ಕಳೆದ ನಾಲ್ಕು ದಿನಗಳಿಂದ ಆಂಧ್ರಪ್ರದೇಶದ ಏಲೂರು ನಗರದಲ್ಲಿ ಕಾಣಿಸಿಕೊಂಡಿರುವ ನಿಗೂಢ ಖಾಯಿಲೆಗೆ ಕುಡಿಯುವ ನೀರು ಮತ್ತು ಹಾಲಿನಲ್ಲಿನ ಸೀಸ ಮತ್ತು ನಿಕ್ಕಲ್ ಅಂಶ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ನಿಗೂಢ ಕಾಯಿಲೆ ಇದುವರೆಗೆ ಒಂದು ಜೀವವನ್ನು ಬಲಿ ತೆಗೆದುಕೊಂಡಿದ್ದು, 500 ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಏಮ್ಸ್ ಮತ್ತು ರಾಜ್ಯ ಮತ್ತು ಕೇಂದ್ರ ಸಂಸ್ಥೆಗಳ ತಜ್ಞರ ತಂಡಗಳ ಪ್ರಾಥಮಿಕ ಸಂಶೋಧನೆಗಳ ಆಧಾರದ ಮೇಲೆ ಆರೋಗ್ಯ ಅಧಿಕಾರಿಗಳು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದರು.
ಏಮ್ಸ್ ತಜ್ಞರು ಸಿದ್ಧಪಡಿಸಿದ ವರದಿಯನ್ನು ಉಲ್ಲೇಖಿಸಿ ಸೀಸ ಮತ್ತು ನಿಕ್ಕಲ್ ಅಂಶವೇ ನಿಗೂಢ ಕಾಯಿಲೆಗೆ ಕಾರಣವಾಗಿರುವ ಅಂಶಗಳಾಗಿವೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಆಂಧ್ರ ಪ್ರದೇಶ: ನಿಗೂಢ ಕಾಯಿಲೆಗೆ ಓರ್ವ ಬಲಿ, 315ಕ್ಕೂ ಅಧಿಕ ಮಂದಿ ಅಸ್ವಸ್ಥ
Officials informed lead & nickel particulate matter was found in blood samples of patients in investigation conducted by All India Institute of Medical Sciences team. Similarly, Indian Institute of Chemical Technology is also running tests & results are awaited:Andhra Pradesh CMO https://t.co/ph3MNTecHL
— ANI (@ANI) December 8, 2020
ಕಳೆದ ಶನಿವಾರ ರಾತ್ರಿಯಿಂದ ಫಿಟ್ಸ್ ಮತ್ತು ವಾಕರಿಕೆಗಳಿಂದ ಬಳಲುತ್ತಿದ್ದ ಜನರು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು. 3-5 ನಿಮಿಷಗಳ ಕಾಲ ವಾಂತಿ, ಕೆಲವು ನಿಮಿಷಗಳವರೆಗೆ ಮರೆವು, ಆತಂಕ, ವಾಂತಿ, ತಲೆನೋವು ಮತ್ತು ಬೆನ್ನು ನೋವಿನಿಂದ ಜನರು ಪರದಾಡುತ್ತಿದ್ದರು ಎಂದು ಜಿಜಿಹೆಚ್ ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್ ಯಶಸ್ವಿ: ದೇಶಾದ್ಯಂತದ ಹೋರಾಟದ ಚಿತ್ರಗಳು
“ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಮತ್ತು ಇತರ ಸಂಸ್ಥೆಗಳು ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿವೆ ಮತ್ತು ಶೀಘ್ರದಲ್ಲೇ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ರೋಗಿಗಳ ದೇಹದಲ್ಲಿ ಸೀಸ ಮತ್ತು ನಿಕ್ಕಲ್ ಲೋಹದ ಅಂಶ ಹೆಚ್ಚಿದ್ದು, ಸಮಗ್ರ ತನಿಖೆ ನಡೆಸಲು ಮತ್ತು ರೋಗಿಗಳ ಚಿಕಿತ್ಸೆ ಮೇಲೆ ನಿರಂತರವಾಗಿ ನಿಗಾವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಸ್ವಸ್ಥರಾಗಿರುವ 505 ಜನರಲ್ಲಿ 370 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ ಮತ್ತು ಇನ್ನೂ 120 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯವಾಡ ಮತ್ತು ಗುಂಟೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಇನ್ನೂ 19 ಜನರನ್ನು ಉತ್ತಮ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಏಲೂರಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ನಿಯೋಜಿಸಿರುವ ತಜ್ಞರ ಹೊರತಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಚಿಸಿದ ಮೂವರು ಸದಸ್ಯರ ತಂಡವು ಮಂಗಳವಾರ ಎಲೂರಿಗೆ ಆಗಮಿಸಿ, ಮಾದರಿಗಳನ್ನು ಸಂಗ್ರಹಿಸಲು ನಿಗೂಢ ಕಾಯಿಲೆ ಹರಡಿರುವ ಪ್ರದೇಶಗಳನ್ನು ಸುತ್ತುವರೆದಿದೆ.
ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಏಲೂರಿಗೆ ಭೇಟಿ ನೀಡಿದ್ದು, ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಸಂತ್ರಸ್ತರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಅಲ್ಲಾ ಕಾಳಿ ಕೃಷ್ಣ ಶ್ರೀನಿವಾಸ್ ಹೇಳಿದ್ದರು.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತಂಡವು ನಡೆಸಿದ ತನಿಖೆಯಲ್ಲಿ ರೋಗಿಗಳ ರಕ್ತದ ಮಾದರಿಗಳಲ್ಲಿ ಸೀಸ ಮತ್ತು ನಿಕ್ಕಲ್ ಕಣಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂತೆಯೇ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಸಹ ಪರೀಕ್ಷೆಗಳನ್ನು ನಡೆಸುತ್ತಿದ್ದು ವರದಿಗಾಗಿ ಕಾಯುತ್ತಿದ್ದೇವೆ ಎಂದು ಪ್ರಕಟಣೆ ತಿಳಿಸಿದೆ.
ಸೀಸ ಮತ್ತು ನಿಕ್ಕಲ್ ಕಣಗಳು ವಿಷಕಾರಿ ಕೈಗಾರಿಕಾ ತ್ಯಾಜ್ಯ ವಿಸರ್ಜನೆಯಾಗಿರಬಹುದು, ಅದು ಕುಡಿಯುವ ನೀರಿನೊಂದಿಗೆ ಬೆರೆತುಹೋಗುತ್ತದೆ ಎನ್ನಲಾಗಿದೆ.