Homeಮುಖಪುಟಲೈಂಗಿಕ ದೌರ್ಜನ್ಯ ಪ್ರಕರಣ: ನನ್ನ ಘನತೆಗಾಗಿ ಹೋರಾಟ ಮುಂದುವರೆಸುತ್ತೇನೆ- ನಟಿ ಭಾವನಾ

ಲೈಂಗಿಕ ದೌರ್ಜನ್ಯ ಪ್ರಕರಣ: ನನ್ನ ಘನತೆಗಾಗಿ ಹೋರಾಟ ಮುಂದುವರೆಸುತ್ತೇನೆ- ನಟಿ ಭಾವನಾ

’ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿಲ್ಲ. ನನ್ನೊಳಗೆ ಈ ಭಯವಿದೆ’

- Advertisement -
- Advertisement -

“ತೀರ್ಪಿನ ಬಗ್ಗೆ ಯೋಚಿಸದೆ ನಾನು, ನನ್ನ ಘನತೆಗಾಗಿ ಗಟ್ಟಿಯಾದ ಹೋರಾಟವನ್ನು ಮುಂದುವರೆಸುತ್ತೇನೆ” ಎಂದು ಐದು ವರ್ಷಗಳ ಹಿಂದಿನ ಕಹಿ ಘಟನೆ ಬಗ್ಗೆ ಸುದೀರ್ಘ ಮೌನ ಮುರಿದಿದ್ದಾರೆ ಬಹುಭಾಷಾ ನಟಿ ಭಾವನಾ ಮೇನನ್‌.

ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ‘ದಿ ಮೋಜೋ ಸ್ಟೋರಿ’ ಯ ಕಾರ್ಯಕ್ರಮವಾದ ‘ದಿ ಗ್ಲೋಬಲ್ ಟೌನ್ ಹಾಲ್’ ನಲ್ಲಿ ನೇರ ಸಂದರ್ಶನ ನೀಡುವಾಗ, 2017ರ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ತಾವು ಅನುಭವಿಸಿದ ಹಿಂಸೆ, ಅವಮಾನ, ಆಘಾತ, ಮಾನಸಿಕ ಕಿರುಕುಳಗಳ ಬಗ್ಗೆ 35 ವರ್ಷದ ನಟಿ ಭಾವನಾ ಮುಕ್ತವಾಗಿ ಮಾತನಾಡಿದ್ದಾರೆ.

ತಾನು ತನ್ನ ಘನತೆಯನ್ನು ಮರಳಿ ಪಡೆಯಲು ಬಯಸುತ್ತೇನೆ ಎಂದು ಹೇಳಿರುವ ಅವರು, ತನ್ನ ಪತಿ, ಕುಟುಂಬ ಸದಸ್ಯರು ಮತ್ತು ಸ್ನೇಹಿತರು, ತನಗಾಗಿ ಪ್ರತಿಭಟನೆಗಳನ್ನು ಮಾಡಿದ ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.  ತನ್ನ ಸಂಪೂರ್ಣ ಇಚ್ಛಾಶಕ್ತಿಯೇ ತನ್ನನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದಿದ್ದಾರೆ.

ಈ ಘಟನೆಯಿಂದಾಗಿ “ನನ್ನ ಘನತೆಯನ್ನು ಒಂದು ಮಿಲಿಯನ್ ತುಂಡುಗಳಾಗಿ ಮಾಡಲಾಗಿದೆ. ಕೆಲವೊಮ್ಮೆ ತಾನು ಅನುಭವಿಸಿದ್ದೆಲ್ಲ ದುಃಸ್ವಪ್ನ ಎಂದು ಭಾವಿಸಿದ ದಿನಗಳೂ ಇದ್ದವು. ಆದರೆ ಅದು ಹಾಗಲ್ಲ ಅದೆಲ್ಲವೂ ನಿಜ” ಎಂದಿದ್ದಾರೆ.

ಇದನ್ನೂ ಓದಿ: ನಟಿ ಸಂಜನಾರಿಗೆ ಅಶ್ಲೀಲ ಮೆಸೇಜ್‌‌: ಆ್ಯಡಂ ಬಿದ್ದಪ್ಪ ಅರೆಸ್ಟ್‌

ನಿರೂಪಕಿ ಬರ್ಖಾ ದತ್ ಜೊತೆಗೆ ಮಾತನಾಡಿರುವ ನಟಿ, “ನಾನು ಇನ್ನೂ ಹೆದರುತ್ತಿದ್ದೇನೆ, ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿಲ್ಲ. ನನ್ನೊಳಗೆ ಈ ಭಯವಿದೆ. ಕೆಲವೊಮ್ಮೆ ನಾನು ನಿಜವಾಗಿಯೂ ದುಃಖಿತಳಾಗಿದ್ದೇನೆ, ಕೋಪಗೊಂಡಿದ್ದೇನೆ. ನನ್ನ ಸುತ್ತಲೂ ಬೆಂಬಲ ನೀಡುವವರು ಇದ್ದರೂ ಕೂಡ ನಾನು ಒಂಟಿತನವನ್ನು ಅನುಭವಿಸಿದೆ. ನಾನು 2020 ರಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ 15 ದಿನಗಳವರೆಗೆ ನ್ಯಾಯಾಲಯದಲ್ಲಿದ್ದೆ. ನ್ಯಾಯಾಲಯದಲ್ಲಿ ಸಮಯ ಕಳೆಯುವ ಪ್ರತಿ ಸೆಕೆಂಡಿಗೆ ನಾನು ನಿರಪರಾಧಿ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದೆ. ಏಳು ಮಂದಿ ವಕೀಲರು ನನ್ನನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಆ ಘಟನೆಯನ್ನು ನೆನಪಿಸುತ್ತಿದ್ದರು. ಆಗ ನಾನು ಏಕಾಂಗಿಯಾಗಿದ್ದೇನೆ ಎಂದು ನನಗೆ ಅನಿಸಿತ್ತು” ಎಂದು ನಟಿ ಭಾವನಾ ಭಾವುಕರಾಗಿದ್ದಾರೆ.

ಆಘಾತಕಾರಿ ಘಟನೆಯ ನಂತರ ದುಷ್ಕರ್ಮಿಗಳು ಸಾಮಾಜಿಕ ಮಾಧ್ಯಮದಲ್ಲಿ ತನ್ನ ವಿರುದ್ಧ ತಮ್ಮ ಟೀಕೆಗಳನ್ನು ಹೊರಹಾಕಿದ್ದನ್ನು ಭಾವನಾ ನೆನಪಿಸಿಕೊಂಡಿದ್ದಾರೆ. ಮಲಯಾಳಂ ಚಲನಚಿತ್ರಗಳಲ್ಲಿ ಪ್ರಧಾನವಾಗಿ ನಟಿಸುತ್ತಿದ್ದ ತಾನು ಈ ಆಘಾತದಿಂದಾಗಿ ತನ್ನ ವೃತ್ತಿಜೀವನದಿಂದ ಸುದೀರ್ಘ ವಿರಾಮವನ್ನು ತೆಗೆದುಕೊಂಡಿದ್ದು, ಆಶಿಕ್ ಅಬು, ಪೃಥ್ವಿರಾಜ್, ಜಯಸೂರ್ಯ ಮತ್ತು ಶಾಜಿ ಕೈಲಾಸ್ ಅವರ ಹಲವು ಸಿನಿಮಾಗಳ ಆಫರ್‌ಗಳನ್ನು ನಿರಾಕರಿಸಿದ ನಿದರ್ಶನಗಳಿವೆ ಎಂದು ಹೇಳಿದ್ದಾರೆ.

“ಮಲಯಾಳಂ ಬಿಟ್ಟು ಈಗ ನಾನು ಬೇರೆ ಚಿತ್ರರಂಗದಲ್ಲಿ ಕೆಲಸ ಮಾಡಲು ಆರಂಭಿಸಿದ್ದೇನೆ. ಘಟನೆಯಿಂದಾಗಿ ನಾನು ಬೇರೆ ಯಾವುದಾದರೂ ದೇಶದಲ್ಲಿ ನೆಲೆಯೂರಲು ಮತ್ತು ಹೊಸದಾಗಿ ಪ್ರಾರಂಭಿಸಲು ಬಯಸಿದ ದಿನಗಳಿವೆ. ಆಘಾತಕಾರಿ ಘಟನೆಯಿಂದ ಹೊರಬಂದು ಮೊದಲು ಸಾಮಾನ್ಯ ಸ್ಥಿತಿಗೆ ಬರಬೇಕು. ನಾನು ಅಂತಹ ಸ್ಥಿತಿಯಿಂದ ಹೊರಗೆ ಬರಲು ಐದು ವರ್ಷ ಬೇಕಾಯಿತು. ಪ್ರಪಂಚದಾದ್ಯಂತ ಅದೇ ಹಂತದಲ್ಲಿ ಇತರ ಮಹಿಳೆಯರು ಇದ್ದಾರೆ. ಅವರ ಅವಸ್ಥೆಯ ಬಗ್ಗೆ ನನಗೆ ತುಂಬಾ ಬೇಸರವಾಗುತ್ತದೆ. ನಾನು ಅವರಿಗೆ ತಿಳಿಸಲು ಬಯಸುವುದೇನೆಂದರೆ ಫಲಿತಾಂಶ ಏನಾಗಬಹುದು ಎಂಬುದರ ಕುರಿತು ಚಿಂತಿಸದೆ ನಾನು ಗಟ್ಟಿಯಾಗಿ ಹೋರಾಡುತ್ತೇನೆ ”ಎಂದು ನಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದರು. ಮಲಯಾಳಂ, ಬಾಲಿವುಡ್ ಚಿತ್ರರಂಗದ ಹಲವು ತಾರೆಯರು ನಟಿಗೆ ಬೆಂಬಲ ಸೂಚಿಸಿದ್ದರು.

 ಘಟನೆಯ ಹಿನ್ನೆಲೆ:

ಫೆಬ್ರವರಿ 17, 2017 ರಂದು ತ್ರಿಶೂರ್‌ನಿಂದ ಚಲನಚಿತ್ರವೊಂದರ ಶೂಟಿಂಗ್‌ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ನಟಿ ಭಾವನಾ ಅವರನ್ನು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಪಹರಿಸಲಾಗಿತ್ತು. ಒಂದು ಗ್ಯಾಂಗ್ ಆಕೆಯನ್ನು ಬಲವಂತವಾಗಿ ಕಾರನ್ನು ಹತ್ತಿಸಿ ಎರಡು ಗಂಟೆಗಳ ಕಾಲ ವಾಹನದೊಳಗೆ ಕಿರುಕುಳ ನೀಡಿತ್ತು. ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಪ್ರಮುಖ ಆರೋಪಿ ಎಂದು ಆರೋಪಿಸಲಾಗಿತ್ತು. ನಟಿ ನೀಡಿದ್ದ ದೂರಿನ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.


ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ’ಸಂತ್ರಸ್ತೆಯಾಗಿ ಬದುಕುವುದು ಸುಲಭವಲ್ಲ’ 5 ವರ್ಷಗಳ ಪ್ರಯಾಣ ನೆನಪಿಸಿಕೊಂಡ ನಟಿ ಭಾವನಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read