ದೇಶದಲ್ಲಿ ಜಾತಿಯಾಧಾರಿತ ಜನಗಣತಿ ವಿಚಾರ ಹೆಚ್ಚು ಚರ್ಚೆಯಾಗುತ್ತಿದ್ದು, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕೂಡ ಜಾತಿಯಾಧಾರಿತ ಜನಗಣತಿಯನ್ನು ನಿರಾಕರಿಸುತ್ತಿರುವ ಒಕ್ಕೂಟ ಸರ್ಕಾರದ ನಿರ್ಧಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳ ಜಾತಿ ಗಣತಿಗಾಗಿ ಕೇಂದ್ರ ಸರ್ಕಾರ ನಿರಾಕರಣೆ ವ್ಯಕ್ತಪಡಿಸುತ್ತಿದ್ದು, ಇದು ಬಿಜೆಪಿ ತನ್ನ ಚುನಾವಣಾ ಹಿತಾಸಕ್ತಿಗಾಗಿ ಮಾತ್ರ ಸಮುದಾಯವನ್ನು ಬಳಸುತ್ತಿರುವುದನ್ನು ಬಹಿರಂಗಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದುಳಿದ ವರ್ಗಗಳ ಜಾತಿ ಗಣತಿಯು “ಆಡಳಿತಾತ್ಮಕವಾಗಿ ಕಷ್ಟಕರ ಮತ್ತು ತೊಡಕಿನದ್ದಾಗಿದೆ” ಮತ್ತು ಅಂತಹ ಮಾಹಿತಿಯನ್ನು ಜನಗಣತಿಯ ವ್ಯಾಪ್ತಿಯಿಂದ ಹೊರಗಿಡುವುದು “ಪ್ರಜ್ಞಾಪೂರ್ವಕ ನೀತಿ ನಿರ್ಧಾರ” ಎಂದು ಒಕ್ಕೂಟ ಸರ್ಕಾರ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಯುಪಿ ಚುನಾವಣೆಯಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ: ಓವೈಸಿ ಜೊತೆ ಮೈತ್ರಿ ತಳ್ಳಿ ಹಾಕಿದ ಮಾಯಾವತಿ
1. केन्द्र सरकार द्वारा माननीय सुप्रीम कोर्ट में हलफनामा दाखिल करके पिछड़े वर्गों की जातीय जनगणना कराने से साफ तौर पर इन्कार कर देना यह अति-गंभीर व अति-चिन्तनीय, जो भाजपा के चुनावी स्वार्थ की ओबीसी राजनीति का पर्दाफाश व इनकी कथनी व करनी में अन्तर को उजागर करता है। सजगता जरूरी।
— Mayawati (@Mayawati) September 24, 2021
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಬಿಎಸ್ಪಿ ಅಧ್ಯಕ್ಷೆ, “ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಅಫಿಡವಿಟ್ ಸಲ್ಲಿಸುವ ಮೂಲಕ ಹಿಂದುಳಿದ ವರ್ಗಗಳ ಜಾತಿ ಗಣತಿಯನ್ನು ನಡೆಸಲು ನಿರ್ದಿಷ್ಟವಾಗಿ ನಿರಾಕರಿಸಿರುವುದು ತೀವ್ರ ಕಳವಳಕಾರಿ ವಿಷಯವಾಗಿದೆ. ಇದು ಒಬಿಸಿ ರಾಜಕೀಯದಲ್ಲಿ ಬಿಜೆಪಿಯ ಚುನಾವಣಾ ಹಿತಾಸಕ್ತಿಗಳು ಮತ್ತು ಅವರ ಮಾತುಗಳಲ್ಲಿನ ವ್ಯತ್ಯಾಸವನ್ನು ತಿಳಿಸುತ್ತವೆ. ಜಾಗರೂಕರಾಗಿರಿ” ಎಂದಿದ್ದಾರೆ.
“ಎಸ್ಸಿ ಮತ್ತು ಎಸ್ಟಿಯಂತೆ, ಒಬಿಸಿ ವರ್ಗದ ಜಾತಿ ಗಣತಿಯನ್ನು ನಡೆಸುವ ಬೇಡಿಕೆಯು ಇಡೀ ದೇಶದಲ್ಲಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಆದರೆ ಕೇಂದ್ರದ ಸ್ಪಷ್ಟ ನಿರಾಕರಣೆಯು ಇಡೀ ಸಮುದಾಯವನ್ನು ಘಾಸಿಗೊಳಿಸಿದೆ. ಹೇಗೆ ಇವರ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ಅವರನ್ನು ನಿರಂತರವಾಗಿ ಘಾಸಿಗೊಳಿಸುತ್ತಿದ್ದಾರೋ ಅದೇ ರೀತಿ ಅವರ ಭವಿಷ್ಯಕ್ಕೆ ಹಾನಿಯನ್ನುಂಟುಮಾಡುತ್ತಾರೆ” ಎಂದಿದ್ದಾರೆ.
ದೇಶದಲ್ಲಿ ಜಾತಿ ಆಧಾರಿತ ಜನಗಣತಿಯು ಸಮಾಜದ ವಿವಿಧ ವರ್ಗಗಳ ಜನರಿಗೆ ಕಲ್ಯಾಣ ಯೋಜನೆಗಳನ್ನು ತಯಾರಿಸಲು ಸಹಾಯ ಮಾಡುತ್ತದೆ ಎಂದು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ.
ಜಾತಿ ಆಧಾರಿತ ಜನಗಣತಿಯ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ 10 ಪಕ್ಷಗಳ ನಿಯೋಗದ ನಡುವೆ ದೆಹಲಿಯಲ್ಲಿ ಸಭೆ ನಡೆದಿತ್ತು.
ಇದನ್ನೂ ಓದಿ: ರೈತ ಆಂದೋಲನದ ಹೆಸರಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯ: ಮಾಯಾವತಿ