ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿಇಟಿ ಮೂರನೇ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವ ಗಡುವನ್ನು ಒಂದು ವಾರ ವಿಸ್ತರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಲ್ಕ ಪಾವತಿಗೆ ಇಂದು ಕೊನೆಯ ದಿನವಾಗಿತ್ತು. ಮಳೆಯಿಂದ ಜನಜೀವನ ಸಂಕಷ್ಟವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ತೀವ್ರ ಮಳೆಯಿಂದ ತುಂಗಾ ಜಲಾಶಯದ ಹೊರ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ 30 ರಿಂದ 40 ಟಿಎಂಸಿ ನೀರು ಸಂಗ್ರಹವಾಗುವುದೆಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದ ಎಡದಂಡೆ, ಬಲದಂಡೆ ನಾಲೆಗಳು ಹಾಗೂ ವಿಜಯನಗರ ಕಾಲುವೆಗಳಿಗೆ 9800 ಕ್ಯುಸೆಕ್ಸ್ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ.
ಅದೇ ರೀತಿಯಾಗಿ ಹೇಮಾವತಿ ಜಲಾಶಯದಿಂದ ಹೇಮಾವತಿ ಕಾಲುವೆ ಜಾಲಕ್ಕೆ ಆಗಸ್ಟ್ 7ರಿಂದ 14.53 ಟಿಎಂಸಿ ನೀರು ಬಿಡಲು ಸರ್ಕಾರ ಅನುಮತಿ ನೀಡಿದೆ. ಆಗಸ್ಟ್ 6 ರಂದು ಹೇಮಾವತಿ ಜಲಾಶಯದ ಒಳಹರಿವು 17,623 ಕ್ಯುಸೆಕ್ಸ್ ಆಗಿದ್ದು, ಹೊರ ಹರಿವು 5,000 ಕ್ಯುಸೆಕ್ಸ್ ನಷ್ಟಿದೆ. ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಕರ್ನಾಟಕ ವಾರ್ತೆ ತಿಳಿಸಿದೆ.