`ವಿಶ್ವಾಸಾರ್ಹ’ ಬ್ರ್ಯಾಂಡಿನ ಪತ್ರಿಕೆಯ ವಿಶ್ವಾಸವೇ ಕುಸಿದುಬೀಳುತ್ತಿರುವ ಆಘಾತಕಾರಿ ಸುದ್ದಿಯೊಂದು `ನಂ.75, ಎಂ.ಜಿ.ರೋಡ್’ ಬಿಲ್ಡಿಂಗಿನಿಂದ ಹೊರಬರುತ್ತಿದೆ. ಹೌದು, ಪತ್ರಿಕಾರಂಗವೇ ಮೀಡಿಯೋದ್ಯಮವಾದ ಈ ಕಾಲಘಟ್ಟದಲ್ಲಿ ಕಿಂಚಿತ್ತು ವಿಶ್ವಾಸ ಉಳಿಸಿಕೊಂಡಿರುವ ಪತ್ರಿಕೆಯೆಂದರೆ ಪ್ರಜಾವಾಣಿ. ಆದರೆ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಇದೀಗ ಅಲ್ಲಿ ನಡೆಯುತ್ತಿರುವ `ಟರ್ಮಿನೇಟಿಂಗ್’ ಧಾವಂತ ನೋಡಿದರೆ, ಹಲವು ಅನುಮಾನಗಳು ಮೂಡುತ್ತಿವೆ. ದೇಶದ ಆರ್ಥಿಕ ಪರಿಸ್ಥಿತಿ ಅದೆಷ್ಟು ಹದಗೆಟ್ಟು ಕೂತಿದೆಯೆಂದರೆ ಪತ್ರಿಕಾ ಕಚೇರಿಗಳಿರಲಿ, ಎಂಎನ್ಸಿ ಕಂಪನಿಗಳೇ ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಮುಲಾಜಿಲ್ಲದೆ ಮನೆಗೆ ಕಳಿಸುತ್ತಿವೆ. ಕನ್ನಡದ ಅದೆಷ್ಟೊ ಪತ್ರಿಕೆ, ಟಿವಿ ಚಾನೆಲ್ಗಳು ತಮ್ಮ ಸಿಬ್ಬಂದಿಗಳ ಜೊತೆ ನಿರ್ದಯವಾಗಿ ನಡೆದುಕೊಂಡಿವೆ. ಅಂತದ್ದರಲ್ಲಿ ಪ್ರಜಾವಾಣಿ ಪತ್ರಿಕೆ ತನ್ನ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ನೌಕರರನ್ನು ಕಿತ್ತುಹಾಕಿದರೆ ಏನು ತಪ್ಪು?
ವಿಷಯ ಇಷ್ಟು ಸರಳವಾಗಿದ್ದಿದ್ದರೆ, ಇಂತದ್ದೊಂದು ಪ್ರಶ್ನೆಗೆ ಬೆಲೆ ಇರುತ್ತಿತ್ತು. ಆದರೆ, ಒಂದಾನೊಂದು ಕಾಲದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಸಿಗುವುದೆಂದರೆ ಸರ್ಕಾರಿ ನೌಕರಿ ಸಿಕ್ಕಷ್ಟೇ `ಜಾಬ್ ಸೆಕ್ಯೂರಿಟಿ’ ಭಾವನೆ ಇರುತ್ತಿದ್ದ ಸಂಸ್ಥೆ ಅದು. ಈಗ ಅದೇ ಸಂಸ್ಥೆ ಕಾಸ್ಟ್ ಕಟ್ಟಿಂಗ್ ಹೆಸರಲ್ಲಿ ತನ್ನ ಸಿಬ್ಬಂದಿಗಳನ್ನು ನಿವಾರಿಸಿಕೊಳ್ಳಲು ಬಳಸುತ್ತಿರುವ ರೀತಿಯೇ ಆಶ್ಚರ್ಯಕರವಾಗಿದೆ. ಇದಕ್ಕೆ ಕಾರಣವಿಲ್ಲದಿಲ್ಲ. ಸಾಮಾನ್ಯವಾಗಿ ಪ್ರಜಾವಾಣಿ ಪತ್ರಿಕೆ ತನ್ನ ಸಿಬ್ಬಂದಿಗಳನ್ನು ಕೆಲಸದಿಂದ ಕೈಬಿಡಬೇಕಾದ ಸಂದರ್ಭ ಬಂದಾಗ ಗ್ರೆಡೇಶನ್ ನಿಯಮ ಪಾಲಿಸುತ್ತಿತ್ತು. ಅಂದರೆ ಸಿಬ್ಬಂದಿಯ ಕಾರ್ಯದಕ್ಷತೆ, ಸಂಸ್ಥೆಗೆ ಅವರಿಂದ ಆಗುತ್ತಿರುವ ಅನುಕೂಲದ ಆಧಾರದಲ್ಲಿ ಗ್ರೇಡ್-1, ಗ್ರೇಡ್-2, ಗ್ರೇಡ್-3, ಗ್ರೇಡ್-4 ಎಂದು ವರ್ಗೀಕರಿಸಲಾಗುತ್ತಿತ್ತು. ಗ್ರೇಡ್-4ರಲ್ಲಿರುತ್ತಿದ್ದ ಕಳಪೆ ಸಾಮಥ್ರ್ಯದ ಸಿಬ್ಬಂದಿಗಳನ್ನು ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ನೀಡಿಯೇ, ಅಂದರೆ ಒಂದೆರಡು ತಿಂಗಳ ನೋಟಿಸ್ ಕೊಟ್ಟು, ಮೂರ್ನಾಲ್ಕು ತಿಂಗಳ ಸಂಬಳವನ್ನು ಒಟ್ಟಿಗೇ ಕೊಟ್ಟು ಕೆಲಸದಿಂದ ತೆಗೆದುಹಾಕಲಾಗುತ್ತಿತ್ತು. ತೀರಾ ಅನಿವಾರ್ಯವೆನಿಸಿದರೆ ಗ್ರೇಡ್-3 ಸಿಬ್ಬಂದಿಗಳನ್ನು ತೆಗೆದುಹಾಕುವ ಸಂಪ್ರದಾಯವಿತ್ತು. ಆದರೆ ಗ್ರೇಡ್-1, ಗ್ರೇಡ್-2 ದಕ್ಷತೆಯ ಸಿಬ್ಬಂದಿಗಳನ್ನು ಸಂಸ್ಥೆ ಗೌರವಯುತವಾಗಿಯೇ ಮುಂದುವರೆಸುತ್ತಿತ್ತು. ಪ್ರಜಾವಾಣಿ ಪತ್ರಿಕೆಯ ನೌಕರಿಗೆ ಸರ್ಕಾರಿ ನೌಕರಿಯಷ್ಟೆ ಘನತೆ ಬಂದಿದ್ದೇ ಇಂತಹ ನಡೆಗಳಿಂದ.
ಇತ್ತೀಚಿನ ಕೆಲ ವರ್ಷಗಳಲ್ಲಿ ಪ್ರಜಾವಾಣಿ ಬಳಗ ಅಂತಹ ಗ್ರೆಡೇಷನ್ ವ್ಯವಸ್ಥೆಯಿಂದ ದೂರ ಸರಿದಿತ್ತಾದರೂ ಕೆಲಸಗಾರರನ್ನು ತೆಗೆಯುವಾಗ ದಕ್ಷತೆ, ಅನುಭವ, ಅವರ ಸೇವೆಗಳಿಗೆ ಬೆಲೆ ಕೊಡುವ ಪರಂಪರೆಯನ್ನು ಕಾಯ್ದುಕೊಂಡು ಬಂದಿತ್ತು. ಆದರೆ ಇದೀಗ ಕಾಸ್ಟ್ ಕಟಿಂಗ್ ನೆಪದಲ್ಲಿ ತೀರಾ ಗ್ರೇಡ್-1ಗೆ ಒಳಪಡಬಹುದಾದ ಹಿರಿಯ ಸಿಬ್ಬಂದಿಗಳನ್ನೇ ತೆಗೆದುಹಾಕಲು ಸಂಸ್ಥೆ ಮುಂದಾಗಿರೋದು ನಿಜಕ್ಕೂ ಆಘಾತಕಾರಿಯಾಗಿದೆ. ಅಷ್ಟಕ್ಕೂ ಪ್ರಜಾವಾಣಿ ಈಗ ಮನೆಗೆ ಕಳಿಸಲು ಹೊರಟಿರೋದು ಕೇಶವ ಜಿಂಗಾಡೆ, ಹೊನಕೆರೆ ನಂಜುಂಡೇಗೌಡ, ಸಿದ್ದೇಗೌಡ, ಷಣ್ಮುಖಪ್ಪ, ಶೈಲಜಾ ಹೂಗಾರ್ ಮೊದಲಾದ ಹಿರಿಯ ಉಪಸಂಪಾದಕರುಗಳನ್ನು!
ಈ ಒಬ್ಬೊಬ್ಬರು ಏನಿಲ್ಲವೆಂದರು ಹತ್ತಾರು ವರ್ಷ ಪತ್ರಿಕೆಗಾಗಿ ದುಡಿದಿದ್ದಾರೆ. ಪತ್ರಿಕೆಯೇ ಅವರನ್ನು ಬ್ರ್ಯಾಂಡ್ ಮಾಡಿ ಬೆಳೆಸುತ್ತಾ ಬಂದಿದೆ. ಈಗ ಏಕಾಏಕಿ ಕಾಸ್ಟ್ ಕಟಿಂಗ್ ಹೆಸರಲ್ಲಿ ಇಂತಹ ಹಿರಿಯರನ್ನೆಲ್ಲ ಮನೆಗೆ ಕಳಿಸಲು ಮುಂದಾಗಿರೋದು ಪತ್ರಿಕೆ ಇಷ್ಟುದಿನ ನಡೆದುಬಂದ ಹಾದಿಗೆ ತಕ್ಕುನಾದುದಲ್ಲವೆಂಬುದು ಒಟ್ಟು ಪತ್ರಕರ್ತ ವಲಯದ ಒಳಗಿನ ಮಾತು. ಪತ್ರಿಕಾ ಸಂಸ್ಥೆಗಳಲ್ಲೂ ಕಾರ್ಪೊರೇಟ್ ಶೈಲಿಯ ಸಿಇಒ ಹುದ್ದೆಗಳು ಸೃಷ್ಟಿಯಾಗಿ, ಅಲ್ಲಿಗೆ ಎಂಬಿಎ ಮ್ಯಾನೇಜ್ಮೆಂಟಿಗರು ಕಾಲಿರಿಸಿದಾಗಿನಿಂದ ಪತ್ರಿಕೋದ್ಯಮ ಇಂಥಾ ವಿಚಾರಗಳಲ್ಲಿ ತನ್ನ ಸ್ಪಂದನೆಯನ್ನು ಕಳೆದುಕೊಳ್ಳುತ್ತಾ ಬಂದಿದೆ. ಪ್ರಜಾವಾಣಿ ಸಂಸ್ಥೆಯ ಈ ನಡೆಗೂ ಇಂತಹ ಶುಷ್ಕ ಆಲೋಚನೆಗಳೇ ಕಾರಣ ಎನ್ನಲಾಗುತ್ತಿದೆ. ಅಲ್ಲದೇ, ಸಂಸ್ಥೆ ಮತ್ತು ಆಡಳಿತ ಮಂಡಳಿಗೆ ಈಗಿರುವ ಆರ್ಥಿಕ ಮುಗ್ಗಟ್ಟಿನ ಲಾಭ ಪಡೆಯುತ್ತಿರುವ ನಿರ್ದಿಷ್ಟ `ಜಾತಿ’ ಕೂಟವೊಂದು, ಅದನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ತಮಗಾಗದವರನ್ನು ಟಾರ್ಗೆಟ್ ಮಾಡಿ ಸಂಸ್ಥೆಯನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಹಾಗೆ ನೋಡಿದರೆ, ಕೆ.ಎನ್.ಗುರುಸ್ವಾಮಿಯವರು ಪ್ರಜಾವಾಣಿ ಪತ್ರಿಕೆಯನ್ನು ಹುಟ್ಟುಹಾಕಿದ್ದೇ, ಒಂದು `ಮೇಲ್ಜಾತಿ’ಯ ಕೈಯಲ್ಲೇ ಇದ್ದ ಪತ್ರಿಕೋದ್ಯಮದಲ್ಲಿ `ಇತರರ’ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ. ಆದಾಗ್ಯೂ ಅದು `ಮೇಲ್ಜಾತಿ’ಯ ವೈರಸ್ನಿಂದ ಸಣ್ಣಗೆ ಬಳಲುತ್ತಲೇ ಬಂದಿತ್ತು. ಅದೀಗ ವಿರಾಟ್ ರೂಪದಲ್ಲಿ ಉಲ್ಬಣಿಸಿ ಕನ್ನಡಿಗರ ವಿಶ್ವಾಸಾರ್ಹ ಪತ್ರಿಕೆಯ ಘನತೆಯನ್ನೇ ಮಣ್ಣುಪಾಲು ಮಾಡಲಿದೆಯೇನೊ ಎಂಬ ಆತಂಕ ಶುರುವಾಗಿದೆ. ಪತ್ರಿಕೆ ತನ್ನ ಮೂಲ ಬದ್ಧತೆಯಿಂದ ಸಂಪೂರ್ಣ ವಿಮುಖವಾಗದಂತೆ ನೋಡಿಕೊಂಡು ಬಂದ, ಸಂಸ್ಥೆಯ ಮುಖ್ಯಸ್ಥರು ಇತ್ತ ತುರ್ತು ಗಮನಹರಿಸಬೇಕಿದೆ.