ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ರಾಜ್ಯದ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮಗಳ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಬುಧವಾರ (ಏ.15) ಡಿಎಂಕೆ ಸಂಸದರ ತುರ್ತು ಸಭೆ ಕರೆದಿದ್ದಾರೆ.
ಸ್ಟಾಲಿನ್ ಚುನಾವಣೆ ಪ್ರಚಾರ ನಡೆಸುತ್ತಿರುವ ಧರ್ಮಪುರಿಯಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ. ಬೆಳಿಗ್ಗೆ 11:00 ಗಂಟೆಗೆ ಸಭೆ ಆರಂಭವಾಗಲಿದ್ದು, ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಕುರಿತು ಪಕ್ಷದ ನಿಲುವಿನ ಮೇಲೆ ಚರ್ಚೆಗಳು ಕೇಂದ್ರೀಕರಿಸುವ ನಿರೀಕ್ಷೆಯಿದೆ.
2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ನಡೆಸಿದ ನಂತರ, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ರಿಂದ 850ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಈ ಕ್ರಮವು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು (ಮೂರನೇ ಒಂದು ಭಾಗದಷ್ಟು) ಮೀಸಲಾತಿಯನ್ನು ಜಾರಿಗೆ ತರುವುದರೊಂದಿಗೆ ಸಂಬಂಧ ಹೊಂದಿದೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟಾಲಿನ್ ಅವರು, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯು ರಾಜ್ಯದ ಹಿತಾಸಕ್ತಿಗಳಿಗೆ ಧಕ್ಕೆ ತಂದರೆ ಅಥವಾ ದಕ್ಷಿಣದ ರಾಜ್ಯಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರಿದರೆ ತಮಿಳುನಾಡು ದೊಡ್ಡ ಮಟ್ಟದ ಪ್ರತಿಭಟನೆಯನ್ನು ಪ್ರಾರಂಭಿಸಲಿದೆ ಎಂದು ಎಚ್ಚರಿಸಿದ್ದಾರೆ. ಏಪ್ರಿಲ್ 16 ರಂದು ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನವನ್ನು ಉಲ್ಲೇಖಿಸಿದ ಅವರು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳ ನಡುವೆ ಇದನ್ನು ‘ಬಲವಂತವಾಗಿ ಕರೆಯಲಾಗಿದೆ’ ಎಂದು ಹೇಳಿದ್ದಾರೆ.
“ಈ ಅಧಿವೇಶನದಲ್ಲಿ, ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿಯನ್ನು ಬಲವಂತವಾಗಿ ಅಂಗೀಕರಿಸಲು ಉದ್ದೇಶಿಸಿದೆ. ಇದರ ಮೂಲಕ ಕೇಂದ್ರವು ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳ ಮೇಲೆ ತನ್ನ ನಿರ್ಧಾರವನ್ನು ಹೇರಲು ಪ್ರಯತ್ನಿಸುತ್ತಿದೆ” ಎಂದು ಸ್ಟಾಲಿನ್ ತಿಳಿಸಿದ್ದಾರೆ.
“ಕ್ಷೇತ್ರ ಮರುವಿಂಗಡಣೆಯನ್ನು ಜಾರಿಗೆ ತರಲು ಮಾಡುತ್ತಿರುವ ಈ ಆತುರದ ಪ್ರಯತ್ನವು ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ನಡೆಸುತ್ತಿರುವ ಬಹಿರಂಗ ದಾಳಿಯಾಗಿದೆ. ಅದಕ್ಕಿಂತ ಹೆಚ್ಚಾಗಿ, ಇದು ರಾಜ್ಯಗಳ ಹಕ್ಕುಗಳ ಮೇಲೆ ನಡೆಯುತ್ತಿರುವ ನೇರ ದಾಳಿಯಾಗಿದೆ” ಎಂದು ಸ್ಟಾಲಿನ್ ಹೇಳಿದ್ದಾರೆ.
“ನೀವು ಈ ಹಿಂದೆಂದೂ ನೋಡಿರದ ತಮಿಳುನಾಡನ್ನು ಇನ್ನು ಮುಂದೆ ನೋಡಲಿದ್ದೀರಿ. 1950 ಮತ್ತು 1960ರ ದಶಕದ ಡಿಎಂಕೆ ಪಕ್ಷದ ಆವೇಶ ಮತ್ತು ಸ್ಫೂರ್ತಿಯನ್ನು ಭಾರತವು ಮತ್ತೊಮ್ಮೆ ಸಾಕ್ಷೀಕರಿಸಲಿದೆ. ಇದನ್ನು ಬೆದರಿಕೆ ಎಂದು ತಪ್ಪಾಗಿ ಭಾವಿಸಬೇಡಿ; ಇದೊಂದು ಎಚ್ಚರಿಕೆ. ನೀವು ಇದನ್ನು ಬೆದರಿಕೆ ಎಂದೇ ವ್ಯಾಖ್ಯಾನಿಸಲು ಬಯಸಿದರೂ ನಮಗೇನೂ ತೊಂದರೆಯಿಲ್ಲ. ಹೌದು, ಇದು ತಮಿಳುನಾಡಿನಿಂದ ನೀಡುತ್ತಿರುವ ಎಚ್ಚರಿಕೆ” ಸ್ಟಾಲಿನ್ ಖಾರವಾಗಿ ನುಡಿದಿದ್ದಾರೆ.


