ಮಾಜಿ ಐಎಎಸ್ ಅಧಿಕಾರಿ ಹೀರಾಲಾಲ್ ಸಮರಿಯಾ ಅವರು ನಿನ್ನೆ ಮುಖ್ಯ ಮಾಹಿತಿ ಆಯುಕ್ತರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಆಯ್ಕೆಯನ್ನು ಸಂಪೂರ್ಣವಾಗಿ ಗೌಪ್ಯವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯಲ್ಲಿನ ವಿರೋಧ ಪಕ್ಷದ ಸದಸ್ಯರು ಈ ಕುರಿತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು, ಮಾಹಿತಿ ಆಯುಕ್ತರ ಆಯ್ಕೆಯ ಬಗ್ಗೆ ಸರ್ಕಾರವು ಸಮಾಲೋಚಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಅ.3ರಂದು ವೈ ಕೆ ಸಿನ್ಹಾ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಸಿಐಸಿಯ ಹುದ್ದೆಯು ಖಾಲಿಯಾಗಿತ್ತು. ಹೀರಾಲಾಲ್ ಸಮರಿಯಾ ಕೇಂದ್ರ ಮಾಹಿತಿ ಆಯೋಗದ ಆಯುಕ್ತ (ಸಿಐಸಿ) ಹುದ್ದೆಗೆ ನೇಮಕಗೊಂಡ ಮೊದಲ ದಲಿತ ಸಮುದಾಯದ ಅಧಿಕಾರಿಯಾಗಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಚೌಧರಿ ತಮ್ಮ ಪತ್ರದಲ್ಲಿ, ನಾನು ಆಯ್ಕೆ ಸಮಿತಿಯ ಸದಸ್ಯನಾಗಿದ್ದರೂ, ಆಯ್ಕೆಯ ಬಗ್ಗೆ ತಿಳಿಸದೆ ಸಂಪೂರ್ಣವಾಗಿ ಗೌಪ್ಯವಾಗಿ ಮಾಡಲಾಗಿದೆ. ನ.3, 2023ರಂದು ಪ್ರಧಾನಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪಿಎಂ ಮತ್ತು ಗೃಹ ಸಚಿವರು ಮಾತ್ರ ಸಭೆಯಲ್ಲಿ ಹಾಜರಿದ್ದರು. ವಿರೋಧ ಪಕ್ಷದ ನಾಯಕನಾದ ನನಗೆ ಆಹ್ವಾನಿಸಿಲ್ಲ. ಆಯ್ಕೆಯಾದವರ ಹೆಸರನ್ನು ಘೋಷಿಸಲಾಗಿದೆ. ಪ್ರಮಾಣವಚನ ಸ್ವೀಕರಿಸಲಾಗಿದೆ. ಆಯ್ಕೆ ಗೌಪ್ಯವಾಗಿ ನಡೆದ ಪ್ರಕ್ರಿಯೆ ಎಂದು ಅವರು ಆರೋಪಿಸಿದ್ದಾರೆ.
ಸಮಿತಿಯ ಸಭೆಗೆ ಆಹ್ವಾನಿಸಿ ಅಕ್ಟೋಬರ್ ಕೊನೆಯ ವಾರದಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಅಧಿಕಾರಿಗಳು ಚೌದರಿಯ ಕಚೇರಿಗೆ ತೆರಳಿದ್ದರು. ಅವರು ನ.2 ರವರೆಗೆ ದೆಹಲಿಯಲ್ಲಿ ಇದ್ದು ಮತ್ತು ನ.3 ರಂದು ಪೂರ್ವ ನಿಗದಿತ ಸಭೆಯಲ್ಲಿ ಭಾಗವಹಿಸಲು ಪಶ್ಚಿಮ ಬಂಗಾಳಕ್ಕೆ ಹೋಗಬೇಕು ಎಂದು ತಿಳಿಸಲಾಗಿತ್ತು. ಆದರೆ ಸಮಿತಿಯ ಸಭೆಯು ನ.3ರಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ನಂತರ ಸಿಬ್ಬಂದಿಗಳು ಸಚಿವ ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿದ್ದು, ಸಭೆಯನ್ನು ಮರು ನಿಗದಿಪಡಿಸುವಂತೆ ಒತ್ತಾಯಿಸಿದ್ದರು ಸಭೆಯನ್ನು 2023ರ ನ.1 ಅಥವಾ 2ರಂದು ಅಥವಾ ನ.3ರ ಸಂಜೆ 6 ಗಂಟೆಗೆ ಬದಲಾಗಿ ಬೆಳಿಗ್ಗೆ 9 ಗಂಟೆಗೆ ನಡೆಸಲು ಮರು ನಿಗದಿಪಡಿಸಲು ವಿನಂತಿಸಲಾಗಿತ್ತು ಎನ್ನಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮರಿಯಾ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಉಪಾಧ್ಯಕ್ಷ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅ.30ರಂದು ಸುಪ್ರೀಂಕೋರ್ಟ್ ಈ ಹುದ್ದೆ ಭರ್ತಿಗೆ ಕ್ರಮಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಇಲ್ಲವಾದಲ್ಲಿ ಮಾಹಿತಿ ಹಕ್ಕು ಕುರಿತ 2005ರ ಕಾನೂನು ‘ಡೆಡ್ ಲೆಟರ್’ ಆಗಲಿದೆ ಎಂದು ಹೇಳಿತ್ತು.
ಇದನ್ನು ಓದಿ: ಪುತ್ತೂರು: ಪ್ರಖ್ಯಾತ ಹುಲಿ ವೇಷ ಕುಣಿತ ತಂಡದ ಸದಸ್ಯನ ಬರ್ಬರ ಕೊಲೆ: ಆರೋಪಿಗಳು ಪೊಲೀಸ್ ವಶಕ್ಕೆ