ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿಯ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಸಿಂಗ್, ”ನನ್ನ ಮೇಲಿನ ಒಂದೇ ಒಂದು ಆರೋಪ ಸಾಬೀತಾದರೂ ನಾನು ನೇಣು ಹಾಕಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಬೇಕು ಮತ್ತು ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕಳೆದ ಎರಡು ವಾರಗಳಿಂದ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ದೆಹಲಿ ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: ಕುಸ್ತಿಪಟುಗಳ ಪ್ರತಿಭಟನೆ: ಬೆಂಬಲಕ್ಕಾಗಿ ದೇಶದ ರೈತರು, ಸಾರ್ವಜನಿಕರಿಗೆ ಬಜರಂಗ್ ಪುನಿಯಾ ಮನವಿ
ಶನಿವಾರದ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆಯ ಪ್ರಕಾರ, ಮೇ 7 ರಂದು, ಪಂಜಾಬ್, ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದ ಸಂಘಟನೆಯ ಹಲವಾರು ಮುಖಂಡರು ಜಂತರ್ ಮಂತರ್ನಲ್ಲಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಲಾಗಿದೆ.
ಕುಸ್ತಿ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪದ ಕುರಿತು ಮಾತನಾಡಿದ ರೈತ ನಾಯಕ ಜೋಗಿಂದರ್ ಸಿಂಗ್, ”ಅವರು ಅಧಿಕಾರದಲ್ಲಿದ್ದಾರೆ. ಅಧಿಕಾರ ಮತ್ತು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಈ ವ್ಯಕ್ತಿಯ ವಿರುದ್ಧ ನಿಲ್ಲುವುದು ತುಂಬಾ ಕಷ್ಟ. ಆದರೆ ನಾವು ಅದರ ವಿರುದ್ಧ ಹೋರಾಡುತ್ತೇವೆ ಎಂದು ಹೇಳಿದ್ದಾರೆ.
”ನಮ್ಮನ್ನು ತಡೆಯುವುದು ಸರ್ಕಾರದ ಕೆಲಸ ಆದರೆ ನಾವು ಹೋಗಬೇಕಾದ ಸ್ಥಳಕ್ಕೆ ನಾವು ಹೋಗುತ್ತೇವೆ, ಅವರು ನಮ್ಮನ್ನು ತಡೆಯಲು ಪ್ರಯತ್ನಿಸಿದರೆ ಅದು ಅವರಿಗೆ ನಷ್ಟವಾಗುತ್ತದೆ. ಇಲ್ಲಿ ಉಳಿಯುವ ಯಾವುದೇ ಯೋಜನೆ ಇಲ್ಲ, ಸರ್ಕಾರ ಮತ್ತು ಆಡಳಿತ ನಮ್ಮನ್ನು ತಡೆದರೆ, ನಾವು ಇಲ್ಲಿಯೇ ಇರಬೇಕಾಗುತ್ತದೆ” ಎಂದು ಅವರು ಎಎನ್ಐಗೆ ತಿಳಿಸಿದರು.
ಗಮನಾರ್ಹವಾದ ವಿಚಾರವೆಂದರೆ ಸಂಯುಕ್ತ ಕಿಸಾನ್ ಮೋರ್ಚಾ, ಈಗ ರದ್ದಾದ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಒಂದು ವರ್ಷದ ವರೆಗೆ ರೈತರ ಪ್ರತಿಭಟನೆಯನ್ನು ಮುನ್ನಡೆಸಿತ್ತು.