ಒಕ್ಕೂಟ ಸರ್ಕಾರ ವಿವಾದಿತ ಕೃಷಿ ಕಾನೂನುಗಳನ್ನು ಜಾರಿ ಮಾಡಿ ಒಂದು ವರ್ಷವಾದ ಹಿನ್ನೆಲೆ ಅಕಾಲಿದಳ ದೆಹಲಿಯಲ್ಲಿ ’ಕರಾಳ ಶುಕ್ರವಾರ ಮೆರವಣಿಗೆ’ (black Friday march) ಆಯೋಜಿಸಿತ್ತು.
ಪ್ರತಿಭಟನೆ ನಡೆಸುತ್ತಿದ್ದ ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, ಲೋಕಸಭಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಇತರ 12ಕ್ಕೂ ಹೆಚ್ಚು ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಮತ್ತು ಇತರರನ್ನು ಸೆಕ್ಷನ್ 144 ಉಲ್ಲಂಘನೆ ಆರೋಪದಲ್ಲಿ ಬಂಧಿಸಿ, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
“ನಾವು ಪ್ರತಿಭಟನೆ ನಡೆಸಲು ಬಂದಿದ್ದೆವು. ಇದು ಶಾಂತಿಯುತ ಪ್ರತಿಭಟನೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ, ದೆಹಲಿ ಪೊಲೀಸರು ನಮ್ಮನ್ನು ತಡೆಯಲು ಬಲಪ್ರಯೋಗ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಅರವಿಂದ್ ಕೇಜ್ರೀವಾಲ್ ನಮಗೆ ಗುರುದ್ವಾರದಲ್ಲಿ ಸೇರುವಂತಿಲ್ಲ ಎಂದು ಆದೇಶ ನೀಡಿದೆ. ಒಕ್ಕೂಟ ಸರ್ಕಾರ ಕೂಡ ನಮ್ಮನ್ನು ತಡೆದಿದೆ. ಇದು ಪ್ರಜಾಪ್ರಭುತ್ವವಲ್ಲ” ಎಂದು ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ ಎಂದು NDTV ಉಲ್ಲೇಖಿಸಿದೆ.
ಇದನ್ನೂ ಓದಿ: ರೈತ ಹೋರಾಟ: 4 ರಾಜ್ಯಗಳಿಂದ ವರದಿ ಕೇಳಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಈ ಮೊದಲು ರೈತರು ಮತ್ತು ಅಕಾಲಿ ದಳದ ಕಾರ್ಯಕರ್ತರು ದೆಹಲಿಯ ಗಡಿಗಳಲ್ಲಿ ನೆರೆದಿದ್ದರು, ಆದರೆ, ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ, ಪ್ರಮುಖ ರಸ್ತೆಗಳನ್ನು ಮುಚ್ಚಿದ್ದರು. ಜೊತೆಗೆ ಪ್ರತಿಭಟನಾಕಾರರು ಗಡಿಯನ್ನು ಪ್ರವೇಶಿಸುವುದನ್ನು ತಡೆಯಲು ಎರಡು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದ್ದರು.
Strongly condemn Delhi police for sealing entry points to national capital & detaining @Akali_Dal_ workers reaching Gurdwara Rakabganj Sahib. Receiving phone calls & videos telling how Police trying to foil protest march to Parl against 3 Farm Laws. It's an undeclared EMERGENCY! pic.twitter.com/lhHwMMTtqa
— Harsimrat Kaur Badal (@HarsimratBadal_) September 17, 2021
ಗುರುದ್ವಾರದ ರಕಾಬ್ ಗಂಜ್ ಸಾಹಿಬ್ನಿಂದ ನವದೆಹಲಿಯ ಸಂಸತ್ತಿನವರೆಗೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಕ್ಷದ ಕಾರ್ಯಕರ್ತರು ರೈತರೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ಅಕಾಲಿದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ತಿಳಿಸಿದ್ದರು.
ಕೃಷಿ ಕಾನೂನನ್ನು ವಿರೋಧಿಸಿ ಅಕಾಲಿದಳದ ಸಂಸದೆ ಹರ್ಸಿಮ್ರತ್ ಕೌರ್ ಒಕ್ಕೂಟ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದ್ದು ಮಾತ್ರವಲ್ಲದೆ, ಪಕ್ಷವು ಬಿಜೆಪಿ ನೇತೃತ್ವದ NDA ಮೈತ್ರಿ ಕೂಟದಿಂದ ಹೊರ ಬಂದಿತ್ತು.
ರೈತರು ಮತ್ತು ವಿರೋಧ ಪಕ್ಷಗಳು ಕಳೆದ ವರ್ಷದ ನವೆಂಬರ್ 26, 27 ರಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರೈತ ಮುಖಂಡರ ನಡುವೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿದೆ, ಆದರೆ ಎಲ್ಲವು ವಿಫಲವಾಗಿವೆ. ಸೆಪ್ಟಂಬರ್ 27ಕ್ಕೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್ಗೆ ಕರೆ ನೀಡಿದೆ.
ಇದನ್ನೂ ಓದಿ: #WorldFekuDay | ಪ್ರಧಾನಿ ಮೋದಿ ಜನ್ಮದಿನ – ‘ವಿಶ್ವ ಫೇಕು ದಿನ’ ಟ್ವಿಟರ್ ಟ್ರೆಂಡ್!