ ತಪ್ಪಾಗಿದೆ ಎಂದು ಸುನಿಲ್ ಸಿಂಗ್ ಹೇಳಿದ್ದಾರೆ.
ಮೂವರ ನಡೆಯನ್ನು ಖಂಡಿಸಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರನ್ನು “ದೇಶದ್ರೋಹಿಗಳು” ಎಂದು ಕರೆದಿದ್ದಾರೆ. ಅರ್ಜುನ್ ಸಿಂಗ್ 2019 ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. “ಟಿಎಂಸಿಯಿಂದ ಕೊಡುಗೆಗಳನ್ನು ಪಡೆದ ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇವರೆಲ್ಲ ಅಕ್ಷರಶಃ ಬಿಜೆಪಿಯಿಂದ ಮುನ್ಸಿಪಲ್ ಚುನಾವಣೆ ಟಿಕೆಟ್ಗಾಗಿ ಭಿಕ್ಷೆ ಬೇಡಿದ್ದರು. ಇನ್ನು ಮುಂದೆ ಅವರು ನನ್ನ ಕುಟುಂಬವಲ್ಲ. ಬಿಜೆಪಿಯಲ್ಲಿರುವವರು ನನ್ನ ಕುಟುಂಬದ ಸದಸ್ಯರು” ಎಂದಿದ್ದಾರೆ.
ಇನ್ನು, ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಶ್ರಮಿಸುತ್ತಿದ್ದರೂ ತಮಗೆ ಸರಿಯಾದ ಮನ್ನಣೆ ಸಿಗುತ್ತಿಲ್ಲ ಎಂದು ಆರೋಪಿಸಿ 200 ಬಿಜೆಪಿ ಯುವ ಘಟಕದ ಸದಸ್ಯರು ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಖರಗ್ಪುರ ಪ್ರದೇಶದಲ್ಲಿ ಟಿಎಂಸಿಗೆ ಇತ್ತಿಚೇಗೆ ಸೇರ್ಪಡೆಯಾಗಿದ್ದರು.
ಇದನ್ನೂ ಓದಿ: ದೆಹಲಿ: ಅಂಗವಿಕಲ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್ ಆರೋಪ, ಖಂಡನೆ ಬಳಿಕ ಕ್ಷಮೆಯಾಚನೆ