Homeಕರ್ನಾಟಕಕಾರು ಅಪಘಾತವನ್ನು ಹಲ್ಲೆಯೆಂದು ಬಿಂಬಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್

ಕಾರು ಅಪಘಾತವನ್ನು ಹಲ್ಲೆಯೆಂದು ಬಿಂಬಿಸಿದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್

- Advertisement -
- Advertisement -

ಕಾರು ಅಪಘಾತದ ಘಟನೆಯನ್ನು ಹಲ್ಲೆ ಎಂದು ಬಿಂಬಿಸಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ರಾಜಕೀಯ ಲಾಭ ಪಡೆಯಲು ಯತ್ನಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

“ಚಿತ್ತಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಲಗತ್ತಿ ರಾಷ್ಟ್ರೀಯ ಹೆದ್ದಾರಿ 150ರ ಬಳಿ ಇರುವ ನನ್ನ ಫಾರ್ಮ್‌ ಹೌಸ್‌ನಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಶಂಕರವಾಡಿ ಕ್ರಾಸ್ ಬಳಿ ಅಪರಿಚಿತ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ” ಎಂದು ಮಣಿಕಂಠ ರಾಠೋಡ್ ನವೆಂಬರ್ 19ರಂದು ಶಹದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಾಗ ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿರುವುದು ಬಯಲಾಗಿದೆ ಎಂದು ವರದಿಗಳು ಹೇಳಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

“ಶಂಕರವಾಡಿ ಕ್ರಾಸ್ ಬಳಿ ತನ್ನ ಮೇಲೆ ಹಲ್ಲೆ ನಡೆದಿರುವುದಾಗಿ ಮಣಿಕಂಠ ರಾಠೋಡ್ ಶಹದಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಅಪಘಾತವನ್ನು ಹಲ್ಲೆ ಎಂದು ಬಿಂಬಿಸಿರುವುದು ಗೊತ್ತಾಗಿದೆ” ಎಂದು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.

ಮಣಿಕಂಠ ರಾಠೋಡ್ ಅವರ ಬಿಳಿ ಬಣ್ಣದ ಇನ್ನೋವಾ ಕ್ರಿಸ್ಟಾ ಕಾರು ಯಾದಗಿರಿ ಜಿಲ್ಲೆಯ ಚೆಪಟ್ಲಾದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮಣಿಕಂಠ ರಾಠೋಡ್‌ಗೆ ಗಾಯಗಳಾಗಿತ್ತು. ಅಪಘಾತದ ಬಳಿಕ ತನ್ನ ಮತ್ತೊಂದು ಕಾರಿನಲ್ಲಿ ಕಲಬುರಗಿಗೆ ತೆರಳಿದ್ದ ರಾಠೋಡ್, ನಂತರ ಅಲ್ಲಿಂದ ಚಿತ್ತಾಪುರಕ್ಕೆ ಹೋಗಿದ್ದರು. ಈ ವೇಳೆ ಮಾರ್ಗ ಮಧ್ಯೆ ಹಲ್ಲೆ ನಡೆದಿರುವುದಾಗಿ ಕಥೆ ಕಟ್ಟಿದ್ದರು.

ಅಪಘಾತಗೊಂಡ ಇನ್ನೋವಾ ಕ್ರಿಸ್ಟಾ ಕಾರನ್ನು ರಾತ್ರೋರಾತ್ರಿ ಹೈದರಾಬಾದ್​ಗೆ ಟೋಯಿಂಗ್ ಮುಖಾಂತರ ಶಿಫ್ಟ್ ಮಾಡಲಾಗಿತ್ತು. ತನ್ನದೇ ಕಾರಿನ ಗಾಜು ಒಡೆದು ಹಾಕಿದ ರಾಠೋಡ್, ಏಳೆಂಟು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದರು ಎಂದು ತಿಳಿದು ಬಂದಿದೆ.

ಆರೋಗ್ಯ ವಿಚಾರಿಸಿದ್ದರು ಅಶೋಕ್, ವಿಜಯೇಂದ್ರ

ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕಥೆ ಕಟ್ಟಿ ಆಸ್ಪತ್ರೆಗೆ ದಾಖಲಾಗಿದ್ದ ಮಣಿಕಂಠ ರಾಠೋಡ್‌ನ ಆರೋಗ್ಯ ವಿಚಾರಿಸಲು ಬಿಜೆಪಿ ಮುಖಂಡರಾದ ಆರ್.ಅಶೋಕ್ ಮತ್ತು ವಿಜಯೇಂದ್ರ ತೆರಳಿದ್ದರು. ಆರೋಗ್ಯ ವಿಚಾರಿಸಿದ ಬಳಿಕ ಇಬ್ಬರು ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಬಾಯ್ಬಿಟ್ಟ ಮಣಿಕಂಠ ರಾಠೋಡ್ ಬೆಂಬಲಿಗ

ಕಲಬುರಗಿಯಿಂದ ಚಿತ್ತಾಪುರಕ್ಕೆ ಮಣಿಕಂಠ ರಾಠೋಡ್ ಬಂದ ಕಾರಿನಲ್ಲಿ ಒಂದೇ ಒಂದು ಹನಿ ರಕ್ತದ ಕಲೆ ಇರಲಿಲ್ಲ. ಮಣಿಕಂಠ ರಾಠೋಡ್ ಕಾಲ್ ರೆಕಾರ್ಡ್ ಹಿಸ್ಟರಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತಿದಾಗ ಅಪಘಾತ ನಡೆದಿರುವುದು ಬೆಳಕಿಗೆ ಬಂದಿದೆ. ರಾಠೋಡ್ ಜೊತೆಗಿದ್ದವನನ್ನು ವಿಚಾರಣೆ ನಡೆಸಿದಾಗ ಆತ ನಿಜ ವಿಷಯ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ನ್ಯೂಸ್‌ 18 ಕನ್ನಡ ವರದಿ ಮಾಡಿದೆ.

ಮಣಿಕಂಠ ರಾಠೋಡ್ ಯಾರು?

ರೌಡಿ ಶೀಟರ್ ಆಗಿರುವ ಮಣಿಕಂಠ ರಾಠೋಡ್ ವಿರುದ್ಧ ಕರ್ನಾಟಕ, ತೆಲಂಗಾಣ ಸೇರಿದಂತೆ ವಿವಿದೆಡೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿಯ ಚಿತ್ತಾಪುರ ಕ್ಷೇತ್ರದಿಂದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಠೋಡ್, ಸೋಲು ಅನುಭವಿಸಿದ್ದರು.

ಇದನ್ನೂ ಓದಿ : ಗಂಗಾವತಿ: ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಅಂಧ ವೃದ್ಧನಿಗೆ ಹಲ್ಲೆ ಪ್ರಕರಣ; ಇಬ್ಬರ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -