Homeಅಂತರಾಷ್ಟ್ರೀಯಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

ಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

- Advertisement -
- Advertisement -

ಜಮ್ಮುಕಾಶ್ಮೀರದಲ್ಲಿ ವಿಶೇಷಾಧಿಕಾರ ರದ್ದಾದ ನಂತರ ಮೊದಲ ಬಾರಿಗೆ ಅಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ, ವರದಿ ನೀಡಲು ಯೂರೋಪಿಯನ್‌ ಒಕ್ಕೂಟ ಸಂಸದರು ಭೇಟಿ ನೀಡಿದ್ದರು. ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ. ಇಲ್ಲಿನ ರಾಜಕೀಯ ನಮಗೆ ಬೇಡ, ವಾಸ್ತವ ಸ್ಥಿತಿಯನ್ನು ಅರಿತು ಭಯೋತ್ಪಾದನೆ ನಿರ್ಮೂಲನೆಯಲ್ಲಿ ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಈಗ ಅಂತಹದ್ದೊಂದು ಯೂರೋಪಿಯನ್‌ ಒಕ್ಕೂಟದ ಪ್ರಾಯೋಜಕತ್ವದ ಹಿಂದೆ ಫೇಕ್‌ (ಸುಳ್ಳಿನ) ನ್ಯೂಸ್‌ ಜಾಲವೇ ಇದೆ ಎಂಬುದು ಬೆಳಕಿಗೆ ಬಂದಿದೆ.

ಹಾಗಿದ್ದರೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯೂರೋಪಿಯನ್‌ ಒಕ್ಕೂಟದ ಹಿಂದೆ ಫೇಕ್‌ ನ್ಯೂಸ್‌ ಜಾಲದ ಕೈವಾಡವಿದೆಯಾ..? ಇದೆಲ್ಲಾ ಬಿಜೆಪಿ ಪರ ಸರ್ಕಾರವನ್ನು ಬೆಂಬಲಿಸಲು, ಫೇಕ್‌ ನೆಟ್‌ವರ್ಕ್‌‌ನ್ನು ಬಳಸಿಕೊಳ್ಳಲಾಗಿತ್ತಾ..? ಎಂಬ ಪ್ರಶ್ನೆಗಳಿಗೆ ಸಿಕ್ಕಿರುವ ಉತ್ತರ ಹೌದು… ಸುಳ್ಳು ಜಾಲದ ಪ್ರಾಯೋಜಕತ್ವದಲ್ಲಿ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿತ್ತು ಅಂತಾ ಯೂರೋಪ್ ಮೂಲದ ಸರ್ಕಾರೇತರ, ಸುಳ್ಳುಸುದ್ದಿಗಳ ಮೂಲ ಪತ್ತೆ ಹಚ್ಚುವ ಡಿಸಿನ್ಫೋಲ್ಯಾಬ್‌ ಹೇಳಿರುವುದಾಗಿ ಸ್ಕ್ರೋಲ್.ಇನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.

ಕಳೆದ ತಿಂಗಳು ಯುರೋಪಿಯನ್ ಯೂನಿಯನ್ ನಿಯೋಗ ಕಾಶ್ಮೀರ ಭೇಟಿ ನೀಡಿ, ವಸ್ತುಸ್ಥಿತಿ ಅಧ್ಯಯನ ನಡೆಸಿತ್ತು. ನಂತರ ಸುದ್ದಿಗೋಷ್ಠಿ ನಡೆಸಿ, ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿತ್ತು. ಆದರೆ ಇದೊಂದು ಪ್ರಾಯೋಜಕತ್ವದ ಭೇಟಿಯಾಗಿತ್ತು. ವಿಶ್ವಸಂಸ್ಥೆಯಾಗಲಿ ಅಥವಾ ಸ್ವತಃ ಭಾರತ ಸರ್ಕಾರವಾಗಲಿ ಇದನ್ನು ಪ್ರಾಯೋಜಿಸಿರಲಿಲ್ಲ. ಹಾಗಾದರೆ ಪ್ರಾಯೋಜಿಸಿದ್ದು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿರುವ ಡಿಸ್-ಇನ್ಫೋಲ್ಯಾಬ್ ಸಂಸ್ಥೆಯು ಅಚ್ಚರಿಯ ಸತ್ಯಗಳನ್ನು ಹೊರಗೆಡವಿದೆ. ಅಧಿಕೃತ ದಾಖಲೆಗಳ ಪ್ರಕಾರ ಇದನ್ನು ಪ್ರಾಯೋಜಿಸಿದ್ದು ನವದೆಹಲಿ ಮೂಲದ International Institute for Non-Aligned Studies ಎಂಬ ಥಿಂಕ್ ಟ್ಯಾಂಕ್ ಸಂಸ್ಥೆ. ಈ ಥಿಂಕ್ ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್ ಹೆಸರಿನ ಕಂಪನಿ. ಇದೇ ಶ್ರೀವಾಸ್ತವ್ ಕಂಪನಿಯ ಮುಖ್ಯ ಸ್ಟೇಕ್ ಹೋಲ್ಡರುಗಳು ಒಂದು ಅಂತರ್ಜಾಲ ಪತ್ರಿಕೆಯನ್ನೂ ಸಲಹುತ್ತಿದ್ದಾರೆ. ಅದರ ಹೆಸರು ಇಪಿ ಟುಡೇ. ಈ ಇಪಿ ಟುಡೆ ಅಂತರ್ಜಾಲ ಪತ್ರಿಕೆ ಸರ್ವರ್ ನ ಮೂಲ ಹಿಡಿದು ಹೊರಟ ಡಿಸ್-ಇನ್ಫೋಲ್ಯಾಬ್ ಸಂಸ್ಥೆ `65ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ ಸುಮಾರು 265ಕ್ಕೂ ಹೆಚ್ಚು ಫೇಕ್ ನ್ಯೂಸ್ ಸುದ್ದಿಗಳನ್ನು ಪ್ರಸಾರ ಮಾಡುವ ವೆಬ್ಸೈಟ್‌ಗಳ ನಂಟು ಇರುವುದು’ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.

ಚುನಾಯಿತ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು, ಪಾಕಿಸ್ತಾನದ ವಿರುದ್ಧ ಸಾರ್ವಜನಿಕರು ರೊಚ್ಚಿಗೇಳುವಂತೆ ಮಾಡಲು ಸ್ಥಳೀಯ ಪತ್ರಿಕೆ ಅಥವಾ ನೈಜ ಮಾಧ್ಯಮಗಳ ಹೆಸರುಗಳನ್ನು ಹೊಂದಿರುವ ನಕಲಿ ವೆಬ್ಸೈಟ್‌ಗಳನ್ನು ರನ್‌ ಮಾಡುವುದೇ ಈ ಫೇಕ್ ನ್ಯೂಸ್ ಜಾಲಗಳ ಪ್ರಧಾನ ಕಸುಬು ಎನ್ನಲಾಗಿದೆ. ಇಂಥಾ ನಕಲಿ ವೆಬ್ಸೈಟ್‌ಗಳು ನೈಜ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಯಥಾವತ್ತಾಗಿ ಪ್ರಕಟಿಸುತ್ತಿರುವುದನ್ನು ಡಿಸಿನ್ಫೋಲ್ಯಾಬ್‌ ಕಂಡು ಹಿಡಿದಿದೆ. ವಿವಿಧ ದೇಶಗಳಲ್ಲಿನ ಬಲಪಂಥೀಯ ರಾಜಕಾರಣವನ್ನು ಉದ್ದೀಪಿಸುವ ಕೆಲಸ ಮಾಡುತ್ತಲೇ ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ನೆಪದಲ್ಲಿ ನವದೆಹಲಿಯಲ್ಲಿರುವ ಅಧಿಕಾರದಲ್ಲಿರುವ ಸರ್ಕಾರಕ್ಕೆ ಜಾಗತಿಕ ಒಲವು ಸಿಗುವಂತೆ ಈ ನ್ಯೂಸ್ ವೆಬ್ಸೈಟ್ ಗಳ ಮೂಲಕ ಮಾಡಲಾಗುತ್ತಿದೆ.

ಕಳೆದ ಕೆಲ ವಾರಗಳ ಹಿಂದೆ ಇಪಿ ಟುಡೇ (EP Today) ವೆಬ್ಸೈಟ್‌ `ರಷ್ಯಾ ಟುಡೇ' ಮತ್ತು `ವಾಯ್ಸ್‌ ಆಫ್‌ ಅಮೆರಿಕ’ ಎಂಬ ಸುದ್ದಿಸಂಸ್ಥೆಗಳಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಕೃಪೆ ಕೂಡಾ ದಾಖಲಿಸದೆ ಯಥಾವತ್ತು ಪ್ರಕಟಿಸಿತ್ತು. ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಈ ಸಂಗತಿಯನ್ನು ಬಯಲು ಮಾಡಿದ ತರುವಾಯ ಇಪಿ ಟುಡೆ ಕ್ಷಮಾಪಣೆಯನ್ನೂ ಕೇಳಿತ್ತು. ಆದರೂ ಸಂಶಯ ಕಡಿಮೆಯಾಗದ ಕಾರಣ ಡಿಸ್-ಇನ್ಫೋಲ್ಯಾಬ್ ಸಂಸ್ಥೆ, ಇಪಿ ಟುಡೆ ಸುದ್ದಿಜಾಲದ ಆರ್ಕೈವ್ ಗಳನ್ನು ಶೋಧಿಸಿದಾಗ ಒಂದು ನಿರ್ದಿಷ್ಟ ದೇಶದ ವಿರುದ್ಧ ಜನಾಭಿಪ್ರಾಯ ರೂಪಿಸುವಂತ ಒಂದೇ ಬಗೆಯ ನ್ಯೂಸ್ ಗಳು ಇದ್ದವೇ ಹೊರತು ಸುದ್ದಿ ಸಂಸ್ಥೆಯೊಂದು ಕಾಯ್ದುಕೊಳ್ಳಬೇಕಾದ ವೈವಿಧ್ಯಮಯ ಶೇಖರಣೆ ಅಲ್ಲಿರಲಿಲ್ಲ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೋಷಿ ಎಂದು ಬಿಂಬಿಸುವ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕತೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ, ಭಾರತ ಮತ್ತು ಪಾಕ್‌ ನಡುವಿನ ಹಳಸಲು ಸಂಬಂಧ, ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದಕರಿಂದ ದಾಳಿ ಹೀಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಾಧಾರಿತ ಲೇಖನಗಳೇ ಹೆಚ್ಚು ಪಬ್ಲಿಶ್‌ ಆಗಿರುವುದು ಕಂಡು ಬಂದಿದೆ ಎಂದು ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಹೇಳಿಕೊಂಡಿದೆ.

ಇದೆಲ್ಲವನ್ನೂ ನೋಡಿದ ಮೇಲೆ, ಈ ಇಪಿ ಟುಡೇ ಹೇಗೆ ನಡೆಯುತ್ತಿದೆ..? ಇದರ ಹಿಂದಿರುವವರು ಯಾರು ಎಂದು ಕೆದಕುತ್ತಾ ಹೋದಂತೆ ಸಿಕ್ಕ ಉತ್ತರ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ. ಯಾಕಂದ್ರೆ ಇಪಿ ಟುಡೇ ಎಂಬ ದೈತ್ಯ ನಕಲಿ ವೆಬ್ಸೈಟ್‌ ಹಿಂದಿರುವವರು ಭಾರತೀಯ ಮೂಲದ ಹೂಡಿಕೆದಾರರು. ಎನ್‌ಜಿಒ, ಇಪಿ ಟುಡೇ ವೆಬ್ಸೈಟ್‌, ಇತರೆ ಕಂಪನಿಗಳ ನಕಲಿ ಜಾಲದ ಲಿಂಕ್‌ ಬಂದು ತಲುಪುವುದು ಶ್ರೀವಾಸ್ತವ್‌ ಎಂಬ ಗ್ರೂಪ್‌ನ್ನು. ಏನಿದು ಶ್ರೀವಾಸ್ತವ್‌ ಗ್ರೂಪ್‌ ಎಂದು ನೋಡಿದಾಗ, ಇದೊಂದು ನವದೆಹಲಿ ಮೂಲದ ಸಂಸ್ಥೆ ಎಂದು ಗೊತ್ತಾಯಿತು. ಶ್ರೀವಾಸ್ತವ್‌ ಗ್ರೂಪ್‌ಗೆ ಸೇರಿದ ಪ್ರಮುಖ ಆಸ್ತಿಯೆಂದರೆ ನವದೆಹಲಿ ಟೈಮ್ಸ್‌ ಮತ್ತು International Institute for Non-Aligned Studies ಥಿಂಕ್‌ಟ್ಯಾಂಕ್.

ಅಕ್ಟೋಬರ್‌ 30ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅನಧಿಕೃತ ಯೂರೋಪಿಯನ್‌ ನಿಯೋಗದ 23 ಸದಸ್ಯರ ತಂಡಕ್ಕೆ ಪ್ರಾಯೋಜಕತ್ವ ( sponsor) ನೀಡಿದ್ದೇ ಈ ಥಿಂಕ್‌ಥ್ಯಾಂಕ್‌. ನಿಯೋಗ ಭೇಟಿಯ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದು ಅಂತಾರಾಷ್ಟ್ರೀಯ ವ್ಯಾಪಾರ ದಲ್ಲಾಳಿ ಮದಿ ಶರ್ಮಾ.

ಇಪಿ ಟುಡೇ ಆನ್ಲೈನ್ ಪತ್ರಿಕೆಯ ಬೆನ್ನುಬಿದ್ದಿದ್ದ ಡಿಸ್-ಇನ್ಫೋಲ್ಯಾಬ್ ಸಂಸ್ಥೆಗೆ ಕೆಲ ದಿನಗಳಿಂದ ಇಪಿ ಟುಡೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳೇ  `ಟೈಮ್ಸ್‌ ಆಫ್‌ ಜಿನಿವಾ’ ಎಂಬ ಮತ್ತೊಂದು ಆನ್‌ಲೈನ್‌ ಪತ್ರಿಕೆಯಲ್ಲೂ ಮರು ಪ್ರಕಟವಾಗುತ್ತಿರೋದು ಗಮನಕ್ಕೆ ಬಂದಿತ್ತು. ಶೋಧಿಸಿ ನೋಡಿದಾಗ ಈ ಟೈಮ್ಸ್ ಆಫ್ ಜಿನೇವಾ ಕೂಡಾ ಇದೇ ಜಾಲದ ಭಾಗವೆಂಬುದು ಪತ್ತೆಯಾಗಿದೆ. ‘ವೆಬ್ಸೈಟಿನ ನೋಂದಣಿ ವಿಳಾಸ, ಇಮೇಲ್ ವಿಳಾಸ, ಇಂಟರ್ನೆಟ್ ಡೊಮೈನ್ ಗಳನ್ನು ಪರಿಶೀಲಿಸಿದಾಗ ಇವುಗಳ ಹಿಂದೆ ಎರಡು ಪ್ರಭಾವಿ ಜಾಲಗಳು ಇರುವುದು ತಿಳಿದು ಬಂದಿದೆ’ ಎಂದು ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

 

ಇಪಿ ಟುಡೇ ಮತ್ತು ಟೈಮ್ಸ್‌ ಆಫ್‌ ಜಿನಿವಾ ಸುದ್ದಿ ಸಂಸ್ಥೆಗಳು ಸುದ್ದಿ ಮೂಲಕ್ಕಾಗಿ ಯಾವುದನ್ನು ಅವಲಂಬಿಸಿವೆ ಎಂದು ಹುಡುಕಿ ಹೊರಟರೆ 4newsagency.com  ಎಂಬ ನ್ಯೂಸ್ ಏಜೆನ್ಸಿ ಬೆಳಕಿಗೆ ಬರುತ್ತದೆ. ತಾನೇ ಹೇಳಿಕೊಂಡಿರುವಂತೆ ಇದೊಂದು independent not-for-profit news cooperative ಸಂಸ್ಥೆ. ಇದರ ಪ್ರಧಾನ ಕಚೇರಿ ಸ್ವಿಡ್ಜ್‌ರ್ಲ್ಯಾಂಡ್‌ನಲ್ಲಿದೆ. ಈ ಸುದ್ದಿ ಸಂಸ್ಥೆ ಪ್ರಕಟಿಸಿರುವ ಎಲ್ಲಾ ಟ್ವೀಟ್‌, ಯೂ ಟ್ಯೂಬ್‌ ವಿಡಿಯೋಗಳು, ಸುದ್ದಿಗಳು, ಪ್ರಮುಖ ವಿಷಯಗಳು ಕೇವಲ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಪಾಕ್‌ ವಿರೋಧಿ ಚಟುವಟಿಕೆಗಳಿಗೇ ಸಂಬಂಧಿಸಿದ್ದಾಗಿವೆ!

ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖೆಯಿಂದ ಈ ತೀರ್ಮಾನಕ್ಕೆ ಬರಬಹುದು. ವಿಶ್ವಸಂಸ್ಥೆಯಾಗಲಿ, ಯುರೋಪ್ ಒಕ್ಕೂಟದ ಸಂಸತ್ತಾಗಲಿ ಅಥವಾ ಭಾರತ ಸರ್ಕಾರವಾಗಲಿ ಅಧಿಕೃತವಾಗಿ ಪ್ರಾಯೋಜಿಸದ; ಕೇವಲ `ಬಲಪಂಥೀಯ’ ವಿಚಾರಧಾರೆಯ ಚುನಾಯಿತ ಪ್ರತಿನಿಧಿಗಳನ್ನಷ್ಟೇ ಒಳಗೊಂಡಿದ್ದ ನಿಯೋಗವೊಂದರ ಭೇಟಿಯನ್ನು ಆಯೋಜಿಸಿದ್ದು International Institute for Non-Aligned Studies ಎಂಬ ಥಿಂಕ್‌ಟ್ಯಾಂಕ್. ಈ ಥಿಂಕ್‌ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್‌ ಗ್ರೂಪ್‌. ಇದೇ ಗ್ರೂಪಿನ ಪ್ರಧಾನ ಸ್ಟೇಕ್ ಹೋಲ್ಡರುಗಳು `ಇಪಿ ಟುಡೇ’ ಎಂಬ ಅಂತರ್ಜಾಲ ಪತ್ರಿಕೆಗೂ ಫಂಡ್ ಮಾಡುತ್ತಿದೆ. ಈ ಪತ್ರಿಕೆ ಒಂದು ನಿರ್ದಿಷ್ಟ ಐಡಿಯಾಲಜಿಕಲ್ ಅಜೆಂಡಾ ಇಟ್ಟುಕೊಂಡ ಸುದ್ದಿಗಳನ್ನಷ್ಟೇ ಪ್ರಕಟಿಸುತ್ತಿದೆ. ಇದೇ ಇಪಿ ಟುಡೇ ಪತ್ರಿಕೆಯ ಸರ್ವರ್ ನಲ್ಲೇ ಸುಮಾರು 265 ವೆಬ್ಸೈಟ್ಗಳು 65 ದೇಶಗಳಲ್ಲಿ ವ್ಯಾಪಿಸಿವೆ. ಹೆಚ್ಚೂ ಕಮ್ಮಿ ಇವೆಲ್ಲವೂ ಒಂದೇ ತೆರನಾದ ಸುದ್ದಿಯನ್ನು ಬಿತ್ತರಿಸುತ್ತಿವೆ, ಮತ್ತು ಅವೇ ಲೇಖನಗಳು ಮರು ಪ್ರಕಟವಾಗುತ್ತಿವೆ. ಅವುಗಳಲ್ಲಿ ಫೇಕ್ ನ್ಯೂಸ್ ಗಳೂ ಇರುತ್ತವೆ. ಜಾಗತಿಕ ಮಟ್ಟದಲ್ಲಿ ಹರಿದಾಡುವ ಇಂಥಾ ನ್ಯೂಸ್ ಗಳಿಂದ ಭಾರತದ ಪ್ರಧಾನಿ ಮೋದಿಯವರಿಗೆ ವಿದೇಶಿ ನೆಲದಲ್ಲಿ ಪ್ರಚಾರ ಸಿಗುತ್ತಾ ಬಂದಿದೆ. ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯುರೋಪಿಯನ್ ಒಕ್ಕೂಟದ ನಿಯೋಗದಿಂದಲೂ ಅನುಕೂಲ ಆದದ್ದು ಮೋದಿಯವರಿಗೆ. ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ರದ್ದು ಪಡಿಸುವಾಗ ಅಲ್ಲಿನ ಜನರಿಗೆ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಗಳು ಕೂಡಾ ಲಭಿಸದಂತೆ ನಿರ್ಬಂಧ ಹೇರಿ, ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದ ಮೋದಿ ಸರ್ಕಾರದ ವಿರುದ್ಧ ಜಾಗತಿಕ ವೇದಿಕೆಗಳಲ್ಲಿ ಮಾನವಹಕ್ಕು ಉಲ್ಲಂಘನೆಯ ಮಾತುಗಳು ಕೇಳಿಬಂದಿದ್ದವು. ಆ ಆರೋಪದಿಂದ ಮೋದಿಯವರನ್ನು ವಿಮುಕ್ತಿಗೊಳಿಸಲೆಂದೇ ಈ ಪ್ರಚಾರ ಜಾಲಗಳು ಈ ವ್ಯವಸ್ಥಿತ ಭೇಟಿಯನ್ನು ಆಯೋಜಿಸಿದ್ದವೇ ಎಂಬ ಅನುಮಾನ  ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖಾ ವರದಿಯಿಂದ ದಟ್ಟವಾಗುತ್ತಿದೆ.

ಕೃಪೆ: ಸ್ಕ್ರಾಲ್‌.ಇನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...