ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಅಡ್ಡೆಸ್ಟ್ಮೆಂಟ್ ಪಾಲಿಟಿಕ್ಸ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದೀಗ ಅಧಿವೇಶನದಲ್ಲೂ ಆ ಬಗ್ಗೆ ಚರ್ಚೆಯಾಗುತ್ತಿದೆ. ನಾನು ಯಾರ ಜತೆಗಾದರೂ ಅಡ್ಡೆಸ್ಟ್ಮೆಂಟ್ ಮಾಡಿಕೊಂಡಿದ್ದೇನೆ ಎಂಬುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳುವು ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬುಧವಾರ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು, ”ನೀವು ಪದೇ ಪದೇ ವಿರೋಧ ಪಕ್ಷ ನಾಯಕ ಆಗಲ್ಲ ಎಂದು ಹೇಳುತ್ತೀರಿ, ಹಾಗಿದ್ದರೆ ನೀವು ಯಾರ ಜೊತೆಗೂ ಅಡ್ವಸ್ಟ್ಮೆಂಟ್ ಮಾಡಿಕೊಂಡಿದ್ದೀರಿ” ಎಂದು ಸಿದ್ದರಾಮಯ್ಯ ಅವರನ್ನು ಕೆಣಕಿದರು.
ಯತ್ನಾಳ ಅವರ ಈ ಮಾತಿಗೆ ಗರಂ ಆದ ಸಿಎಂ ಸಿದ್ದರಾಮಯ್ಯ ಅವರು, ”ನಾನು ಯಾರ ಜೊತೆಗೂ ನನ್ನ ಜೀವನದಲ್ಲಿ ಅಡ್ಡೆಸ್ಟ್ಮೆಂಟ್ ರಾಜಕೀಯ ಮಾಡಿಲ್ಲ, ಅಂತಹ ಜಾಯಮಾನವೇ ನನ್ನದಲ್ಲ” ಎಂದು ಗುಡುಗಿದರು.
”ನೀವು ಪದೇ ಪದೇ ಮಾತನಾಡುವುದರಿಂದ ಸಂಸದೀಯ ಪಟು ಆಗಲ್ಲ. ನೀವು ಎಷ್ಟೇ ಕಿರುಚಾಡಿದರೂ ನನಗೆ ಇರುವ ಮಾಹಿತಿ ಪ್ರಕಾರ ನಿಮಗೆ ವಿಪಕ್ಷ ನಾಯಕ ಮಾಡುವುದಿಲ್ಲ. ಅರಗ ಜ್ಞಾನೇಂದ್ರ ಆಕಾಂಕ್ಷಿ ಅಲ್ಲ, ಅಶ್ವತ್ಥ ನಾರಾಯಣ, ಬೊಮ್ಮಾಯಿ, ಆಶೋಕ್ ಆಕಾಂಕ್ಷಿಗಳಾಗಿದ್ದಾರೆ” ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಅರಗ, ಅಶೋಕ ಮತ್ತು ಅಶ್ವತ್ಥನಾರಾಯಣ ಅವರುತಾವು ಆಕಾಂಕ್ಷಿ ಅಲ್ಲ ಎಂದರು.
ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರಿಯಿಸಿದ ಯತ್ನಾಳ, ”ಹಿಂದೆ ನೀವು ಕುಮಾರಸ್ವಾಮಿ ಅವರಿಗೆ ಅಪ್ಪನಾಣೆಗೂ ಸಿಎಂ ಆಗಲ್ಲ ಎಂದು ಹೇಳಿದ್ದೀರಿ. ಆದರೆ, ಅವರು ಸಿಎಂ ಆದರು. ಈಗ ನೀವು ನನಗೆ ವಿಪಕ್ಷ ನಾಯಕ ಆಗಲ್ಲ ಎನ್ನುತ್ತಿದ್ದೀರಿ. ಹಾಗಾಗಿ ನಾನೇ ವಿಪಕ್ಷ ನಾಯಕ ಆಗುತ್ತೇನೆ” ಎಂದರು.
”ನೀವೆಷ್ಟೇ ಬೆಂಕಿ ಹಚ್ಚಿದರೂ ಹೊತ್ತಿಕೊಳ್ಳಲ್ಲ. ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಎನ್ನುತ್ತಿದ್ದೀರಿ. ಹೀಗಾಗಿ ನೀವು ಯಾರ ಜೊತೆಗೋ ಅಡ್ಡೆಸ್ಟ್ಮೆಂಟ್ ಮಾಡಿಕೊಂಡಿರಬೇಕು” ಎಂದು ಯತ್ನಾಳ ಮತ್ತೆ ಛೇಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ನ ಲಕ್ಷಣ ಸವದಿ, ”ವಿರೋಧಪಕ್ಷದ ಸ್ಥಾನವನ್ನು ಬಿಜೆಪಿಯವರು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎರವಲು ಸೇವೆಯ ಮೇಲೆ ಬಿಟ್ಟುಕೊಡಲಿದ್ದಾರೆ” ಎಂದು ಲೇವಡಿ ಮಾಡಿದರು.
”ಕುಮಾರಸ್ವಾಮಿ ಅವರೇ, ಆರಂಭದಲ್ಲಿ ನೀವು ವಿರೋಧಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡಿ, ವಿರೋಧ ಪಕ್ಷದ ನಾಯಕನ ಸ್ಥಾನ ಕುಮಾರಸ್ವಾಮಿ ಅವರ ಮನೆ ಬಾಗಿಲಿಗೆ ಬರುತ್ತದೆ. ಹೀಗಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಬಿಜೆಪಿಯ ಯಾವುದೇ ನಾಯಕ ಕೂರುತ್ತಿಲ್ಲ. ಆ ಸ್ಥಾನಕ್ಕಾಗಿ ಪರಸ್ಪರ ಕಚ್ಚಾಡುತ್ತಿದ್ದಾರೆ” ಎಂದೂ ಕುಟುಕಿದರು.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜು.26, 27ರವರೆಗೆ ಅವಕಾಶ: ಸಚಿವ ಕೆಜೆ ಜಾರ್ಜ್