ಗುರುವಾರ (ಅ.07) ಬಿಡುಗಡೆಯಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಿಂದ ಸಂಸದ ವರುಣ್ ಗಾಂಧಿ ಮತ್ತು ಅವರ ತಾಯಿ ಮೇನಕಾ ಗಾಂಧಿಯನ್ನು ಕೈ ಬಿಟ್ಟಿರುವ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿರುವ ವರುಣ್ ಗಾಂಧಿ,’ ಕಳೆದ ಐದು ವರ್ಷಗಳಿಂದ ನಾನು ಒಂದೇ ಒಂದು ಸಭೆಗೂ ಹಾಜರಾಗಿಲ್ಲ. ಸಮಿತಿಯಲ್ಲಿ ಇದ್ದೆ ಎಂದು ನನಗೆ ಅನಿಸುತ್ತಿಲ್ಲ’ ಎಂದಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ರೈತರ ಕೊಲೆ ಬಗ್ಗೆ ತೀವ್ರ ಟೀಕೆಗಳ ಮೂಲಕ ಟ್ವೀಟ್ ಮಾಡಿ ವರುಣ್ ಗಾಂಧಿ ಸುದ್ದಿಯಾಗಿದ್ದರು. ಗುರುವಾರ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ 80 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಅವರನ್ನು ಮತ್ತು ಅವರ ತಾಯಿ ಮೇನಕಾ ಗಾಂಧಿ ಹೆಸರನ್ನು ಕೈಬಿಡಲಾಗಿದೆ.
“ಕಳೆದ ಐದು ವರ್ಷಗಳಿಂದ ನಾನು ಒಂದೇ ಒಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಹಾಜರಾಗಿಲ್ಲ. ನಾನು ಅದರಲ್ಲಿ ಇದ್ದೆನೆಂದು ನಾನು ಭಾವಿಸುವುದಿಲ್ಲ” ಎಂದು 41 ವರ್ಷ ವಯಸ್ಸಿನ ವರುಣ್ ಗಾಂಧಿ ತಿಳಿಸಿದ್ದಾರೆ ಎಂದು ANI ಉಲ್ಲೇಖಿಸಿದೆ.
ಇದನ್ನೂ ಓದಿ: ‘ಅತ್ಯಂತ ಸ್ಪಷ್ಟ’ – ಮತ್ತೆ ರೈತರ ಪರ ಟ್ವೀಟ್ ಮಾಡಿದ ಬಿಜೆಪಿ ನಾಯಕ ವರುಣ್ ಗಾಂಧಿ
ಸುಬ್ರಮಣಿಯನ್ ಸ್ವಾಮಿ ಮತ್ತು ಮಾಜಿ ಕೇಂದ್ರ ಸಚಿವ ಬೀರೇಂದ್ರ ಸಿಂಗ್ ಅವರು ಕೂಡ ಪಕ್ಷವನ್ನು ಟೀಕಿಸುತ್ತಿದ್ದು, ಒಕ್ಕೂಟ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ನಿಲುವುಗಳನ್ನು ಹೊಂದಿದ್ದ ಇವರನ್ನು ಕಾರ್ಯಕಾರಿಣಿಯಿಂದ ಹೊರಗಿಡಲಾಗಿದೆ.
ಎಲ್.ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಂತಹ ಅನೇಕ ಕೇಂದ್ರ ಸಚಿವರು ಮತ್ತು ಹಿರಿಯ ನಾಯಕರು ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಜೆಪಿಯ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಲಖಿಂಪುರ್ ಖೇರಿ ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿದ್ದು, ಪ್ರಕರಣ ದಾಖಲಾಗಿದೆ. ಆದರೆ, ಇಲ್ಲಿಯವರೆಗೂ ಇನ್ನು ಬಂಧಿಸಿಲ್ಲ. ಹತ್ಯಾಕಾಂಡದ ಬಗ್ಗೆ ಮಾತನಾಡಿದ ಏಕೈಕ ಬಿಜೆಪಿ ನಾಯಕ ವರುಣ್ ಗಾಂಧಿ.
ಘಟನೆಯ ಸ್ಪಷ್ಟ ಮತ್ತು ಧೀರ್ಘ ವಿಡಿಯೊವನ್ನು ಟ್ವೀಟ್ ಮಾಡಿದ್ದ ವರುಣ್ ಗಾಂಧಿ, “ವೀಡಿಯೊ ಅತ್ಯಂತ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಕೊಲೆ ಮಾಡುವ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅಂದು ಚೆಲ್ಲಿದ ರೈತರ ಮುಗ್ಧ ರಕ್ತಕ್ಕೆ ಹೊಣೆಗಾರಿಕೆ ವಹಿಸಬೇಕು. ಪ್ರತಿಯೊಬ್ಬ ರೈತನ ಮನಸ್ಸಿನಲ್ಲಿ ಹಠ ಮತ್ತು ಕ್ರೌರ್ಯದ ಸಂದೇಶ ಪ್ರವೇಶಿಸುವ ಮೊದಲು ನ್ಯಾಯ ಒದಗಿಸಬೇಕು” ಎಂದು ಹೇಳಿದ್ದರು.
The video is crystal clear. Protestors cannot be silenced through murder. There has to be accountability for the innocent blood of farmers that has been spilled and justice must be delivered before a message of arrogance and cruelty enters the minds of every farmer. ???? pic.twitter.com/Z6NLCfuujK
— Varun Gandhi (@varungandhi80) October 7, 2021
ಈ ಹಿಂದೆಯೂ ಟ್ವೀಟ್ ಮಾಡಿದ್ದ ಅವರು, ರೈತರ ಸಾವಿನಲ್ಲಿ ಭಾಗಿಯಾದವರನ್ನು ಖಂಡಿಸಿದ್ದಲ್ಲದೆ, ಸರ್ಕಾರವು ತಾಳ್ಮೆಯಿಂದ ಮತ್ತು ಸಂಯಮದಿಂದ ವರ್ತಿಬೇಕು ಎಂದು ಒತ್ತಾಯಿಸಿದ್ದರು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಮತ್ತು ಮೃತಪಟ್ಟ ರೈತರ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡುವಂತೆ ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ರೈತ ಪರ ದನಿ ಎತ್ತಿದ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಗೇಟ್ಪಾಸ್