ದ್ವೇಷ ಮತ್ತು ಹಿಂಸಾಚಾರದ ಮೇಲೆ ನಿರ್ಮಿಸಲಾದ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ನನ್ನ ಧರ್ಮ ನನಗೆ ಕಲಿಸಿಲ್ಲ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಹೇಳಿದ್ದಾರೆ.
ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಒಂದು ದಿನದ ಮೊದಲು ಅಭಿಷೇಕ್ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.
“ದ್ವೇಷ, ಹಿಂಸಾಚಾರ ಮತ್ತು ಅಮಾಯಕರ ಶವಗಳ ಮೇಲೆ ನಿರ್ಮಿಸಲಾದ ಮಂದಿರ, ಮಸೀದಿ, ಚರ್ಚ್ ಅಥವಾ ಗುರುದ್ವಾರವೇ ಆಗಿರಲಿ, ಅತಂಹ ಆರಾಧನಾ ಸ್ಥಳವನ್ನು ಒಪ್ಪಿಕೊಳ್ಳಲು ನನ್ನ ಧರ್ಮ ನನಗೆ ಕಲಿಸಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
My RELIGION has not taught me to accept and embrace a place of worship, whether it be a MANDIR, MASJID, CHURCH or GURUDWARA, which has been built over HATRED, VIOLENCE and the dead bodies of innocents. Period!
— Abhishek Banerjee (@abhishekaitc) January 21, 2024
ಇಂದು (ಜ.22, ಸೋಮವಾರ) ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಮೆಗಾ ಸಂಪ್ರೀತಿ (ಧಾರ್ಮಿಕ ಸಾಮರಸ್ಯ) ರ್ಯಾಲಿಯನ್ನು ಮುನ್ನಡೆಸಲಿದ್ದಾರೆ. ಈ ರ್ಯಾಲಿಯು ದಾರಿಯುದ್ದಕ್ಕೂ ಮಸೀದಿ, ದೇವಾಲಯ, ಚರ್ಚ್ ಮತ್ತು ಗುರುದ್ವಾರಗಳನ್ನು ಒಳಗೊಳ್ಳಲಿದೆ.
ಇಂಡಿಯಾ ಒಕ್ಕೂಟದ ಪಕ್ಷವಾದ ಟಿಎಂಸಿ ರಾಮ ಮಂದಿರ ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದೆ. ಇಂಡಿಯಾ ಒಕ್ಕೂಟದ ಇತರ ಪಕ್ಷಗಳಾದ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿವೆ.
ಈ ವರ್ಷದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಚುನಾವಣಾ ಲಾಭಕ್ಕಾಗಿ ಕೇಂದ್ರದ ಭಾರತೀಯ ಜನತಾ ಪಕ್ಷ(ಬಿಜೆಪಿ) ವು ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ: ತಡರಾತ್ರಿ ಜೈಲು ಅಧಿಕಾರಿಗಳಿಗೆ ಶರಣಾದ ಎಲ್ಲಾ11 ಅಪರಾಧಿಗಳು