Homeಕರ್ನಾಟಕಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

ಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

- Advertisement -
- Advertisement -

ಪುಟ್ಟ ಪುಟ್ಟ ಅಲಕ್ಷಿತ ಸಮುದಾಯಗಳು ಈಗಲೂ ಈ ಸಂವಿಧಾನವೇ ಒದಗಿಸಿದ ಮೀಸಲು ಸೌಲಭ್ಯದಿಂದ ವಂಚಿತರಾಗುತ್ತಿವೆ. ಜನಪ್ರತಿನಿಧಿಗಳನ್ನು ಯಾಮಾರಿಸಬಲ್ಲ ಕೆಲವು ಆಧಿಕಾರಿಗಳು ಯಾವುದೋ ತಾಂತ್ರಿಕ ನೆಪ ಒಡ್ಡುತ್ತ ಇಂತಹ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿವೆ. ಅಂತಹುದೇ ಘಟನೆ ಗದಗ ಜಿಲ್ಲೆಯಲ್ಲಿಯೂ ನಡೆದಿದೆ.

ಶತಮಾನಗಳ ಕಾಲ ಹೊಟ್ಟೆಪಾಡಿಗಾಗಿ ಕಳ್ಳತನವನ್ನೇ ಕಾಯಕವಾಗಿ ಮಾಡಿಕೊಂಡಿದ್ದ ಗಂಟಿಚೋರ್ ಸಮುದಾಯ ಕ್ರಮೇಣ ಸಮಾಜದ ಭಾಗವಾಗಿ ಶ್ರಮದ ಕಾಯಕದಲ್ಲಿ ನಿರತವಾಗಿದೆ. ಈಗಲೂ ಅಧಿಕಾರಸ್ಥರು ಮತ್ತು ಪೊಲೀಸ್ ವ್ಯವಸ್ಥೆ, ಇದೆಲ್ಲದಕ್ಕೂ ಮುಖ್ಯವಾಗಿ ಮೇಲ್ಜಾತಿಯ ಸಮುದಾಯಗಳು ಈ ಸಮುದಾಯವನ್ನು ಅಪರಾಧಿಗಳು ಎಂಬಂತೆ ಚಿತ್ರಿಸುತ್ತಿವೆ. ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಈ ಸಣ್ಣ ಸಮುದಾಯ ಎಸ್‍ಸಿ ಸಮುದಾಯ ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದ ಗಂಟಿಚೋರ್ ಸಮುದಾಯಕ್ಕೆ 2015ರಿಂದ ಎಸ್‍ಸಿ ಪ್ರಮಾಣ ಪತ್ರ ನೀಡಲು ಜಿಲ್ಲಾಡಳಿತ ಸತಾಯಿಸುತ್ತಿದೆ. ಇದರ ಮೂಲ ಹುಡುಕುತ್ತ ಹೋದರೆ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಯವರ ಸೇಡಿನ ಆಟಕ್ಕೆ ಈ ಸಮುದಾಯ ಬಲಿಯಾಗುತ್ತಿರುವುದು ಕಂಡು ಬರುತ್ತಿದೆ.

ಗಂಟಿಚೋರ್ ಸಮುದಾಯಕ್ಕೆ ಎಸ್‍ಸಿ ಮೀಸಲು ಇದೆ, ಅದು ಅವರ ಹಕ್ಕು, ಅದನ್ನು ಸಂವಿಧಾನದ ಅನುಸಾರವೇ ಅವರಿಗೆ ನೀಡಲಾಗಿದೆ. ಆದರೆ, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗಂಟಿಚೋರರಿಗೆ 2015ರಿಂದ ಎಸ್‍ಸಿ ಜಾತಿ ಪ್ರಮಾಣವನ್ನು ನೀಡಲು ಶಿರಹಟ್ಟಿ ತಾಲೂಕಾ ಆಡಳಿತ ನಿರಾಕರಿಸತೊಡಗಿದೆ. ಸತತ ಐದು ವರ್ಷಗಳಿಂದ ತಮ್ಮ ಹಕ್ಕಿಗಾಗಿ ಹೋರಾಡುತ್ತ ಬಂದಿದ್ದರೂ ತಾವುದೋ ತಾಂತ್ರಿಕ ನೆಪ ಒಡ್ಡುವ ತಾಲೂಕಾ ಆಡಳಿತ ಜಿಲ್ಲಾಡಳಿತದತ್ತ ಕೈ ತೋರಿಸುತ್ತಿದೆ.

ಜಿಲ್ಲಾಡಳಿತಕ್ಕೆ ಕೇಳಿದರೆ, ಜಾತಿ ಪರಿಶೀಲನಾ ಸಮಿತಿಗೆ ಈ ವಿಷಯವನ್ನು ವರ್ಗಾಯಿಸುತ್ತೇವೆ, ಸದ್ಯದಲ್ಲೇ ಸಮಸ್ಯೆ ಬಗೆಹರಿಯುತ್ತದೆ ಎನ್ನುತ್ತದೆ. ಸಾಕು ಸಾಕಾದ ಗಂಟಿಚೋರ್ ಸಮುದಾಯದ ಜನ ಎರಡು ದಿನಗಳ ಕಾಲ ಶಿರಹಟ್ಟಿ ತಹಶೀಲ್ದಾರ್ ಕಚೇರಿ ಮುಂದೆ ಟೆಂಟು ಹಾಕಿ ಪ್ರತಿಭಟನೆ ನಡೆಸಿದರು. ಮೊನ್ನೆ (ಬುಧವಾರ) ಧರಣಿನಿರತರನ್ನು ಭೇಟಿಯಾದ ತಹಶಿಲ್ದಾರ್ ಕೋರಿಶೆಟ್ಟರು, ಖಂಡಿತ ಸದ್ಯದಲ್ಲೇ ಎಲ್ಲ ಸರಿ ಹೋಗುತ್ತೆ. ಜಿಲ್ಲಾಡಳಿತ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು. ಪ್ರತಿಭಟನಾಕಾರರು ಜಗ್ಗದೇ ಇದ್ದಾಗ ನೇರವಾಗಿ ಜಿಲ್ಲಾಧಿಕಾರಿ ಹಿರೇಮಠರಿಗೆ ಫೋನ್ ಮಾಡಿ, ಸ್ಪೀಕರ್ ಆನ್ ಮಾಡಿ ಮಾತಾಡಿದರು. ಜಿಲ್ಲಾಧಿಕಾರಿ ಕೂಡ ಪರಿಶೀಲಿಸಿ ನ್ಯಾಯ ಒದಗಿಸುತ್ತೇವೆ ಎಂದರು.

ಆಗಿನ ಜಿಲ್ಲಾಧಿಕಾರಿ ನೀಡಿದ್ದ ಪತ್ರ

ಇಲ್ಲಿ ನಿಜಕ್ಕೂ ತಾಂತ್ರಿಕ ಸಮಸ್ಯೆ ಇದೆಯೇ? ಇಲ್ಲವೇ ಇಲ್ಲ. ಹಾಗಂತ ಒಂದು ಹಂತದಲ್ಲಿ 2014ರಲ್ಲಿ ಅದನ್ನು ಹುಟ್ಟು ಹಾಕಲಾಗಿತ್ತು. ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರ ಬಹಿರಂಗ ಸೂಚನೆಯಂತೆ ಅಂದಿನ ಜಿಲ್ಲಾಧಿಕಾರಿ ಅಧ್ಯಯನ ಕೈಗೊಂಡು, ಗಂಟಿಚೋರರಿಗೆ ಮತ್ತು ಅದೇ ಸಮುದಾಯದವರಾಗಿದ್ದು ಗಿರಣಿ ವಡ್ಡರ್, ಗಂಟಿಚೋರ್ ಇಂತಹ ಅಡ್ಡಹೆಸರು ಇರುವವರಿಗೆಲ್ಲ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಮಾಡಿದ್ದರು. ನಂತರ ಜಿಲ್ಲಾಧಿಕಾರಿಯಾಗಿ ಬಂದ ದರ್ಪಣ್ ಜೈನ್ ಮೇಲೆ ಶಿರಹಟ್ಟಿ ತಾಲೂಕಿನ ಲಿಂಗಾಯತ ಮಠದ ಭಕ್ತರು ಕೆಲವು ರಾಜಕಾರಣಿಗಳಿಂದ ಒತ್ತಡ ಹಾಕಿಸಿದರು. ಜಿಲ್ಲಾಧಿಕಾರಿ ಇದನ್ನು ಆಯುಕ್ತರ ಕಚೇರಿಗೆ ವರ್ಗಾಯಿಸಿದರು. ಜಾತಿ ಪರಿಶೀಲನಾ ಸಮಿತಿಯ ಸದಸ್ರೆಲ್ಲರೂ ಸಹಿ ಹಾಕಿರಲಿಲ್ಲ ಎಂಬ ನೆಪ ಒಡ್ಡಿ ಮತ್ತೆ ಈ ವಿಷಯವನ್ನು ಜಾತಿ ಪರಿಶೀಲನಾ ಸಮಿತಿಗೆ ಒಪ್ಪಿಸಲಾಯಿತು.

ಪ್ರತಿವರ್ಷ ಕಾಲೇಜು ಪ್ರವೇಶ, ನೇಮಕಾತಿ ಅಧಿಸೂಚನೆ ಬಂದಾಗ ಯುವಕರು ಪರದಾಡುವುದೇ ಆಗಿತು. ಶಿರಹಟ್ಟಿಯ ಹಿಂದಿನ ತಹಶೀಲ್ದಾರ್ ವೆಂಕಟೇಶ ನಾಯ್ಕ್ ಅಂತೂ ತಮ್ಮ ಲಂಬಾಣಿ ಸಮುದಾಯಕ್ಕೆ ಅವಕಾಶ ಕಡಿಮೆ ಆಗಬಹುದು ಎಂಬ ಭ್ರಮೆಯಿಂದ ಇನ್ನಷ್ಟು ವ್ಯತಿರಿಕ್ತವಾಗಿ ವರ್ತಿಸಿದರು. ಈ ಸಲ ಗಟ್ಟಿ ನಿರ್ಧಾರ ಮಾಡಿದ ಶಿರಹಟ್ಟಿಯ ಗಂಟಿಚೋರ್ ಸಮುದಾಯ ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ತಹಶಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ಜಿಲ್ಲೆಯ ಗಮನ ಸೆಳೆದ ಮೇಲಷ್ಟೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೂಡಲೇ ಸಮಸ್ಯೆ ಬಗೆಹರಿಸಿ ಅನುಕೂಲ ಮಾಡಿ ಕೊಡುವುದಾಗಿ ಭರವಸೆ ನೀಡಿದೆ.

ಆದರೆ, ಈಗಲೂ ಗಂಟಿಚೋರ್ ಸಮುದಾಯಕ್ಕೆ ಈ ಭರವಸೆ ಬಗ್ಗೆ ನಂಬಿಕೆ ಇಲ್ಲ. ಅವರೀಗ ಇಂಥದ್ದೇ ಸಮಸ್ಯೆ ಎದುರಿಸುತ್ತಿರುವ ನರಗುಂದ ತಾಲೂಕಿನ ಗಂಟಿಚೋರ್ ಸಮುದಾಯದವರನ್ನು ಜೊತೆಗೆ ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಮಾಡಲು ಅಣಿಯಾಗುತ್ತಿದ್ದಾರೆ.

ಈ ಸಮಸ್ಯೆಯ ಮೂಲ ದಿಂಗಾಲೇಶ್ವರ ಎಂಬ ಸ್ವಾಮೀಜಿ!
ಗದಗ ಜಿಲ್ಲೆಯ ಇತರ ತಾಲೂಕುಗಳಲ್ಲಿರುವ ಗಂಟಿಚೋರ್ ಸಮುದಾಯದವರಿಗೆ ಎಸ್‍ಸಿ ಪ್ರಮಾಣ ಪತ್ರ ಪಡೆಯವ ಯಾವುದೇ ತಾಂತ್ರಿಕ ಅಡೆತಡೆ ಆಗಿಲ್ಲ. ಗೋಕಾಕ್, ಬಾಗಲಕೋಟೆ, ಕೊಪ್ಪಳ ಮತ್ತು ಹುಬ್ಬಳ್ಳಿ ಸುತ್ತಮುತ್ತ ಇರುವ ಗಂಟಿಚೋರರಿಗೂ ಈ ಸಮಸ್ಯೆ ಕಾಡಿಲ್ಲ. ಆದರೆ ಶಿರಹಟ್ಟಿಯ ಅದರಲ್ಲೂ ಬಾಲೆಹೊಸೂರು ಗ್ರಾಮದ ಗಂಟಿಚೊರರಿಗಷ್ಟೇ 2015ರಿಂದ ಈ ಸಮಸ್ಯೆ ಕಾಡಲು ಶುರುವಾಗಿದೆ. ಅದಕ್ಕೆ ಮೂಲ ಕಾರಣ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ.

ದಿಂಗಾಲೇಶ್ವರ ಸ್ವಾಮಿ

2014ರಲ್ಲಿ ಲಿಂಗಾಯತ ಸ್ವಾಮಿ ದಿಂಗಾಲೇಶ್ವರರ ಮಠ ತನ್ನ ವ್ಯಾಪ್ತಿಯನ್ನು ಬೆಳೆಸಲು ಬಾಲೆಹೊಸೂರಿನ ಕೆರೆಯೊಂದನ್ನು ಇಡಿಯಾಗಿ ಆಕ್ರಮಿಸಿಕೊಳ್ಳುತ್ತದೆ. ಸಂಖ್ಯೆ ಮತ್ತು ಜಾತಿ ಸ್ಥಾನದಲ್ಲಿ ಪ್ರಬಲರಾಗಿರುವ ಲಿಂಗಾಯತ ಸಮುದಾಯದ ಕೆಲವು ಪುಡಾರಿಗಳ ಬೆಂಬಲ, ಆ ಮೂಲಕ ಕೆಲವು ಲಿಂಗಾಯತ ರಾಜಕಾರಣಿಗಳ ಬೆಂಬಲ ಹೊಂದಿದ ದಿಂಗಾಲೇಶ್ವರ ಸ್ವಾಮೀಜಿಯ ಈ ಒತ್ತುವರಿಯನ್ನು ಪಂಚಾಯತಿ ಮತ್ತು ತಾಲೂಕಾ ಆಡಳಿತ ಪ್ರಶ್ನಿಸಲೇ ಇಲ್ಲ. ಮಠದ ತೇರಿನ ಮೆರವಣಿಗೆಯನ್ನು ವಿಸ್ತರಿಸಲು ಮತ್ತು ಮಠದ ಮುಂಭಾಗ ಇನ್ನಷ್ಟು ಭವ್ಯವಾಗಿ ಕಾಣಲು ಯೋಜನೆ ರೂಪಿಸಿದ ಸ್ವಾಮೀಜಿ ಅದಕ್ಕೆ ಅಡ್ಡಿಯಾಗಿದ್ದ ಸಾರ್ವಜನಿಕ ರಸ್ತೆಯನ್ನೇ ಆಕ್ರಮಿಸಲು ಹೊರಟರು. ಈ ಒತ್ತುವರಿಯಿಂದ ಹಲವಾರು ಬಡ ಗಂಟಿಚೋರರ ಕುಟುಂಬಗಳ ಮನೆಗಳೇ ವಿನಾಶದ ಭಿತಿಗೆ ಒಳಗಾದಾಗ ಗಂಟಿಚೋರ್ ಸಮುದಾಯ ಇದರ ಧ್ವನಿ ಎತ್ತಿ ಕಾನೂನು ಹೋರಾಟಕ್ಕೆ ಮುಂದಾಗಿತು. ಕೋರ್ಟಿನಲ್ಲಿ ತಮ್ಮ ಅತಿಕ್ರಮಣಕ್ಕೆ ಅವಕಾಶ ಸಿಗದು ಎಂದು ಅರಿತ ಸ್ವಾಮೀಜಿ ಕೆಲವು ಹುಂಬ ಲಿಂಗಾಯತ, ಕುರುಬ ಮತ್ತು ಇತರೆ ದಲಿತ ಪುಡಾರಿಗಳ ಮೂಲಕ ಜನರನ್ನು ಗಂಟಿಚೋರರ ವಿರುದ್ಧ ಎತ್ತಿ ಕಟ್ಟಿದರು.

ಇದರ ಪರಿಣಾಮವಾಗಿ ಗಂಟಿಚೋರರ ಮೇಲೆ ಹಲ್ಲೆಗಳಾಗಲು ಶುರುವಾದವು. 2015ರಲ್ಲಿ ಸ್ವಾಮಿಯ ಪ್ರಚೋದನೆಯಿಂದ ದೊಡ್ಡ ಗುಂಪೊಂದು ರಾತ್ರೋ ರಾತ್ರಿ ಗಂಟಿಚೋರರ ಮನೆ ಹೊಕ್ಕು ಮಹಿಳೆ ಮಕ್ಕಳೆನ್ನದೇ ಥಳಿಸುತ್ತ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತ ಸಾಗಿತು. ಏನಾಗುತ್ತಿದೆ ಎಂದು ನೋಡಲು ಹೊರಬಂದ ವೃದ್ಧ ಮಾಂತಪ್ಪ ಗುಡಗೇರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಆಯಿತು. ಮರುದಿನ ಇಡೀ ಬಾಲೆಹೊಸೂರು ಪ್ರಕ್ಷುಬ್ದತೆಗೆ ಒಳಗಾಗಿತು.

ವಕೀಲ ಅನಂತ್ ಕಟ್ಟಿಮನಿ ನೇತೃತ್ವದಲ್ಲಿ ಗಂಟಿಚೋರ್ ಸಮುದಾಯದ ಹಿರಿಯರು ಮತ್ತು ಯುವಕರು ಸ್ವಾಮಿ ವಿರುದ್ಧ ಕೊಲೆಪ್ರಯತ್ನ ದೂರು ದಾಖಲಿಸಿದರು. ಸ್ವಾಮಿ ರಾತ್ರೋರಾತ್ರಿ ಪರಾರಿಯಾದರು. ಬಂಧನದ ಭೀತಿಯಿಂದ ಭೂಗತರಾದರು. ಆಗಲೇ ಸ್ವಾಮಿಗೆ ಯಾವನೋ ಒಬ್ಬ ಕ್ರಿಮಿನಲ್ ಐಡಿಯಾ ಕೊಟ್ಟ. ಬಾಲೆಹೊಸುರಿನಲ್ಲಿ ಇರುವ ಗಂಟಿಚೋರರೆಲ್ಲ ನಿಜವಾಗಿಯೂ ಗಂಟಿಚೋರರಲ್ಲ. ಗಿರಣಿ ವಡ್ಡರ್ ಎಂಬ ಸರ್‍ನೇಮ್ ( ಅಡ್ಡ ಹೆಸರು) ಇರುವವರೆಲ್ಲಾ ನಕಲಿ ಗಂಟಿಚೋರರಾಗಿದ್ದು, ಇವರೆಲ್ಲ ಎಸ್‍ಸಿ ಸಮುದಾಯದ ಸವಲತ್ತನ್ನು ಬಾಚಿಕೊಳ್ಳುತ್ತಿದ್ದಾರೆ ಎಂದು ಕೆಲವರನ್ನು ಮುಂದೆ ಕಳಿಸಿ ಕೋರ್ಟಿಗೆ ಅರ್ಜಿ ಹಾಕಿಸಿದ. ಇದನ್ನೇ ನೆಪ ಮಾಡಿಕೊಂಡ ಜಿಲ್ಲಾಡಳಿತ ತಟಸ್ಥ ಸ್ಥಿತಿಗೆ ಬಂದಿತು. ಆದರೆ ಇದರ ವಿರುದ್ದ ಗಂಟಿಚೋರರು ಪ್ರಗತಿಪರರ ನೇತೃತ್ವದಲ್ಲಿ ಅನಿರತ ಹೋರಾಟ ಮಾಡಿದಾಗ ಎಚ್‍ಕೆ ಪಾಟೀಲರು ಮತ್ತು ಅಂದಿನ ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಕಾಳಜಿ ವಹಿಸಿದ್ದರಿಂದ ಗಿರಣಿ ವಡ್ಡರ್ ಸೇರಿದಂತೆ ಹಾಗೆ ಹೋಲುವ ಅಡ್ಡ ಹೆಸರಿನ ಎಲ್ಲರಿಗೂ ಎಸ್‍ಸಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಹೊರಬಿತ್ತು. ಮುಂದೆ ಪ್ರಸನ್ನಕುಮಾರ್ ವರ್ಗಾ ಆಗಿ ಹೋದರು. ನಂತರ ಬಂದ ಡಿಸಿಗಳ ಮೇಲೆ ದಿಂಗಾಲೇಶ್ವರ ಸ್ವಾಮಿಯ ಪುಡಾರಿ ಭಕ್ತರು ಒತ್ತಡ ಹಾಕಿ ಈ ವಿಷಯ ನೆನೆಗುದಿಗೆ ಬರುವಂತೆ ಮಾಡಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣಕುಮಾರ್ ಜೋಳದಕೂಡ್ಲಿಗಿ ಅವರಿಂದ ನಡೆಸಿದ ಸಂಶೋಧನೆಯಲ್ಲೂ ಈ ವಿಷಯದ ಬಗ್ಗೆ ಸಾಕಷ್ಟು ದಾಖಲೆಗಳನ್ನು ಒದಗಿಸಿದ್ದು, ಗಿರಣಿ ವಡ್ಡರ್ ಸೇರಿದಂತೆ ಇತರ ಹೆಸರಿನ ಎಲ್ಲ ಗಂಟಿಚೋರರೂ ಎಸ್‍ಸಿ ಸಮುದಾಯಕ್ಕೆ ಸೇರಿದವರು, ಇದಕ್ಕೆ ಸಂವಿಧಾನದ ಆಸರೆಯಿದೆ ಎಂದು ಸಾಬೀತು ಮಾಡಲಾಗಿದೆ.

ಆದರೂ, ಈಗಲೂ ಜಿಲ್ಲಾಡಳಿತ ಗಂಟಿಚೋರ್ ಎಂಬ ಸಣ್ಣ ಜನಸಂಖ್ಯೆ ಸಮುದಾಯಕ್ಕೆ. ಅದೂ ಮುಖ್ಯವಾಗಿ ಬಾಲೆ ಹೊಸೂರಿನ ಸಮುದಾಯಕ್ಕೆ ಕಾಟ ಕೊಡುತ್ತಿದೆ ಎಂದರೆ ಏನರ್ಥ? ಕೊಲೆ ಆರೋಪಿ ದಿಂಗಾಲೇಶ್ವರ ಸ್ವಾಮಿಯ ಒತ್ತಡವೇ ಅಲ್ಲವೇ?

ಜಿಲ್ಲಾಧಿಕಾರಿ ಹಿರೇಮಠರು ಇಂತಹ ಒತ್ತಡಕ್ಕೆ ಒಳಗಾಗಿರುವ ಸಂಶಯ ಕಾಣುತ್ತಿದೆ. ಗಂಟಿಚೋರರಿಗೆಲ್ಲ ಎಸ್‍ಸಿ ಪ್ರಮಾಣಪತ್ರ ಕೊಡಬೇಕು ಎಂಬ ಆದೇಶ ಬರಲು ಕಾರಣವಾಗಿದ್ದ ಎಚ್‍ಕೆ ಪಾಟೀಲರು ಈ ಬಗೆ ಕೂಡಲೇ ಗಮನ ಹರಿಸಬೇಕಾಗಿದೆ. ಶಿರಹಟ್ಟಿಯ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕೂಡ ಸ್ವಾಮಿಯ ಬೆಂಬಲಕ್ಕೆ ಇದ್ದಾರೆ ಎಂಬ ಮಾತೂ ಇದೆ.

ಆದಷ್ಟು ಬೇಗ ಈ ವಿಷಯದಲ್ಲಿ ಗಂಟಿಚೋರರಿಗೆ ನ್ಯಾಯ ಸಿಗಲೇಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ತೀವ್ರ ಹೋರಾಟ ನಡೆಸಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...