ಮಹಾರಾಷ್ಟ್ರದಲ್ಲಿ 21 ಆಮೆಗಳು ಮತ್ತು ಕಪ್ಪು ಲ್ಯಾಬ್ರಡಾರ್ ನಾಯಿಯನ್ನು ವರದಕ್ಷಿಣೆ ನೀಡಲು ಒತ್ತಾಯಿಸಿದ್ದ ಔರಂಗಾಬಾದ್ ಮೂಲದ ವ್ಯಕ್ತಿ ಮತ್ತು ಅವರ ಕುಟುಂಬದ ಐವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವರನ ಕುಟುಂಬದ ವಿರುದ್ಧ ವಂಚನೆ ಮತ್ತು ಕಾನೂನು ಉಲ್ಲಂಘನೆಯ ಪ್ರಕರಣ ದಾಖಲಿಸಲಾಗಿದೆ.
ಫೆಬ್ರವರಿ 10 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ನಿಶ್ಚಿತಾರ್ಥವಾದ ಮೇಲೆ ಇಂತಹ ವಿಚಿತ್ರ ಬೇಡಿಕೆ ಇಟ್ಟಿದ್ದಾನೆ. ಈ ಮೊದಲೇ ವಧುವಿನ ಮನೆಯವರಿಂದ 2 ಲಕ್ಷ ರೂಪಾಯಿ ಮತ್ತು 10 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಶ್ಚಿತಾರ್ಥದ ನಂತರ, ವರ ಮತ್ತು ಅವನ ಮನೆಯ ಸದಸ್ಯರು 21 ಆಮೆ, ಒಂದು ಕಪ್ಪು ಲ್ಯಾಬ್ರಡಾರ್ ನಾಯಿ, ಬುದ್ಧನ ಪ್ರತಿಮೆ, ಬೆಲೆಬಾಳುವ ದೀಪದ ಕಂಬಗಳು ಮತ್ತು 10 ಲಕ್ಷ ರೂ.ಗಳನ್ನು ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ಮದುವೆಯ ನಂತರ ಹುಡುಗಿಗೆ ಸರ್ಕಾರಿ ಕೆಲಸ ಕೊಡಿಸಲು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಹುಡುಗಿ ಮನೆಯವರು ಆರೋಪಿಸಿದ್ದಾರೆ.
ಇದನ್ನೂ ಓದಿ: 1930 ಕ್ಕೆ ಹೋಲಿಸಿದರೆ ಈಗ ವರದಕ್ಷಿಣೆ 90% ಹೆಚ್ಚಳವಾಗಿದೆ: ಕಾರಣವೇನು?
ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಾಧ್ನಾ ಅವಾದ್, “ವಧುವಿನ ಕುಟುಂಬವು ವರದಕ್ಷಿಣೆ ಬೇಡಿಕೆ ಪೂರೈಸುವಲ್ಲಿ ಅಸಹಾಯಕರಾಗಿದ್ದಾರೆ ಎಂದು ವರನ ಕಡೆಯವರು ಮದುವೆಯನ್ನು ರದ್ದುಪಡಿಸಿದ್ದಾರೆ. ವರ ಮತ್ತು ಅವರ ಕುಟುಂಬದ ವಿರುದ್ಧ ಅಪರಾಧ ಉಲ್ಲಂಘನೆ ಮತ್ತು ವಂಚನೆಗಾಗಿ ಐಪಿಸಿಯ 420, 406 ಮತ್ತು 34 ನೇ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಇನ್ನೂ ಹಲವು ಸೆಕ್ಷನ್ಗಳನ್ನು ಸೇರಿಸಬಹುದು” ಎಂದು ತಿಳಿಸಿದ್ದಾರೆ.
ಎಷ್ಟೇ ಕಾನೂನುಗಳು ಜಾರಿಗೆ ಬಂದರೂ ದೇಶದಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ವರದಕ್ಷಿಣೆಯ ಸ್ಪರೂಪ ಬದಲಾಗಿಯಷ್ಟೇ. ವಿಭಿನ್ನ ರೀತಿಯಲ್ಲಿ ವರದಕ್ಷಿಣೆ ಪಡೆಯುವುದು ಈಗೀನ ರೀತಿಯಾಗಿದೆ. ಕೆಲವು ಪ್ರದೇಶದಲ್ಲಿ ನಿರಂತರವಾಗಿ ವರದಕ್ಷಿಣೆ ಕಿರುಕುಳ ಪ್ರಕರಣಗಳು ಹೊರಬರುತ್ತಿವೆ.
ಆತಂಕಕಾರಿ ವಿಷಯವೆಂದರೆ, 1930 ರಲ್ಲಿ 40% ಮದುವೆಗಳಲ್ಲಿ ವರದಕ್ಷಿಣೆ ನೀಡಲಾಗುತ್ತಿತ್ತು. ಆದರೆ 2000 ರಲ್ಲಿ ದೇಶದಲ್ಲಿ ನಡೆಯುವ ಶೇ.90 ರಷ್ಟು ಮದುವೆಗಳಲ್ಲಿ ವಧುವಿನ ಕಡೆಯವರು ವರನಿಗೆ ವರದಕ್ಷಿಣೆ ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ದೌರ್ಜನ್ಯ 25% ಹೆಚ್ಚಳ: ಮಹಿಳೆಯರಿಗೆ ಕೊರೊನಾ ಲಾಕ್ಡೌನ್ ಕರಾಳ!