ಯಾವುದೇ ನ್ಯಾಯಾಲಯವು ಸುಪ್ರೀಂ ಕೋರ್ಟ್ನ ತೀರ್ಪಿನ ವಿರುದ್ಧ ಆದೇಶ ಹೊರಡಿಸುವುದು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದ ಸುಪ್ರೀಂ ಕೋರ್ಟ್, ಪ್ರಕರಣವೊಂದರಲ್ಲಿ ಗುಜರಾತ್ ಹೈಕೋರ್ಟ್ನ್ನು ತರಾಟೆಗೆ ತೆಗೆದುಕೊಂಡಿದೆ.
ಅತ್ಯಾಚಾರ ಸಂತ್ರಸ್ತೆ ತನ್ನ ಗರ್ಭಾವಸ್ಥೆಯನ್ನು ಕೊನೆಗೊಳಿಸಲು ಅನುಮತಿ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನಿರಾಕರಿಸಿ ಆದೇಶವನ್ನು ನೀಡಿತ್ತು. ಇದನ್ನು ಟೀಕಿಸಿದ ಸುಪ್ರೀಂಕೋರ್ಟ್ ಅತ್ಯಾಚಾರ ಸಂತ್ರಸ್ತೆಗೆ ಗರ್ಭವನ್ನು ಕೊನೆಗೊಳಿಸಲು ಅನುಮತಿಯನ್ನು ನೀಡಿದೆ.
ಗುಜರಾತ್ ಹೈಕೋರ್ಟ್ ನಲ್ಲಿ ಏನಾಗುತ್ತಿದೆ? ಭಾರತದ ಯಾವುದೇ ನ್ಯಾಯಾಲಯವು ಉನ್ನತ ನ್ಯಾಯಾಲಯದ ಆದೇಶದ ವಿರುದ್ಧ ಆದೇಶವನ್ನು ನೀಡುವಂತಿಲ್ಲ. ಇದು ಸಾಂವಿಧಾನದ ತತ್ವಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.
ಪ್ರಕರಣದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗುಜರಾತ್ ಸರ್ಕಾರದ ಪರ ಹಾಜರಾಗಿದ್ದರು.
ಅತ್ಯಾಚಾರ ಸಂತ್ರಸ್ತೆಯ ಅರ್ಜಿಯನ್ನು ವಿಚಾರಣೆ ನಡೆಸುವಲ್ಲಿ ಹೈಕೋರ್ಟ್ನ ವಿಳಂಬವನ್ನು ಸುಪ್ರೀಂಕೋರ್ಟ್ ಸೋಮವಾರ ಗಮನಿಸಿದೆ ಮತ್ತು “ಅಮೂಲ್ಯವಾದ ಸಮಯ” ಕಳೆದುಹೋಗಿದೆ ಎಂದು ಹೇಳಿದೆ. ನಂತರ ನ್ಯಾಯಮೂರ್ತಿ ನಾಗರತ್ನ ಮತ್ತು ನ್ಯಾ.ಭುಯಾನ್ ಅವರಿದ್ದ ಪೀಠ ಇಂದು ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ.
ಈ ಕುರಿತು ಹೈಕೋರ್ಟ್ನ ಧೋರಣೆ ಯನ್ನು ಟೀಕಿಸಿದ ಸುಪ್ರೀಂ ಕೋರ್ಟ್, ಮಹಿಳೆಯ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಗುಜರಾತ್ ಸರ್ಕಾರ ಮತ್ತು ಇತರರಿಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.
ಸಂತ್ರಸ್ತೆ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಈ ಕುರಿತು ಮಾಹಿತಿ ನೀಡಿದ್ದು, ಅವರು ಆಗಸ್ಟ್ 7 ರಂದು ಹೈಕೋರ್ಟ್ ಗೆ ಸಂಪರ್ಕಿಸಿದರು ಮತ್ತು ಮರುದಿನ ಈ ವಿಷಯವನ್ನು ಆಲಿಸಲಾಯಿತು. ಅರ್ಜಿದಾರರ ಗರ್ಭಾವಸ್ಥೆಯ ಸ್ಥಿತಿ ಮತ್ತು ಅವರ ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ತಂಡವನ್ನು ರಚಿಸುವಂತೆ ಆಗಸ್ಟ್ 8 ರಂದು ಹೈಕೋರ್ಟ್ ನಿರ್ದೇಶಿಸಿದೆ.
ಮೆಡಿಕಲ್ ಕಾಲೇಜು ಅತ್ಯಾಚಾರ ಸಂತ್ರಸ್ತೆಯನ್ನು ಪರೀಕ್ಷಿಸಿ ತನ್ನ ವರದಿಯನ್ನು ಆಗಸ್ಟ್ 10 ರಂದು ಸಲ್ಲಿಸಿದೆ. ವರದಿಯಲ್ಲಿ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಬಹುದು ಎಂದು ತಿಳಿಸಲಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಈ ಕುರಿತು ಆಗಸ್ಟ್ 11 ರಂದು ಹೈಕೋರ್ಟ್ ವರದಿಯನ್ನು ದಾಖಲಿಸಿದೆ ಆದರೆ ವಿಚಿತ್ರ ಎಂದರೆ 12 ದಿನಗಳ ನಂತರ ವಿಷಯವನ್ನು ಪಟ್ಟಿ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪ್ರಕರಣದಲ್ಲಿ ಪ್ರತಿದಿನದ ವಿಳಂಬವು ನಿರ್ಣಾಯಕ ಮತ್ತು ಹೆಚ್ಚಿನ ಮಹತ್ವದ್ದಾಗಿದೆ ಕೋರ್ಟ್ ಹೇಳಿದೆ.
ಇಂತಹ ಸಂದರ್ಭಗಳಲ್ಲಿ, ಕನಿಷ್ಠ ತುರ್ತು ಪ್ರಜ್ಞೆ ಇರಬೇಕು ಮತ್ತು ಅದನ್ನು ಯಾವುದೇ ಸಾಮಾನ್ಯ ಪ್ರಕರಣವೆಂದು ಪರಿಗಣಿಸಿ ಅದನ್ನು ಮುಂದೂಡುವ ಮನೋಭಾವವನ್ನು ಹೊಂದಿರಬಾರದು. ಈ ಹೇಳಿಕೆಯನ್ನು ಹೇಳಲು ನಾವು ವಿಷಾದಿಸುತ್ತೇವೆ ಎಂದು ಪೀಠವು ಮೌಖಿಕವಾಗಿ ಹೇಳಿದೆ.
ಆಗಸ್ಟ್ 17 ರಂದು ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಪ್ರಕರಣದ ಸ್ಥಿತಿ ತೋರಿಸುತ್ತದೆ. ಆದರೆ ಯಾವುದೇ ಕಾರಣಗಳನ್ನು ನೀಡಲಾಗಿಲ್ಲ ಮತ್ತು ಆದೇಶವನ್ನು ಹೈಕೋರ್ಟ್ನ ವೆಬ್ಸೈಟ್ನಲ್ಲಿ ಇನ್ನು ಅಪ್ಲೋಡ್ ಮಾಡಬೇಕಾಗಿದೆ ಎಂದು ಅರ್ಜಿದಾರರ ವಕೀಲರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಗರ್ಭಧಾರಣೆಯನ್ನು ಕೊನೆಗೊಳಿಸಲು ಮಹಿಳೆಗೆ ಅನುಮತಿಯನ್ನು ನೀಡಿದೆ. ಭ್ರೂಣವು ಜೀವಂತವಾಗಿದೆ ಎಂದಾದರೆ ಅದನ್ನು ಬದುಕುವಂತೆ ಮಾಡಲು ಆಸ್ಪತ್ರೆಯು ಕಾವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದನ್ನು ಓದಿ: ಕೇಂದ್ರದ ಗೃಹ, ರೈಲ್ವೆ, ಬ್ಯಾಂಕ್ ಸಿಬ್ಬಂದಿಗಳ ಮೇಲೆ ಹೆಚ್ಚು ಭ್ರಷ್ಟಾಚಾರದ ದೂರು ದಾಖಲು:ಸಿವಿಸಿ ವರದಿ