ಉತ್ತರ ಪ್ರದೇಶದ ಕಾನ್ಪುರದ ಖಾಸಗಿ ಶಾಲೆಯೊಂದರ ಮ್ಯಾನೇಜರ್ ವಿರುದ್ಧ ರಾಜ್ಯದ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ಶಾಲೆಯಲ್ಲಿ ‘ಕಲಿಮಾ’ (ಇಸ್ಲಾಮಿಕ್ ಪ್ರಾರ್ಥನೆ) ಪಠಿಸುತ್ತಿದ್ದಾರೆ ಎಂದು ವಿದ್ಯಾರ್ಥಿಯ ಪೋಷಕರು ದೂರಿದ್ದಾರೆ. ಪ್ರಕರಣ ದಾಖಲಾಗಿದ್ದು, ಇನ್ನು ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.
ಕಾನ್ಪುರದ ಫ್ಲೋರೆಟ್ಸ್ ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಮಾಡಿಸುತ್ತಿದೆ ಎಂಬ ಆರೋಪ ಬಂದ ಬಳಿಕ ವಿವಾದ ಉಂಟಾಗಿದೆ. ಪೋಷಕರ ಆಕ್ಷೇಪದ ನಂತರ, ಶಾಲೆಯು ನಾಲ್ಕು ಧರ್ಮಗಳ ಪ್ರಾರ್ಥನೆಗಳನ್ನು ಮಾಡುವ ಅಭ್ಯಾಸವನ್ನು ನಿಲ್ಲಿಸಿ, ಕೇವಲ ರಾಷ್ಟ್ರಗೀತೆಯನ್ನು ಮಾತ್ರ ಹಾಡಲು ನಿರ್ಧರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿದ್ಯಾರ್ಥಿಯ ಪೋಷಕರೊಬ್ಬರು ದೂರು ನೀಡಿದ್ದು, “ಮಕ್ಕಳಲ್ಲಿ ಮತಾಂತರದ ಬೀಜಗಳನ್ನು ಬಿತ್ತುವ ಕೆಲಸವನ್ನು ಶಾಲೆಯಲ್ಲಿ ಮಾಡಲಾಗುತ್ತಿದೆ. ಶಾಲೆಯ ಎಲ್ಲಾ ಶಾಖೆಗಳನ್ನು ಸೀಲ್ ಮಾಡಬೇಕು, ಶುಲ್ಕವನ್ನು ಹಿಂತಿರುಗಿಸಬೇಕು. ಇತರ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಲು ವ್ಯವಸ್ಥೆ ಮಾಡಬೇಕು” ಎಂದು ಒತ್ತಾಯಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರಿನ ನಂತರ ಕಾನ್ಪುರ ಪೊಲೀಸರು ಶಾಲೆಯ ಮ್ಯಾನೇಜರ್ ವಿರುದ್ಧ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆ 2021 ಮತ್ತು ಐಪಿಸಿ ಸೆಕ್ಷನ್ 295-A (ಧಾರ್ಮಿಕ ಭಾವನೆಯನ್ನು ಕೆರಳಿಸುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Update: The director of the Kanpur school which landed in controversy over religious prayer has been booked under section 295-A IPC and section 5(1) of prohibition of unlawful conversion of religion Act 2021. https://t.co/LYw4KKxeJH
— Piyush Rai (@Benarasiyaa) August 2, 2022
“ಬೆಳಿಗ್ಗೆ ಪ್ರಾರ್ಥನೆಯ ಸಮಯದಲ್ಲಿ ವಿದ್ಯಾರ್ಥಿಗಳು ಇಸ್ಲಾಮಿಕ್ ಪ್ರಾರ್ಥನೆಗಳನ್ನು ಪಠಿಸುವಂತೆ ಶಾಲೆ ಕ್ರಮ ವಹಿಸಿದೆ” ಎಂದು ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಪೊಲೀಸರ ಜಂಟಿ ತಂಡ ಶಾಲೆಯ ಪ್ರಾಂಶುಪಾಲರು ಹಾಗೂ ವ್ಯವಸ್ಥಾಪಕರನ್ನು ಭೇಟಿ ಮಾಡಿತ್ತು. ‘‘ನಮ್ಮ ವಿದ್ಯಾರ್ಥಿಗಳು ಕಳೆದ ಹಲವು ವರ್ಷಗಳಿಂದ ನಾಲ್ಕು ಧರ್ಮದ ಪ್ರಾರ್ಥನೆಗಳನ್ನು ಪಠಿಸುತ್ತಿದ್ದು, ಯಾವುದೇ ಪಾಲಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದು ಶಾಲಾ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿರಿ: ಸೇಲಂ ದೇವಾಲಯದ ವಿಗ್ರಹ ಬುದ್ಧನೇ ಹೊರತು ಹಿಂದೂ ದೇವರಲ್ಲ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
“ಶುಕ್ರವಾರ, ಕೆಲವು ಪೋಷಕರು ನಾಲ್ಕು ಪ್ರಾರ್ಥನೆಗಳನ್ನು ವಿರೋಧಿಸಿದರು. ಆದ್ದರಿಂದ ಶಾಲೆಯು ಪ್ರಾರ್ಥನೆಯನ್ನು ನಿಲ್ಲಿಸಿತು. ಈಗ ಬೆಳಗಿನ ಪ್ರಾರ್ಥನೆಯ ವೇಳೆ ರಾಷ್ಟ್ರಗೀತೆಯನ್ನು ಮಾತ್ರ ಹಾಡಲಾಗುತ್ತಿದೆ” ಎಂದು ಕಾನ್ಪುರದ ಸಹಾಯಕ ಪೊಲೀಸ್ ಆಯುಕ್ತ ನಿಶಾಂಕ್ ಶರ್ಮಾ ತಿಳಿಸಿದ್ದಾರೆ.
2003ರಿಂದ ಶಾಲೆ ಪ್ರಾರಂಭವಾದಾಗಿನಿಂದ ಶಾಲೆಯು ನಾಲ್ಕು ಪ್ರಾರ್ಥನೆಗಳನ್ನು ಪಠಿಸುತ್ತಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಅಂಕಿತ ಯಾದವ್ ಹೇಳಿಕೆ ನೀಡಿದ್ದರು.
“ಕೆಲವು ವಿದ್ಯಾರ್ಥಿಗಳ ಪೋಷಕರು ಈಗ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ನಂತರ ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ. ನಾಲ್ಕು ಧರ್ಮಗಳ ಪ್ರಾರ್ಥನೆಗಳನ್ನೂ ನಿಲ್ಲಿಸಿದ್ದೇವೆ. ನಾವು ಈಗ ರಾಷ್ಟ್ರಗೀತೆಯನ್ನು ಮಾತ್ರ ಹೇಳಿಸುತ್ತಿದ್ದೇವೆ” ಎಂದಿದ್ದರು.