ದೆಹಲಿ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಂಗತ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಮೂರ್ತಿಯನ್ನು ದೆಹಲಿಯ ಫಿರೋಜ್ ಷಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಆದರೆ, ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಮಾಜಿ ಕ್ರಿಕೆಟಿಗ ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿ ದೆಹಲಿ ಕ್ರಿಕೆಟ್ ಅಸೋಸಿಯೇಷನ್ನಿಂದಲೇ ಹೊರ ನಡೆದಿದ್ದಾರೆ. ರಾಜಕಾರಣಿಗಳ ಪುತ್ಥಳಿಯನ್ನು ಕ್ರಿಕೆಟ್ ಅಂಗಳದಲ್ಲಿ ಸ್ಥಾಪಿಸುವುದರಿಂದ ಸ್ವಜನಪಕ್ಷಪಾತವನ್ನು ಉತ್ತೇಜಿಸುವಂತಾಗುತ್ತದೆ ಮತ್ತು ಆಟಗಾರರಿಗಿಂತ ನಿರ್ವಾಹಕರೇ ಅಧಿಕ ಎನ್ನುವಂತಹ ಸಂಸ್ಕೃತಿಗೆ ಕಾರಣವಾಗುತ್ತದೆ, ಹೀಗಾಗಿ ಸ್ಟೇಡಿಯಂನ ವೀಕ್ಷಕರ ಸ್ಟಾಂಡ್ಗೆ ಇಟ್ಟಿರುವ ನನ್ನ ಹೆಸರನ್ನೂ ಶೀಘ್ರವಾಗಿ ಅಳಿಸಿ ಹಾಕಿ ಎಂದು, ಪ್ರಸ್ತುತ ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿರುವ ಅರುಣ್ ಜೇಟ್ಲಿ ಅವರ ಮಗ ರೋಹನ್ ಜೇಟ್ಲಿಗೆ ಪತ್ರ ಬರೆದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಮಾಜಿ ಕ್ರಿಕೆಟ್ ದಂತಕಥೆ ಹಾಗೂ 1983 ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಮೊಹಿಂದರ್ ಅಮರನಾಥ್ ಹಾಗೂ ಬಿಷನ್ ಸಿಂಗ್ ಬೇಡಿ ಅವರ ಹೆಸರನ್ನು 2017 ರಲ್ಲಿ ದೆಹಲಿ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್ಗೆ ನಾಮಕರಣ ಮಾಡಿತ್ತು.
ಇದನ್ನೂ ಓದಿ: ಅರುಣ್ ಜೈಟ್ಲಿ ಕೆಲ ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದರೆ? ಇಲ್ಲಿದೆ ಹೊಸ ವಿವಾದ
ಬಿಷನ್ ಸಿಂಗ್ ಬೇಡಿ ಡಿಡಿಸಿಎ ಅಧ್ಯಕ್ಷರಿಗೆ ತಾವು ಬರೆದಿರುವ ಪತ್ರದಲ್ಲಿ, “ನಾನು ಅಪಾರ ಸಹಿಷ್ಣುತೆ ಮತ್ತು ತಾಳ್ಮೆಯ ಮನುಷ್ಯ. ಈ ಬಗ್ಗೆ ನನಗೆ ಹೆಮ್ಮೆ ಇತ್ತು. ಆದರೆ, ಡಿಡಿಸಿಎ ಇದೀಗ ನನ್ನ ಸಹಿಷ್ಣುತೆಯನ್ನು ನಿಜವಾಗಿಯೂ ಪರೀಕ್ಷಿಸುತ್ತಿದೆ. ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ನನ್ನನ್ನು ಪ್ರೇರೇಪಿಸುತ್ತಿದೆ.
ಆದ್ದರಿಂದ ಡಿಡಿಸಿಎ ಅಧ್ಯಕ್ಷರಾದ ರೋಹನ್ ಜೇಟ್ಲಿ ಅವರಿಗೆ ನನ್ನ ಹೆಸರಿನ ನಿಲುವನ್ನು ತಕ್ಷಣದಿಂದ ಜಾರಿಗೆ ತರಲು ನಾನು ವಿನಂತಿಸುತ್ತೇನೆ. ವೀಕ್ಷಕರ ಸ್ಟಾಂಡ್ಗೆ ಇಟ್ಟಿರುವ ನನ್ನ ಹೆಸರನ್ನು ಶೀಘ್ರದಲ್ಲೇ ತೆಗೆದುಹಾಕಿ. ಅಲ್ಲದೆ, ನನ್ನ ಡಿಡಿಸಿಎ ಸದಸ್ಯತ್ವವನ್ನು ನಾನು ತ್ಯಜಿಸುತ್ತಿದ್ದೇನೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಲ್ಲದೆ, “ನಾನು ಸಾಕಷ್ಟು ಯೋಚಿಸಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನಗೆ ದೊರೆತ ಗೌರವವನ್ನು ನಾನು ನಿರ್ಲಕ್ಷಿಸುತ್ತಿಲ್ಲ. ಎಲ್ಲರೂ ತಿಳಿದಿರುವಂತೆ ಗೌರವ ಎಂಬುದು ನಮ್ಮ ಜವಾಬ್ದಾರಿಗಳಿಂದ ನಮಗೆ ಧಕ್ಕುತ್ತದೆ. ನನಗೆ ಸಿಕ್ಕ ಗೌರವವೂ ಅಂಗಳದಲ್ಲಿ ನಾನು ತೋರಿದ ಪ್ರದರ್ಶನ ನನಗೆ ತಂದುಕೊಟ್ಟದ್ದು.
ಇದನ್ನೂ ಓದಿ: ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?
ಆದರೆ, ನಾನೀಗ ಕ್ರಿಕೆಟ್ ಅಂಗಳದಿಂದ ನಿವೃತ್ತನಾಗಿದ್ದೇನೆ. ನಾನು ನಂಬಿದ ಮೌಲ್ಯಗಳ ಭರವಸೆಯನ್ನು ಉಳಿಸಿಕೊಳ್ಳುವ ಸಲುವಾಗಿ ನಾನು ಈಗ ನನ್ನ ಗೌರವವನ್ನು ಹಿಂದಿರುಗಿಸುತ್ತಿದ್ದೇನೆ. ಏಕೆಂದರೆ ನಾನೂ ಇನ್ನೂ ನನ್ನ ಮೌಲ್ಯಗಳನ್ನು ಉಳಿಸಿಕೊಂಡಿದ್ದೇನೆ.
ನನ್ನ ಈ ನಿರ್ಧಾರವನ್ನು ಇಂದಿನ ಸಂದರ್ಭಕ್ಕೆ ತಕ್ಕಂತೆ ಹೇಳುವುದಾದರೆ ನಾನು ಎಂದಿಗೂ ಅರುಣ್ ಜೇಟ್ಲಿ ಅವರ ಕಾರ್ಯಶೈಲಿಯ ಅಭಿಮಾನಿಯಲ್ಲ. ನಾನು ಒಪ್ಪದ ಯಾವುದೇ ನಿರ್ಧಾರಗಳನ್ನು ಎಂದಿಗೂ ವಿರೋಧಿಸುತ್ತಲೇ ಇರುತ್ತೇನೆ” ಎಂದು ತಿಳಿಸಿದ್ದಾರೆ.
ದಿವಂಗತ ಅರುಣ್ ಜೇಟ್ಲಿ ಕೇಂದ್ರ ಸರ್ಕಾರದ ಸಚಿವರಾಗಿ ಅಧಿಕಾರ ಸ್ವೀಕರಿಸುವ ಮುನ್ನ 1999 ರಿಂದ 2013 ರವರೆಗೆ ಸತತ 14 ವರ್ಷಗಳ ಕಾಲ ದೆಹಲಿ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಅವರ ಸ್ಮರಣಾರ್ಥ ಫಿರೋಜ್ ಷಾ ಕೋಟ್ಲಾದಲ್ಲಿ ಅರುಣ್ ಜೇಟ್ಲಿ ಅವರ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಡಿಡಿಸಿಎ ನಿರ್ಧರಿಸಿದೆ.
ಇದನ್ನೂ ಓದಿ: ಮದ್ದೂರಿನ ಹೆಸರು ಅರ್ಜುನಪುರಿಯೇ? ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!