ಟೈಮ್ ನಿಯತಕಾಲಿಕದ ವಾರ್ಷಿಕ 100 ಭವಿಷ್ಯ ರೂಪಿಸುವ ನಾಯಕರ ಪಟ್ಟಿಯಲ್ಲಿ ಭೀಮ್ ಆರ್ಮಿ ಮುಖ್ಯಸ್ಥ, ಯುವ ದಲಿತ ನಾಯಕ ಚಂದ್ರಶೇಖರ್ ಆಜಾದ್ ಸ್ಥಾನಪಡೆದಿದ್ದಾರೆ. ಆಜಾದ್ ಜೊತೆಗೆ ವಕೀಲ ವಿಜಯ ಗದ್ದೆ, ಯುಕೆಯ ಹಣಕಾಸು ಸಚಿವ ರಿಷಿ ಸುನಕ್, ಇನ್ಸ್ಟಾಕಾರ್ಟ್ ಸಂಸ್ಥಾಪಕ ಮತ್ತು ಸಿಇಒ ಅಪೂರ್ವ ಮೆಹ್ತಾ, ವೈದ್ಯರುಗಳಾದ ಶಿಖಾ ಗುಪ್ತಾ, ರೋಹನ್ ಪಾವುಲೂರಿ ಭಾರತೀಯ ಮೂಲಕದ ಪರವಾಗಿ ಟೈಮ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬುಧವಾರ ಬಿಡುಗಡೆಯಾದ 2021ರ ಮುಂದಿನ ಭವಿಷ್ಯವನ್ನು ರೂಪಿಸುವ ವಿಶ್ವದ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯಲ್ಲಿ ಭಾರತೀಯ ಮೂಲಕ 6 ಜನರು ಸ್ಥಾನ ಪಡೆದಿದ್ದಾರೆ.
ಡಿಸೆಂಬರ್ 02, 1986ರಲ್ಲಿ ಚಂದ್ರಶೇಖರ್ ಅಜಾದ್ ಜನಿಸಿದ್ದು ಸಹರಾನ್ಪುರದ ಚತ್ಮಾಲ್ಪುರದ ಬಳಿಯ ಘದ್ಕೌಲಿ ಗ್ರಾಮದಲ್ಲಿ. ಅವರು ಮೊದಲು ಸುದ್ದಿಯಾಗಿದ್ದು 2015 ರಲ್ಲಿ. ಅವರು ತಮ್ಮ ಊರಿನ ಆರಂಭದಲ್ಲಿ ‘ಮಹಾ ಚಮ್ಮಾರರನ್ನು ಘದ್ಕೌಲಿಯು ಸ್ವಾಗತಿಸುತ್ತದೆ (ಘದ್ಕೌಲಿ ವೆಲ್ಕಮ್ ಯು ದಿ ಗ್ರೇಟ್ ಚಾಮರ್ಸ್)’ ಎಂದು ಬೋರ್ಡು ಹಾಕುವ ಮೂಲಕ.
ಕಾನೂನು ಅಧ್ಯಯನ ಮಾಡಿದ ಇವರು 2014ರಲ್ಲಿ ಭೀಮ್ ಆರ್ಮಿ ಎನ್ನುವ ಸಂಘಟನೆ ಕಟ್ಟುವ ಮೂಲಕ ಮಿಲಿಟೆಂಟ್ ದಲಿತ ಹೋರಾಟಕ್ಕೆ ಧುಮುಕಿದರು. ದಲಿತರಿಗೆ ಶಿಕ್ಷಣ ಬೇಕು ಎಂಬುದನ್ನು ಮನಗಂಡಿರುವ ಭೀಮ್ ಆರ್ಮಿ ಉತ್ತರ ಪ್ರದೇಶದಲ್ಲಿ ಸುಮಾರು 350ಕ್ಕೂ ಹೆಚ್ಚು ಭೀಮ್ ಪಾಠಶಾಲಾಗಳನ್ನು ನಡೆಸುತ್ತಿದೆ.
ಸಹರಾನ್ಪುರದ ಶಬ್ಬೀರ್ಪುರ ಗ್ರಾಮದಲ್ಲಿ 2017 ರಲ್ಲಿ ಮೇಲ್ಜಾತಿ ಠಾಕೂರರು ದಲಿತರ ಮೇಲೆ ದೌರ್ಜನ್ಯವೆಸಗಿದ್ದರು. ತಂದನಂತರ ಮೇಲ್ಜಾತಿಗಳ ದೌರ್ಜನ್ಯಕ್ಕೆ ಭೀಮ್ ಆರ್ಮಿ ಹಿಂಸೆಯ ಮೂಲಕವೇ ತಿರುಗೇಟು ನೀಡಿತ್ತು. ಆಗ ಉತ್ತರ ಪ್ರದೇಶ ಸರ್ಕಾರ ಇವರನ್ನು ಒಂದೂ ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಬಂಧಿಸಿತ್ತು. ಬಿಡುಗಡೆಯ ನಂತರ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ದೆಹಲಿಯಲ್ಲಿ ಧೀರೋದ್ಧಾತ ಹೋರಾಟ ನಡೆಸಿದ ಅವರು, ಅಜಾದ್ ಸಮಾಜ್ ಪಕ್ಷ ಹುಟ್ಟು ಹಾಕಿದ್ದಾರೆ. ಹತ್ರಾಸ್ ಸಾಮೂಹಿಕ ಅತ್ಯಾಚಾರದ ನಂತರ ಉತ್ತರ ಪ್ರದೇಶದಲ್ಲಿ ದಿಟ್ಟ ಹೋರಾಟ ನಡೆಸುತ್ತಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಕಾನ್ಶಿರಾಮ್ರವರ ಆಶಯಗಳನ್ನು ಈಡೇರಿಸುವ ಒಬ್ಬ ಕಾರ್ಯಕರ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಅಜಾದ್ ದಲಿತ ಮುಸ್ಲಿಂ ಐಕ್ಯತೆಯ ಮೂಲಕ ಜಾತಿವಿನಾಶಕ್ಕಾಗಿ ತಮ್ಮ ಜೀವನ ಮುಡಿಪಿಟ್ಟಿದ್ದಾರೆ.
ಇದನ್ನೂ ಓದಿ: ’ಟೈಮ್’ ಮ್ಯಾಗಜೀನ್ನಲ್ಲಿ ಯುಪಿ ಸರ್ಕಾರದ ಜಾಹೀರಾತು; ’ವರದಿ’ ಎಂದು ಬಿಂಬಿಸಿದ ಭಾರತೀಯ ಮಾಧ್ಯಮಗಳು!