Homeಕರ್ನಾಟಕಹಿಜಾಬ್‌ ವಿಚಾರದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ: ಕ್ಷಮೆ ಕೇಳಿದ ಟಿವಿ ಚಾನೆಲ್‌ ಪತ್ರಕರ್ತರು

ಹಿಜಾಬ್‌ ವಿಚಾರದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ: ಕ್ಷಮೆ ಕೇಳಿದ ಟಿವಿ ಚಾನೆಲ್‌ ಪತ್ರಕರ್ತರು

ಸುವರ್ಣ ನ್ಯೂಸ್‌, ಟಿ.ವಿ. 9, ದಿಗ್ವಿಜಯ ಟಿವಿ, ಪವರ್ ಟಿವಿ, ನ್ಯೂಸ್‌ ಫಸ್ಟ್‌ ಲೈವ್ ಟಿ.ವಿ., ಪಬ್ಲಿಕ್‌ ಟಿ.ವಿ., ಬಿ.ಟಿ.ವಿ., ಈ.ಟಿ.ವಿ. ಭಾರತ್‌ ಪ್ರತಿನಿಧಿಗಳಿಗೆ ಶಿವಮೊಗ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ತರಾಟೆಗೆ ತೆಗೆದುಕೊಂಡಿದೆ.

- Advertisement -
- Advertisement -

ಹಿಜಾಬ್‌- ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ವರದಿ ಮಾಡುತ್ತಿರುವ ಹಲವು ದೃಶ್ಯ ಮಾಧ್ಯಮಗಳು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ಈ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ.

ಶಿವಮೊಗ್ಗದಲ್ಲಿ ವರದಿಗಾರರೊಬ್ಬರು ಮಗುವೊಂದನ್ನು ಓಡಿಸಿಕೊಂಡು ಹೋಗಿ ಫೋಟೋ ತೆಗೆದದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕೆಲವು ಮಾಧ್ಯಮಗಳ ಪತ್ರಕರ್ತರಿಗೆ ಸೂಚನೆ ನೀಡಿತ್ತು. ಸಮಿತಿಯ ಮುಂದೆ ಹಾಜರಾದ ಪತ್ರಕರ್ತರು ತಪ್ಪೊಪ್ಪಿಗೆ ಮುಚ್ಚಳಿಕೆ ಬರೆದಿದ್ದಾರೆಂದು ಬಲ್ಲಮೂಲಗಳು ತಿಳಿಸಿವೆ.

ಬಾಲನ್ಯಾಯ ಕಾಯ್ದೆ (ಮಕ್ಕಳ ರಕ್ಷಣೆ ಹಾಗೂ ಪೋಷಣೆ) 2015ರ ಸೆಕ್ಷನ್‌ 29ರ ಅಡಿಯಲ್ಲಿ ರಚಿತವಾಗಿರುವ ಸಮಿತಿಯು ಮಕ್ಕಳ ಹಕ್ಕುಗಳ ಉಲ್ಲಂಘನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಆಯ್ದ ಮಾಧ್ಯಮಗಳ ಪತ್ರಕರ್ತರಿಗೆ ಬುದ್ಧಿ ಹೇಳಿದೆ.

ದಿನಾಂಕ 17.02.2022ರಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಸಂಬಂಧಪಟ್ಟ ಕೆಲವು ಮಾಧ್ಯಮ ಪ್ರತಿನಿಧಿಗಳು ಹಾಜರಾಗಲು ಕ್ರಮವಹಿಸುವಂತೆ ಸೂಚಿಸಿತ್ತು.

ಇದನ್ನೂ ಓದಿರಿ: ಮಕ್ಕಳ ಹಕ್ಕುಗಳು ಉಲ್ಲಂಘನೆಯಾದರೆ ಕರೆ ಮಾಡಿ: ಆಯೋಗದ ಸದಸ್ಯ ಪರಶುರಾಮ್‌

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡ ದೃಶ್ಯಗಳು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜಿಲ್ಲಾ ಮುಖ್ಯಸ್ಥರು, ವರದಿಗಾರರು ಹಾಗೂ ಕ್ಯಾಮೆರಾಮನ್‌ಗಳು ಸಮಿತಿಯ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿತ್ತು.

ರಾಜ್ಯಾದ್ಯಂತ ಸುದ್ದಿಯಾಗಿರುವ, ವಿದ್ಯಾರ್ಥಿ ಸಮುದಾಯದಲ್ಲಿ ಗೊಂದಲಕ್ಕೆಡೆ ಮಾಡಿಕೊಟ್ಟ ‘ಹಿಜಾಬ್‌’ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮದವರು ಮಕ್ಕಳ ಹಕ್ಕುಗಳಿಗೆ ಧಕ್ಕೆ ತರುತ್ತಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡ ದೃಶ್ಯವನ್ನು ಗಮನಿಸಲಾಗಿದೆ. ಮಕ್ಕಳಿಗೆ ಮಾನಸಿಕ ತೊಂದರೆಯಾಗುವಂತೆ ಚಿತ್ರೀಕರಿಸಿದ ದೃಶ್ಯವನ್ನು ಗಮನಿಸಿದ್ದು ಇದು ಬಾಲ ನ್ಯಾಯ ಕಾಯ್ದೆ 2015ರ ಸೆಕ್ಷನ್‌ 75ರ ಪ್ರಕಾರ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಕೆಲವು ಟಿ.ವಿ.ಚಾನೆಲ್‌ಗಳು ಶಿವಮೊಗ್ಗ ಶಾಲೆಗಳಿಂದ ನೇರ ಪ್ರಸಾರ ಮಾಡಿವೆ ಎಂದು ಸಮಿತಿ ತಿಳಿಸಿತ್ತು.

ಸುವರ್ಣ ನ್ಯೂಸ್‌, ಟಿ.ವಿ. 9, ದಿಗ್ವಿಜಯ ಟಿವಿ, ಪವರ್ ಟಿವಿ, ನ್ಯೂಸ್‌ ಫಸ್ಟ್‌ ಲೈವ್ ಟಿ.ವಿ., ಪಬ್ಲಿಕ್‌ ಟಿ.ವಿ. ಮತ್ತು ಬಿ.ಟಿ.ವಿ. ಚಾನೆಲ್‌ಗಳಲ್ಲಿ ದೃಶ್ಯಗಳು ಬಿತ್ತರಗೊಂಡಿವೆ. ಈ ವಿಷಯ ತುರ್ತು ಇದ್ದು, ಸದರಿ ಮಾಧ್ಯಮದ ಜಿಲ್ಲಾ ಮುಖ್ಯಸ್ಥರು, ವರದಿಗಾರರು, ಕ್ಯಾಮೆರಾಮನ್‌ಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಲಭ್ಯವಿಲ್ಲದ ಕಾರಣ ವೈಯಕ್ತಿಕವಾಗಿ ಪತ್ರ ವ್ಯವಹರಿಸಲು ಸಮಯ ಕಡಿಮೆ ಇರುವುದರಿಂದ ಸಂಬಂಧಪಟ್ಟ ಮಾಧ್ಯಮದವರು ತುರ್ತಾಗಿ ದಿನಾಂಕ 18.02.2022ರಂದು ಬೆಳಿಗ್ಗೆ 11 ಗಂಟೆಗೆ ಸಮಿತಿ ಎದುರು ಹಾಜರಾಗುವಂತೆ ನಿರ್ದೇಶನ ನೀಡಬೇಕು ಎಂದು ವಾರ್ತಾ ಇಲಾಖೆಗೆ ಸಮಿತಿ ಪತ್ರ ಬರೆದಿತ್ತು.

ಸಮಿತಿಯ ಸೂಚನೆಯ ಮೇರೆಗೆ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ಸಂಬಂಧಪಟ್ಟ ಮಾಧ್ಯಮಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದರು. ಸಭೆ ಹಾಜರಾದ ಪತ್ರಕರ್ತರು ಮತ್ತೆ ಕಾನೂನು ಉಲ್ಲಂಘಿಸದಂತೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ಸಭೆಗೆ ಹಾಜರಾಗಿದ್ದ, ಹೆಸರು ಹೇಳಲಿಚ್ಛಿಸದ ಪತ್ರಕರ್ತರೊಬ್ಬರು ‘ನಾನುಗೌರಿ.ಕಾಂ’ಗೆ ತಿಳಿಸಿದ್ದಾರೆ.

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಜಿ.ಎಂ.ರೇಖಾ, “ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಮತ್ತೆ ಮಾಡದಂತೆ ಮಾಧ್ಯಮ ಪ್ರತಿನಿಧಿಗಳು ತಿಳಿಸಿದ್ದಾರೆ” ಎಂದು ಸ್ಪಷ್ಟಪಡಿಸಿದರು.

“ಹೊಸದಾಗಿ ಪತ್ರಿಕೋದ್ಯಮಕ್ಕೆ ಬಂದವರಿರುತ್ತಾರೆ. ಅವರಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವಿರುವುದಿಲ್ಲ. ಕೆಲವರು ಹೊಸ ಕಾಯ್ದೆಗಳ ಕುರಿತು ಅಪ್‌ಡೇಟ್ ಆಗಿರುವುದಿಲ್ಲ. ಮುಂದೆ ತೊಂದರೆಯಾಗಬಾರದು. ಅರಿವು ಮೂಡಿಸುವ ಕಾರಣಕ್ಕೆ ಅವರನ್ನು ಕರೆಸಲಾಗಿತ್ತು” ಎಂದು ತಿಳಿಸಿದರು.

“ಕಾನೂನು ಉಲ್ಲಂಘಿಸಿದ ಬಳಿಕ, ನಾಳೆ ನ್ಯಾಯಾಲಯದ ಎದುರು ನಮಗೆ ಕಾನೂನು ಗೊತ್ತಿರಲಿಲ್ಲ ಎಂದು ವಾದಿಸಲು ಸಾಧ್ಯವಿಲ್ಲ” ಎಂದ ಅವರು, “ನೋಟಿಸ್‌ ನೀಡಲಾಗಿದ್ದ ಎಲ್ಲ ಮಾಧ್ಯಮದವರು ಹಾಗೂ ಇತರ ಸ್ಥಳೀಯ ಮಾಧ್ಯಮಗಳ ಪ್ರತಿನಿಧಿಗಳು ಹಾಜರಾಗಿದ್ದರು” ಎಂದು ಮಾಹಿತಿ ನೀಡಿದರು.

“ಹಿಜಾಬ್‌ ಬೇಕೋ, ಶಿಕ್ಷಣ ಬೇಕೋ ಎಂದು ಮಕ್ಕಳಲ್ಲಿ ಪ್ರಶ್ನಿಸುವುದು ಸರಿಯಲ್ಲ ಎಂದು ಮಾಧ್ಯಮದವರಿಗೆ ಮನವರಿಕೆ ಮಾಡಿದ್ದೇವೆ. ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಏನೇನೋ ಕಾರಣಗಳನ್ನು ಮುಂದಿಟ್ಟು ಮಕ್ಕಳನ್ನು ಶಿಕ್ಷಣದಿಂದ ವಂಚಿಸಿದರೆ ಅವರು ಮುಖ್ಯವಾಹಿನಿಗೆ ಬರುವುದೇ ಕಷ್ಟವಾಗುತ್ತದೆ. ದೇಶದ ಭವಿಷ್ಯವೇ ಮಕ್ಕಳು. ಹೀಗಾಗಿ ನಾವು ಮಕ್ಕಳ ವಿಚಾರವಾಗಿ ಗಂಭೀರವಾಗಿ ಯೋಚಿಸಬೇಕು” ಎಂದು ಅವರು ಮನವಿ ಮಾಡಿದರು.

“ನಿಷೇದಾಜ್ಞೆ ಜಾರಿ ಮಾಡಿದರೂ ಶಾಲಾ ಕಾಲೇಜುಗಳ ಬಳಿ ಮಾಧ್ಯಮದವರು ಹೋಗಿದ್ದಾರೆ. ಈ ಕುರಿತೂ ಮನವರಿಕೆ ಮಾಡಿದ್ದೇವೆ. ವಿಶ್ವ ಮಕ್ಕಳ ಒಡಂಬಡಿಕೆಯಿಂದ ಹಿಡಿದು ಇತ್ತೀಚಿನ ಕಾನೂನಿನವರೆಗೂ ತಿಳಿಸಿದ್ದೇವೆ. ನಿಮಗೆ ಬಿಡುವಾದಾಗ ಎರಡು ಗಂಟೆ ಸಮಯವನ್ನು ನಮಗೆ ನೀಡಿ. ನಾವು ಬಂದು ನಿಮಗೆ ಮಕ್ಕಳ ಹಕ್ಕುಗಳ ಕುರಿತು ಮಾರ್ಗದರ್ಶನ ಮಾಡುತ್ತೇವೆ ಎಂದು ಮಾಧ್ಯಮದವರಿಗೆ ತಿಳಿಸಿದ್ದೇವೆ. ಅರಿವಿನ ಕೊರತೆಯಿಂದ ಹೀಗಾಗುತ್ತದೆ. ನಾಳೆ ನೀವು ಕಷ್ಟಕ್ಕೆ ಸಿಲುಕಿಕೊಂಡು ಒದ್ದಾಡಬೇಡಿ ಎಂದೂ ಎಚ್ಚರಿಕೆಯನ್ನು ಕೊಟ್ಟಿದ್ದೇವೆ” ಎಂದು ಅವರು ವಿವರಿಸಿದರು.

“ಮತ್ತೆ ಇದೇ ತಪ್ಪು ಪುನಾರಾವರ್ತನೆಯಾದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದೇವೆ” ಎಂದು ರೇಖಾ ಅವರು ಮಾತು ಮುಗಿಸಿದರು.


ಇದನ್ನೂ ಓದಿರಿ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...