Homeಕರ್ನಾಟಕಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-4

ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-4

- Advertisement -
- Advertisement -

ಲಾಜಿಸ್ಟಿಕ್ಸ್

66) ಗುರಿ: ಲಾಜಿಸ್ಟಿಕ್ಸ್ ಮೇಲಿನ ವೆಚ್ಚವನ್ನು ಹಾಲೀ ಇರುವ, GDPಯ 14%ನಿಂದ ತಗ್ಗಿಸಿ 10%ಗೆ ಇಳಿಸುವುದು.
ಸಾಧನೆ: 2020 ಡಿಸೆಂಬರಿನಲ್ಲಿ ಬಂದ CII ವರದಿ, ಭಾರತದ ಲಾಜಿಸ್ಟಿಕ್ಸ್ ಮೇಲಿನ ವೆಚ್ಚ ಇನ್ನೂ GDPಯ 14% ಇದೆ ಎಂದಿದೆ. ಈ ಪರೋಕ್ಷ ವೆಚ್ಚವನ್ನು 8-10%ಗೆ ಇಳಿಸಬೇಕು ಎಂದು ಹೇಳಿದೆ.

67) ಗುರಿ: ವಿವಿಧ ಸಾರಿಗೆ ವಿಧಾನಗಳನ್ನು ಒಂದು ಐಟಿ ಎನೇಬಲ್ಡ್ ಫ್ಲಾಟ್ಫಾರಂನಲ್ಲಿ ಜೋಡಿಸುವುದು.
ಸಾಧನೆ: ಲಾಜಿಸಿಕ್ಸ್‌ಅನ್ನು ಪರಿಣಾಮಕಾರಿಗೊಳಿಸುವುದಕ್ಕಾಗಿ, ಸರ್ಕಾರ 2021 ಜುಲೈ 28ರಂದು “Secured Logistics Document Exchange”ಗೆ ಚಾಲನೆ ನೀಡಿದೆ.

68) ಗುರಿ: ವಿವಿಧ ಸಾರಿಗೆ ವಿಧಾನಗಳ ದರಗಳನ್ನು ತರ್ಕಬದ್ಧಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು.
ಸಾಧನೆ: ರೈಲ್ವೇ, ವಿಮಾನ ಸಾರಿಗೆ, ಜಲಸಾರಿಗೆಗೆ ಸಂಬಂಧಿಸಿ ದರಗಳನ್ನು ತರ್ಕಬದ್ಧಗೊಳಿಸುವ ಕೆಲಸಗಳು ಆರಂಭಗೊಂಡಿವೆ. ಖಚಿತವಾದ ಸಮಗ್ರ ವ್ಯವಸ್ಥೆಯೊಂದು ಇನ್ನಷ್ಟೇ ರೂಪುಗೊಳ್ಳಬೇಕಿದೆ.

69) ಗುರಿ: ಎಲ್ಲ ಸಾರಿಗೆ ಡೇಟಾಗಳನ್ನು ಒಳಗೊಂಡಿರುವ ಸಮಗ್ರ ರೆಪಾಸಿಟರಿ ಒಂದನ್ನು ರೂಪಿಸುವುದು.
ಸಾಧನೆ: 2017ರಲ್ಲಿ ಕೇಂದ್ರ ಸರ್ಕಾರ mParivahan ರೆಪಾಸಿಟರಿಯನ್ನು ರೂಪಿಸಿದ್ದು, ಅಲ್ಲಿ 28 ಕೋಟಿ ವಾಹನಗಳ ದಾಖಲೆಗಳು, 17 ಕೋಟಿ ಲೈಸನ್ಸ್ ದಾಖಲೆಗಳು ಲಭ್ಯವಿವೆ.

ಡಿಜಿಟಲ್ ಕನೆಕ್ಟಿವಿಟಿ

70) ಗುರಿ: ರಾಜ್ಯಗಳನ್ನು ಮತ್ತು ಜಿಲ್ಲೆಗಳನ್ನು ಡಿಜಿಟಲ್ ಸಂಪರ್ಕ ಜಾಲದೊಳಗೆ ತರುವುದು ಮತ್ತು ಸರ್ಕಾರಿ ಸೇವೆಗಳನ್ನು ಡಿಜಿಟಲ್ ಆಗಿ ಒದಗಿಸುವುದು.
ಸಾಧನೆ: ಹಿಂದಿನ ಸರ್ಕಾರದ ಕಾಲದಿಂದಲೂ (2011) ನಡೆಯುತ್ತಲೇ ಇರುವ ಭಾರತ್‌ನೆಟ್ ಯೋಜನೆಯನ್ನು ಹಾಲೀ ಸರ್ಕಾರ ಪರಿಷ್ಕರಿಸಿ, 2017ರಲ್ಲಿ ಅನುಮೋದನೆ ನೀಡಿತ್ತು. 2019ರೊಳಗೆ ಎರಡೂವರೆ ಲಕ್ಷ ಗ್ರಾಮಪಂಚಾಯತ್‌ಗಳನ್ನು ಈ ಕೇಬಲ್ ಜಾಲದೊಳಗೆ ತರುವ ಗುರಿ ಇತ್ತು ಮತ್ತು ಒಂದು ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಬೇಕಿತ್ತು.

ಆದರೆ, 18.6.2021ರ ಹೊತ್ತಿಗೆ ಕೇವಲ 1,73,079 ಗ್ರಾಮ ಪಂಚಾಯತ್‌ಗಳು ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕಿತವಾಗಿವೆ ಮತ್ತು 1,60,076 ಗ್ರಾಮ ಪಂಚಾಯತ್‌ಗಳು ಬ್ರಾಡ್‌ಬ್ಯಾಂಡ್ ಸಂಪರ್ಕ ಹೊಂದಿವೆ. (ಮಾಹಿತಿ ಮೂಲ bbnl.nic.in)

71) ಗುರಿ: ಸ್ಪೆಕ್ಟ್ರಂ ಹಂಚಿಕೆಯನ್ನು ಪರಿಣಾಮಕಾರಿಯಾಗಿ ಮಾಡುವುದು.
ಸಾಧನೆ: ಸ್ಪೆಕ್ಟ್ರಂ ಹಂಚಿಕೆಯನ್ನು ಪರಿಣಾಮಕಾರಿಗೊಳಿಸಲು ಕೇಂದ್ರ ಸರ್ಕಾರ 2020ರ ಅಕ್ಟೋಬರ್ ತಿಂಗಳಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ. ಅದು ಮುಂದಿನ ಹತ್ತು ವರ್ಷಗಳಿಗಾಗಿ ಕಾರ್ಯತಂತ್ರವೊಂದನ್ನು ಸಿದ್ಧಪಡಿಸಲಿದೆ.

72) ಗುರಿ: ಕಾಲ್ ಡ್ರಾಪ್ ಮತ್ತು ದುರ್ಬಲ ಸಿಗ್ನಲ್‌ಗಳನ್ನು ಗುರುತಿಸಲು ವಿಶ್ವಾಸಾರ್ಹ ವ್ಯವಸ್ಥೆಯನ್ನು ರೂಪಿಸುವುದು.
ಸಾಧನೆ: ಈ ನಿಟ್ಟಿನಲ್ಲಿ ಯಾವುದೇ ಕ್ರಮ ಆದಂತಿಲ್ಲ.

73) ಗುರಿ: ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್ ಮೂಲಕ ಪ್ರಾಥಮಿಕ ಶಾಲಾ ಮಟ್ಟದಲ್ಲೇ ಡಿಜಿಟಲ್ ಸಾಕ್ಷರತೆ ಒದಗಿಸುವುದು.
ಸಾಧನೆ: ಹೊಸ ಶಿಕ್ಷಣ ನೀತಿ 2020ಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಅದರಲ್ಲಿ ಪ್ರಾಥಮಿಕ ಶಾಲಾ ಮಟ್ಟದಲ್ಲೇ ಡಿಜಿಟಲ್ ಸಾಕ್ಷರತೆ ಬಗ್ಗೆ ಹೇಳಲಾಗಿದೆ.

ಸ್ಮಾರ್ಟ್ ಸಿಟಿ

74) ಗುರಿ: ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಸೇವೆಗಳನ್ನು ಒದಗಿಸುವಿಕೆಯಲ್ಲಿ ಪರಿಣಾಮಕಾರಿ ಸುಧಾರಣೆಗಳು.
ಸಾಧನೆ: 2016-2018ನೇ ಸಾಲಿನ ನಡುವೆ ದೇಶದಲ್ಲಿ 100 ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ರೂಪಿಸಲು ಆಯ್ಕೆ ಮಾಡಲಾಗಿದ್ದು, 30 ಜೂನ್ 2021ರ ಹೊತ್ತಿಗೆ 5956 ಯೋಜನೆಗಳನ್ನು, 1,79,413 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರೂಪಿಸಲಾಗಿದೆ. ಅವುಗಳಲ್ಲಿ ಮೊದಲ ಸುತ್ತು ಮುಗಿಯುವಾಗ, ಆ ಸುತ್ತಿಗೆ ಆಯ್ಕೆ ಆಗಿದ್ದ 1794 ಯೋಜನೆಗಳಲ್ಲಿ, 1667 ಯೋಜನೆಗಳು ಪೂರ್ಣಗೊಂಡಿವೆ. ಈ ಕಾಮಗಾರಿಗಳಿಂದ 2.46 ಕೋಟಿ ಉದ್ಯೋಗ ಸೃಷ್ಟಿ ಆಗಿದೆ, ಆರ್ಥಿಕತೆ ಸುಧಾರಣೆ ಆಗಿದೆ, ಸರ್ಕಾರಿ ಸೌಕರ್ಯಗಳು ದೊರೆತು ಸೇವೆಗಳು ಸುಧಾರಣೆ ಆಗಿವೆ ಎಂದು ಸರ್ಕಾರ ಹೇಳಿದೆ. (ಮಾಹಿತಿ ಮೂಲ: PIB)

75) ಗುರಿ: ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಮಹಾನಗರಗಳಲ್ಲಿ ಮಹಾನಗರ ಸಾರಿಗೆ ಪ್ರಾಧಿಕಾರಗಳನ್ನು ಸ್ಥಾಪಿಸುವುದು.
ಸಾಧನೆ: ರಾಷ್ಟ್ರೀಯ ನಗರ ಸಾರಿಗೆ ನೀತಿ (NUTP) 2006ರಲ್ಲೇ ಜಾರಿಗೆ ಬಂದಿದ್ದು, ಅದನ್ನು 2014ರ ವೇಳೆ ಪರಿಷ್ಕರಿಸಲಾಗಿದೆ ಮತ್ತು ಕೆಲವು ನಗರಗಳಲ್ಲಿ ಈಗಾಗಲೇ ಸಂಯುಕ್ತ ಮೆಟ್ರೊಪಾಲಿಟನ್ ಸಾರಿಗೆ ಪ್ರಾಧಿಕಾರ (UMTA) ಮತ್ತು ನಗರ ಸಾರಿಗೆ ನಿಧಿಗಳು (UTF) ಸ್ಥಾಪಿತವಾಗಿವೆ.

76) ಗುರಿ: ನಗರಗಳ ಬಡವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿಂಗಲ್ ವಿಂಡೋ ಸೌಲಭ್ಯ.
ಸಾಧನೆ: 2018ರ ಹೊತ್ತಿಗೆ ದಿಲ್ಲಿ ಮತ್ತು ಮುಂಬಯಿಯಲ್ಲಿ ನಿರ್ಮಾಣ ಅನುಮತಿಗಳಿಗೆ ಸಿಂಗಲ್ ವಿಂಡೋ ವ್ಯವಸ್ಥೆ ಆಗಿರುವುದು ಬಿಟ್ಟರೆ ಬೇರೆ ಬೆಳವಣಿಗೆಗಳು ಆದಂತಿಲ್ಲ.

77) ಗುರಿ: ಸಹನಶೀಲ ನಗರಗಳನ್ನು ಮುಖ್ಯವಾಹಿನಿಗೆ ತಂದು, ಅಲ್ಲಿನ ಸೇವಾಮಟ್ಟಗಳ ಸುಧಾರಣೆ.
ಸಾಧನೆ: ಮುಖ್ಯವಾಹಿನಿಗೆ ಬರುವ ನಗರಗಳಲ್ಲಿ ಬಡತನ, ಹಸಿವು, ಆರೋಗ್ಯ, ಸಾಕ್ಷರತೆ, ಲಿಂಗ ಸಮಾನತೆ, ಶುದ್ಧ ನೀರು, ಇಂಧನ, ಆರ್ಥಿಕ ಬೆಳವಣಿಗೆ, ಮೂಲ ಸೌಕರ್ಯ, ಸಮಾನತೆ, ಸುಸ್ಥಿರ ಸಮುದಾಯಗಳು, ಪರಿಸರ ಮತ್ತಿತರ 17 ಗುರಿಗಳಿರುವ ಮತ್ತು 308 ಸೂಚ್ಯಂಕಗಳುಳ್ಳ ರಾಷ್ಟ್ರೀಯ ನಿಗಾ ಚೌಕಟ್ಟನ್ನು (ನ್ಯಾಷನಲ್ ಇಂಡಿಕೇಟರ್ ಫ್ರೇಂವರ್ಕ್) ಸರಕಾರ ರೂಪಿಸಿದೆ. (ಮಾಹಿತಿ ಮೂಲ mospi.nic.in)

ಸ್ವಚ್ಛ ಭಾರತ್ ಮಿಷನ್

78) ಗುರಿ: ದೇಶವನ್ನು ಬಯಲು ಶೌಚ ಮುಕ್ತಗೊಳಿಸಿ, ಶುಚಿತ್ವ ಮತ್ತು ವೈಯಕ್ತಿಕ ಶುಚಿತ್ವಗಳಿಗೆ ಆದ್ಯತೆ ನೀಡುವುದು.
ಸಾಧನೆ: ದೇಶದ ಒಟ್ಟು 718 ಜಿಲ್ಲೆಗಳಲ್ಲಿ ಇಂದು 711 ಜಿಲ್ಲೆಗಳು ಬಯಲು ಶೌಚಾಲಯ ಮುಕ್ತವೆಂದು ಘೋಷಿತವಾಗಿವೆ. 2014ರಲ್ಲಿ 38.7% ಇದ್ದ ಮನೆಗಳಲ್ಲಿನ ವೈಯಕ್ತಿಕ ಶೌಚಾಲಯಗಳ ಸಂಖ್ಯೆ 2019-20ರ ಹೊತ್ತಿಗೆ 100% ಸಾಧನೆ ಮಾಡಿವೆ. (ಮಾಹಿತಿ ಮೂಲ: ಸ್ವಚ್ಛಭಾರತ್ ಮಿಷನ್)

79) ಗುರಿ: ಸಂವಹನ ಮತ್ತು ವ್ಯಕ್ತಿಗತ ಪ್ರಯತ್ನಗಳ ಮೂಲಕ ಜನರ ವರ್ತನೆಯಲ್ಲಿ ಬದಲಾವಣೆ ತರುವುದು.
ಸಾಧನೆ: ಜನರ ವರ್ತನೆಗಳಲ್ಲಿ ಬದಲಾವಣೆ ಪ್ರೇರೇಪಿಸಲು ಸ್ವಚ್ಛ ಭಾರತ್ ಯೋಜನೆಯಡಿ ಶಿಕ್ಷಣ ಮತ್ತು ಸಂವಹನಗಳಿಗೆ ಈತನಕ ಮಾಡಲಾಗಿರುವ ವೆಚ್ಚ:

(ಮಾಹಿತಿ ಮೂಲ: ಬ್ಯುಸಿನೆಸ್ ಸ್ಟಾಂಡರ್ಡ್)

80) ಗುರಿ: ಜೈವಿಕ-ಶೌಚಾಲಯಗಳಿಗೆ GST ರಿಯಾಯಿತಿ.
ಸಾಧನೆ: 2021ರ ಬಜೆಟ್‌ನಲ್ಲಿ ಬಯೊ-ಟಾಯ್ಲೆಟ್‌ಗಳನ್ನು GST ಮುಕ್ತಗೊಳಿಸಲಾಗಿದೆ.

81) ಗುರಿ: ಕಸ ವಿಲೇವಾರಿ ಮತ್ತು ಶೌಚಾಲಯ ನಿರ್ವಹಣೆಗೆ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರೇರೇಪಿಸುವುದು.
ಸಾಧನೆ: ದೇಶದಾದ್ಯಂತ ನಗರ ಸ್ಥಳೀಯಾಡಳಿತಗಳು ಕಸ ವಿಲೇವಾರಿ ಮತ್ತು ಶೌಚಾಲಯ ನಿರ್ವಣೆಗಳ ಬಳಕೆದಾರ ವೆಚ್ಚ ವಸೂಲಿ ಈಗಾಗಲೇ ಆರಂಭಿಸಿವೆ.

ಶಾಲಾ ಶಿಕ್ಷಣ

82) ಗುರಿ: ಪ್ರತಿಯೊಬ್ಬರಿಗೂ ಸಾರ್ವತ್ರಿಕ ಶಿಕ್ಷಣ, ಕಲಿಕೆಗೆ ಬಂದ ವಿದ್ಯಾರ್ಥಿಗಳ ಮುಂದುವರಿಕೆ; ಶಿಕ್ಷಣ ಫಲಿತಾಂಶಗಳಲ್ಲಿ ಸುಧಾರಣೆ
ಸಾಧನೆ: GER (ಗ್ರಾಸ್ ಎನ್‌ರೋಲ್‌ಮೆಂಟ್ ರೇಶಿಯೋ) 100% ಆಗುವ ಗೋಲ್‌ಪೋಸ್ಟ್‌ಅನ್ನು ಹೊಸ ಶಿಕ್ಷಣ ನೀತಿ 2030ಗೆ ಮುಂದೂಡಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ನೋಂದಣಿ ಅನುಪಾತ (GER) ಮತ್ತು ಪ್ರಾಥಮಿಕ ಹಂತದಲ್ಲೇ ಶಾಲೆ ಬಿಡುವವರ ಅನುಪಾತ ಈ ಕೆಳಗಿನಂತಿದೆ.

(ಮಾಹಿತಿ ಮೂಲ: DISE, MHRD and ESAG-2018)

83) ಗುರಿ: ಶಿಕ್ಷಕರ ಅರ್ಹತೆ, ಕೆಲಸಗಳ್ಳತನಗಳನ್ನು ನಿಯಂತ್ರಿಸಲು ಕ್ರಮಗಳು.
ಸಾಧನೆ: 2016ರಲ್ಲಿ ಅಝೀಂ ಪ್ರೇಮ್‌ಜಿ ವಿವಿ ನಡೆಸಿದ TAS ಸಮೀಕ್ಷಾ ವರದಿಯಲ್ಲಿ ಪ್ರಾಥಮಿಕ
ಶಿಕ್ಷಣಕ್ಕೆ 22.1% ಶಿಕ್ಷಕರು ಲಭ್ಯರಿಲ್ಲ ಎಂದು ಹೇಳಿದೆ. ಶಿಕ್ಷಕರ ಕೊರತೆ ನೀಗಲು ಕೇಂದ್ರ ಸರ್ಕಾರ ರಾಜಸ್ಥಾನ ಮಾದರಿಯನ್ನು ಸೂಚಿಸಿದ್ದು, ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಜೋಡಿಸಿ ಒಂದೇ ಶಾಲೆ ಮಾಡಲು ಸೂಚಿಸಿದೆ.

84) ಗುರಿ: ಸರ್ಕಾರಿ ಶಾಲೆಗಳ ಸಂರಚನೆಯನ್ನು ತರ್ಕಬದ್ಧಗೊಳಿಸುವುದು, ವೈಯಕ್ತೀಕರಿಸಲಾದ ಟ್ರ್ಯಾಕಿಂಗ್.
ಸಾಧನೆ: ಜುಲೈ 2020ರಲ್ಲಿ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿಗೆ ಅನುಮೋದನೆ ನೀಡಿದ್ದು, ಅದು ಶಾಲೆ ಬಿಟ್ಟಿರುವ ಎರಡು ಕೋಟಿ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಬಗ್ಗೆ, National Curricular and Pedagogical Framework for Early Childhood Care and Education (NCPFECCE) ಬಗ್ಗೆ, National Mission on Foundational Literacy and Numeracy ಬಗ್ಗೆ, National Curricular Framework for School Education ಬಗ್ಗೆ, ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಟ್ರ್ಯಾಕಿಂಗ್ ಬಗ್ಗೆ ಹೇಳುತ್ತಿದೆ. (ಮಾಹಿತಿ ಮೂಲ: PIB)

85) ಗುರಿ: ವೃತ್ತಿಪರ ಕೋರ್ಸ್‌ಗಳಿಗೆ ಹೊರಳಿಕೊಳ್ಳಲು ಮಕ್ಕಳಿಗೆ ಅವಕಾಶ ಕಲ್ಪಿಸುವುದು.
ಸಾಧನೆ: ಹೊಸ ಶಿಕ್ಷಣ ನೀತಿ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗಳಿಗೆ ಹೊರಳಿಕೊಳ್ಳುವ ಅವಕಾಶವನ್ನು ಕೊಟ್ಟಿದೆ.

ಉನ್ನತ ಶಿಕ್ಷಣ

86) ಗುರಿ: ಉನ್ನತ ಶಿಕ್ಷಣಕ್ಕೆ ನೋಂದಣಿ ಅನುಪಾತವನ್ನು (GER) 35%ಗೆ ಏರಿಸುವುದು
ಸಾಧನೆ: ಉನ್ನತ ಶಿಕ್ಷಣದಲ್ಲಿ GERಅನ್ನು 50% ಏರಿಸುವುದಕ್ಕೆ ಗೋಲ್‌ಪೋಸ್ಟ್‌ಅನ್ನು 2035ಕ್ಕೆ ಮುಂದೂಡಲಾಗಿದೆ. ಉನ್ನತ ಶಿಕ್ಷಣದಲ್ಲಿ ನೋಂದಣಿ ಅನುಪಾತ (GER) ಮತ್ತು ಶಿಕ್ಷಣ ಕೈಬಿಡುವವರ ಅನುಪಾತ ಈ ಕೆಳಗಿನಂತಿದೆ.

(ಮಾಹಿತಿ ಮೂಲ: DISE, MHRD and ESAG-2018)

87) ಗುರಿ: ಉನ್ನತ ಶಿಕ್ಷಣದ ನಿಯಂತ್ರಕ ವ್ಯವಸ್ಥೆಗಳ ನಡುವೆ ಪರಿಣಾಮಕಾರಿ ಹೊಂದಾಣಿಕೆ.
ಸಾಧನೆ: ಉನ್ನತ ಶಿಕ್ಷಣಗಳ ನಿಯಂತ್ರಕ ವ್ಯವಸ್ಥೆಗಳ ನಡುವೆ ಹೊಂದಾಣಿಕೆಗಾಗಿ Higher Education Commission of India(HECI) ಎಂಬ ವಿಸ್ತಾರವಾದ ಸಂಸ್ಥೆಯೊಂದನ್ನು ರೂಪಿಸುವುದಾಗಿ ಹೊಸ ಶಿಕ್ಷಣ ನೀತಿ ಹೇಳಿದೆ. ಅದರಲ್ಲಿ ನಿಯಂತ್ರಣಕ್ಕಾಗಿ National Higher Education Regulatory Council (NHERC), ಗುಣಮಟ್ಟ ನಿಯಂತ್ರಣಕ್ಕಾಗಿ General Education Council (GEC), ಆರ್ಥಿಕ ಬೆಂಬಲಕ್ಕಾಗಿ Higher Education Grants Council (HEGC) ಮತ್ತು ಮಾನ್ಯತೆಗಳಿಗಾಗಿ National Accreditation Council (NAC) ಎಂಬ ನಾಲ್ಕು ಘಟಕಗಳಿರುತ್ತವೆ ಎಂದು ನೀತಿ ಹೇಳಿದೆ (ಮಾಹಿತಿ ಮೂಲ: PIB)

88) ಗುರಿ: ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಡ್ಡಾಯ ಮಾನ್ಯತಾ ವ್ಯವಸ್ಥೆ
ಸಾಧನೆ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ಯು 2013ರಲ್ಲೇ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ಪ್ರಕ್ರಿಯೆ ಕಡ್ಡಾಯ ಎಂದು ವಿಧಿಸಿದೆ.

89) ಗುರಿ: MHRD ಮತ್ತು ಉನ್ನತ ಶಿಕ್ಷಣ ಫಂಡಿಂಗ್ ಏಜನ್ಸಿಗಳ ಮೂಲಕ ಫಲಿತಾಂಶ ಆಧರಿತ ಧನಸಹಾಯಕ್ಕೆ ವ್ಯವಸ್ಥೆ ಮಾಡುವುದು.
ಸಾಧನೆ: ಉನ್ನತ ಶಿಕ್ಷಣಕ್ಕೆ ಫಲಿತಾಂಶ ಆಧರಿತ ಧನಸಹಾಯ ವ್ಯವಸ್ಥೆಯನ್ನು ರೂಪಿಸಲು ನೀತಿ ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ನೀತಿ ಆಯೋಗ ಅದಕ್ಕಾಗಿ ಕಾರ್ಯತಂತ್ರ ಯೋಜನೆಯೊಂದನ್ನು ರೂಪಿಸಲಿದೆ. (ಮಾಹಿತಿ ಮೂಲ: ದಿ ಎಕನಾಮಿಕ್ ಟೈಮ್ಸ್ 03.03.2021)

ಶಿಕ್ಷಕ ಶಿಕ್ಷಣ ಮತ್ತು ತರಬೇತಿ

90) ಗುರಿ: ಕನಿಷ್ಠ ಗುಣಮಟ್ಟ ನಿಗದಿ ಮಾಡಿ, ಸೇವಾ ತರಬೇತಿಯಲ್ಲಿ ಸುಧಾರಣೆ ಮತ್ತು ಶಿಕ್ಷಕರ ಕೊರತೆ ನಿವಾರಣೆ.
ಸಾಧನೆ: National Council for Teacher Education (Amendment) Bill, 2019ನ್ನು ಸಂಸತ್ತು ಅಂಗೀಕರಿಸಿದ್ದು, NCTE ಮಾನ್ಯತೆ ನೀಡದಿರುವ ಶಿಕ್ಷಕ ತರಬೇತಿ ಸಂಸ್ಥೆಗಳಿಗೆ ರೆಟ್ರೊಸ್ಪೆಕ್ಟಿವ್ ಆಗಿ ಮಾನ್ಯತೆ ನೀಡಲಾಗಿದೆ.

91) ಗುರಿ: ಸಂಸ್ಥೆಗಳನ್ನು ಗುರುತಿಸಲು ಉದ್ದೇಶಗಳನ್ನು ರೂಪಿಸುವುದಕ್ಕೆ ಒಂದು ಸಮಿತಿ ರಚನೆ
ಸಾಧನೆ: ಶಿಕ್ಷಕರ ಗುರುತಿಸುವಿಕೆ, ಗುಣಮಟ್ಟದ ಶಿಕ್ಷಣ, ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ, ಶಿಕ್ಷಕರ ಸುಧಾರಣೆಗಾಗಿ ವ್ಯವಸ್ಥೆಯೊಂದನ್ನು ರೂಪಿಸುವುದು ಇನ್ನೂ ಚಿಂತನೆಯ ಹಂತದಲ್ಲಿದೆ. ಶಿಕ್ಷಕರ ಕಾರ್ಯಸಾಮರ್ಥ್ಯ ವೃದ್ಧಿಗೆ Pandit Madan Mohan Malaviya National Mission on Teachers & Teaching (PMMMNMTT) ಸಂಸ್ಥೆಯು 2014ರಲ್ಲಿ ಆರಂಭಗೊಂಡಿದ್ದು, ಅದಕ್ಕೆ ವೇಗ ನೀಡುವುದು ಸರ್ಕಾರದ ಉದ್ದೇಶ.

92) ಗುರಿ: ಸೇವೆಯಲ್ಲಿರುವ ಶಿಕ್ಷಕರ ವೃತ್ತಿಪರ ಸುಧಾರಣೆಗೆ ಕಾರ್ಯಕ್ರಮಗಳನ್ನು ಮರುವಿನ್ಯಾಸಗೊಳಿಸುವುದು.
ಸಾಧನೆ: ಸೇವೆಯಲ್ಲಿರುವ ಶಿಕ್ಷಕರಿಗೆ ಅವರ ಕಾರ್ಯಸಾಮರ್ಥ್ಯವನ್ನು ವಿಶ್ಲೇಷಿಸಲು PINDICS ಮತ್ತಿತರ ನಿಗಾ ಪರಿಕರಗಳನ್ನು, ಸೂಚಕಗಳನ್ನು 2013ರಲ್ಲೇ ಸ್ಥಾಪಿಸಲಾಗಿದೆ. ಇದನ್ನು ಬಳಸಿಕೊಳ್ಳಬೇಕು ಮತ್ತು ವರ್ಷದಲ್ಲಿ ಎರಡು ಬಾರಿ ಮಾಡಬೇಕೆಂದು NCERT ಸೂಚಿಸಿದೆ.

93) ಗುರಿ: ಶಿಕ್ಷಕರಿಗಾಗಿ ರಾಷ್ಟ್ರೀಯ ಇಲೆಕ್ಟ್ರಾನಿಕ್ ರಿಜಿಸ್ಟ್ರಿ; ಎಲ್ಲ ಮಟ್ಟದಲ್ಲಿ ಶಿಕ್ಷಕರ ಬೇಡಿಕೆ ಮುನ್ಸೂಚನೆ ವಿಧಾನಗಳನ್ನು ಅಭಿವೃದ್ಧಿಪಡಿಸುವುದು.
ಸಾಧನೆ: Online Teacher Pupil Registration Management System (OTPRMS) ಮೂಲಕ ಶಿಕ್ಷಕರ ಸರ್ಟಿಫಿಕೇಟ್‌ಗಳ ಡಿಜಿಲಾಕರ್ ಮೂಲಕ ಪಾರದರ್ಶಕವಾಗಿ ಪರಿಶೀಲನೆಗೆ ವ್ಯವಸ್ಥೆಯೊಂದು 2021 ಮಾರ್ಚ್‌ನಿಂದ ಆರಂಭಗೊಂಡಿದೆ. ಇದನ್ನು National Council for Teacher Education (NCTE) ಮೂಲಕ ಪತ್ತೆ ಮಾಡುವುದು ಸಾಧ್ಯ ಆಗಲಿದೆ.

ಆದರೆ, ಉದ್ದೇಶಿಸಿದ ರಾಷ್ಟ್ರೀಯ ಇಲೆಕ್ಟ್ರಾನಿಕ್ ರಿಜಿಸ್ಟ್ರಿ ಇನ್ನೂ ಚಿಂತನೆಯ ಹಂತದಲ್ಲಿದೆ. ಶಿಕ್ಷಕರ ಬೇಡಿಕೆ ಮುನ್ಸೂಚನೆ ವಿಧಾನಗಳು ಕೂಡ ಇನ್ನೂ ಚಿಂತನೆಯ ಹಂತದಲ್ಲಿವೆ.

ಕೌಶಲಾಭಿವೃದ್ಧಿ

94) ಗುರಿ: ಔಪಚಾರಿಕ ಕೌಶಲಗಳಿರುವ ಕಾರ್ಮಿಕ ವರ್ಗದ ಸಂಖ್ಯೆಯನ್ನು 5.4% ಇರುವಲ್ಲಿಂದ 15%ಗೆ ಏರಿಸುವುದು; ಇದರಲ್ಲಿ ಎಲ್ಲರನ್ನು ಒಳಗೊಳ್ಳುವುದು.
ಸಾಧನೆ: ಔಪಚಾರಿಕ ಕೌಶಲಗಳನ್ನು ಕಲಿತಿರುವ ಕಾರ್ಮಿಕ ವರ್ಗದಲ್ಲಿ ಆಗಿರುವ ಸುಧಾರಣೆಯ ಶೇಕಡಾವಾರು ಅಂಕಿಸಂಖ್ಯೆಗಳು ಸಿಗಲಿಲ್ಲ. ಇದು ಕೌಶಲ ಕಲಿತಿರುವವರ ಉದ್ಯೋಗಾರ್ಹತೆಯ ಸ್ಥಿತಿ.

(ಮಾಹಿತಿ ಮೂಲ: India Skill Report, 2021)

95) ಗುರಿ: ಕೌಶಲ ಪಡೆಯುವವರಿಗೆ ಕನಿಷ್ಠ ಸ್ಟಾಂಡರ್ಡ್‌ಗಳನ್ನು ನಿಗದಿಪಡಿಸಲು ಒಂದು ನಿಯಂತ್ರಕ ವ್ಯವಸ್ಥೆಯನ್ನು ರೂಪಿಸುವುದು.
ಸಾಧನೆ: ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ 2008ರಲ್ಲೇ ಸ್ಥಾಪನೆ ಆಗಿದ್ದು, ಹೊಸ ಕೌಶಲಾಭಿವೃದ್ಧಿ ನೀತಿಯನ್ನು ಸರ್ಕಾರ 2015ರಲ್ಲಿ ಬಿಡುಗಡೆ ಮಾಡಿದೆ. ಅದರ ಅನ್ವಯ ಪ್ರಧಾನಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆಯ (PMKVY 2.0) ಅಡಿಯಲ್ಲಿ, 6 National Occupational Standards (NOS) ಮತ್ತವುಗಳ ಪಠ್ಯಕ್ರಮಗಳನ್ನು 2019ರಲ್ಲಿ ಸರ್ಕಾರ ನಿಗದಿಪಡಿಸಿದೆ.

96) ಗುರಿ: 8ನೇ ತರಗತಿಯಿಂದಲೇ ವೃತ್ತಿಪರ ಶಿಕ್ಷಣವನ್ನು ಆರಂಭಿಸುವುದು.
ಸಾಧನೆ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಬಗ್ಗೆ ಉಲ್ಲೇಖ ಇದೆ. PIB Release ID: 1742290)

97) ಗುರಿ: National Apprenticeship Promotion Scheme ಅಡಿಯಲ್ಲಿ ಹಿಂಪಾವತಿ ಕ್ಲೇಮ್‌ಗಳನ್ನು ಸಂಸ್ಕರಿಸುವ ವ್ಯವಸ್ಥೆಯನ್ನು ಸುಧಾರಿಸುವುದು.
ಸಾಧನೆ: ಒಕ್ಕೂಟ ಸರಕಾರ, 2021 ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಅಪ್ರೆಂಟಿಶಿಪ್ ಪ್ರೋತ್ಸಾಹನಾ ಯೋಜನೆ (NAPS) ಆರಂಭಿಸಿದೆ. ಸಣ್ಣ ಕೈಗಾರಿಕೆಗಳ ಸಹಯೋಗದಲ್ಲಿ ಅಪ್ರೆಂಟಿಶಿಪ್‌ಗಳನ್ನು ಹೆಚ್ಚಿಸುವ ಚಿಂತನೆ ಸರ್ಕಾರದಲ್ಲಿದೆ.

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ಅವರೇ ಹಾಕಿಕೊಂಡ ಟಾರ್ಗೆಟ್ ಮೂಲಕ ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-1

ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-2

ಇದನ್ನೂ ಓದಿ: ಮೋದಿ ಸರ್ಕಾರದ್ದೊಂದು ಮೌಲ್ಯಮಾಪನ: ಭಾಗ-3

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...