Homeಕರ್ನಾಟಕಎಚ್‌.ಡಿ.ಕೋಟೆ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಖಾತೆ ತೆರೆಯುವುದೇ?

ಎಚ್‌.ಡಿ.ಕೋಟೆ ಕ್ಷೇತ್ರ: ತ್ರಿಕೋನ ಸ್ಪರ್ಧೆಯಲ್ಲಿ ಬಿಜೆಪಿ ಖಾತೆ ತೆರೆಯುವುದೇ?

- Advertisement -
- Advertisement -

ವನಸಿರಿ ನಾಡು ಎಂದೇ ಖ್ಯಾತವಾಗಿರುವ ಎಚ್.ಡಿ.ಕೋಟೆ ತಾಲ್ಲೂಕು ರಾಜಕೀಯವಾಗಿಯೂ ಗಮನ ಸೆಳೆಯುತ್ತದೆ. ನದಿ, ತೊರೆ, ಡ್ಯಾಮ್‌, ಕಾಡು, ಆದಿವಾಸಿಗಳು, ಕಾಡಂಚಿನ ಜನರು ವೈವಿಧ್ಯಮಯವಾಗಿ ಗಮನ ಸೆಳೆಯುವ ಎಚ್‌.ಡಿ.ಕೋಟೆ- ಸರಗೂರು ತಾಲ್ಲೂಕುಗಳನ್ನು ಒಳಗೊಂಡ ಎಚ್‌.ಡಿ.ಕೋಟೆ ವಿಧಾನಸಭಾ ಕ್ಷೇತ್ರವು ಮೊದಲಿನಿಂದಲೂ ಜನತಾ ಪರಿವಾರ ಮತ್ತು ಕಾಂಗ್ರೆಸ್‌ನ ಭದ್ರಕೋಟೆ. ಈಗ ಬಿಜೆಪಿಯೂ ಇಲ್ಲಿ ನೆಲೆ ಕಾಣಲು ಯತ್ನಿಸುತ್ತಿದೆ. ಜೆಡಿಎಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಂ.ಕೃಷ್ಣನಾಯಕ ಬಿಜೆಪಿ ಸೇರಿದ ಮೇಲೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಹಾಲಿ ಶಾಸಕರಾಗಿರುವ ಅನಿಲ್‌ ಚಿಕ್ಕಮಾದು (ಸಿ.ಅನಿಲ್‌ಕುಮಾರ್‌) ಅವರು ಮಾಜಿ ಶಾಸಕ ಚಿಕ್ಕಮಾದು ಅವರ ಪುತ್ರ. ಜೆಡಿಎಸ್‌ನಲ್ಲಿ ಇದ್ದು ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಶಾಸಕರನ್ನಾಗಿ ಮಾಡುವಲ್ಲಿ ದಿವಂಗತ ಆರ್‌.ಧ್ರುವನಾರಾಯಣ್ ಅಂತಹ ನಾಯಕರ ಪಾತ್ರ ಮಹತ್ವದ್ದಾಗಿದೆ. ಈಗ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಎರಡನೇ ಅವಧಿಗೆ ಆಯ್ಕೆಯಾಗಲು ಸ್ಪರ್ಧಿಸಿದ್ದಾರೆ. ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಅವರಿಗೆ ಜೆಡಿಎಸ್‌ ಟಿಕೆಟ್‌ ಸಿಕ್ಕಿದೆ. ಹೀಗಾಗಿ ಇಬ್ಬರು ಮಾಜಿ ಶಾಸಕರ ಪುತ್ರರ ಜೊತೆಗೆ ಕೃಷ್ಣ ನಾಯಕ ಅವರು ಪ್ರಮುಖ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ.

ಕೇರಳದ ಗಡಿಗೆ ಹೊಂದಿಕೊಂಡ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಜಲಾಶಯ (ಕಬಿನಿ, ನುಗು, ತಾರಕ) ಇದ್ದರೂ ಅನೇಕ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ, ರಸ್ತೆಗಳು ಹಾಳಾಗಿವೆ, ಹಾಡಿಗಳು ಅಭಿವೃದ್ಧಿಯಾಗಿಲ್ಲ, ಆದಿವಾಸಿಗಳಿಗೆ ಸರಿಯಾದ ಪುನರ್‌ ವಸತಿ ಸಿಕ್ಕಿಲ್ಲ. ರೈತರಿಗೆ ಸಾಗುವಳಿ ಪತ್ರ ವಿತರಿಸುವಾಗ ಭ್ರಷ್ಟಚಾರ ಮಿತಿಮೀರಿದೆ- ಎಂಬಂತಹ ಗಂಭೀರ ಸಮಸ್ಯೆಗಳು ಕ್ಷೇತ್ರದಲ್ಲಿವೆ. ಹೀಗಾಗಿ ಹಾಲಿ ಶಾಸಕ ಅನಿಲ್ ಅವರಿಗೆ ಸವಾಲು ಎದರಾಗಿದೆ. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರು ಕಾಂಗ್ರೆಸ್ ಜೊತೆಗಿದ್ದಾರೆ. ಜಾತಿವಾರು ಸಾಂಪ್ರದಾಯಿಕ ಮತಗಳು ಕಾಂಗ್ರೆಸ್‌ ಜೊತೆಗಿವೆ. ಬಂಡಾಯವೆದ್ದವರು ಬೇರೆ ಪಕ್ಷಗಳಿಗೆ ಹೋಗಿ ಸೇರಿಕೊಂಡಿದ್ದಾರೆ. ಹೀಗಾಗಿ ಒಳೇಟು ಕೂಡ ಅನಿಲ್ ಅವರಿಗೆ ಇಲ್ಲವಾಗಿದೆ.

ಹಾಲಿ ಶಾಸಕ ಅನಿಲ್ ಚಿಕ್ಕಮಾದು

ಗಮನಾರ್ಹವಲ್ಲದಿದ್ದರೂ ಒಂದಿಷ್ಟು ಕೆಲಸಗಳನ್ನು ಅನಿಲ್ ಮಾಡಿದ್ದಾರೆಂಬ ಶ್ಲಾಘನೆಯೂ ಇದೆ. ಆದರೆ ಇವರಿಗೆ ಎದುರಾಗಿ ನಿಂತಿರುವ ಬಿಜೆಪಿ ಅಭ್ಯರ್ಥಿಯೂ ಗಮನಾರ್ಹ ಬೆಂಬಲಿಗರನ್ನು ಹೊಂದಿದ್ದಾರೆ ಎಂಬುದು ಕ್ಷೇತ್ರದ ಜನತೆಯ ಮಾತು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಬಳಿಕ ಎಚ್‌.ಡಿ.ಕೋಟೆಯು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರವಾಯಿತು. ಅದಕ್ಕೂ ಮುಂಚೆ ಹೆಚ್ಚು ಕಾಲ ಈ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಕ್ಷೇತ್ರದ ಒಳಗಿನವರಿಗೆ ಮತ್ತು ಹೊರಗಿನಿಂದ ಬಂದವರಿಗೂ ಇಲ್ಲಿನ ಜನತೆ ಮಣೆ ಹಾಕಿದ್ದಾರೆ. ಇಲ್ಲಿಯವರೆಗೆ ಬಿಜೆಪಿ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಕ್ಷೇತ್ರದ ರಾಜಕಾರಣದ ಏಳುಬೀಳು

ಉದ್ಯೋಗ ಅರಸಿ ಎಚ್.ಡಿ.ಕೋಟೆಗೆ ಬಂದಿದ್ದ ಕುಟುಂಬದ ಹಿನ್ನೆಲೆಯ ಪೀರಣ್ಣ ಮೂರು ಅವಧಿ ಶಾಸಕರಾಗಿ ಹ್ಯಾಟ್ರಿಕ್‌ ಭಾರಿಸಿದ್ದರು. ನಂತರ ಅವರ ಪುತ್ರ ಎಂ.ಪಿ.ವೆಂಕಟೇಶ್ ಎರಡು ಬಾರಿ ಗೆದ್ದಿದ್ದು ಇಲ್ಲಿನ ವಿಶೇಷ. ಹುಣಸೂರು ಕ್ಷೇತ್ರದವರಾದ ಚಿಕ್ಕಮಾದು ಇಲ್ಲಿಗೆ ವಲಸೆ ಬಂದು ಗೆದ್ದಿದ್ದರು. ಆನಂತರ ಅವರ ಪುತ್ರ  ಚಿಕ್ಕಮಾದು ಈಗ ಶಾಸಕರಾಗಿದ್ದಾರೆ. ಎಚ್.ಡಿ.ಕೋಟೆ ತಾಲ್ಲೂಕಿನವರೇ ಆದ ಎಂ.ಶಿವಣ್ಣ ಎರಡು ಬಾರಿ ಗೆದ್ದಿದ್ದರು. ಜೊತೆಗೆ ಎಸ್.ಎಂ.ಕೃಷ್ಣ ಅವರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ಬಿಜೆಪಿ ಸೇರಿಕೊಂಡಿದ್ದರೂ ಕ್ಷೇತ್ರದ ಮೇಲೆ ಅವರ ಪ್ರಭಾವ ಕಡಿಮೆಯಾಗಿದೆ. ಬಿಜೆಪಿಯಲ್ಲಿದ್ದರೂ ಮತದಾರರನ್ನು ಪ್ರಭಾವಿಸುವಷ್ಟು ಅವರೀಗ ಸಕ್ರಿಯವಾಗಿಲ್ಲ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಟಿ.ನರಸೀಪುರ: ಹಳೆ ಹುಲಿ ಮಹದೇವಪ್ಪ ಮತ್ತೆ ಪುಟಿದೇಳುವರೇ?

1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಎಚ್‌.ಡಿ.ಕೋಟೆಯು ಗುಂಡ್ಲುಪೇಟೆ ದ್ವಿಸದಸ್ಯ ಕ್ಷೇತ್ರವಾಗಿತ್ತು. 1957ರಲ್ಲಿ ನಡೆದ 2ನೇ ಚುನಾವಣೆಯಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರವಾಯಿತು. 1962ರಲ್ಲಿ ಸ್ವತಂತ್ರ ಕ್ಷೇತ್ರವಾಗಿ ಮಾರ್ಪಟ್ಟು ಪರಿಶಿಷ್ಟ ಜಾತಿಗೆ ಮೀಸಲಾಯಿತು. 1962ರಲ್ಲಿ ಸ್ವತಂತ್ರ ಪಾರ್ಟಿಯ ಆರ್‌.ಪೀರಣ್ಣ ಕಾಂಗ್ರೆಸ್‌ನ ಎನ್.ರಾಚಯ್ಯ ವಿರುದ್ಧ ಜಯಭೇರಿ ಭಾರಿಸಿದರು. 1967ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆರ್.ಪೀರಣ್ಣ ಪುನರಾಯ್ಕೆಯಾದರು. 1972ರಲ್ಲಿ ಅವರು ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿ ‘ಹ್ಯಾಟ್ರಿಕ್‌ ಗೆಲುವು’ ಪಡೆದರು. 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಚ್‌.ಬಿ.ಚಲುವಯ್ಯ, 1985ರಲ್ಲಿ ಕಾಂಗ್ರೆಸ್‌ನ ಎಂ.ಶಿವಣ್ಣ, 1989ರಲ್ಲಿ ಸಮಾಜವಾದಿ ಜನತಾ ಪಕ್ಷದ ಎಂ.ಪಿ.ವೆಂಕಟೇಶ್, 1994ರಲ್ಲಿ ಜನತಾದಳದ ಎನ್.ನಾಗರಾಜು, 1999ರಲ್ಲಿ ಮತ್ತೆ ಎಂ.ಶಿವಣ್ಣ, 2004ರ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಪಿ.ವೆಂಕಟೇಶ್ ಶಾಸಕರಾಗಿ ಆಯ್ಕೆಯಾಗಿದ್ದರು.

2008ರಲ್ಲಿ ಎಸ್‌ಟಿ ಮೀಸಲು ಕ್ಷೇತ್ರವಾದಾಗ, ಕಾಂಗ್ರೆಸ್‌ನ ಚಿಕ್ಕಣ್ಣ ಗೆಲುವು ಸಾಧಿಸಿದರು. 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಸ್.ಚಿಕ್ಕಮಾದು ಕಾಂಗ್ರೆಸ್‌ನ ಚಿಕ್ಕಣ್ಣ ಅವರನ್ನು ಮಣಿಸಿದರು. ಈ ನಡುವೆ ಚಿಕ್ಕಮಾದು ಅವರು ಸಾವನ್ನಪ್ಪಿದರು. 2018ರಲ್ಲಿ ಚಿಕ್ಕಮಾದು ಅವರ ಪುತ್ರ ಅನಿಲ್ ಅವರನ್ನು ಕಾಂಗ್ರೆಸ್‌ನತ್ತ ಕರೆತರಲಾಯಿತು. ಅನಿಲ್ ಚಿಕ್ಕಮಾದು 76,652 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು.

ಈವರೆಗಿನ ಚುನಾವಣೆಯ ಫಲಿತಾಂಶ ವಿವರ

ಕೃಷ್ಣ ನಾಯಕರ ಪ್ರಭಾವ

ಕಾಂಗ್ರೆಸ್, ಜೆಡಿಎಸ್, ಬಿಜೆಪಿ- ಈ ಮೂರು ಪಕ್ಷಗಳ ಅಭ್ಯರ್ಥಿಗಳು ಹಣಬಲವನ್ನು ಹೊಂದಿದ್ದಾರೆ. ಸದ್ಯಕ್ಕೆ ಕೃಷ್ಣ ನಾಯಕ ಅವರು ಕಮಲವನ್ನು ಅರಳಿಸಬಲ್ಲರೇ ಎಂಬ ಕುತೂಹಲ ಹೆಚ್ಚಿದೆ. ಕಳೆದ ಎಂಟು ವರ್ಷಗಳಿಂದ ಕ್ಷೇತ್ರದಲ್ಲಿ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಕೃಷ್ಣ ಅವರು ಜೆಡಿಎಸ್‌ನ ಕೈತಪ್ಪಿ ಬಿಜೆಪಿಗೆ ಬಂದಿದ್ದು, ರಾಜಕೀಯ ಪಲ್ಲಟಗಳಿಗೂ ಕಾರಣವಾಗಿದೆ. ಕೃಷ್ಣ ನಾಯಕ ಅವರು ಎಚ್‌.ಡಿ.ದೇವೇಗೌಡರ ಅಪ್ಪಟ ಅಭಿಮಾನಿಯಾಗಿ, ಸರಗೂರು ಮತ್ತು ಎಚ್.ಡಿ.ಕೋಟೆಯಲ್ಲಿ ಅಪ್ಪಾಜಿ ಕ್ಯಾಂಟೀನ್‌ ತೆರೆದು ಬಡವರಿಗೆ ಕಡಿಮೆ ದರದಲ್ಲಿ ಊಟ ನೀಡಿದವರು. ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್‌ಗಳನ್ನು ವಿತರಿಸಿದರು. ಜೆಡಿಎಸ್‌ ಟಿಕೆಟ್ ಸಿಗುತ್ತದೆ ಎಂದೇ ಭಾವಿಸಿದ್ದರು. ಆದರೆ ಕೊನೆಗಳಿಗೆಯಲ್ಲಿ ಕೈತಪ್ಪಿತು.

ಕೃಷ್ಣಾ ನಾಯಕ್ ಅವರು ಜೆಡಿಎಸ್‌ನಲ್ಲಿ ಇದ್ದಾಗಿನಿಂದಲೂ ಒಂದಿಷ್ಟು ಬೆಂಬಲಿಗರನ್ನು ಹೊಂದಿದ್ದರು. ಅವರೆಲ್ಲರೂ ಈಗ ಬಿಜೆಪಿಗೆ ಬಂದಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಬಿಜೆಪಿಗೆ ಸೇರಿದ ಬಳಿಕ ತಮ್ಮ ಮೂಲ ಬೆಂಬಲಿಗರಿಗೆ ಹೆಚ್ಚಿನ ಆದ್ಯತೆಯನ್ನು ಕೃಷ್ಣ ನೀಡುತ್ತಿದ್ದಾರೆಂಬ ಆಕ್ಷೇಪ ಇದೆ. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು ಇದ್ದೇ ಇವೆ.

ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯಕ

ಮಾಜಿ ಶಾಸಕ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್ ಅವರಿಗೆ ಸ್ಥಳೀಯ ಜೆಡಿಎಸ್ ಮುಖಂಡರು ಮತ್ತು ಪಕ್ಷದ ವರಿಷ್ಠರು ಒಲವು ತೋರಿದ್ದರಿಂದ ಟಿಕೆಟ್ ದೊರಕಿತು. ಕ್ಷೇತ್ರದಲ್ಲಿ ಜೆಡಿಎಸ್‌ನದ್ದೇ ಆದ ಮತಗಳು ಇದ್ದೇ ಇವೆ.  ಹೀಗಾಗಿ ಈ ಬಾರಿ ಅನಿಲ್‌ ಚಿಕ್ಕಮಾದು ಅವರಿಗೆ ಸವಾಲು ಎದುರಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಜಾತಿ ಲೆಕ್ಕಾಚಾರವನ್ನು ನೋಡುವುದಾದರೆ ಒಂದೊಂದು ಪಕ್ಷಕ್ಕೆ ಒಂದೊಂದು ಜಾತಿ ಮತಗಳು ಚದುರಿ ಹೋಗುತ್ತವೆ. ಪರಿಶಿಷ್ಟ ಜಾತಿಯ ಮತಗಳು (58,000) ಕ್ಷೇತ್ರದಲ್ಲಿ ಹೆಚ್ಚಿವೆ. ಪರಿಶಿಷ್ಟ ಪಂಗಡ (ನಾಯಕರು ಮತ್ತು ಆದಿವಾಸಿಗಳು ಸೇರಿ)- 41,000, ಲಿಂಗಾಯತರು- 33,000, ಒಕ್ಕಲಿಗರು- 23,000, ಕುರುಬರು- 12,000 ಮತದಾರರು ಇದ್ದಾರೆಂದು ಅಂದಾಜಿಸಲಾಗಿದೆ.

ಜೆಡಿಎಸ್ ಅಭ್ಯರ್ಥಿ ಜಯಪ್ರಕಾಶ್

ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಸಮಾಜ ಸೇವಕ ಬಾಬು ನಾಯಕ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಅವರು ಕಾಂಗ್ರೆಸ್ ಮತಗಳನ್ನು ಕಸಿಯುತ್ತಾರೆಂಬ ಭಯವೇನೂ ಅನಿಲ್ ಅವರಿಗೆ ಇಲ್ಲ. ಆದರೆ ಧ್ರುವನಾರಾಯಣ ಅವರ ಅನುಪಸ್ಥಿತಿ ಅನಿಲ್ ಅವರನ್ನು ಕಾಡಲಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಧ್ರುವ ಅವರು ಪ್ರಭಾವ ಹೊಂದಿದ್ದರು. ಸಂಸದರಾಗಿ ಅವರು ಮಾಡಿದ ಕೆಲಸಗಳನ್ನು ಕ್ಷೇತ್ರದ ಜನತೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಧ್ರುವ ಅವರಿಂದಾಗಿಯೇ ಅನಿಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆತು ಮೊದಲ ಸಲ ಗೆದಿದ್ದರು. ಆದರೆ ಧ್ರುವ ಅವರ ನಿಧನದ ಅನುಕಂಪ ಎಷ್ಟರ ಮಟ್ಟಿಗೆ ಅನಿಲ್ ಅವರಿಗೆ ವರದಾನವಾಗುತ್ತದೆ ಎಂಬುದು ಅಂದಾಜು ಸಿಗುತ್ತಿಲ್ಲ. ಅಂತಿಮವಾಗಿ ತ್ರಿಕೋನ ಸ್ಪರ್ಧೆಯಂತೂ ಕ್ಷೇತ್ರದಲ್ಲಿ ಏರ್ಪಡುವುದು ಖಚಿತ.

ಇದನ್ನೂ ಓದಿರಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹಾಸನ: ಒಕ್ಕಲಿಗರ ಮೇಲಾಟದ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ಫೈಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...