ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರಿಗೆ ಪೌರತ್ವ ನೀಡಲು ಕೇಂದ್ರ ಮತ್ತು ಬಿಜೆಪಿ ಉತ್ಸುಕವಾಗಿದ್ದು, ಮುಂದಿನ ವರ್ಷದ ಜನವರಿಯಿಂದಲೇ ಪೌರತ್ವ ತಿದ್ದುಪಡಿ ಕಾನೂನು(ಸಿಎಎ) ಜಾರಿಗೆ ತರುವ ಸಾಧ್ಯತೆಯಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
‘ತೃಣಮೂಲ ಸರ್ಕಾರಕ್ಕೆ ನಿರಾಶ್ರಿತರ ಬಗ್ಗೆ ಸಹಾನುಭೂತಿ ಇಲ್ಲ. ನಮ್ಮ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳದಲ್ಲಿ, ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾದ ಎಲ್ಲರಿಗೂ ಮೋದಿ ಸರ್ಕಾರ ಪೌರತ್ವ ನೀಡುತ್ತದೆ. ಸಿಎಎ ಅಡಿಯಲ್ಲಿ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ಮುಂದಿನ ವರ್ಷ ಜನವರಿಯಿಂದ ಪ್ರಾರಂಭವಾಗುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ” ಎಂದು ಕೈಲಾಶ್ ಹೇಳಿದ್ದಾರೆ.
ಇದನ್ನೂ ಓದಿ: ಸಿಎಎ ಶೀಘ್ರವೇ ಜಾರಿ; ಕೊರೊನಾ ಕಾರಣದಿಂದ ವಿಳಂಬವಾಗಿತ್ತು: ಜೆ.ಪಿ.ನಡ್ಡಾ
“ನೆರೆಯ ದೇಶಗಳಿಂದ ನಮ್ಮ ದೇಶಕ್ಕೆ ಬರುವ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಾಮಾಣಿಕ ಉದ್ದೇಶದಿಂದ ಕೇಂದ್ರವು ಸಿಎಎಯನ್ನು ಅಂಗೀಕರಿಸಿದ್ದು, ಅದು ಖಂಡಿತವಾಗಿಯು ಪೂರ್ಣಗೊಳ್ಳಲಿದೆ” ಎಂದು ಅವರು ಹೇಳಿದ್ದಾರೆ. ಪೌರತ್ವ ತಿದ್ದುಪಡಿಯನ್ನು ಜಾರಿ ಮಾಡುವುದು ರಾಜ್ಯಗಳ ಬಾಧ್ಯತೆಯಾಗಿದೆ ಎಂದು ಕೈಲಾಶ್ ಈ ಹಿಂದೆ ಹೇಳಿದ್ದರು.
ಒಮ್ಮೆ ಒಂದು ಮಸೂದೆಯನ್ನು ಸಂಸತ್ತು ಅಂಗೀಕರಿಸಿ ಕಾನೂನಾಗಿ ಅಂಗೀಕರಿಸಿದರೆ, ಅದನ್ನು ಸಂವಿಧಾನದ 252 ನೇ ವಿಧಿ ಅನ್ವಯ ಜಾರಿಗೆ ತರುವುದು ಎಲ್ಲಾ ರಾಜ್ಯಗಳ ಬಾಧ್ಯತೆಯಾಗಿದೆ ಎಂದು ಕೈಲಾಶ್ ಹೇಳಿದ್ದರು. ಏತನ್ಮಧ್ಯೆ, ಪಶ್ಚಿಮ ಬಂಗಾಳದ ಜನರನ್ನು ಮೋಸಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಸಚಿವ ಫಿರ್ಹಾದ್ ಹಕೀಮ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಪರಿಸರ ಚಳವಳಿ, ಸಿಎಎ ವಿರೋಧಿ ಹೋರಾಟಗಳ ಗಟ್ಟಿ ದನಿ ಅಖಿಲ್ ಗೊಗೋಯ್