Homeಮುಖಪುಟ“10 ಸಾಲ್‌ ಅನ್ಯಾಯ್‌ ಕಾಲ್”: ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್‌ ಬಿಡುಗಡೆ ಮಾಡಿದ 'ಕಪ್ಪುಪತ್ರ'ದಲ್ಲಿ ಏನಿದೆ?

“10 ಸಾಲ್‌ ಅನ್ಯಾಯ್‌ ಕಾಲ್”: ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್‌ ಬಿಡುಗಡೆ ಮಾಡಿದ ‘ಕಪ್ಪುಪತ್ರ’ದಲ್ಲಿ ಏನಿದೆ?

- Advertisement -
- Advertisement -

ಹಿಂದಿನ ಯುಪಿಎ ಸರ್ಕಾರದ 10 ವರ್ಷಗಳ ಅಧಿಕಾರದ ವಿರುದ್ಧ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ‘ಶ್ವೇತಪತ್ರ’ ಮಂಡಿಸಲು ಮುಂದಾಗಿತ್ತು. ಇದರ ಬೆನ್ನಲ್ಲಿ ಕಾಂಗ್ರೆಸ್‌ ಕಳೆದ 10 ವರ್ಷಗಳಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಅನ್ಯಾಯಗಳನ್ನು ಎತ್ತಿ ತೋರಿಸುವ ನರೇಂದ್ರ ಮೋದಿ ಸರಕಾರದ ವೈಫಲ್ಯಗಳ ಕುರಿತ ಕಪ್ಪು ಪತ್ರವನ್ನು ಬಿಡುಗಡೆ ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಪ್ಪು  ಪತ್ರವನ್ನು ಬಿಡುಗಡೆ ಮಾಡಿದ್ದಾರೆ. “10 ಸಾಲ್‌ ಅನ್ಯಾಯ್‌ ಕಾಲ್” (10 ವರ್ಷ ಅನ್ಯಾಯದ ಕಾಲ) ಎಂಬ ಶೀರ್ಷಿಕೆಯ ಈ ಕಪ್ಪು ಪತ್ರವು 54 ಪುಟಗಳ ದಾಖಲೆಯನ್ನು ಹೊಂದಿದೆ. ಮೋದಿ ಸರ್ಕಾರವು ತನ್ನ 10 ವರ್ಷಗಳ ಅಧಿಕಾರದಲ್ಲಿ ದೇಶದ ಆರ್ಥಿಕತೆಯನ್ನು ನಾಶಪಡಿಸಿದೆ, ನಿರುದ್ಯೋಗ ಉಲ್ಭಣಕ್ಕೆ ಕಾರಣವಾಗಿದೆ, ದೇಶದ ಕೃಷಿ ಕ್ಷೇತ್ರವನ್ನು ನಾಶಪಡಿಸಿದೆ, ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಕುಮ್ಮಕ್ಕು ನೀಡಿದೆ ಮತ್ತು ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಘೋರ ಅನ್ಯಾಯವನ್ನು ಮಾಡಿದೆ ಎಂದು ಹೇಳಿದೆ.

ಇಂದು ನಾವು ಸರ್ಕಾರದ ವಿರುದ್ಧ ‘ಕಪ್ಪು ಪತ್ರವನ್ನು’ ಹೊರತರುತ್ತಿದ್ದೇವೆ. ಪ್ರಧಾನಿ ಮೋದಿ ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದಾಗಲೆಲ್ಲಾ ತಮ್ಮ ವೈಫಲ್ಯಗಳನ್ನು ಮರೆಮಾಚುತ್ತಾರೆ. ಅದೇ ವೇಳೆ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡುವಾಗ ಅದಕ್ಕೆ ಪ್ರಾಮುಖ್ಯತೆ ನೀಡುವುದಿಲ್ಲ. ಹೀಗಾಗಿ ಕರಾಳ ಪತ್ರ ಹೊರತಂದು ಸರ್ಕಾರದ ವೈಫಲ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

2004 ಮತ್ತು 2014ರ ನಡುವಿನ ಯುಪಿಎ ಆರ್ಥಿಕ ವೈಫಲ್ಯಗಳನ್ನು ಎತ್ತಿ ತೋರಿಸಲು ಮೋದಿ ಸರ್ಕಾರವು ಸಂಸತ್ತಿನಲ್ಲಿ ಶ್ವೇತಪತ್ರವನ್ನು ತರುತ್ತದೆ ಎಂಬ ಊಹಾಪೋಹದ ನಡುವೆಯೇ ಕಪ್ಪು ಪತ್ರ ಬಿಡುಗಡೆಗೆ ನಡೆದಿದೆ.

ಭಾರತದ ಜಿಡಿಪಿ ಬೆಳವಣಿಗೆಯು 5%ಕ್ಕೆ ಇಳಿದಿತ್ತು, ಹಣದುಬ್ಬರವು 10% ಕ್ಕೆ ಏರಿತ್ತು, ದೇಶವು ಪಾವತಿಯ ಸಮತೋಲನ ಬಿಕ್ಕಟ್ಟನ್ನು ಎದುರಿಸುತ್ತಿತ್ತು. ಬ್ಯಾಂಕಿಂಗ್‌ ವ್ಯವಸ್ಥೆಯು ಬಿಕ್ಕಟ್ಟಿನಲ್ಲಿತ್ತು. ಎಲ್ಲರೂ ದೇಶವನ್ನು ತೊರೆಯುತ್ತಿದ್ದರು ಮತ್ತು ನಾವು ವಿಶ್ವದ ದುರ್ಬಲ ಆರ್ಥಿಕತೆಯಲ್ಲಿದ್ದೆವು. ಇದು ಯುಪಿಎ ನಮ್ಮನ್ನು ಬಿಟ್ಟು ಹೋಗಿರುವ ಸ್ಥಿತಿಯಾಗಿದೆ ಎಂದು ಎನ್‌ಡಿಎ ಸರಕಾರ ಹೇಳಿತ್ತು. ಶ್ವೇತಪತ್ರದಲ್ಲಿ 2014ರ ಮೊದಲು ಆರ್ಥಿಕತೆಯ ಸ್ಥಿತಿ ಹೇಗಿತ್ತು ಮತ್ತು ನಾವು ಆರ್ಥಿಕ ಸಮಸ್ಯೆಗಳನ್ನು ಹೇಗೆ ನಿಭಾಯಿಸಿದ್ದೇವೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ ಎಂದು ಹೇಳಾಗಿತ್ತು.

ಕಾಂಗ್ರೆಸ್‌ನ ‘ಕಪ್ಪು ಪತ್ರ’ :

ಕಾಂಗ್ರೆಸ್‌ನ ಕಪ್ಪು ಪತ್ರದಲ್ಲಿ ಮೋದಿ ಆಡಳಿತದಲ್ಲಿ ಹೆಚ್ಚಿನ ನಿರುದ್ಯೋಗ, ಆರ್ಥಿಕ ದುರಂತಗಳಾದ ನೋಟು ರದ್ದತಿ ಮತ್ತು ದೋಷಪೂರಿತ ಜಿಎಸ್‌ಟಿ, ಶ್ರೀಮಂತರು ಮತ್ತು ಬಡವರ ನಡುವಿನ ವಿಭಜನೆಯ ಹೆಚ್ಚಳವಾಗಿದೆ, ಲಕ್ಷಾಂತರ ರೈತರು ಮತ್ತು ದಿನಗೂಲಿ ಕಾರ್ಮಿಕರ ಭವಿಷ್ಯವನ್ನು ನಾಶಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಕಪ್ಪು ಪತ್ರದಲ್ಲಿ 45 ವರ್ಷಗಳಲ್ಲಿ ಅತ್ಯಧಿಕ ನಿರುದ್ಯೋಗ ದರವನ್ನು ಎತ್ತಿ ತೋರಿಸಿದೆ, ಅಗತ್ಯ ವಸ್ತುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯ ಹೊರತಾಗಿಯೂ MSPನ್ನು ಹೆಚ್ಚಿಸುವಲ್ಲಿ ವಿಫಲವಾಗಿದೆ. ಮೋದಿ ಆಡಳಿತವನ್ನು ‘ಮೊದನಿ ರಾಜ್’ ಎಂದು ಕರೆದ ಕಾಂಗ್ರೆಸ್‌, ಆರ್ಥಿಕ ಅಪರಾಧಿಗಳಿಗೆ ಸುರಕ್ಷತೆ ನೀಡುತ್ತದೆ, ಮೋದಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸುತ್ತದೆ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಅನ್ಯಾಯದ ಅಡಿಯಲ್ಲಿ ಕಳೆದ ದಶಕದಲ್ಲಿ ಮಹಿಳೆಯರು, ಎಸ್ಸಿ, ಎಸ್ಟಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ಸ್ಪಷ್ಟವಾದ ತಾರತಮ್ಯ ಮತ್ತು ತೀವ್ರ ದಬ್ಬಾಳಿಕೆ ಕಂಡು ಬಂದಿದೆ ಎಂದು ಪಕ್ಷವು ಹೇಳಿಕೊಂಡಿದೆ. ಮೋದಿ ಆಡಳಿತದಲ್ಲಿ ದ್ವೇಷ, ಧ್ರುವೀಕರಣ ಮತ್ತು ವಿಭಜನೆಯ ರಾಜಕೀಯವು ದೇಶದ ಸಾಮಾಜಿಕ ರಚನೆಯನ್ನು ನಾಶಪಡಿಸಿದೆ ಎಂದು ಹೇಳಲಾಗಿದೆ.

ರಾಜಕೀಯ ಅನ್ಯಾಯದ ಅಡಿಯಲ್ಲಿ, ಮೋದಿ ಸರ್ಕಾರವು ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಅತಿಕ್ರಮಣಗಳ ಬಗ್ಗೆ ಮೌನವಾಗಿದೆ, ಅಗ್ನಿಪಥ್ ಯೋಜನೆಯೊಂದಿಗೆ ಸೈನ್ಯವನ್ನು ದುರ್ಬಲಗೊಳಿಸಿದೆ ಮತ್ತು ತನಿಖಾ ಸಂಸ್ಥೆಗಳನ್ನು ವಿರೋಧಗಳನ್ನು ಹತ್ತಿಕ್ಕಲು ಬಯಸುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ ಎಂದು ಕಪ್ಪು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ದೇಶದ ದೊಡ್ಡ ಸಮಸ್ಯೆಯಾದ ನಿರುದ್ಯೋಗದ ಬಗ್ಗೆ ಮೋದಿ ಸರ್ಕಾರ ಎಂದಿಗೂ ಮಾತನಾಡುವುದಿಲ್ಲ, ಅವರು ನೆಹರೂ ಬಗ್ಗೆ ಮಾತನಾಡುತ್ತಾರೆ ಆದರೆ ಸಾರ್ವಜನಿಕ ವಲಯದ ಉದ್ಯೋಗಗಳ ಮೂಲಕ ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ ಎಂಬುದರ ಬಗ್ಗೆ ಮಾತನಾಡುವುದಿಲ್ಲ. ಮೋದಿ ಸರ್ಕಾರವು ರಾಜ್ಯಗಳಿಗೆ ಹಣವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಖರ್ಗೆ ವಾಗ್ದಾಳಿಯನ್ನು ನಡೆಸಿದ್ದಾರೆ.

ಬುಧವಾರ ರಾಜ್ಯಸಭೆಯಲ್ಲಿ ಮೋದಿ ಅವರು ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಹಕ್ಕುಗಳನ್ನು ನೀಡಿರುವುದಾಗಿ ಹೇಳಿದ್ದಕ್ಕೆ ವ್ಯಂಗ್ಯವಾಡಿದ ಖರ್ಗೆ, ಯುಪಿಎ ಸರ್ಕಾರವು ಅವರಿಗೂ ಹಕ್ಕುಗಳನ್ನು ನೀಡಿದೆ ಆದರೆ ಅವುಗಳನ್ನು ಪಟ್ಟಿ ಮಾಡಲು ಬಯಸುವುದಿಲ್ಲ ಎಂದು ಹೇಳಿದರು. ಇವೆಲ್ಲ ಭಾವನಾತ್ಮಕ ಸಮಸ್ಯೆಗಳು. ಆದರೆ ಉದ್ಯೋಗ ನೀಡುವುದು ಮುಖ್ಯ. ಅವರು ಅದರ ಬಗ್ಗೆ ಮಾತನಾಡಬೇಕು. ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾಲು ಇದ್ದಾಗ ನೀವು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಬಹುದು. ಕಾಂಗ್ರೆಸ್ ಭಾರತದ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿದೆ ಮತ್ತು 2024ರಲ್ಲಿ ದೇಶವನ್ನು ಬಿಜೆಪಿಯ “ಅನ್ಯಾಯದ ಕತ್ತಲೆಯಿಂದ ಹೊರತರಲಿದೆ ಎಂದು ಖರ್ಗೆ ಹೇಳಿದ್ದಾರೆ.

ಇದನ್ನು ಓದಿ: ಭಾರತ್‌ ಜೋಡೋ ನ್ಯಾಯ ಯಾತ್ರೆ: ಮೋದಿ OBC ಅಲ್ಲ, ಅವರು ಜಾತಿ ಬಗ್ಗೆ ಸುಳ್ಳು ಹೇಳಿದ್ದಾರೆ: ರಾಹುಲ್‌ ಗಾಂಧಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read