Homeಅಂಕಣಗಳುಅನುಭಾವಿಗಳ ಕ್ರಾಂತಿ ತಿಳಿಯಲು 600 ಕೋಟಿ ರೂಗಳ ಕಟ್ಟಡವಷ್ಟೇ ಸಾಕೆ?

ಅನುಭಾವಿಗಳ ಕ್ರಾಂತಿ ತಿಳಿಯಲು 600 ಕೋಟಿ ರೂಗಳ ಕಟ್ಟಡವಷ್ಟೇ ಸಾಕೆ?

- Advertisement -
- Advertisement -

ಹೈದ್ರಾಬಾದು-ಮುಂಬಯಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಸ್ತಾಪುರ ಬಂಗಲಾ ಕ್ರಾಸ್ ಹತ್ತಿರ ಬಲಕ್ಕೆ ತಿರುಗಿ ಸ್ವಲ್ಪ ಮುಂದೆ ಹೋದರೆ ಸಿಗುವುದು ತ್ರಿಪುರಾಂತ. ಮೊದಲಿಗೆ ಸಣ್ಣ ಹಳ್ಳಿ ಆಗಿದ್ದ ಇದು ಈಗ ಬಸವಕಲ್ಯಾಣ ನಗರದ ಬಡಾವಣೆ ಆಗೇದ.

ತ್ರಿಪುರಾಂತದೊಳಗ ಇರೋ ನೀರಿನ ಮೂಲ ಎರಡು. ಒಂದು ಬಂದವರ ಓಣಿ, ಇನ್ನೊಂದು ತ್ರಿಪುರಾಂತ ಕೆರೆ. ಪವಿತ್ರ ಸ್ಥಳದಾಗ ಇರೋ ಕೆರೆ, ಬಾವಿ ಅಥವಾ ನೀರಿನ ಮೂಲಕ್ಕ ಕಲ್ಯಾಣಿ ಅಂತ ಹೆಸರು. ಈ ತ್ರಿಪುರಾಂತದ ಕಲ್ಯಾಣಿಯಿಂದಲೇ ಈ ಊರಿಗೆ ಹೆಸರು ಬಂತು. ಇಂದಿಗೂ ಹಳ್ಳಿ ಮಂದಿ ‘ಎಲ್ಲಿಂದ ಬಂದೀಯೋ?’ ಅಂದ್ರ ‘ನಾ ಕಲ್ಯಾಣಿಯಿಂದ ಬಂದೆ’ ಅಂತಾರ. ಗೈರು ಕನ್ನಡದವರು-ಅಂದ್ರ ತೆಲುಗು, ಮರಾಠಿ, ಉರ್ದು- ಹಿಂದಿ ಮಾತಾಡುವರು ಈ ಊರಿಗೆ ಕಲ್ಯಾಣಿ ಅಂತಲೇ ಕರೀತಾರ.

ಮೊದಲೆಲ್ಲಾ ಸರ್ಕಾರಿ ದಾಖಲೆಯೊಳಗ ಕಲ್ಯಾಣಿ ಅಂತಲೇ ಇತ್ತು. ಅದು ಅರವತ್ತರ ದಶಕದೊಳಗ ಬಸವಕಲ್ಯಾಣ ಅಂತ ಮರುನಾಮಕರಣ ಆತು. ಶರಣರ ವಚನದೊಳಗ ಸಹಿತ ‘ಕಲ್ಯಾಣವೆಂಬೋ’ ಪಟ್ಟಣ ಅಂತ ಈ ಊರಿನ ಹೆಸರು ಹೇಳತಾರ.

ಕಲ್ಯಾಣ ಕ್ರಾಂತಿಯ ಕಾಲದಾಗ 770 ಶರಣರು ಇದ್ದರೂ ಅವರ ಎಲ್ಲರ ವಚನ ಲಭ್ಯ ಇಲ್ಲ. ಈಗ ಲಭ್ಯವಿರುವ 250 ಶರಣರ 21,000 ವಚನಗಳಲ್ಲಿ ಸುಮಾರು 120 ಕಡೆ ಕಲ್ಯಾಣ ಅನ್ನುವ ಪದ ಬರ್ತದ. ಅದರಾಗ ಅನೇಕ ಜನ ಆ ಊರಿನ ಹೆಸರು ಹಾಗೂ ಜನ ಕಲ್ಯಾಣ ಅನ್ನುವ ಅರ್ಥದೊಳಗ ಅದನ್ನ ಬಳಸಿಕೊಂಡಾರ.

ಆ ಕೆರೆ ಈಗ ಅರ್ಧ ಒಣಗಿ ಹೋಗೇತಿ. ಅದು ಅಷ್ಟೇ ಅಲ್ಲ, ಅಲ್ಲಿನ ಸುಮಾರು 25 ಶರಣರ ಸಮಾಧಿ-ಸ್ಮಾರಕ-ಗವಿಗಳ ಹತ್ತಿರ ಇರುವ ಕೆರೆ-ಬಾವಿಗಳು ಸಹಿತ ‘ನಳನಳಿಸುವ ಸ್ಥಿತಿ’ಯೊಳಗ ಇಲ್ಲ. ಕಲ್ಯಾಣದ ಇತಿಹಾಸ ಸಂಶೋಧಕರ ಪ್ರಕಾರ ಅಲ್ಲಿ 100ಕ್ಕೂ ಹೆಚ್ಚು ಸ್ಮಾರಕ ಇರಬೇಕಾಗಿತ್ತು. ಆದರ ಅಲ್ಲೆ ಸದ್ಯಕ್ಕ 27 ಸ್ಮಾರಕ ಪತ್ತೆ ಹಚ್ಚಿ ಅಭಿವೃದ್ಧಿ ಮಾಡೋ ಕೆಲಸ ಶುರು ಆಗೇದ.

PC : Praveen Hanchinal

ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿದ ಅಥವಾ ಪುನರ್ ನಿರ್ಮಾಣ ಮಾಡಿದ ಈ ಸ್ಮಾರಕಗಳು ಭಾಳ ಛಂದ ಅದಾವು. ಆದರ ಅಲ್ಲೆ ಇದು ಹಿಂಗ, ಇದರ ಇತಿಹಾಸ ಹಿಂಗ ಅಂತ ಹೇಳಿಕೊಡುವ ಗೈಡುಗಳು ಇಲ್ಲ. ನೀವು ಬಸವಕಲ್ಯಾಣ ಬಸ್ ನಿಲ್ದಾಣದೊಳಗ ಇಳದು ಇಲ್ಲೆ ನಾವು ಏನು ಏನು ನೋಡಬಹುದು ಅಂತ ಕೇಳಿದರ ಹೇಳೋ ಪ್ರವಾಸೋದ್ಯಮ ಇಲಾಖೆ ಕಚೇರಿ ಇಲ್ಲ. ಸಿಟಿ ರೌಂಡ್ ಹೊಡೆಸಿಕೊಂಡು ಬರುವ ಟ್ಯಾಕ್ಸಿ ಸೇವೆ ಇಲ್ಲ.

ತಾಲೂಕು ಕೇಂದ್ರ ಆಗಿರುವ ಈ ಪಟ್ಟಣದಿಂದ ಬೇರೆ ಬೇರೆ ಪಕ್ಷದ ಶಾಸಕರು ಆರಿಸಿಹೋಗಿದ್ದರೂ ಸಹಿತ, ಅದು ಹಿಂದುಳಿದ ಹೈದರಾಬಾದ್ ಕರ್ನಾಟಕದ ಛಾಪು ಉಳಿಸಿಕೊಂಡದ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅದು ಶತಮಾನಗಳಷ್ಟು ಹಿಂದೆ ಉಳಿದದ. ಅಲ್ಲಿ ಒಂದು ಉನ್ನತ ಗುಣಮಟ್ಟದ ಆಸ್ಪತ್ರೆ ಇಲ್ಲ. ಇಲ್ಲಿ ಮಹಿಳಾ ವೈದ್ಯರು, ಹೃದಯತಜ್ಞರು, ಕಿಡ್ನಿ ತಜ್ಞರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ತಾಲೂಕ ಆಸ್ಪತ್ರೆ ಇದೆ. ಅದು ಸುಸಜ್ಜಿತವಾಗಿಲ್ಲ. ಇತರ ನಗರದೊಳಗ ಇರುವಂತ ಆರೋಗ್ಯ ಕೇಂದ್ರ ಇಲ್ಲಿಲ್ಲ.

ಬಸವಕಲ್ಯಾಣದೊಳಗ ಒಂದು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲ. ಇಡೀ ತಾಲೂಕಿನಲ್ಲಿ ಕೇವಲ ಒಂದು ಸರ್ಕಾರಿ ಡಿಗ್ರಿ ಕಾಲೇಜು ಹಾಗೂ ಎರಡು ಸರ್ಕಾರಿ ಪಿಯುಸಿ ಕಾಲೇಜು ಇವೆ.

ಇದಕ್ಕೆ ಹೋಲಿಸಿದರೆ ಹಾಸನ ತಾಲೂಕಿನಲ್ಲಿ ಆರು ಸರ್ಕಾರಿ ಡಿಗ್ರಿ ಕಾಲೇಜು ಹಾಗೂ 12 ಸರ್ಕಾರಿ ಪಿಯುಸಿ ಕಾಲೇಜು ಇವೆ.

ಅದರ ಪಕ್ಕದ ಹೊಳೆನರಸೀಪುರ ಕ್ಷೇತ್ರದೊಳಗ ಅರ್ಧ ಡಜನ್ ಸರ್ಕಾರಿ ಡಿಗ್ರಿ ಕಾಲೇಜು ಅದಾವು.

ಇಲ್ಲಿ ಒಂದು ರಿಂಗ್ ರೋಡ್ ಇಲ್ಲ. ಬೈಪಾಸ್ ರಸ್ತೆ ಇಲ್ಲ. ಹೊಸ ಮಾದರಿಯ ಬಸ್ ನಿಲ್ದಾಣ ಇಲ್ಲ. ಅತ್ಯಂತ ಹತ್ತಿರದ ರೈಲ್ವೆ ಹಳಿ 35 ಕಿಲೋಮೀಟರ್ ದೂರ ಐತಿ. ಅಲ್ಲಿಗೆ ಒಂದೇ ರೈಲು ಬರಬೇಕಾಗಿತ್ತು. ಅದೂ ಬಂದಿಲ್ಲ. ಅತಿ ಹತ್ತಿರದ ರೈಲು ಬರೋ ನಿಲ್ದಾಣ 100 ಕಿಲೋಮೀಟರ್ ದೂರ ಬೀದರ್‌ದಾಗ ಐತಿ.

ಕುಡಿಯುವ ನೀರು, ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಒಳಚರಂಡಿ ಇಲ್ಲ. ಜಿಲ್ಲಾ ಕೇಂದ್ರ ಬೀದರ್‌ಗಿಂತ ಕಲ್ಯಾಣ ದೊಡ್ಡದಾದರೂ ಇಲ್ಲಿ ನಗರ ಬಸ್ ಸಂಚಾರ ಇಲ್ಲ. ಪ್ರವಾಸಿಗರಿಗಾಗಿ ವಿಶೇಷ ಬಸ್ ವ್ಯವಸ್ಥೆ ಇಲ್ಲ. ಮೂರು ಯಾತ್ರಿ ನಿವಾಸ ಅದಾವು. ಆದರ ಅದರ ಮಾಹಿತಿ ಅಂತರಜಾಲದಾಗ ಇಲ್ಲ.

ಬಸವಕಲ್ಯಾಣವನ್ನು ಅಂತರರಾಷ್ಟ್ರೀಯ ಯಾತ್ರಾ ಸ್ಥಳ ಮಾಡಬೇಕು ಅಂತ ಹೇಳಿದವರು ಹಲವರು. ಅದನ್ನು ಜಾಗತಿಕ ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಸುತ್ತೇವೆ ಅಂತ ಹೇಳಿದವರು ಇಲ್ಲ. ಇಲ್ಲಿ ಬಸವಣ್ಣನ ಬಗ್ಗೆ, ಇತರ ಶರಣರ ಬಗ್ಗೆ, ಒಂದು ದೊಡ್ಡ ಮ್ಯೂಜಿಯಂ ಅಥವಾ ಲೈಬ್ರರಿ ಇಲ್ಲ. ಮಲ್ಟಿಮೀಡಿಯಾದಂತಹ ಆಧುನಿಕ ತಂತ್ರಜ್ಞಾನ ಬಳಸಿ ಹನ್ನೆರಡನೇ ಶತಮಾನದ ಕ್ರಾಂತಿಯ ಕತೆ ಹೇಳುವ ಕೇಂದ್ರ ಇಲ್ಲ. ಹಾಡು-ನೃತ್ಯ, ನಾಟಕ-ಜನಪದ ಕಲೆ ತೋರುವ, ಬೆಳೆಸುವ ಕೇಂದ್ರ ಇಲ್ಲ. ಆಧುನಿಕ ತಾಂತ್ರಿಕತೆಯ ರಂಗಮಂದಿರ ಇನ್ನೂ ಆಗಬೇಕು.

ಒಂದು ಉನ್ನತ ಗುಣಮಟ್ಟದ ವಚನ ಸಂಶೋಧನಾ ಕೇಂದ್ರ ಇಲ್ಲ. ಪಕ್ಕದ ಮಹಾರಾಷ್ಟ್ರದ ಸಂತರ, ತೆಲಂಗಾಣದ ಭಕ್ತಿ ಕವಿಗಳ ಕೃತಿ ಚರ್ಚಿಸುವ, ಪರಿಚಯಿಸುವ, ಸ್ಥಳೀಯ ಸೂಫಿ ಸಂತರ ಬಗ್ಗೆ ತಿಳಿಸಿಕೊಡುವ ಸಂಸ್ಥೆ ಇಲ್ಲ.

ಕಲ್ಯಾಣವನ್ನು ಶತಮಾನಗಳಗಟ್ಟಲೆ ಆಳಿದ, ಕಲ್ಯಾಣಿ ಚಾಲುಕ್ಯರ ಆಡಳಿತ ಕುರಿತು ಅಧ್ಯಯನ ನಡೆಸುವ, ಪ್ರಚಾರ ಮಾಡುವ ಪ್ರಯತ್ನ ಆಗಿಲ್ಲ. ದೇಶದ ತುಂಬ ವಿಶಿಷ್ಟ ವಾಸ್ತುಶಿಲ್ಪಗಳ ದೇವಾಲಯ ಕಟ್ಟಿದ, ಮಾನಸೋಲ್ಲಾಸದಂತಹ ಎನ್‌ಸೈಕಲೋಪೀಡಿಯ ಬರೆದ, ಪ್ರಾಣಿ ವಿಜ್ಞಾನದ ಬಗ್ಗೆ ಪುಸ್ತಕ ಬರೆದ ಚಾಲುಕ್ಯ ಅರಸು-ಪಂಡಿತರ ಬಗ್ಗೆ ಒಂದು ಸ್ಮಾರಕವೂ ಇಲ್ಲ. ಅವರು ಕಟ್ಟಿದ, ಮೂರು ಅಂತಸ್ತಿನ ಕೋಟೆ ಸುಸ್ಥಿತಿಯಲ್ಲಿ ಇಲ್ಲ.

ಕನ್ನಡಿಗರನ್ನು ಬಿಟ್ಟು ಹೊರಗಿನವರು ಬಂದರೆ, ವಿದೇಶೀಯರು ಬಂದರೆ ಅವರ ಕೈ ಹಿಡಿದು ಊರು ತೋರಿಸುವ ಸಂಸ್ಥೆಗಳು ಇಲ್ಲ. ಸಂಪನ್ಮೂಲ ವ್ಯಕ್ತಿಗಳು ಕಮ್ಮಿ. ವಿಶ್ವಕ್ಕೇ ದಾರಿ ತೋರಬಹುದಾದ ಕನ್ನಡ ನಾಡಿನ ಸಾಂಸ್ಕೃತಿಕ ಕ್ರಾಂತಿಯ ಪರಿಚಯ ಇತರರಿಗೆ ಮಾಡುವ ಪ್ರಯತ್ನಗಳನ್ನು ಸರಕಾರ ಮಾಡಿಲ್ಲ.

PC : Prajavani

ಅಂದಂಗ ನಮ್ಮ ಘನ ಸರಕಾರ ಆರು ನೂರು ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಕಟ್ಟಡ ಕಟ್ಟುವ ಘೋಷಣೆ ಮಾಡಿದ್ದು ನಿಮಗ ಗೊತ್ತು ಇರಬೇಕು. ಮುಖ್ಯಮಂತ್ರಿಯವರು ಹೋಗಿ ಕಲ್ಲು ಹಾಕಿರುವ ಈ ಕಟ್ಟಡದ ಹೆಸರು ಅನುಭವ ಮಂಟಪ. ಈಗಾಗಲೇ ತ್ರಿಪುರಾಂತ ಕೆರೆಯ ದಂಡೆಯ ಮೇಲೆ ಅನುಭವ ಮಂಟಪ ಮಾದರಿಯ ಒಂದು ದೊಡ್ಡ ಕಟ್ಟಡ ಐತಿ.ಆ ಕಟ್ಟಡದ ವಿನ್ಯಾಸ ತಯಾರು ಆಗಿಲ್ಲ. ಅದರ ಹಣಕಾಸು ಯೋಜನೆ ಸರ್ಕಾರದ ಮುಂದೆ ಬಂದಿಲ್ಲ. ಟೆಂಡರ್ ಆಗಿಲ್ಲ. ಜಮೀನು ಗುರುತು ಆಗಿಲ್ಲ. ಆದರ ಮುಂದ ಬರೋ ಉಪ ಚುನಾವಣೆ ತಯಾರಿಗಾಗಿ ಸರಕಾರ ಅನುಭವ ಮಂಟಪದ ಘೋಷಣೆ ಮಾಡೆದ.

ಅಂದ ಹಂಗ ಪ್ರಮಥರಲ್ಲಿ ಒಬ್ಬರಾದ ಗುರು ಸಿದ್ದೇಶ್ವರ ಅವರು ತಮ್ಮ ವಚನಗಳಲ್ಲಿ ಅನುಭವ ಮಂಟಪ ಅನ್ನುವ ಪದ ಬಳಸೋದಿಲ್ಲ. ಅನುಭಾವ ಮಂಟಪ ಅನ್ನುವ ಪದ ಬಳಕೆ ಮಾಡತಾರ. ಒಂದು ಆಕಾರದೊಳಗ ನಾವು ನೋಡೋ ರೀತಿನ ಬದಲು ಆಗತದ ಅಂತ ತೋರಿಸಿಕೊಡತಾರ.

ಗುರುಸಿದ್ಧ ದೇವರ ವಚನಗಳಲ್ಲಿ ಅನುಭಾವ ಮಂಟಪ ಒಂದು ಉದಾಹರಣೆ.

ಅಯ್ಯ, ವರಕುಮಾರ ದೇಶಿಕೋತ್ತಮನೆ ಕೇಳ!
ಕಲ್ಯಾಣಪಟ್ಟಣದ ಅನುಭಾವಮಂಟಪದಲ್ಲಿ
ಬಸವ ಮೊದಲಾದ ಪ್ರಮಥರೆಲ್ಲ
ಚೆನ್ನಬಸವರಾಜೇಂದ್ರಂಗೆ ಅಬ್ಥಿವಂದಿಸಿ,
ಮಹಾಲಿಂಗೈಕ್ಯಾನುಭಾವವ ಬೆಸಗೊಳಲು
ಅದೇ ಪ್ರಸಾದವ ನಿನಗೆ ಅರುಹಿಸಿ ಕೊಟ್ಟೆವು ಕೇಳಾ ನಂದೀಶ,
ಸಂಗನಬಸವೇಶ್ವರ.

ನಾವೆಲ್ಲಾ ಅನುಭಾವದ ಬಗ್ಗೆ ತಿಳಿದುಕೊಳ್ಳಲಿಕ್ಕೆ ಇನ್ನೂ ತಡ ಆಗಿಲ್ಲ, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕನ್ನಡ ವಿವಿ ಉಳಿಸಿ ಅಭಿಯಾನ: ಕರವೇ ಹೋರಾಟಕ್ಕೆ ಭಾಗಶಃ ಗೆಲುವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...