ಸನಾತನದ ಧರ್ಮದ ಕುರಿತ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಡಿಎಂಕೆ ಯುವ ನಾಯಕ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಮೊದಲ ಬಾರಿಗೆ ಸಾರ್ವಜನಿಕೆ ವೇದಿಕೆಯಲ್ಲಿ ಮಾತನಾಡಿದ್ದು, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ನನ್ನ ಹೇಳಿಕೆಯನ್ನು ತಿರುಚಿ, ಇಡೀ ದೇಶವೇ ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವಂತೆ ಮಾಡಿತು” ಎಂದಿದ್ದಾರೆ.
ಕರೂರ್ನಲ್ಲಿ ಭಾನುವಾರ ಆಯೋಜಿಸಿದ್ದ ಡಿಎಂಕೆ ಯುವ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, “ನಾನು ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಮೂರು ನಿಮಿಷ ಮಾತನಾಡಿದ್ದೆ. ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು. ತಾರತಮ್ಯವನ್ನು ಮಾಡಬಾರದು. ತಾರತಮ್ಯಗಳಂತಹ ಪ್ರಯತ್ನಗಳನ್ನು ನಿರ್ಮೂಲನೆ ಮಾಡಬೇಕು ಎಂದಿದ್ದೆ. ಆದರೆ, ಬಿಜೆಪಿಯವರು ನನ್ನ ಹೇಳಿಕೆಯನ್ನು ತಿರುಚಿ ದೊಡ್ಡದು ಮಾಡಿ ಇಡೀ ದೇಶ ನನ್ನ ಬಗ್ಗೆ ಮಾತನಾಡುವಂತೆ ಮಾಡಿದರು” ಎಂದು ಹೇಳಿದ್ದಾರೆ.
“ಯಾರೋ ಒಬ್ಬರು ದೇವ ಮಾನವರು ನನ್ನ ತಲೆಗೆ 5-10 ಕೋಟಿ ರೂ. ಘೋಷಣೆ ಮಾಡಿದ್ದರು. ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಆದರೆ, ನಾನು ಯಾವುದೇ ಕಾರಣಕ್ಕೆ ಕ್ಷಮೆ ಯಾಚಿಸುವುದಿಲ್ಲ ಮತ್ತು ಹೇಳಿಕೆ ಹಿಂಪಡೆಯುವುದಿಲ್ಲ ಎಂದಿದ್ದೆ. ನಾನು ಸ್ಟಾಲಿನ್ ಅವರ ಮಗ ಮತ್ತು ಕಲೈಗ್ನಾರ್ ಅವರ ಮೊಮ್ಮಗ, ಅವರು ತೋರಿಸಿಕೊಟ್ಟ ಸಿದ್ದಾಂತಕ್ಕೆ ಬದ್ದವಾಗಿದ್ದೇನೆ ಎಂದಿದ್ದೆ. ಪ್ರಕರಣ ಈಗ ನ್ಯಾಯಾಲದಯಲ್ಲಿದೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ” ಎಂದು ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ಉದಯನಿಧಿ ವಿವಾದ ಏನು ?
ಈ ವರ್ಷದ ಸೆಪ್ಟೆಂಬರ್ನಲ್ಲಿ ಚೆನ್ನೈನಲ್ಲಿ ಪ್ರಗತಿಪರ ಚಿಂತಕರ ವೇದಿಕೆ ಆಯೋಜಿಸಿದ್ದ ಸನಾತನ ನಿರ್ಮೂಲನೆ ಎಂಬ ಕಾರ್ಯಕ್ರಮದಲ್ಲಿ, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ರೋಗಗಳಿದ್ದಂತೆ. ಅದಕ್ಕೆ ತಾತ್ಕಾಲಿಕ ಮದ್ದು ಮಾಡಿದರೆ ಸಾಲದು. ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಿಜೆಪಿ ಉದಯನಿಧಿ ಮತ್ತು ಅವರ ಡಿಎಂಕೆ ಪಕ್ಷದ ಮೇಲೆ ಮುಗಿ ಬಿದ್ದಿತ್ತು. ಉದಯನಿಧಿ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಪ್ರಸ್ತುತ ಮದ್ರಾಸ್ ಹೈಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.
ಇದನ್ನೂ ಓದಿ : 3 ರಾಜ್ಯಗಳಲ್ಲಿ ಒಂದೇ ಒಂದು ಖಾತೆ ತೆರೆಯದ ಎಎಪಿ: ನೋಟಾಗಿಂತಲೂ ಅಲ್ಪ ಮತ