ದೆಹಲಿಯ ಮಹಾನಗರ ಪಾಲಿಕೆಯು ಮಂಗಳವಾರ ಮೇಯರ್ ಹುದ್ದೆಗೆ ಸೋಮವಾರ ಚುನಾವಣೆ ನಡೆಸಲು ನಿರ್ಧರಿಸಿತ್ತು. ಆದರೆ ಇಂದು ಕೂಡ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವಿನ ಘರ್ಷಣೆಯಿಂದಾಗಿ ಮೂರನೇ ಬಾರಿಗೆ ಚುನಾವಣೆ ಮುಂದೂಡಲಾಗಿದೆ.
ಈ ಬಗ್ಗೆ ಮಾತನಾಡಿದ ಎಎಪಿ ನಾಯಕ ಅತಿಶಿ, ”ಆಲ್ಡರ್ಮೆನ್ಗಳಿಗೆ ಮತದಾನದ ಹಕ್ಕು ನೀಡುವ ಬಿಜೆಪಿಯ ನಿರ್ಧಾರವನ್ನು ಪ್ರಶ್ನಿಸಲು ಪಕ್ಷವು ಸುಪ್ರೀಂ ಕೋರ್ಟ್ಗೆ ಹೋಗಲಿದೆ. ಕಳೆದ ಬಾರಿ ನಾವು ಬಿಜೆಪಿ ವಿರುದ್ಧದ ಅರ್ಜಿಯನ್ನು ಹಿಂಪಡೆದಿದ್ದೇವೆ ಏಕೆಂದರೆ ಮೇಯರ್ ಚುನಾವಣೆಯ ದಿನಾಂಕಗಳನ್ನು ಅನುಮೋದಿಸಲಾಗಿತ್ತು ಮತ್ತು ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿರಲಿಲ್ಲ. ಆದರೆ ಇಂದು ಅವರು ಅಕ್ರಮವಾಗಿ ಮತದಾನ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಕಾನೂನುಬಾಹಿರವಾಗಿ ಆಲ್ಡರ್ಮೆನ್ಗಳಿಗೆ ಮತದಾನದ ಹಕ್ಕನ್ನು ನೀಡಿದ್ದಾರೆ. ಈ ವಿಚಾರವಾಗಿ ನಾವು ಸುಪ್ರೀಂ ಕೋರ್ಟ್ಗೆ ತೆರಳಿ ಬಿಜೆಪಿಯ ನಿರ್ಧಾರವನ್ನು ಪ್ರಶ್ನಿಸುತ್ತೇವೆ ಎಂದು ಅವರು ಹೇಳಿದರು.
ದೆಹಲಿಯ ಮಹಾನಗರ ಪಾಲಿಕೆ ಒಂದು ತಿಂಗಳಲ್ಲಿ ಮೂರನೇ ಬಾರಿಗೆ ಮೇಯರ್ ಆಯ್ಕೆಯನ್ನು ಮಾಡದೆ ಮುಂದೂಡಲಾಯಿತು. ನಾಮನಿರ್ದೇಶಿತ ಸದಸ್ಯರಿಗೆ ಮೇಯರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವ ಕುರಿತು ಗದ್ದಲ ಎದ್ದಿತು. ಹಾಗಾಗಿ ‘ಇಂತಹ ವಾತಾವರಣದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಸದನವನ್ನು ಮುಂದಿನ ದಿನಾಂಕಕ್ಕೆ ಮುಂದೂಡಲಾಗಿದೆ’ ಎಂದು ಸಭಾಧ್ಯಕ್ಷ ಸತ್ಯ ಶರ್ಮಾ ತಿಳಿಸಿದರು.
ಇದನ್ನೂ ಓದಿ: ಎಎಪಿ-ಬಿಜೆಪಿ ಮಧ್ಯೆ ಮತ್ತೊಮ್ಮೆ ಫೈಟ್; ದೆಹಲಿ ಮೇಯರ್ ಚುನಾವಣೆ ಸ್ಥಗಿತ
ಸೋಮವಾರ ದೆಹಲಿಯ ಮಹಾನಗರ ಪಾಲಿಕೆಯ ಮೇಯರ್ ಆಯ್ಕೆಗೆ ಮತದಾನದ ಮೊದಲು, ಸಭಾಧ್ಯಕ್ಷ ಸತ್ಯ ಶರ್ಮಾ ಅವರು, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ, 1957 ರ ಪ್ರಕಾರ, ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು ಆಲ್ಡರ್ಮನ್ ಅರ್ಹರು ಎಂದು ಹೇಳಿದರು. ಇದೇ ವಿಚಾರಕ್ಕೆ ಎಎಪಿ ಕೌನ್ಸಿಲರ್ಗಳು ಪ್ರತಿಭಟನೆ ನಡೆಸಿದ್ದು, ಆಲ್ಡರ್ಮೆನ್ ಮತ ಚಲಾಯಿಸುವಂತಿಲ್ಲ ಎಂದು ಎಎಪಿ ನಾಯಕ ಮುಖೇಶ್ ಗೋಯೆಲ್ ಹೇಳಿದ್ದಾರೆ.
ಈ ವೇಳೆ ಗದ್ದಲ ಗಲಾಟೆ ಏರ್ಪಟ್ಟಿತು. ಆಗ ಸಭಾಧ್ಯಕ್ಷ ಶರ್ಮಾ ಅವರು, ”ಜನರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದು ಅವರ ಸೇವೆ ಮಾಡಲು, ಚುನಾವಣೆ ನಡೆಯಲಿ” ಎಂದು ಹೇಳಿದ್ದಾರೆ. ಇದಾದ ನಂತರ ಸದನವನ್ನು ಕೆಲಕಾಲ ಮುಂದೂಡಲಾಯಿತು. ಎಂಸಿಡಿಯನ್ನು ಯಾರು ನಿಯಂತ್ರಿಸುತ್ತಾರೆ ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿರುವ 10 ಬಿಜೆಪಿ ಸದಸ್ಯರನ್ನು ಆಲ್ಡರ್ಮೆನ್ಗಳಾಗಿ ಆಯ್ಕೆ ಮಾಡುವಲ್ಲಿ ಎಲ್ಜಿ ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಜನವರಿ 6 ಮತ್ತು ಜನವರಿ 24 ರಂದು ನಡೆದ ಮೊದಲ ಎರಡು ಅಧಿವೇಶನಗಳು ನಡೆದಿದ್ದವು. ಈ ಅಧಿವೇಶನಗಳಲ್ಲಿ ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವಿನ ಗದ್ದಲ ಮತ್ತು ತೀವ್ರ ಮಾತಿನ ಚಕಮಕಿಯ ನಂತರ ಮೇಯರ್ ಆಯ್ಕೆ ಮಾಡದೆ ಸಭಾಧ್ಯಕ್ಷರು ಮುಂದೂಡಿದರು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (DMC) ಕಾಯಿದೆ, 1957 ರ ಪ್ರಕಾರ, ನಾಗರಿಕ ಚುನಾವಣೆಯ ನಂತರ ಸದನದ ಮೊದಲ ಅಧಿವೇಶನದಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಮುನ್ಸಿಪಲ್ ಚುನಾವಣೆ ನಡೆದು ಎರಡು ತಿಂಗಳಾದರೂ ದೆಹಲಿಗೆ ಮೇಯರ್ ಆಯ್ಕೆ ನಡೆದಿಲ್ಲ.
ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿಯ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಆಲ್ಡರ್ಮೆನ್ಗಳನ್ನು ಡಿಬಾರ್ ಮಾಡುವಂತೆ ಕೋರಿ ಭಾನುವಾರ ಎಎಪಿ ಕೌನ್ಸಿಲರ್ಗಳು ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ. ಇದು ದೆಹಲಿಯ ಜನರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಎಎಪಿ ಹೇಳಿದೆ. ನಾಮನಿರ್ದೇಶಿತ ಸದಸ್ಯರು ಸಂವಿಧಾನ ಮತ್ತು ಡಿಎಂಸಿ ಕಾಯ್ದೆಗೆ ಅನುಗುಣವಾಗಿ ಮತ ಚಲಾಯಿಸುವಂತಿಲ್ಲ ಎಂದು ಎಎಪಿ ಕೌನ್ಸಿಲರ್ಗಳು ವಾದಿಸಿದ್ದಾರೆ.