ಮನುಷ್ಯನ ಜೀವನಶೈಲಿ, ತಂತ್ರಜ್ಞಾನ ಅದೆಷ್ಟೇ ಮುಂದುವರೆದರು ಕೆಲವು ಕೆಲಸಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಲು ಸಾಧ್ಯವಿಲ್ಲ. ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ಪಚ್ಛಗೊಳಿಸಲು ತಂತ್ರಜ್ಞಾನ, ಯಂತ್ರೋಪಕರಣಗಳನ್ನು ಬಳಸಬಹುದು ಆದರೆ ಅದನ್ನು ಜಾರಿಗೆ ತರುವ ಮನಸ್ಥಿತಿ ಯಾವ ಸರ್ಕಾರಕ್ಕೂ ಇಲ್ಲ.
ಪ್ರತಿ ವಾರವೂ ಒಂದಲ್ಲ ಒಂದು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ನಡೆಯುವ ದುರಂತಗಳು ನಮಗೆ ತಿಳಿಯುತ್ತಲೇ ಇರುತ್ತವೆ . ನಿನ್ನೆ ಕೂಡ ದೆಹಲಿಯ ಆಜಾದ್ಪುರ್ ಪ್ರದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ ವೇಳೆ ವಿಷವಾಯು ಉಸಿರಾಟದಿಂದ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ.
ಭಾನುವಾರ ಸಂಜೆ, ಜಿಟಿ ಕರ್ನಲ್ ರಸ್ತೆ ಕೈಗಾರಿಕಾ ಪ್ರದೇಶದಲ್ಲಿರುವ ದೆಹಲಿ ಚೈನ್ ಕಂಪನಿಯ ಕಾರ್ಖಾನೆಯ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ 7 ಮಂದಿಯಲ್ಲಿ ಆರು ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿತ್ತು.
ಬಿಜೆಆರ್ಎಂ ಆಸ್ಪತ್ರೆ ತಲುಪಿದಾಗ ಇದ್ರಿಸ್(45) ಮತ್ತು ಸಲೀಂ (45) ಎಂಬ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಇನ್ನೊಬ್ಬ ಕಾರ್ಮಿಕ ಇಸ್ಲಾಂ (40) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೂವರು ಉತ್ತರ ಪ್ರದೇಶದ ಖುರ್ಜಾದವರಾಗಿದ್ದಾರೆ.
ಇದನ್ನೂ ಓದಿ: ಪೌರಕಾರ್ಮಿಕರ ದಿನ: ಸಂಭ್ರಮಾಚರಣೆ ಬೇಡ, ಕನಿಷ್ಠ ಸೌಲಭ್ಯ ನೀಡಿ…
ಉಳಿದ ಮೂವರು ಕಾರ್ಮಿಕರಲ್ಲಿ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಅಬ್ದುಲ್ ಸದ್ದಾಂ (35), ಖುರ್ಜಾದ ಸಲೀಮ್ (35) ಮತ್ತು ಖುರ್ಜಾದ ಮನ್ಸೂರ್ (38) ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವಾಗ ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ನೀಡಲಾಗಿಲ್ಲ. ಅಬ್ದುಲ್ ಸದ್ದಾಂ ಅವರ ಹೇಳಿಕೆ ಮೇಲೆ ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ರೀತಿಯ ದುರಂತಗಳ ಕುರಿತು ಈ ರೀತಿಯ ಮ್ಯಾನುವಲ್ ಸ್ಕ್ಯಾವೆಜಿಂಗ್ ಬಿಟ್ಟು ಸಂಪೂರ್ಣ ಯಾಂತ್ರಿಕೃತ ವ್ಯವಸ್ಥೆ ಜಾರಿಗೆ ಬರಬೇಕೇಂದು ಹಲವರು ದನಿಯೆತ್ತಿದ್ದರೆ, ಆನಂದ್ ಮಹಿಂದ್ರ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಸಹಾಯ ಮಾಡಲು ಮುಂದೆ ಬಂದಿದ್ದರು.
ಈ ಹಿಂದೆ ದೆಹಲಿಯಲ್ಲಿ ಈ ರೀತಿಯ ಪೌರಕಾರ್ಮಿಕರ ಸಾವುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು 200 ಯಂತ್ರಗಳನ್ನು ಅಲ್ಲಿನ ಪೌರಕಾರ್ಮಿಕರಿಗೆ ಹಸ್ತಾಂತರಿಸಿದ್ದರು. ಆದರೂ ಕೂಡ ಯಾವುದೇ ಸುಧಾರಣೆ ಕಂಡುಬರದಿರುವುದು ದುರಂತ.
ಕಳೆದ ವಾರವಷ್ಟೇ ಜಾರ್ಖಂಡ್ನ ಗರ್ಹ್ವಾ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್ ಒಳಗೆ ಕೆಲಸ ಮಾಡುತ್ತಿದ್ದಾಗ ತಂದೆ ಮತ್ತು ಮಗ ಸೇರಿದಂತೆ ನಾಲ್ವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಕಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಗೈರುಹಾಜರಾದ ಕಾರಣ ಸೂಕ್ತ ಚಿಕಿತ್ಸೆ ಕೂಡ ದೊರೆಯದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಮತ್ತು ಮೃತ ಕಾರ್ಮಿಕರ ಸಂಬಂಧಿಕರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.