Homeಕರ್ನಾಟಕನಿಮ್ಮ ಮಕ್ಕಳು ಕಲಿಯುವ ಶಿಕ್ಷಣ ಪದ್ಧತಿ ಹೀಗಿದ್ದರೆ ಚೆನ್ನ ಅಲ್ಲವೇ?

ನಿಮ್ಮ ಮಕ್ಕಳು ಕಲಿಯುವ ಶಿಕ್ಷಣ ಪದ್ಧತಿ ಹೀಗಿದ್ದರೆ ಚೆನ್ನ ಅಲ್ಲವೇ?

- Advertisement -
- Advertisement -

| ಜಿ.ಆರ್. ವಿದ್ಯಾರಣ್ಯ |

ಇತ್ತೀಚೆಗಷ್ಟೇ ಭಾರತ ಸರಕಾರದ ಶಿಕ್ಷಣ ನೀತಿಯ ಕರಡು ಪ್ರತಿ ಬಿಡುಗಡೆ ಮಾಡಿದೆ. ಅದರಲ್ಲಿ ಏನಿದೆ, ಏನಿಲ್ಲ, ಏನಿರಬೇಕು ಅಥವಾ ಬೇಡ ಅದರ ವಿಸ್ತೃತ ಚರ್ಚೆ ಇನ್ನೂ ಆಗಬೇಕಿದೆ. ಅದಕ್ಕೆ ಮುನ್ನವೇ ಇದು ತ್ರಿಭಾಷಾ ಸೂತ್ರದಡಿಯಲ್ಲಿ ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಬಲವಂತವಾಗಿ ಹೇರುವ ಮರು ಪ್ರಯತ್ನ ಎಂಬ ದೋಷಾರೋಪಣೆ ಎದ್ದು ಹಲವಾರು ಎಚ್ಚರಿಕೆ ಕೂಗು, ಪ್ರತಿಭಟನೆಗಳು, ಅದಕ್ಕೆ ಬೇಕಾದ ಸಮಜಾಯಿಷಿ ಎಲ್ಲವೂ ನಡೆದಿದೆ. ಶ್ರೀ ಕಸ್ತೂರಿರಂಗನ್ ಸಮಿತಿ ಮಾತ್ರ ಇದರಲ್ಲಿ ನಮಗೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ, ಹಳೆಯ ಶಿಕ್ಷಣ ನೀತಿ ಸುಮಾರು 30ವರ್ಷ ಹಳೆಯದಾಗಿದ್ದು ಅದು ಇಂದಿನ ಸ್ಥಿತಿಗತಿಗೆ ಅನುಕೂಲವಾಗಿಲ್ಲದೆ ಇದ್ದುದರಿಂದ ಹೊಸ ಚಿಂತನೆಯ ಅವಶ್ಯಕತೆಯನ್ನು ಮನಗಂಡು, ಸರಕಾರದ ಆದೇಶದಂತೆ,ನೀತಿ ರೂಪಿಸಲಾಗಿದೆ ಮತ್ತು ಇದಕ್ಕೆ ಜನರು ತಮ್ಮ ತಿದ್ದುಪಡಿ ತಿಳಿಸಬಹುದಾಗಿದೆ ಎಂದು ತಮ್ಮ ಪ್ರತಿಕ್ರಿಯೆ ತಿಳಿಸಿದ್ದಾರೆ.

ನಮ್ಮ ಶಿಕ್ಷಣ ನೀತಿಯಲ್ಲಿ ನಮ್ಮ ವಿದ್ಯಾರ್ಥಿಗಳು ಏನು ಕಲಿಯುತ್ತಿದ್ದಾರೆ, ನಿಜವಾಗಿ ಕಲಿಯುತ್ತಿದ್ದಾರೋ ಅಥವಾ ಶಾಲಾ-ಕಾಲೇಜಿನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಬೇಕಾದ ಅಂಕ ಗಳಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದ್ದಾರೋ ಎಂಬುದು ಚರ್ಚಾಸ್ಪದ ವಿಷಯ. ಈಗಿನ ಕಾಲದ ಪರೀಕ್ಷೆ ಫಲಿತಾಂಶಗಳನ್ನು ನೋಡಿದರೆ ನಾವು ನಿಜವಾಗಿ “ಮಾರ್ಕ್ಸ್”ವಾದಿಗಳಾಗುತ್ತಿರುವುದು ಎದ್ದು ಕಾಣುತ್ತದೆ. ನೂರಕ್ಕೆ ನೂರು ಅಂಕದಿಂದಲೂ ಮಕ್ಕಳು ಮತ್ತು ಅವರು ಪೋಷಕರು ಸಂತೋಷಪಡುತ್ತಿಲ್ಲ. 99.9% ಅಂಕ ಪಡೆದ ವಿದ್ಯಾರ್ಥಿಗಳು ಅಳುತ್ತಿರುವ ದೃಶ್ಯ ಮಾಧ್ಯಮದಲ್ಲಿ ಕಾಣಬಹುದಾಗಿದೆ. ದೆಹಲಿಯಲ್ಲಿ 95% ಅಂಕ ಗಳಿಸಿದ ಎರಡನೆಯ ಪಿಯು ವಿದ್ಯಾರ್ಥಿಗಳಿಗೆ ಅಲ್ಲಿಯ ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ದೊರಕುತ್ತಿಲ್ಲ. ಬೇರೆ ನಗರಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕಲಿಯುವ ವಿಷಯ ಮಕ್ಕಳ ತಲೆಗೆ ಹೋಗುತ್ತಿದೆಯೇ, ಅವರು ನಿಜವಾಗಿ ಕಲಿತು ಜಾಣರಾಗುತ್ತಿದ್ದಾರೆಯೇ ಎಂಬ ಸಂದೇಹ ಸ್ವಾಭಾವಿಕವಾಗಿ ಮೂಡುತ್ತದೆ.

ಜಾಣತನ ಎಂದರೆ ಏನು? ಇಂಗ್ಲೀಷಿನಲ್ಲಿ ಇದನ್ನು ಇಂಟೆಲಿಜೆನ್ಸ್ ಎನ್ನುತ್ತಾರೆ. ಇದರಲ್ಲಿ ಹಲವಾರು ವಿಧಗಳಿವೆ. ಆದರೆ ನಾವು ಮುಖ್ಯವಾಗಿ ಕಲಿಸುವುದು ಮತ್ತು ಪರೀಕ್ಷಿಸುವುದು ಮೂರು-ನಾಲ್ಕು ಮಾತ್ರ. ಭಾಷಾ ಜ್ಞಾನ, ತರ್ಕಶಾಸ್ತ್ರ ಹಾಗೂ ಗಣಿತಜ್ಞಾನ, ಇವಿಷ್ಟು ವಿಷಯದ ಮೇಲೆ ನಮ್ಮ ಮಕ್ಕಳ ಜಾಣತನ (ಐ.ಕ್ಯೂ.) ಅಳೆಯಲಾಗುತ್ತದೆ. ಹಾರ್ವರ್ಡ್ ಶಿಕ್ಷಣ ತಜ್ಞ ಪ್ರಾಧ್ಯಾಪಕ ಹಾವರ್ಡ್ ಗಾರ್ಡನರ್ ಎಂಬುವರು ಒಟ್ಟು ಎಂಟು ವಿಧವಾದ ಜಾಣತನಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಮೇಲೆ ತಿಳಿಸಿದ ಮೂರು-ನಾಲ್ಕು ಜಾಣತನಗಳ ಜೊತೆಗೆ ದೈಹಿಕ ಕೈನೆಸ್ಥೆಟಿಕ್ಸ್, ಸ್ಪೇಷಿಯಲ್ ಕೈನೆಸ್ಥೆಟಿಕ್ಸ್, ಸಂಗೀತ, ಪರಸ್ಪರ ಸಂವಹನ(ಇಂಟರ್ ಪರ್ಸನಲ್) ಕಲೆ, ಆತ್ಮಾವಲೋಕನ(ಇಂಟ್ರಾ ಪರ್ಸನಲ್)ಕಲೆ ಮತ್ತು ನೈಸರ್ಗಿಕ ಜಾಣತನವನ್ನೂ ಸೇರಿಸಿದ್ದಾರೆ.

ಹಾವರ್ಡ್ ಗಾರ್ಡನರ್

ಸ್ಪೇಷಿಯಲ್ ಕೈನೆಸ್ಥೆಟಿಕ್ಸ್ ಎಂದರೆ ಜಗತ್ತನ್ನು ತ್ರಿಪರಿಮಾಣ(ಉದ್ದ-ಅಗಲ-ಎತ್ತರ)ದಲ್ಲಿ ಕಾಣುವ, ಅರಿತುಕೊಳ್ಳುವ ಕಲೆ. ಸಂಗೀತ ಜ್ಞಾನ ಐಚ್ಛಿಕ ವಿಷಯವಾಗಿದ್ದು ಇದು ಎಲ್ಲರಿಗೂ ಅನ್ವಯಿಸುವ ವಿಷಯ ಎಂದು ಯಾರೂ ಪರಿಗಣಿಸಿಲ್ಲ. ಕೇಳುವ ಕಿವಿ ಇರಲು ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ ಎಂಬ ಹಾಡು ನೆನಪಿರಬಹುದು. ಸಂಗೀತ ಲಯಬದ್ಧ. ಸಂಗೀತಕ್ಕೂ ಗಣಿತಕ್ಕೂ ಹತ್ತಿರದ ಸಂಬಂಧವಿದೆ. ಕರ್ನಾಟಕ/ಹಿಂದುಸ್ತಾನಿಯಾಗಲೀ, ಪಾಶ್ಚಾತ್ಯವಾಗಲೀ ಇದನ್ನು ಬರೆಯುವಾಗ ಗಣಿತದ ಅಕ್ಷರಗಳನ್ನು ಬಳಸುವುದನ್ನು ನೀವು ಕಾಣಬಹುದು. ಸಂಗೀತ ಬಲ್ಲವರಿಗೆ ಗಣಿತ ಸುಲಭವಾಗಿ ಅರ್ಥವಾಗುತ್ತದೆ.

ಇಂದಿನ ಜಗತ್ತಿನಲ್ಲಿ ತನ್ನನ್ನು ತಾನು ಅರಿತುಕೊಳ್ಳುವುದು ಎಷ್ಟೊಂದು ಮುಖ್ಯ. ಅದೇ ರೀತಿ ಪರಸ್ಪರ ಅರಿವು, ಸಮಾಜದ ಬಗ್ಗೆ ಅನುಭೂತಿ ಇವುಗಳ ಅವಶ್ಯಕತೆಯನ್ನು ಸ್ವಲ್ಪ ಮಟ್ಟಿಗೆ ನಮ್ಮ ಶಿಕ್ಷಣ ನೀತಿ ಈಗಾಗಲೇ ಗ್ರಹಿಸಿ, ಕೇಂದ್ರದ ಸಿಬಿಎಸ್ಇ ಪಠ್ಯಕ್ರಮದಲ್ಲಿ ಇವುಗಳ ಬಗ್ಗೆ ಒಂದಿಷ್ಟು ಉಲ್ಲೇಖವಿದೆ. ಆದರೆ ರಾಜ್ಯ ಶಿಕ್ಷಣ ನೀತಿಯಲ್ಲಿ ಇನ್ನೂ ಕಾಣುತ್ತಿಲ್ಲ ಮತ್ತು ಅವು ಶಿಕ್ಷಣದ ಮುಖ್ಯವಾಹಿನಿಗೆ ಬಂದಿಲ್ಲ. ಅದೇ ರೀತಿಯಲ್ಲಿ ದೈಹಿಕ ಕೈನೆಸ್ಥೆಟಿಕ್ಸ್ ಎಂದರೆ ದೇಹದ ಅಂಗಾಂಗಗಳನ್ನು ಬಳಸಿ ತನ್ನ ಒಳ ಅನಿಸಿಕೆಯನ್ನು ಇತರರಿಗೆ ತಿಳಿಸುವುದು; ಮುಖ್ಯವಾಗಿ ನೃತ್ಯ. ಇದೂ ಸಹ ಶಿಕ್ಷಣದ ಮುಖ್ಯವಾಹಿನಿಗೆ ಬಂದಿಲ್ಲ.

ನೈಸರ್ಗಿಕ ಜ್ಞಾನ. ಇದು ದೈವದತ್ತವಾಗಿ ಬಂದಿದ್ದು, ಇದನ್ನು ಮಕ್ಕಳಿಗೆ ತಾವಾಗಿಯೇ ವೃದ್ಧಿಸಿಕೊಳ್ಳಲು ಅವಕಾಶ ಕೊಡುವುದನ್ನು ಬಿಟ್ಟು, ನಾವು ಅದನ್ನು ಮೊಟಕುಗೊಳಿಸುವ ಪ್ರಯತ್ನವನ್ನೇ ಹೆಚ್ಚಾಗಿ ಮಾಡುತ್ತೇವೆ. ಇದರ ಬಗ್ಗೆ ಹೆಚ್ಚಿಗೆ ಹೇಳಬೇಕಂದರೆ ನನ್ನ ಓರ್ವ ಮಿತ್ರರ ವೈಯುಕ್ತಿಕ ಅನುಭವ ಹಂಚಿಕೊಳ್ಳಬೇಕಾಗುತ್ತದೆ.

ವೃತ್ತಿಯಲ್ಲಿ ಸರಕಾರಿ ವೈದ್ಯರಾದ ಅವರು ತಾವಾಗಿಯೇ ಗ್ರಾಮೀಣ ಪ್ರದೇಶಕ್ಕೆ ಹಾಕಿಸಿಕೊಂಡು ಹೆಗ್ಗಡದೇವನ ಕೋಟೆಯ ಕಾಡಿನ ಬುಡಕಟ್ಟು ಜನಾಂಗದ ಹಾದಿಯೊಂದರಲ್ಲಿ ಕೆಲಸ ಪ್ರಾರಂಭಿಸಿದರು. ಅಲ್ಲಿಯ ಜನರಿಗೆ ಈ ಇಂಗ್ಲಿಷ್ ವೈದ್ಯರ ಅವಶ್ಯಕತೆ ಇರಲಿಲ್ಲ, ಹಾಗಾಗಿ ಇವರಿಗೆ ಮಾಡಲು ಕೆಲಸವಿರಲಿಲ್ಲ. ಸುಮ್ಮನೆ ಕುಳಿತು ಏನು ಮಾಡುವುದು ಎಂದು ಅಲ್ಲಿದ್ದ ಮಕ್ಕಳನ್ನು ಒಟ್ಟುಗೂಡಿಸಿ ಶಾಲೆ ಪ್ರಾರಂಭಿಸಲು ಪ್ರಯತ್ನ ಮಾಡಿದರು. ಎಂದೂ ಶಾಲೆಯನ್ನೇ ಕಾಣದ ಮಕ್ಕಳು ಆರರಿಂದ ಹದಿನಾಲ್ಕು ವಯಸ್ಸಿನವರಾಗಿದ್ದು, ಎಲ್ಲರಿಗೂ ಒಟ್ಟಾಗಿ ಕಲಿಸುವ ವಿಷಯ ಏನೆಂದು ಇವರಿಗೆ ತಕ್ಷಣ ಹೊಳೆಯಲಿಲ್ಲ. ಅವರಿಗೆ ಕನ್ನಡವಾಗಲೀ, ಇಂಗ್ಲೀಷ್ ಭಾಷೆಯಾಗಲೀ, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ವಿಜ್ಞಾನ, ಗಣಿತವಾಗಲೀ ಹೇಗೆ ಮತ್ತು ಎಲ್ಲಿಂದ ಪ್ರಾರಂಭಿಸಬೇಕು ಎಂಬುದು ಇವರಿಗೆ ಸ್ಪಷ್ಟವಾಗಿರಲಿಲ್ಲ. ಕೊನೆಗೆ ಎಲ್ಲರೂ ಹೋಗಿ ಬೇರೆ ಬೇರೆ ಗಿಡದಿಂದ ಬೇರೆ ಬೇರೆ ತರಹದ ಎಲೆಗಳನ್ನು ಆಯ್ದು ತನ್ನಿ, ಯಾರು ಹೆಚ್ಚಿನ ಎಲೆ ತರುತ್ತಾರೋ ಅವರಿಗೆ ಏನೋ ಬಹುಮಾನ ಇದೆ ಎಂದು ಹೇಳಿದರು. ಸಂತೋಷದಿಂದ ಓಡಿ ಹೋದ ಮಕ್ಕಳು ಸ್ವಲ್ಪ ಸಮಯದ ನಂತರ ತಮ್ಮ ತಮ್ಮ ಶಕ್ತ್ಯಾನುಸಾರ ಎಲೆಗಳನ್ನು ತಂದು ಕೊಟ್ಟರು. ಅದರಲ್ಲಿ ಒಂದು ಹನ್ನೆರಡು ವರ್ಷದ ಹುಡುಗ ನೂರಕ್ಕೂ ಹೆಚ್ಚು ತರಹದ ಎಲೆ ಸಂಗ್ರಹಿಸಿದ್ದು, ಆ ಎಲೆಗಳು ಯಾವ ಗಿಡದ್ದು, ಅದಕ್ಕೆ ಅವರ ಆಡುಭಾಷೆಯಲ್ಲಿ ಏನೆಂದು ಹೆಸರು, ಅದರಲ್ಲಿ ಯಾವಾಗ ಯಾವ ರೀತಿಯ ಹೂವು, ಹಣ್ಣು, ಕಾಯಿ ಬಿಡುತ್ತದೆ, ಆ ಗಿಡಕ್ಕೆ ಯಾವ ಯಾವ ಹಕ್ಕಿಗಳು ಯಾವ ಕಾಲದಲ್ಲಿ ಬರುತ್ತವೆ ಎಲ್ಲವನ್ನೂ ವಿವರಿಸಿದ. ಇದುವೇ ನೈಸರ್ಗಿಕ ಜಾಣತನ. ಎಂದೂ ಶಾಲೆಗೆ ಹೋಗದ ಅವನ ನೈಸರ್ಗಿಕ ಜ್ಞಾನ ಯಾವ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗೂ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಇದನ್ನು ಅಳೆಯುವ ಯಂತ್ರ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬರಬೇಕು.

ನಮ್ಮ ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳ ಭಾಷಾ ಜ್ಞಾನ, ತರ್ಕ/ಗಣಿತ, ಇವನ್ನು ಐ.ಕ್ಯೂ. ಎಂದು ಅಳೆದು ಇವನು ಜಾಣ, ಇವನು ದಡ್ಡ, ಇವನು ಮೂರ್ಖ, ಇವನು ಮುಠ್ಠಾಳ ಮುಂತಾದ ಹಣೆಪಟ್ಟಿ ಕಟ್ಟುತ್ತೇವೆ. ಎಂದು ಶಾಲೆಗೆ ಹೋಗದ ನೂರಾರು ಸಸ್ಯಗಳ ಜ್ಞಾನ ಸ್ವಯಂ ಸಂಪಾದಿಸಿದ ಹನ್ನೆರಡು ವರ್ಷದ ಬಾಲಕ ಮೇಧಾವಿಯೋ, ಜಾಣನೋ, ದಡ್ಡನೋ ನೀವೇ ಯೋಚಿಸಿ. ಕೆಲವು ವರ್ಷದ ಹಿಂದೆ ಕೇಂದ್ರ ಸರಕಾರ ಜಾರಿಗೆ ತಂದ ಮೋಟಾರು ವಾಹನ ಕಾಯಿದೆ ತಿದ್ದುಪಡಿ ಪ್ರಕಾರ ಎಂಟನೆಯ ತರಗತಿ ಉತ್ತೀರ್ಣರಾಗದ ಮಕ್ಕಳು ಆಟೋ ಚಾಲಕ ಪರವಾನಗಿ ಪಡೆಯಲು ಅನರ್ಹ ಎಂದು ಘೋಷಿಸಿತು. ಈ ಹುಡುಗ ಬಡತನದಿಂದಾಗಿ ಶಾಲೆ ಮುಂದುವರಿಸಲಾಗದೇ, ನಗರಕ್ಕೆ ಬಂದು, ತನ್ನ ಕುಟುಂಬವನ್ನು ರಕ್ಷಿಸಲು, ಆಟೋ ಚಾಲಕನಾಗಿ ದುಡಿಯಲು ಮುಂದಾದಾಗ, ನೀನು ಶಾಲೆಯಲ್ಲಿ  ಎಂಟು ವರ್ಷ ಕನ್ನಡ, ಇಂಗ್ಲೀಷ್, ಇತಿಹಾಸ, ಭೂಗೋಳ, ಸಮಾಜ ಶಾಸ್ತ್ರ, ವಿಜ್ಞಾನ, ಗಣಿತ ಕಲಿಯಲಿಲ್ಲ ಎಂದು ಸರಕಾರದ ಶಿಕ್ಷಣ ನೀತಿ ಅವನ ಜೀವನಾವಕಾಶ ಕಿತ್ತುಕೊಳ್ಳುವುದು ನ್ಯಾಯವೇ? ಆತ್ಮಾವಲೋಕನ ಶಕ್ತಿಯುಳ್ಳ ಎಷ್ಟೋ ಮಹಾಪುರುಷರು ನಮ್ಮ ಭಾರತದಲ್ಲಿ ಸಾಧು-ಸಂತರಾಗಿ,  ಜ್ಞಾನಿಗಳಾಗಿ ಜಗತ್ತಿಗೇ ದಾರಿ ತೋರಿಸಿದ್ದಾರೆ. ತಮ್ಮ ಸಂಗೀತ-ನೃತ್ಯ ಕಲೆಯಿಂದ ಕೋಟ್ಯಾಂತರ ಜನರನ್ನು ರಂಜಿಸಿ ಅವರ ಜೀವನದಲ್ಲಿ ಆನಂದವನ್ನು ತುಂಬಿದ್ದಾರೆ. ಪರಸ್ಪರ ಸಂವಹನ ಕಲೆಯುಳ್ಳ ಜನರು ಎಷ್ಟೋ ಜಗಳ-ಕದನಗಳನ್ನು ಮಧ್ಯಸ್ತಿಕೆ ವಹಿಸಿ ತಡೆದಿದ್ದಾರೆ. ತ್ರಿಪರಿಮಾಣದಲ್ಲಿ ಯೋಚಿಸುವ ಶಕ್ತಿಯುಳ್ಳ ಎಷ್ಟೋ ಕಲಾವಿದರು ಶಿಲ್ಪಕಲೆ, ವಿನ್ಯಾಸದಿಂದ ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ಇವರೆಲ್ಲ ಎಂಟನೆಯ ತರಗತಿಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಇವರನ್ನು ಜೀವನದ ಮುಖ್ಯ ವಾಹಿನಿಯಿಂದ ವಂಚಿತಗೊಳಿಸುವುದು ಸರಿಯಾದ ಶಿಕ್ಷಣ ನೀತಿಯೇ? ಖಂಡಿತಾ ಅಲ್ಲ.

ಪ್ರಾಧ್ಯಾಪಕ ಹಾವರ್ಡ್ ಗಾರ್ಡನರ್ ಹೇಳಿರುವ ಎಂಟು ಜಾಣತನಗಳ ಪೈಕಿ ಮಕ್ಕಳಿಗೆ ಇಷ್ಟವಾದ ಯಾವುದೇ ಮೂರನ್ನು ಆಯ್ದುಕೊಂಡು ಶಾಲೆ/ಕಾಲೇಜು ದಾಟಲು, ಜೀವನದ ಮುಖ್ಯ ವಾಹಿನಿಗೆ ಸೇರಿ ಸಮಾಜಕ್ಕೆ ಬೇಕಾದಂತಹ ವ್ಯಕ್ತಿಯಾಗಲು ನಮ್ಮ ಶಿಕ್ಷಣ ನೀತಿ ಅನುವು ಮಾಡಿಕೊಡಬಲ್ಲದೇ?

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...