Homeಅಂತರಾಷ್ಟ್ರೀಯಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

ಯೂರೋಪಿಯನ್‌ ನಿಯೋಗದ ಕಾಶ್ಮೀರ ಭೇಟಿ: ಪ್ರಾಯೋಜಿಸಿದ್ದು ’ಫೇಕ್‌ ನ್ಯೂಸ್‌’ ಜಾಲವೇ..!?

- Advertisement -
- Advertisement -

ಜಮ್ಮುಕಾಶ್ಮೀರದಲ್ಲಿ ವಿಶೇಷಾಧಿಕಾರ ರದ್ದಾದ ನಂತರ ಮೊದಲ ಬಾರಿಗೆ ಅಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ, ವರದಿ ನೀಡಲು ಯೂರೋಪಿಯನ್‌ ಒಕ್ಕೂಟ ಸಂಸದರು ಭೇಟಿ ನೀಡಿದ್ದರು. ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ. ಇಲ್ಲಿನ ರಾಜಕೀಯ ನಮಗೆ ಬೇಡ, ವಾಸ್ತವ ಸ್ಥಿತಿಯನ್ನು ಅರಿತು ಭಯೋತ್ಪಾದನೆ ನಿರ್ಮೂಲನೆಯಲ್ಲಿ ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಈಗ ಅಂತಹದ್ದೊಂದು ಯೂರೋಪಿಯನ್‌ ಒಕ್ಕೂಟದ ಪ್ರಾಯೋಜಕತ್ವದ ಹಿಂದೆ ಫೇಕ್‌ (ಸುಳ್ಳಿನ) ನ್ಯೂಸ್‌ ಜಾಲವೇ ಇದೆ ಎಂಬುದು ಬೆಳಕಿಗೆ ಬಂದಿದೆ.

ಹಾಗಿದ್ದರೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯೂರೋಪಿಯನ್‌ ಒಕ್ಕೂಟದ ಹಿಂದೆ ಫೇಕ್‌ ನ್ಯೂಸ್‌ ಜಾಲದ ಕೈವಾಡವಿದೆಯಾ..? ಇದೆಲ್ಲಾ ಬಿಜೆಪಿ ಪರ ಸರ್ಕಾರವನ್ನು ಬೆಂಬಲಿಸಲು, ಫೇಕ್‌ ನೆಟ್‌ವರ್ಕ್‌‌ನ್ನು ಬಳಸಿಕೊಳ್ಳಲಾಗಿತ್ತಾ..? ಎಂಬ ಪ್ರಶ್ನೆಗಳಿಗೆ ಸಿಕ್ಕಿರುವ ಉತ್ತರ ಹೌದು… ಸುಳ್ಳು ಜಾಲದ ಪ್ರಾಯೋಜಕತ್ವದಲ್ಲಿ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿತ್ತು ಅಂತಾ ಯೂರೋಪ್ ಮೂಲದ ಸರ್ಕಾರೇತರ, ಸುಳ್ಳುಸುದ್ದಿಗಳ ಮೂಲ ಪತ್ತೆ ಹಚ್ಚುವ ಡಿಸಿನ್ಫೋಲ್ಯಾಬ್‌ ಹೇಳಿರುವುದಾಗಿ ಸ್ಕ್ರೋಲ್.ಇನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.

ಕಳೆದ ತಿಂಗಳು ಯುರೋಪಿಯನ್ ಯೂನಿಯನ್ ನಿಯೋಗ ಕಾಶ್ಮೀರ ಭೇಟಿ ನೀಡಿ, ವಸ್ತುಸ್ಥಿತಿ ಅಧ್ಯಯನ ನಡೆಸಿತ್ತು. ನಂತರ ಸುದ್ದಿಗೋಷ್ಠಿ ನಡೆಸಿ, ಕಾಶ್ಮೀರದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಿತ್ತು. ಆದರೆ ಇದೊಂದು ಪ್ರಾಯೋಜಕತ್ವದ ಭೇಟಿಯಾಗಿತ್ತು. ವಿಶ್ವಸಂಸ್ಥೆಯಾಗಲಿ ಅಥವಾ ಸ್ವತಃ ಭಾರತ ಸರ್ಕಾರವಾಗಲಿ ಇದನ್ನು ಪ್ರಾಯೋಜಿಸಿರಲಿಲ್ಲ. ಹಾಗಾದರೆ ಪ್ರಾಯೋಜಿಸಿದ್ದು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿರುವ ಡಿಸ್-ಇನ್ಫೋಲ್ಯಾಬ್ ಸಂಸ್ಥೆಯು ಅಚ್ಚರಿಯ ಸತ್ಯಗಳನ್ನು ಹೊರಗೆಡವಿದೆ. ಅಧಿಕೃತ ದಾಖಲೆಗಳ ಪ್ರಕಾರ ಇದನ್ನು ಪ್ರಾಯೋಜಿಸಿದ್ದು ನವದೆಹಲಿ ಮೂಲದ International Institute for Non-Aligned Studies ಎಂಬ ಥಿಂಕ್ ಟ್ಯಾಂಕ್ ಸಂಸ್ಥೆ. ಈ ಥಿಂಕ್ ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್ ಹೆಸರಿನ ಕಂಪನಿ. ಇದೇ ಶ್ರೀವಾಸ್ತವ್ ಕಂಪನಿಯ ಮುಖ್ಯ ಸ್ಟೇಕ್ ಹೋಲ್ಡರುಗಳು ಒಂದು ಅಂತರ್ಜಾಲ ಪತ್ರಿಕೆಯನ್ನೂ ಸಲಹುತ್ತಿದ್ದಾರೆ. ಅದರ ಹೆಸರು ಇಪಿ ಟುಡೇ. ಈ ಇಪಿ ಟುಡೆ ಅಂತರ್ಜಾಲ ಪತ್ರಿಕೆ ಸರ್ವರ್ ನ ಮೂಲ ಹಿಡಿದು ಹೊರಟ ಡಿಸ್-ಇನ್ಫೋಲ್ಯಾಬ್ ಸಂಸ್ಥೆ `65ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿರುವ ಸುಮಾರು 265ಕ್ಕೂ ಹೆಚ್ಚು ಫೇಕ್ ನ್ಯೂಸ್ ಸುದ್ದಿಗಳನ್ನು ಪ್ರಸಾರ ಮಾಡುವ ವೆಬ್ಸೈಟ್‌ಗಳ ನಂಟು ಇರುವುದು’ ಪತ್ತೆಯಾಗಿದೆ ಎಂದು ಹೇಳಿಕೊಂಡಿದೆ.

ಚುನಾಯಿತ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು, ಪಾಕಿಸ್ತಾನದ ವಿರುದ್ಧ ಸಾರ್ವಜನಿಕರು ರೊಚ್ಚಿಗೇಳುವಂತೆ ಮಾಡಲು ಸ್ಥಳೀಯ ಪತ್ರಿಕೆ ಅಥವಾ ನೈಜ ಮಾಧ್ಯಮಗಳ ಹೆಸರುಗಳನ್ನು ಹೊಂದಿರುವ ನಕಲಿ ವೆಬ್ಸೈಟ್‌ಗಳನ್ನು ರನ್‌ ಮಾಡುವುದೇ ಈ ಫೇಕ್ ನ್ಯೂಸ್ ಜಾಲಗಳ ಪ್ರಧಾನ ಕಸುಬು ಎನ್ನಲಾಗಿದೆ. ಇಂಥಾ ನಕಲಿ ವೆಬ್ಸೈಟ್‌ಗಳು ನೈಜ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಯಥಾವತ್ತಾಗಿ ಪ್ರಕಟಿಸುತ್ತಿರುವುದನ್ನು ಡಿಸಿನ್ಫೋಲ್ಯಾಬ್‌ ಕಂಡು ಹಿಡಿದಿದೆ. ವಿವಿಧ ದೇಶಗಳಲ್ಲಿನ ಬಲಪಂಥೀಯ ರಾಜಕಾರಣವನ್ನು ಉದ್ದೀಪಿಸುವ ಕೆಲಸ ಮಾಡುತ್ತಲೇ ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ನೆಪದಲ್ಲಿ ನವದೆಹಲಿಯಲ್ಲಿರುವ ಅಧಿಕಾರದಲ್ಲಿರುವ ಸರ್ಕಾರಕ್ಕೆ ಜಾಗತಿಕ ಒಲವು ಸಿಗುವಂತೆ ಈ ನ್ಯೂಸ್ ವೆಬ್ಸೈಟ್ ಗಳ ಮೂಲಕ ಮಾಡಲಾಗುತ್ತಿದೆ.

ಕಳೆದ ಕೆಲ ವಾರಗಳ ಹಿಂದೆ ಇಪಿ ಟುಡೇ (EP Today) ವೆಬ್ಸೈಟ್‌ `ರಷ್ಯಾ ಟುಡೇ' ಮತ್ತು `ವಾಯ್ಸ್‌ ಆಫ್‌ ಅಮೆರಿಕ’ ಎಂಬ ಸುದ್ದಿಸಂಸ್ಥೆಗಳಲ್ಲಿ ಪ್ರಕಟಗೊಂಡಿರುವ ಲೇಖನಗಳನ್ನು ಕೃಪೆ ಕೂಡಾ ದಾಖಲಿಸದೆ ಯಥಾವತ್ತು ಪ್ರಕಟಿಸಿತ್ತು. ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಈ ಸಂಗತಿಯನ್ನು ಬಯಲು ಮಾಡಿದ ತರುವಾಯ ಇಪಿ ಟುಡೆ ಕ್ಷಮಾಪಣೆಯನ್ನೂ ಕೇಳಿತ್ತು. ಆದರೂ ಸಂಶಯ ಕಡಿಮೆಯಾಗದ ಕಾರಣ ಡಿಸ್-ಇನ್ಫೋಲ್ಯಾಬ್ ಸಂಸ್ಥೆ, ಇಪಿ ಟುಡೆ ಸುದ್ದಿಜಾಲದ ಆರ್ಕೈವ್ ಗಳನ್ನು ಶೋಧಿಸಿದಾಗ ಒಂದು ನಿರ್ದಿಷ್ಟ ದೇಶದ ವಿರುದ್ಧ ಜನಾಭಿಪ್ರಾಯ ರೂಪಿಸುವಂತ ಒಂದೇ ಬಗೆಯ ನ್ಯೂಸ್ ಗಳು ಇದ್ದವೇ ಹೊರತು ಸುದ್ದಿ ಸಂಸ್ಥೆಯೊಂದು ಕಾಯ್ದುಕೊಳ್ಳಬೇಕಾದ ವೈವಿಧ್ಯಮಯ ಶೇಖರಣೆ ಅಲ್ಲಿರಲಿಲ್ಲ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೋಷಿ ಎಂದು ಬಿಂಬಿಸುವ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕತೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ, ಭಾರತ ಮತ್ತು ಪಾಕ್‌ ನಡುವಿನ ಹಳಸಲು ಸಂಬಂಧ, ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದಕರಿಂದ ದಾಳಿ ಹೀಗೆ ಭಾರತ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಾಧಾರಿತ ಲೇಖನಗಳೇ ಹೆಚ್ಚು ಪಬ್ಲಿಶ್‌ ಆಗಿರುವುದು ಕಂಡು ಬಂದಿದೆ ಎಂದು ಡಿಸ್-ಇನ್ಫೋಲ್ಯಾಬ್ ಸಂಸ್ಥೆ ಹೇಳಿಕೊಂಡಿದೆ.

ಇದೆಲ್ಲವನ್ನೂ ನೋಡಿದ ಮೇಲೆ, ಈ ಇಪಿ ಟುಡೇ ಹೇಗೆ ನಡೆಯುತ್ತಿದೆ..? ಇದರ ಹಿಂದಿರುವವರು ಯಾರು ಎಂದು ಕೆದಕುತ್ತಾ ಹೋದಂತೆ ಸಿಕ್ಕ ಉತ್ತರ ನಿಜಕ್ಕೂ ಬೆಚ್ಚಿ ಬೀಳಿಸುತ್ತೆ. ಯಾಕಂದ್ರೆ ಇಪಿ ಟುಡೇ ಎಂಬ ದೈತ್ಯ ನಕಲಿ ವೆಬ್ಸೈಟ್‌ ಹಿಂದಿರುವವರು ಭಾರತೀಯ ಮೂಲದ ಹೂಡಿಕೆದಾರರು. ಎನ್‌ಜಿಒ, ಇಪಿ ಟುಡೇ ವೆಬ್ಸೈಟ್‌, ಇತರೆ ಕಂಪನಿಗಳ ನಕಲಿ ಜಾಲದ ಲಿಂಕ್‌ ಬಂದು ತಲುಪುವುದು ಶ್ರೀವಾಸ್ತವ್‌ ಎಂಬ ಗ್ರೂಪ್‌ನ್ನು. ಏನಿದು ಶ್ರೀವಾಸ್ತವ್‌ ಗ್ರೂಪ್‌ ಎಂದು ನೋಡಿದಾಗ, ಇದೊಂದು ನವದೆಹಲಿ ಮೂಲದ ಸಂಸ್ಥೆ ಎಂದು ಗೊತ್ತಾಯಿತು. ಶ್ರೀವಾಸ್ತವ್‌ ಗ್ರೂಪ್‌ಗೆ ಸೇರಿದ ಪ್ರಮುಖ ಆಸ್ತಿಯೆಂದರೆ ನವದೆಹಲಿ ಟೈಮ್ಸ್‌ ಮತ್ತು International Institute for Non-Aligned Studies ಥಿಂಕ್‌ಟ್ಯಾಂಕ್.

ಅಕ್ಟೋಬರ್‌ 30ರಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅನಧಿಕೃತ ಯೂರೋಪಿಯನ್‌ ನಿಯೋಗದ 23 ಸದಸ್ಯರ ತಂಡಕ್ಕೆ ಪ್ರಾಯೋಜಕತ್ವ ( sponsor) ನೀಡಿದ್ದೇ ಈ ಥಿಂಕ್‌ಥ್ಯಾಂಕ್‌. ನಿಯೋಗ ಭೇಟಿಯ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟಿದ್ದು ಅಂತಾರಾಷ್ಟ್ರೀಯ ವ್ಯಾಪಾರ ದಲ್ಲಾಳಿ ಮದಿ ಶರ್ಮಾ.

ಇಪಿ ಟುಡೇ ಆನ್ಲೈನ್ ಪತ್ರಿಕೆಯ ಬೆನ್ನುಬಿದ್ದಿದ್ದ ಡಿಸ್-ಇನ್ಫೋಲ್ಯಾಬ್ ಸಂಸ್ಥೆಗೆ ಕೆಲ ದಿನಗಳಿಂದ ಇಪಿ ಟುಡೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳೇ  `ಟೈಮ್ಸ್‌ ಆಫ್‌ ಜಿನಿವಾ’ ಎಂಬ ಮತ್ತೊಂದು ಆನ್‌ಲೈನ್‌ ಪತ್ರಿಕೆಯಲ್ಲೂ ಮರು ಪ್ರಕಟವಾಗುತ್ತಿರೋದು ಗಮನಕ್ಕೆ ಬಂದಿತ್ತು. ಶೋಧಿಸಿ ನೋಡಿದಾಗ ಈ ಟೈಮ್ಸ್ ಆಫ್ ಜಿನೇವಾ ಕೂಡಾ ಇದೇ ಜಾಲದ ಭಾಗವೆಂಬುದು ಪತ್ತೆಯಾಗಿದೆ. ‘ವೆಬ್ಸೈಟಿನ ನೋಂದಣಿ ವಿಳಾಸ, ಇಮೇಲ್ ವಿಳಾಸ, ಇಂಟರ್ನೆಟ್ ಡೊಮೈನ್ ಗಳನ್ನು ಪರಿಶೀಲಿಸಿದಾಗ ಇವುಗಳ ಹಿಂದೆ ಎರಡು ಪ್ರಭಾವಿ ಜಾಲಗಳು ಇರುವುದು ತಿಳಿದು ಬಂದಿದೆ’ ಎಂದು ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

 

ಇಪಿ ಟುಡೇ ಮತ್ತು ಟೈಮ್ಸ್‌ ಆಫ್‌ ಜಿನಿವಾ ಸುದ್ದಿ ಸಂಸ್ಥೆಗಳು ಸುದ್ದಿ ಮೂಲಕ್ಕಾಗಿ ಯಾವುದನ್ನು ಅವಲಂಬಿಸಿವೆ ಎಂದು ಹುಡುಕಿ ಹೊರಟರೆ 4newsagency.com  ಎಂಬ ನ್ಯೂಸ್ ಏಜೆನ್ಸಿ ಬೆಳಕಿಗೆ ಬರುತ್ತದೆ. ತಾನೇ ಹೇಳಿಕೊಂಡಿರುವಂತೆ ಇದೊಂದು independent not-for-profit news cooperative ಸಂಸ್ಥೆ. ಇದರ ಪ್ರಧಾನ ಕಚೇರಿ ಸ್ವಿಡ್ಜ್‌ರ್ಲ್ಯಾಂಡ್‌ನಲ್ಲಿದೆ. ಈ ಸುದ್ದಿ ಸಂಸ್ಥೆ ಪ್ರಕಟಿಸಿರುವ ಎಲ್ಲಾ ಟ್ವೀಟ್‌, ಯೂ ಟ್ಯೂಬ್‌ ವಿಡಿಯೋಗಳು, ಸುದ್ದಿಗಳು, ಪ್ರಮುಖ ವಿಷಯಗಳು ಕೇವಲ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿಗತಿ ಮತ್ತು ಪಾಕ್‌ ವಿರೋಧಿ ಚಟುವಟಿಕೆಗಳಿಗೇ ಸಂಬಂಧಿಸಿದ್ದಾಗಿವೆ!

ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖೆಯಿಂದ ಈ ತೀರ್ಮಾನಕ್ಕೆ ಬರಬಹುದು. ವಿಶ್ವಸಂಸ್ಥೆಯಾಗಲಿ, ಯುರೋಪ್ ಒಕ್ಕೂಟದ ಸಂಸತ್ತಾಗಲಿ ಅಥವಾ ಭಾರತ ಸರ್ಕಾರವಾಗಲಿ ಅಧಿಕೃತವಾಗಿ ಪ್ರಾಯೋಜಿಸದ; ಕೇವಲ `ಬಲಪಂಥೀಯ’ ವಿಚಾರಧಾರೆಯ ಚುನಾಯಿತ ಪ್ರತಿನಿಧಿಗಳನ್ನಷ್ಟೇ ಒಳಗೊಂಡಿದ್ದ ನಿಯೋಗವೊಂದರ ಭೇಟಿಯನ್ನು ಆಯೋಜಿಸಿದ್ದು International Institute for Non-Aligned Studies ಎಂಬ ಥಿಂಕ್‌ಟ್ಯಾಂಕ್. ಈ ಥಿಂಕ್‌ಟ್ಯಾಂಕ್ ಸಂಸ್ಥೆಗೆ ಫಂಡ್ ಮಾಡುತ್ತಿರೋದು ಶ್ರೀವಾಸ್ತವ್‌ ಗ್ರೂಪ್‌. ಇದೇ ಗ್ರೂಪಿನ ಪ್ರಧಾನ ಸ್ಟೇಕ್ ಹೋಲ್ಡರುಗಳು `ಇಪಿ ಟುಡೇ’ ಎಂಬ ಅಂತರ್ಜಾಲ ಪತ್ರಿಕೆಗೂ ಫಂಡ್ ಮಾಡುತ್ತಿದೆ. ಈ ಪತ್ರಿಕೆ ಒಂದು ನಿರ್ದಿಷ್ಟ ಐಡಿಯಾಲಜಿಕಲ್ ಅಜೆಂಡಾ ಇಟ್ಟುಕೊಂಡ ಸುದ್ದಿಗಳನ್ನಷ್ಟೇ ಪ್ರಕಟಿಸುತ್ತಿದೆ. ಇದೇ ಇಪಿ ಟುಡೇ ಪತ್ರಿಕೆಯ ಸರ್ವರ್ ನಲ್ಲೇ ಸುಮಾರು 265 ವೆಬ್ಸೈಟ್ಗಳು 65 ದೇಶಗಳಲ್ಲಿ ವ್ಯಾಪಿಸಿವೆ. ಹೆಚ್ಚೂ ಕಮ್ಮಿ ಇವೆಲ್ಲವೂ ಒಂದೇ ತೆರನಾದ ಸುದ್ದಿಯನ್ನು ಬಿತ್ತರಿಸುತ್ತಿವೆ, ಮತ್ತು ಅವೇ ಲೇಖನಗಳು ಮರು ಪ್ರಕಟವಾಗುತ್ತಿವೆ. ಅವುಗಳಲ್ಲಿ ಫೇಕ್ ನ್ಯೂಸ್ ಗಳೂ ಇರುತ್ತವೆ. ಜಾಗತಿಕ ಮಟ್ಟದಲ್ಲಿ ಹರಿದಾಡುವ ಇಂಥಾ ನ್ಯೂಸ್ ಗಳಿಂದ ಭಾರತದ ಪ್ರಧಾನಿ ಮೋದಿಯವರಿಗೆ ವಿದೇಶಿ ನೆಲದಲ್ಲಿ ಪ್ರಚಾರ ಸಿಗುತ್ತಾ ಬಂದಿದೆ. ಕಾಶ್ಮೀರಕ್ಕೆ ಭೇಟಿ ನೀಡಿದ್ದ ಯುರೋಪಿಯನ್ ಒಕ್ಕೂಟದ ನಿಯೋಗದಿಂದಲೂ ಅನುಕೂಲ ಆದದ್ದು ಮೋದಿಯವರಿಗೆ. ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ರದ್ದು ಪಡಿಸುವಾಗ ಅಲ್ಲಿನ ಜನರಿಗೆ ಮೊಬೈಲ್ ನೆಟ್ವರ್ಕ್, ಇಂಟರ್ನೆಟ್ ಗಳು ಕೂಡಾ ಲಭಿಸದಂತೆ ನಿರ್ಬಂಧ ಹೇರಿ, ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದ ಮೋದಿ ಸರ್ಕಾರದ ವಿರುದ್ಧ ಜಾಗತಿಕ ವೇದಿಕೆಗಳಲ್ಲಿ ಮಾನವಹಕ್ಕು ಉಲ್ಲಂಘನೆಯ ಮಾತುಗಳು ಕೇಳಿಬಂದಿದ್ದವು. ಆ ಆರೋಪದಿಂದ ಮೋದಿಯವರನ್ನು ವಿಮುಕ್ತಿಗೊಳಿಸಲೆಂದೇ ಈ ಪ್ರಚಾರ ಜಾಲಗಳು ಈ ವ್ಯವಸ್ಥಿತ ಭೇಟಿಯನ್ನು ಆಯೋಜಿಸಿದ್ದವೇ ಎಂಬ ಅನುಮಾನ  ಡಿಸ್-ಇನ್ಫೋಲ್ಯಾಬ್ ಸಂಸ್ಥೆಯ ತನಿಖಾ ವರದಿಯಿಂದ ದಟ್ಟವಾಗುತ್ತಿದೆ.

ಕೃಪೆ: ಸ್ಕ್ರಾಲ್‌.ಇನ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...

ಅಯೋಧ್ಯೆ ದೇಣಿಗೆ ಹಗರಣ: ಕೇವಲ 45 ದಿನಗಳಲ್ಲಿ 70 ಬಾರಿ ಕಳ್ಳತನ, SIT ವರದಿ

ಅಯೋಧ್ಯೆಯ ರಾಮಮಂದಿರಕ್ಕೆ ಬಂದ ಸಾರ್ವಜನಿಕರ ದೇಣಿಗೆ ದುರುಪಯೋಗದ ಆರೋಪದ ಕುರಿತು ವಿಶೇಷ ತನಿಖಾ ತಂಡ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕೇವಲ 45 ದಿನಗಳಲ್ಲಿ ಸುಮಾರು 70 ಸಂಶಯಾಸ್ಪದ ಕಳ್ಳತನಗಳು ನಡೆದಿರುವುದಕ್ಕೆ ಪ್ರಾಥಮಿಕ...

ಬರುಯಿಪುರ ಅತ್ಯಾಚಾರ-ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಎನ್‌ಕೌಂಟರ್; ‘ನನ್ನ ಮಗನ ಶವ ನನಗೆ ಬೇಡ’ ಎಂದ ಹೆತ್ತ ತಾಯಿ!

ಬರುಯಿಪುರ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬರುಯಿಪುರದಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಭಾಸ್ ಮೊಂಡೋಲ್ ಬುಧವಾರ...

ವಯನಾಡ್ ಭೂಕುಸಿತ: ಕಾಣೆಯಾದ ಐವರಿಗಾಗಿ ಮುಂದುವರೆದ ಹುಡುಕಾಟ

ಬೆಟ್ಟದ ಜಿಲ್ಲೆಯ ವಯನಾಡ್‌ನಲ್ಲಿ ನಡೆಯುತ್ತಿರುವ ಸುರಂಗ ರಸ್ತೆ ನಿರ್ಮಾಣ ಸ್ಥಳದಲ್ಲಿ ಭೂಕುಸಿತ ಸಂಭವಿಸಿ ಮೂರು ಜೀವಗಳು ಬಲಿಯಾದ ಒಂದು ದಿನದ ನಂತರ, ಕಾಣೆಯಾಗಿರುವ ಐವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ವಯನಾಡ್...

ನನ್ನನ್ನು ಕೊಂಡುಕೊಳ್ಳಲು ಯಾರ ಕೈಲೂ ಸಾಧ್ಯವಿಲ್ಲ: ಮಹುವಾ ಮೋಯಿತ್ರಾ ವಿಶೇಷ ಸಂದರ್ಶನ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಯಭೇರಿ ಬಾರಿಸಿದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಧೂಳೀಪಟವಾಗಿದೆ. ಚುನಾವಣಾ ಸೋಲಿನ ನಂತರ ಸಾಲು...

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...