Homeಅಂಕಣಗಳುಕಲಾಮಾಧ್ಯಮವಾಗಿ ಹರಿಕಥೆ

ಕಲಾಮಾಧ್ಯಮವಾಗಿ ಹರಿಕಥೆ

- Advertisement -
- Advertisement -

 ಭಾರತೀ ದೇವಿ.ಪಿ |

ಬಹುತ್ವದ ನಾಡಾದ ಭಾರತದಲ್ಲಿ ನಮ್ಮ ನಡುವಣ ಹಲವು ಕಲೆಗಳು ನಮಗೆ ಕಾಣಿಸುವುದು ಧಾರ್ಮಿಕ ಪರಿವೇಷದೊಳಗೇ. ಯಕ್ಷಗಾನ, ಹರಿಕಥೆ, ಭಜನೆ, ಶಾಸ್ತ್ರೀಯ ಸಂಗೀತ ಹೀಗೆ ಕಲೆಗಳನ್ನು ಹಿಂದಿನಿಂದಲೂ ಒಂದು ತತ್ವದ ವಾಹಕವಾಗಿ ಬಳಸಿಕೊಂಡು ಬರಲಾಗಿದೆ. ಕಲೆ ಅನ್ನುವುದು ಯಾವಾಗಲೂ ಶುದ್ಧಾಂಗ ಕಲೆಯಾಗಿ ಇರುವುದು ಅಸಾಧ್ಯ. ಅದು ಶುದ್ಧಕಲೆಯಂತೆ ಕಾಣಿಸುತ್ತಿರುವ ಸಂದರ್ಭದಲ್ಲೂ ಹೀಗೆ ಇರುವ ಮೂಲಕವೇ ಏನೋ ಒಂದನ್ನು ಬೆಂಬಲಿಸುತ್ತಿರುತ್ತದೆ. ಅಲ್ಲದೇ, ಕಲೆ ಒದಗಿಸುವ ಆಹ್ಲಾದ, ಅರಿವಿನ ಆಚೆಗೂ ಯಾವುದೇ ವಿಚಾರದ ಸಂವಹನಕ್ಕೆ ಕಲೆ ಮಾಧ್ಯಮವಾಗಿ ಬಳಕೆಯಾಗುವುದು ನಮ್ಮ ನಡುವೆ ಅಪರೂಪದ ಮಾತೇನಲ್ಲ. ಕಲೆ ಯಾವ ವಿಚಾರವನ್ನು ಸಂವಹನ ಮಾಡುತ್ತಿದೆ ಎಂಬುದನ್ನು ವಿಮರ್ಶಿಸಿ ತಪ್ಪು-ಒಪ್ಪುಗಳ ಚರ್ಚೆ ಮಾಡುವುದು ಅಗತ್ಯ. ಆದರೆ ನಮ್ಮ ಚರ್ಚೆ ಅಷ್ಟಕ್ಕೇ ಸೀಮಿತವಾಗದೇ ಎಲ್ಲ ವಿಚಾರಗಳಾಚೆ ಒಂದು ಮಾಧ್ಯಮವಾಗಿ ಕಲೆಯ ಸಾಧ್ಯತೆಯ ಶೋಧ ನಡೆಸುವುದು ಮುಖ್ಯ ಎನಿಸುತ್ತದೆ.
ಹರಿಕಥೆ ಜನರ ನಡುವಣ ಒಂದು ಕಲೆ. ಭಾಗವತ ಪಂಥದ ಭಾಗವಾಗಿ, ಭಕ್ತಿ ಪರಂಪರೆಯ ಧಾರೆಯಾಗಿ, ಧಾರ್ಮಿಕ ತತ್ವಗಳ ವಾಹಕವಾಗಿ, ಜನರ ನಾಡಿಮಿಡಿತವನ್ನು ತಟ್ಟುವ ಪ್ರಕಾರವಾಗಿ ಹರಿಕಥೆ ಸಮುದಾಯಗಳ ಮಧ್ಯೆ ಬೆಳೆದಿದೆ. ಕಥನ, ಹಾಡು, ತತ್ವ ವಿವೇಚನೆಗಳು ಮಿಳಿತಗೊಂಡು ಈ ಪ್ರಕಾರ ಜನಾಕರ್ಷಕವಾಗಿದ್ದು ಪರಿಣಾಮಕಾರಿಯಾಗಿ ವಿಚಾರವನ್ನು ತಲುಪಿಸುತ್ತದೆ. ಇಂತಹ ಆಕರ್ಷಕ ಪ್ರಕಾರವನ್ನು ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಭಾರತದಾದ್ಯಂತ ಗುರುತಿಸಬಹುದು. ಕಥಾಕೀರ್ತನ, ಸಂಕೀರ್ತನ, ಅಭಂಗ ಸಂಕೀರ್ತನ, ಕಥಾ ಕಾಲಕ್ಷೇಪ, ಹರಿಕಥೆ, ಶಿವಕಥೆ ಹೀಗೆ ಹಲವು ಹೆಸರುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ದೇವಸ್ಥಾನಗಳು ಮುಂತಾದ ಧಾರ್ಮಿಕ ಕೇಂದ್ರಗಳು, ಸಮುದಾಯಗಳು ಈ ಕಲೆಯನ್ನು ಪೋಷಿಸುತ್ತಾ ಬಂದಿರುವ ಬಗೆಯನ್ನೂ ಗಮನಿಸಬಹುದು. ಇದರ ಬಗ್ಗೆ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ.
ಇಂದು ಯಕ್ಷಗಾನದಂತಹ ಕೆಲವು ಕಲೆಗಳನ್ನು ಹೊರತುಪಡಿಸಿದರೆ ಬಹುತೇಕ ಕಲೆಗಳು ಹಿಂದೆ ತಮಗೆ ಇದ್ದ ಅಪಾರ ಸಂಖ್ಯೆಯ ಪ್ರೇಕ್ಷಕ, ಶ್ರೋತೃ ವರ್ಗವನ್ನು ಕಳೆದುಕೊಂಡಿವೆ. ಇದಕ್ಕೆ ಆರ್ಥಿಕ ಕಾರಣಗಳಿದ್ದಂತೆ ಸಾಮಾಜಿಕ ಕಾರಣಗಳೂ ಇವೆ. ಹಿಂದೆ ಜಾತ್ರೆ, ಹಬ್ಬ, ವಿಶೇಷ ಸಮಾರಂಭಗಳಲ್ಲಿ ಇರುತ್ತಿದ್ದ ಕಲೆಗಳ ಜಾಗದಲ್ಲಿ ಆರ್ಕೆಸ್ಟ್ರಾ, ನೃತ್ಯಗಳು ಬಂದಿವೆ. ಮನೆಗಳಲ್ಲಿ ಟಿ.ವಿ ಆಗಮಿಸಿದೆ. ಇದು ಮೇಲುನೋಟಕ್ಕೆ ಎಲ್ಲರಿಗೂ ಕಾಣುತ್ತಿರುವ ಸ್ಥಿತ್ಯಂತರವಾದರೆ, ಕಲೆಗಳು ಪಡೆದಿರುವ ವಿಸ್ತರಣೆ ಮತ್ತು ಕಲೆಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಕೈವಶ ಮಾಡಿಕೊಳ್ಳುತ್ತಿರುವ ಪ್ರಕ್ರಿಯೆಯನ್ನೂ ಗಮನಿಸಬೇಕಾಗಿದೆ. ಇಂದಿನ ಲೌಕಿಕ ಅಗತ್ಯಗಳಿಗೆ ತಕ್ಕಂತೆ ಕಲೆಗಳನ್ನು ವಾಹಕವಾಗಿ ಬಳಸುತ್ತಿರುವ ಬಗೆ ಒಂದೆಡೆಯಾದರೆ ತಮ್ಮ ಅಜೆಂಡಾಗಳನ್ನು ಸಾರಲು ಕಲೆಗಳನ್ನು ಬಳಸಿಕೊಳ್ಳುತ್ತಿರುವ ಅಪಾಯ ಇನ್ನೊಂದೆಡೆ.
ಹರಿಕಥೆ, ಶಿವಕಥೆಗಳ ಕಲಾತ್ಮಕ ವಿನ್ಯಾಸ ಇಂದು ಕೇವಲ ಧಾರ್ಮಿಕ ಕಥನಗಳನ್ನು ಹೇಳುವ ಚೌಕಟ್ಟಿಗಷ್ಟೆ ಸೀಮಿತವಾಗಿ ಉಳಿದಿಲ್ಲ. ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಸಾಮಾಜಿಕ ಸಂಗತಿಗಳನ್ನು ಹೇಳುವುದಕ್ಕೆ ಬಳಕೆ ವಿಸ್ತರಣೆಗೊಂಡಿರುವ ಬಗೆಯನ್ನು ಗಮನಿಸಬಹುದು. ಮಹಾರಾಷ್ಟ್ರದಲ್ಲಿ ಇದೇ ಹಾಡು, ಕಥನ, ತತ್ವ ಚಿಂತನೆಯ ವಿನ್ಯಾಸದಲ್ಲಿ ಅಂಬೇಡ್ಕರ್ ಜೀವನಗಾಥೆಯನ್ನು ನಿರೂಪಿಸುವ ಬಗೆ ಮನಮುಟ್ಟುವಂತೆ ಕಾಣಿಸಿಕೊಳ್ಳುತ್ತದೆ. ಇದನ್ನು ಭಾರತದ ಮಹತ್ವದ ಚಿತ್ರನಿರ್ಮಾಣಕಾರ ಆನಂದ ಪಟವರ್ಧನ್ ಅವರು ತಮ್ಮ ‘ಜೈಭೀಮ್ ಕಾಮ್ರೇಡ್’ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಇನ್ನು ಕೆಲವೆಡೆ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಕತೆಗಳನ್ನು ಈ ವಿನ್ಯಾಸಕ್ಕೆ ಅಳವಡಿಸಿ ಪ್ರಸ್ತುತಪಡಿಸಿರುವ ಬಗೆ ಕಾಣಸಿಗುತ್ತದೆ. ಇನ್ನು ಈ ಬಗೆಯ ವಿಸ್ತರಣಗಳು ಒಂದುಕಡೆಯಾದರೆ ಇನ್ನೊಂದೆಡೆ ಕಲೆಗಳು ಕಾರ್ಪೊರೇಟೀಕರಣಗೊಂಡ ಬಗೆಯೂ ಗಮನಿಸಬೇಕಾದ ಸಂಗತಿ. ಕಲೆಯನ್ನು ಇಂದಿನ ಜನರ ಅಗತ್ಯಗಳಿಗೆ ಒಗ್ಗಿಸಿಕೊಳ್ಳುವ ಬಗೆ, ಮಾರುಕಟ್ಟೆ ನೀತಿಗಳಿಗೆ ಹೊಂದುವಂತೆ ಪ್ರಸ್ತುತಪಡಿಸುವ ಬಗೆ ಸಾಕಷ್ಟು ಬದಲಾವಣೆ, ವಿಸ್ತರಣೆಗೆ ಕಾರಣವಾಗಿದೆ. ಕ್ಯಾಸೆಟ್, ಸಿಡಿಗಳ ಅಗತ್ಯಕ್ಕನುಗುಣವಾಗಿ ಕತೆಯನ್ನು ಹಿಗ್ಗಿಸುವ, ಕುಗ್ಗಿಸುವ ರೀತಿಯಿಂದ ಹಿಡಿದು ವಿಷಯದ ಆಯ್ಕೆಯವರೆಗೂ ಇದು ಕೆಲಸ ಮಾಡಿದೆ. ಇನ್ನು, ಪ್ರಭುತ್ವಗಳು ತಮ್ಮ ಜನಪರ ಕಾರ್ಯಕ್ರಮಗಳ ಪ್ರಚಾರದ ಭಾಗವಾಗಿ ಕಲೆಗಳನ್ನು ಬಳಸಿಕೊಳ್ಳುವುದನ್ನೂ ನೋಡಬಹುದಾಗಿದೆ. ಸ್ವಚ್ಛ ಭಾರತ, ಕುಟುಂಬ ಯೋಜನೆ ಹೀಗೆ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಜನರ ಗಮನ ಸೆಳೆಯುವಂತೆ ಈ ಕಲಾವಿನ್ಯಾಸವನ್ನು ಬಳಸಿಕೊಳ್ಳಲಾಗಿದೆ. ಇವೆಲ್ಲವುಗಳಾಚೆಗೆ ತುಂಬಾ ಅಪಾಯಕಾರಿ ಬೆಳವಣಿಗೆಯೆಂದರೆ ಕೋಮುವಾದಿ ಅಜೆಂಡಾಗಳನ್ನು ಜನಕ್ಕೆ ಹತ್ತಿರವಾದ ಕಲೆಗಳೊಳಗೆ ತುರುಕುವುದು. ತಾರತಮ್ಯದ ಎಳೆಗಳನ್ನು ಹೊಂದಿರುವ ಧಾರ್ಮಿಕ ಕಥನಗಳೊಳಗೆ ಬಹಳ ಸುಲಭವಾಗಿ ಇಂತಹ ವಿಚಾರಗಳನ್ನು ತುರುಕಬಹುದು. ಇತರ ಕಲೆಗಳೂ ಈ ಹಿಡಿತದಿಂದ ಪಾರಾಗಿಲ್ಲ. ಇದು ಕರಾವಳಿಯ ಕಲಾಪ್ರಕಾರವಾದ ಯಕ್ಷಗಾನದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಆಗಿರುವುದನ್ನು ಗಮನಿಸಬಹುದು.
ಹರಿಕಥೆಯ ರೀತಿಯಲ್ಲಿ ಜನಸಮೀಪವಾದ ಕಲೆಗಳಿಗಿರುವ ಬಹುದೊಡ್ಡ ಶಕ್ತಿಯೆಂದರೆ ಜನರನ್ನು ದೊಡ್ಡ ಪ್ರಮಾಣದಲ್ಲಿ ಒಳಗು ಮಾಡಿಕೊಳ್ಳುವ ಸಾಮಥ್ರ್ಯ. ಹರಿಕಥೆ ಮತ್ತು ಅದಕ್ಕೆ ಸಂವಾದಿಯಾದ ಕಲೆಗಳನ್ನು ಪ್ರದರ್ಶನ ಮಾಡುವವರಲ್ಲಿ ಎಲ್ಲ ಸಮುದಾಯಗಳ ಪ್ರಾತಿನಿಧ್ಯವೂ ಗೋಚರಿಸುತ್ತದೆ. ಪ್ರಮಾಣದಲ್ಲಿ ಹೆಚ್ಚು ಕಡಿಮೆ ಇರಬಹುದು. ಅವು ಜನಪದ ಮಟ್ಟುಗಳಿಗೆ ಹತ್ತಿರವಾದ ಸಂಗೀತದ ಮೂಲಕ, ಜನಭಾಷೆಯ ಮೂಲಕ ಸಂವಾದಕ್ಕಿಳಿಸುತ್ತವೆ. ಇಂತಹ ಪ್ರಕಾರಗಳನ್ನು ಉಳಿಸಿಕೊಳ್ಳುವ, ಈ ಮೂಲಕ ಜನಪರ ವಿಚಾರಗಳನ್ನು ಹಬ್ಬುವ ಸಾಧ್ಯತೆ ಬಗ್ಗೆ ಚಿಂತಿಸಬೇಕಾಗಿದೆ.
ಈಗ ನಮ್ಮ ಮುಂದಿರುವ ಸವಾಲೆಂದರೆ, ಈ ಕಲಾವಿನ್ಯಾಸದೊಳಗಿನ ಹಲವು ವಿಚಾರಗಳನ್ನು ಒಪ್ಪದೇ ಇರುವ ಸಂದರ್ಭದಲ್ಲೂ ಒಂದು ಪ್ರಕಾರವಾಗಿ ಇದು ಜನರ ನಡುವೆ ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬುದು. ವೈಚಾರಿಕವಾಗಿ ಚಿಂತಿಸುತ್ತಿರುವ ಸಂದರ್ಭದಲ್ಲೇ ಕಲೆಗಳ ಬಹುಮುಖ ಸಾಧ್ಯತೆಗಳನ್ನು ಕಡೆಗಣಿಸದೇ ಅವುಗಳನ್ನು ಹೇಗೆ ಜನರನ್ನು ಬೆಸೆಯುವ ಕೊಂಡಿಯಾಗಿಸಬಹುದು ಎಂಬ ಬಗ್ಗೆ ಯೋಚಿಸುವ ಅಗತ್ಯವಿದೆ. ಇದಕ್ಕೆ ಈಗಾಗಲೇ ಹಲವು ಮಾದರಿಗಳು ನಮ್ಮ ಮುಂದೆ ಇವೆ. ‘ಸಮುದಾಯ’ ಸಂಘಟನೆ ಬಹಳ ದೊಡ್ಡ ಪ್ರಮಾಣದಲ್ಲಿ ಈ ಯತ್ನ ಮಾಡಿದೆ, ಮಾಡುತ್ತಿದೆ. ಮಹಾರಾಷ್ಟ್ರದ ಕಬೀರ್ ಕಲಾಮಂಚ್ ಹಾಡು, ನಾಟಕ, ಕಥನಗಳ ನಿರೂಪಣೆಗಳ ಮೂಲಕ ಜನರನ್ನು ವ್ಯಾಪಕವಾಗಿ, ಪರಿಣಾಮಕಾರಿಯಾಗಿ ತಟ್ಟಿದ ಬಗೆ ನಮ್ಮ ಮುಂದಿದೆ. ರಂಗಭೂಮಿಯೂ ಹರಿಕಥೆ, ತಕ್ಷಗಾನ, ಬಾವುಲ್, ಪಾಂಡ್ವಾನಿ ಮೊದಲಾದ ಪ್ರಕಾರಗಳನ್ನು ನಿರೂಪಣೆಯಲ್ಲಿ ವೈವಿಧ್ಯತೆ ಸಾಧಿಸಿಕೊಳ್ಳುವ ದಾರಿಯಲ್ಲಿ ಬಳಸಿಕೊಳ್ಳುತ್ತಾ ಬಂದುದಕ್ಕೆ ಹಲವು ಉದಾಹರಣೆಗಳಿವೆ. ಈ ದಿಸೆಯಲ್ಲಿ ಹರಿಕಥೆಯ ಕಲಾವಿನ್ಯಾಸವನ್ನು ಇರಿಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಬಹುದು. ಜನಪರ ಚಳುವಳಿ, ಚಿಂತನೆ ಕಟ್ಟುವಲ್ಲಿ ಇದೂ ಒಂದು ದಾರಿಯಾಗಬಹುದು.
ಹರಿಕಥೆಯ ಪುನರುಜ್ಜೀವನಕ್ಕಾಗಿ ರೂಪುಗೊಂಡಿರುವ ಕಥಾ ಕೀರ್ತನ ಪರಿಷತ್ ಇದೆ; ಸಂಗೀತ ನೃತ್ಯ ಅಕಾಡೆಮಿ ಇದೆ. ಮಾತ್ರವಲ್ಲ ಇತರ ಯಾವುದೇ ಸಂಘಟನೆಯ ಮೂಲಕವಾಗಲೀ, ವೈಯಕ್ತಿಕ ನೆಲೆಯಲ್ಲಾಗಲೀ ಈ ಬಗೆಯ ಯತ್ನಕ್ಕೆ ಮನಸ್ಸು ಮಾಡಬಹುದಾಗಿದೆ. ಕೇವಲ ಧಾರ್ಮಿಕ ವಲಯದಲ್ಲಿ ಇಂತಹ ಕಲೆಗಳಿಗೆ ಪೋಷಣೆ ನೀಡುವುದರಾಚೆಗೆ ಸಾಮಾಜಿಕ ನೆಲೆಗಳನ್ನೂ ಒಳಗೊಂಡು ಪ್ರಜಾಸತ್ತಾತ್ಮಕವಾಗಿ ಚಿಂತಿಸುವ ಅಗತ್ಯವಿದೆ. ಕಲೆಗಳ ಉಳಿವು, ಪೋಷಣೆ, ಜನಪರ ಚಿಂತನೆಯ ಪ್ರಸಾರ ಈ ಎಲ್ಲವುಗಳ ದೃಷ್ಟಿಯಿಂದಲೂ ಇದು ಮುಖ್ಯವೆನಿಸುತ್ತದೆ.

(ಚರ್ಚೆಯ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಪುರುಷೋತ್ತಮ ಬಿಳಿಮಲೆಯವರು ಹಂಚಿಕೊಂಡ ವಿಚಾರಗಳಿಗೆ ಋಣಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...