ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ತಂದೆ, ಬಿಜೆಪಿಯ ಮಾಜಿ ನಾಯಕ ತನ್ನ ಚಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪ್ರಕರಣ ದಾಖಲಾಗಿದೆ.
ಉತ್ತರಾಖಂಡ್ ರೆಸಾರ್ಟ್ ರಿಸೆಪ್ಷನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪುಲ್ಕಿತ್ ಆರ್ಯನ ತಂದೆ ವಿನೋದ್ ಆರ್ಯ ತನ್ನ ಚಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಬಂದಿದೆ.
ಕಾರು ಚಾಲಕನನ್ನು ತನ್ನ ಮನೆಗೆ ತಡರಾತ್ರಿ ಕರೆದ ವಿನೋದ್ ಆರ್ಯ ಬಟ್ಟೆ ಬಿಚ್ಚಿಸುವಂತೆ ಸೂಚಿಸಿದ್ದರು ಎಂದು ಮಾಜಿ ಸಚಿವರ ಚಾಲಕ ರೋಹನ್ ಕಾಂಭೋಜ್ (25) ಆರೋಪಿಸಿದ್ದಾರೆ. ಆದರೆ ಚಾಲಕ ಪ್ರತಿಭಟಿಸಿದ ನಂತರ, ವಿನೋದ್ ಅವನನ್ನು ನೋಡಿ ನಕ್ಕರು. ವಿಭಿನ್ನ ಲೈಂಗಿಕ ಆದ್ಯತೆಯನ್ನು ಹೊಂದಿರುವೆಯೇ ಎಂದು ಪರಿಶೀಲಿಸಲು ಹೀಗೆ ಮಾಡಿದೆ ಎಂದು ವಿನೋದ್ ಹೇಳಿರುವುದಾಗಿ ಆರೋಪಿಸಲಾಗಿದೆ.
ಏತನ್ಮಧ್ಯೆ, ಆಜ್ ತಕ್ನೊಂದಿಗೆ ಮಾತನಾಡಿದ ಮಾಜಿ ಸಚಿವರು, ಚಾಲಕನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ರೋಹನ್ ನಗದು ಮತ್ತು ಸಿಮ್ನೊಂದಿಗೆ ತಲೆಮರೆಸಿಕೊಂಡಿದ್ದಾನೆ ಎಂದು ದೂರಿದ್ದಾರೆ.
ಚಾಲಕ ನೀಡಿದ ದೂರು ಆಧರಿಸಿ ಪೊಲೀಸರು ಮಾಜಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ ವಿನೋದ್ ಆರ್ಯ ವಿರುದ್ಧ ಹರಿದ್ವಾರದ ಜವಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ (ನಗರ) ಸ್ವತಂತ್ರ ಕುಮಾರ್ ತಿಳಿಸಿದ್ದಾರೆ.
ಐಪಿಸಿಯ 377 (ಅಸ್ವಾಭಾವಿಕ ಅಪರಾಧಗಳು), 307 (ಕೊಲೆ ಯತ್ನ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.
ಅಂಕಿತಾ ಕೊಲೆ ಪ್ರಕರಣ
ಪುಲ್ಕಿತ್ ಆರ್ಯನ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಅಂಕಿತಾ ಭಂಡಾರಿ ಸೆಪ್ಟಂಬರ್ 18ರಂದು ಕಾಣೆಯಾಗಿದ್ದರು. ಸ್ವತಃ ಪುಲ್ಕಿತ್ ಆರ್ಯನೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದನು. ಯುವತಿ ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದನು. ಆದರೆ 5 ದಿನದ ನಂತರ ಪ್ರಕರಣಕ್ಕೆ ತಿರುವು ಸಿಕ್ಕಿತ್ತು.
ಪುಲ್ಕಿತ್ ಆರ್ಯ ತನ್ನ ಇಬ್ಬರು ಸಿಬ್ಬಂದಿಯೊಡನೆ ಸೇರಿ ಯುವತಿಯನ್ನು ಕೊಂದಿದ್ದಾನೆ ಎಂಬ ಅಂಶ ಬೆಳಕಿಗೆ ಬಂದಿತ್ತು. ರೆಸಾರ್ಟ್ ಮೇಲೆ ಬುಲ್ಡೋಜರ್ ಹತ್ತಿಸಿ ಸಾಕ್ಷಿ ನಾಶಕ್ಕೆ ಸರ್ಕಾರ ಅವಕಾಶ ನೀಡಿರುವುದಾಗಿ ಯುವತಿಯ ಕುಟುಂಬ ಆರೋಪಿಸಿತ್ತು. ಈ ರೆಸಾರ್ಟ್ನಲ್ಲಿ ಕಾನೂನು ಬಾಹಿರ ಕೃತ್ಯಗಳು ನಡೆದಿರುವ ಅನುಮಾನಗಳು ವ್ಯಕ್ತವಾಗಿದ್ದವು.
ಆರೆಸ್ಸೆಸ್ ಮತ್ತು ಬಿಜೆಪಿ ನಾಯಕನ ಮಗ ನಡೆಸಿರುವ ಉತ್ತರಖಂಡ ಯುವತಿ ಕೊಲೆ ಪ್ರಕರಣದ ಮತ್ತಷ್ಟು ವಿವರಗಳು ಹೊರಬೀಳತೊಡಗಿದ್ದವು. ಆರೋಪಿಗಳು ರೆಸಾರ್ಟ್ನಲ್ಲಿ ಹದಿಹರೆಯದವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂದು ಹತ್ಯೆಗೀಡಾದ ಯುವತಿಯು ತನ್ನ ಸ್ನೇಹಿತೆಗೆ ಮಾಡಿದ್ದ ವಾಟ್ಸಾಪ್ ಸಂದೇಶಗಳ ಕುರಿತು ಎನ್ಡಿಟಿವಿ ವರದಿ ಮಾಡಿತ್ತು.
“ಅವರು ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಕೊಲೆಗೀಡಾದ ಯುವತಿಯು ತನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದು ಮತ್ತು ರೆಸಾರ್ಟ್ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡಿದ ಅನುಭವವನ್ನು ವಿವರಿಸುತ್ತಿದ್ದ ಬಗ್ಗೆ ವರದಿಗಳು ಬಹಿರಂಗಗೊಂಡಿದ್ದವು.