ಅಕ್ಟೋಬರ್ ಎರಡನೇ ವಾರದಲ್ಲಿ ಆಂಧ್ರಪ್ರದೇಶದ ಹಲವಾರು ಭಾಗಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ 6,368 ಕೋಟಿ ರೂ. ವ್ಯಾಪಕ ಹಾನಿಯುಂಟಾಗಿದೆ. ಜೊತೆಗೆ ಸುಮಾರು 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆಂಧ್ರಪ್ರದೇಶದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ನೀಲಂ ಸಾಹ್ನಿ ಅವರು, ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸೌರವ್ ರೇ ನೇತೃತ್ವದ ಏಳು ಸದಸ್ಯರ ಕೇಂದ್ರ ತಂಡಕ್ಕೆ ವರದಿ ಸಲ್ಲಿಸಿದ್ದಾರೆ. ಈ ತಂಡ ಮಳೆ ಮತ್ತು ಪ್ರವಾಹದಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿತ್ತು. ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ವಿವರವಾದ ವರದಿಯನ್ನು ನೀಡಿದ್ದರು.
ಕೇಂದ್ರವು ಎನ್ಡಿಆರ್ಎಫ್ ಮಾನದಂಡಗಳ ಪ್ರಕಾರ, ತಾತ್ಕಾಲಿಕ ಪರಿಹಾರವಾಗಿ 840.07 ಕೋಟಿ ರೂ. ಮತ್ತು ಶಾಶ್ವತ ಪರಿಹಾರ ಕ್ರಮಗಳಿಗಾಗಿ 4,439.14 ಕೋಟಿ ರೂ. ಸೇರಿದಂತೆ ಪ್ರವಾಹ ಪರಿಹಾರ ಮತ್ತು ಹಾನಿಗೊಳಗಾದ ಮೂಲಸೌಕರ್ಯಗಳ ಪುನಃಸ್ಥಾಪನೆಗಾಗಿ 5,279.11 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದೆ.
ಇದನ್ನೂ ಓದಿ: ತೆಲಂಗಾಣ, ಆಂಧ್ರದಲ್ಲಿ ಭಾರಿ ಮಳೆ: ಕಾಂಪೌಂಡ್ ಕುಸಿದು 2 ತಿಂಗಳ ಮಗು ಸೇರಿ 9 ಮಂದಿ ದುರ್ಮರಣ
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿದ್ದು, ಇಂತಹ ಸಂದರ್ಭದಲ್ಲಿ ಕೇಂದ್ರವು ಪ್ರವಾಹ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಸಾಹ್ನಿ ಮನವಿ ಮಾಡಿದ್ದಾರೆ.
ಪ್ರತಿ ಬಾರಿ ಈ ಅವಧಿಯಲ್ಲು ಸಾಮಾನ್ಯವಾಗಿ 351.2 ಮಿ.ಮೀ. ಮಳೆಯಾಗುತ್ತಿತ್ತು, ಆದರೆ ರಾಜ್ಯದಲ್ಲಿ ಈ ಬಾರಿ 444.5 ಮಿ.ಮೀ ಮಳೆಯಾಗಿದೆ, ಇದು ಶೇಕಡಾ 26.6 ರಷ್ಟು ಹೆಚ್ಚಾಗಿದೆ. ನಿರಂತರ ಮಳೆಯಿಂದಾಗಿ ಗೋದಾವರಿ ಮತ್ತು ಕೃಷ್ಣ ನದಿಗಳಲ್ಲಿ ಪ್ರವಾಹ ಉಂಟಾಗಿ ಇಷ್ಟೊಂದು ಅವಘಡಗಳು ನಡೆದಿವೆ ಎಂದು ಗಮನಸೆಳೆದರು.
ಮಳೆಯಿಂದಾಗಿ ಗೋಡೆ ಕುಸಿತ, ಭೂಕುಸಿತದಂತಹ ಮಳೆ ಸಂಬಂಧಿತ ಘಟನೆಗಳಲ್ಲಿ 45 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಇನ್ನೂ ಐದು ಮಂದಿ ಕಾಣೆಯಾಗಿದ್ದಾರೆಂದು ವರದಿಯಾಗಿದ್ದು, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ನ ರಕ್ಷಣಾ ಕಾರ್ಯಾಚರಣೆಯಲ್ಲೂ ಅವರು ಪತ್ತೆಯಾಗಿಲ್ಲ ಎಂದು ವರದಿ ನೀಡಿದ್ದಾರೆ.
ಒಟ್ಟಾರೆ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 8,784 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, ಹೆಚ್ಚಿನ ಸಂಖ್ಯೆಯ ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿಸಿದ್ದಾರೆ. ಕೃಷಿ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಹತ್ತಿ, ಬೇಳೆಕಾಳುಗಳು ಮತ್ತು ಕಬ್ಬು ಬೆಳೆದಿದ್ದ 2,12,588 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಮುಖ್ಯ ಕಾರ್ಯದರ್ಶಿ ವಿವರಿಸಿದರು.