HomeಮುಖಪುಟCAA, NRC: ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ!. ಪರಿಣಾಮ- ಅಂಕಿಅಂಶಗಳ ಸಂಗ್ರಹಕ್ಕೆ ಮರ್ಮಾಘಾತ..

CAA, NRC: ಬೆಟ್ಟ ಅಗೆದು ಇಲಿ ಹಿಡಿಯುವ ಕೆಲಸ!. ಪರಿಣಾಮ- ಅಂಕಿಅಂಶಗಳ ಸಂಗ್ರಹಕ್ಕೆ ಮರ್ಮಾಘಾತ..

ಸಿಎಎ, ಎನ್‌ಆರ್‌ಸಿಯಿಂದ ದೇಶಕ್ಕಾಗುವ ಸರಿಪಡಿಸಲಾಗದ ಅಪಾಯಗಳ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.

- Advertisement -
- Advertisement -

ಮೂಲ:  ಎಸ್‌.ಎ. ಅಯ್ಯರ್, ಟೈಮ್ಸ್‌ ಆಫ್‌ ಇಂಡಿಯಾ.

ಅನುವಾದ: ನಿಖಿಲ್ ಕೋಲ್ಪೆ

ಬಾಂಗ್ಲಾದೇಶಿ ನುಸುಳುಕೋರರನ್ನು ಹಿಡಿಯುವ ನೆಪದಲ್ಲಿ ಸರಕಾರ ಇಡೀ ದೇಶದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಜಾರಿಗೊಳಿಸಲು ಹೊರಟು ಕೋಮುವಾದಿ ವಿಷವನ್ನು ಹೆಚ್ಚಿಸಿದೆ. ಆರ್ಥಿಕ ಪ್ರಗತಿಗೆ ಅತ್ಯಂತ ಅನಿವಾರ್ಯವಾಗಿರುವ ಸಾಮಾಜಿಕ ಸಾಮರಸ್ಯವನ್ನು ನೆಲಕ್ಕಪ್ಪಳಿಸಲಾಗಿದೆ. ಇದರ ಅನಿರೀಕ್ಷಿತ ಅಡ್ಡ ಪರಿಣಾಮ ಎಂದರೆ, ಭಾರತದ ಅಂಕಿಅಂಶಗಳಲ್ಲಿ ಒಂದು ಕಪ್ಪುರಂಧ್ರ. ಇದರಿಂದಾಗಿ ಎಲ್ಲಾ ನಿರ್ಧಾರಗಳು ಕೇವಲ ಊಹಾಪೋಹಗಳಾಗುತ್ತವೆಯೇ ಹೊರತು ವಾಸ್ತವದ ನೆಲೆಗಟ್ಟಿನಲ್ಲಿ ಇರುವುದಿಲ್ಲ. ಅಂಕಿಅಂಶಗಳ ವಾಸ್ತವದ ಮೇಲೆ ಮಂಜು ಕವಿದರೆ, ದೇಶದಲ್ಲಿ ಯಾವುದು ಸರಿಯಾಗಿ ನಡೆಯುತ್ತಿದೆ, ಯಾವುದು ಸರಿಯಾಗಿ ನಡೆಯುತ್ತಿಲ್ಲ ಅಥವಾ ಅದನ್ನು ಸರಿಪಡಿಸುವುದು ಹೇಗೆ ಎಂಬುದೂ ತಿಳಿಯುವುದಿಲ್ಲ.

ಎನ್ಆರ್‌ಸಿ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಗಳು ಏಕಾಏಕಿಯಾಗಿ ಕೆಲವು ರಾಜ್ಯಗಳಲ್ಲಿ ಅಂಕಿಅಂಶಗಳ ಸಂಗ್ರಹವನ್ನೇ ಅಸಾಧ್ಯ ಕೆಲಸವನ್ನಾಗಿ ಮಾಡಿದೆ. 2021ರ ಜನಗಣತಿ, ಎನ್‌ಆರ್‌ಸಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)- ಈ ಮೂರೂ ಅಧ್ವಾನವಾಗಲಿವೆ. ಜನಗಣತಿಯ ಮನೆಮನೆ ಸಮೀಕ್ಷೆ ಎನ್‌ಪಿಆರ್ ಜೊತೆಯಲ್ಲಿಯೇ ನಡೆಯಲಿದೆ. ಆದರೆ, ಈಗ ತಮ್ಮ ಪೌರತ್ವ ಕಳೆದುಕೊಳ್ಳುವ ಭೀತಿಯಿಂದ ಬಹಳಷ್ಟು ಜನರು ಯಾವುದೇ ಮಾಹಿತಿ ನೀಡಲು ಸಿದ್ಧರಿಲ್ಲ ಮತ್ತು ಸಮೀಕ್ಷೆಗೆ ಹೋದವರನ್ನೇ ಥಳಿಸಬಹುದು.

ಎನ್‌ಆರ್‌ಸಿ ಮತ್ತು ಸಿಎಎ ವಿವಾದಾತ್ಮಕವಾಗಿದ್ದು, ಜನಗಣತಿಗೆ ಅದೇ ಗತಿಯಾಗಬಾರದು. ಆದರೆ, ಜನಸಾಮಾನ್ಯರು ಯಾವುದೇ ಸಮೀಕ್ಷೆಗಳ ನಡುವಿನ ವ್ಯತ್ಯಾಸಗಳನ್ನು ಸುಲಭದಲ್ಲಿ ಗುರುತಿಸಲಾರರು. ಆಂಧ್ರಪ್ರದೇಶದಲ್ಲಿ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್‌ (ಎನ್‌ಎಸ್‌ಎಸ್‌ಓ)ನ ಅಧಿಕಾರಿಗಳ ಮೇಲೆ ಕೇವಲ ಸಾಮಾಜಿಕ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದಕ್ಕಾಗಿ ಗ್ರಾಮಸ್ಥರು ದಾಳಿ ಮಾಡಿದ್ದರು. ಯಾಕೆಂದರೆ ಅದು ಯಾವುದೋ ರೀತಿಯಲ್ಲಿ ಎನ್‌ಆರ್‌ಸಿಯ ಜೊತೆ ಸಂಬಂಧ ಹೊಂದಿದೆ ಎಂದು ಅವರು ನಂಬಿದ್ದರು.

ಪಶ್ಚಿಮ ಬಂಗಾಳದಲ್ಲಿ ಎನ್‌ಎಸ್‌ಎಸ್‌ಓ ಮಾಹಿತಿ ಸಂಗ್ರಾಹಕರು ಕೇವಲ ಶಿಕ್ಷಣ, ಶುಚಿತ್ವ ಮತ್ತು ಉದ್ಯೋಗದ ಕುರಿತ ಮಾಹಿತಿ ಸಂಗ್ರಹಕ್ಕೆ ತಿಣುಕಾಡುತ್ತಿದ್ದಾರೆ. ಭಯಗೊಂಡ ಗ್ರಾಮಸ್ಥರ ಪ್ರತಿರೋಧ ಎಷ್ಟು ಹೆಚ್ಚಾಗುತ್ತಿದೆಯೆಂದರೆ, ಸ್ವಾತಂತ್ರ್ಯೋತ್ತರದಲ್ಲಿ ಮೊದಲ ಬಾರಿಗೆ ಈ ಸಮೀಕ್ಷೆಯನ್ನೇ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಜನರಲ್ಲಿ ಬೆಳೆಯುತ್ತಿರುವ ಅಪನಂಬಿಕೆ ಮತ್ತು ಆಕ್ರೋಶ ಎಷ್ಟರ ಮಟ್ಟಿಗೆ ಇದೆಯೆಂದರೆ, ಎನ್‌ಎಸ್‌ಎಸ್‌ಓ ಸಿಬ್ಬಂದಿಗೆ ಪೊಲೀಸ್ ರಕ್ಷಣೆ ಅನಿವಾರ್ಯವಾಗಿದೆ. ಒಂದು ವೇಳೆ ರಕ್ಷಣೆ ನೀಡಿದರೂ ಜನರು ಬೇಕೆಂದೇ ಸುಳ್ಳು ಹೇಳಿದರೆ, ಅಥವಾ ಮಾಹಿತಿ ನೀಡಲು ನಿರಾಕರಿಸಿದರೆ, ಇಡೀ ಸಮೀಕ್ಷೆಯೇ ನಿಷ್ಪ್ರಯೋಜಕವಾಗುತ್ತದೆ.

ಉತ್ತಮ ಆಡಳಿತಕ್ಕಾಗಿ ಸರಕಾರ ಮತ್ತು ಜನರ ನಡುವೆ ಕನಿಷ್ಟ ಮಟ್ಟದ ನಂಬಿಕೆಯಾದರೂ ಬೇಕಾಗುತ್ತದೆ. ಅದೀಗ ವೇಗವಾಗಿ ಕರಗುತ್ತಿದೆ. ದಿಲ್ಲಿಯ ಶಹೀನ್‌ಬಾಗ್‌ನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ಮಹಿಳೆಯರು “ಐ ಲವ್ ಇಂಡಿಯಾ” ಎಂಬ ಪಟ್ಟಿಯನ್ನು ತಲೆಗೆ ಕಟ್ಟಿಕೊಂಡಿದ್ದಾರೆ. ಭಾರತದ ಧ್ವಜವನ್ನು ಎತ್ತಿಹಿಡಿದಿದ್ದಾರೆ, ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಸಂವಿಧಾನವು ನೀಡಿರುವ ಸಮಾನತೆಯ ಹಕ್ಕುಗಳನ್ನು ರಕ್ಷಿಸುವ ಮತ್ತು ಅದನ್ನು ದಮನಿಸುತ್ತಿರುವ ಅಧಿಕಾರಸ್ಥರ ವಿರುದ್ದ ಹೋರಾಡುವ ಪಣ ತೊಟ್ಟಿದ್ದಾರೆ. ಆದರೂ ಬಿಜೆಪಿಯ ಹಿರಿಯ ನಾಯಕರೇ ಈ ಪ್ರತಿಭಟನಕಾರರನ್ನು ಭಯೋತ್ಪಾದಕರು, ದೇಶವಿರೋಧಿಗಳು, ಪಾಕಿಸ್ತಾನದ ಪರವಾಗಿರುವವರು, ದೇಶವನ್ನು ಒಡೆಯಬಯಸುವ “ತುಕ್ಡೇ ತುಕ್ಡೇ ಗ್ಯಾಂಗ್” ಎಂದೆಲ್ಲಾ ಕರೆಯುತ್ತಿದ್ದಾರೆ. ಇಂತಹಾ ಕೋಮುವಾದಿ ಸುಳ್ಳುಗಳು ಸರಕಾರ ಮತ್ತು ಜನರ ಮಧ್ಯೆ ಇರುವ ಅಲ್ಪಸ್ವಲ್ಪ ನಂಬಿಕೆಯನ್ನೂ ಹಾಳುಗೆಡವಬಹುದು. ನ್ಯಾಯ ವ್ಯವಸ್ಥೆ, ಆರ್ಥಿಕತೆ ಮತ್ತು ಅಂಕಿಸಂಕಿಗಳ ವ್ಯವಸ್ಥೆಗಳೇ ಕುಸಿದು ಬೀಳುವಂತೆ ಮಾಡಬಹುದು.

ಮೊದಲೇ ಎನ್‌ಎಸ್‌ಎಸ್‌ಓ ಸಮೀಕ್ಷೆದಾರರು ಗ್ರಾಮಗಳಿಗೆ ಭೇಟಿ ನೀಡುವುದೇ ಇಲ್ಲ; ಹತ್ತಿರದ ಚಹಾದ ಅಂಗಡಿಗಳಲ್ಲಿ ಕುಳಿತು ಮನಬಂದಂತೆ ಪ್ರಶ್ನಾವಳಿಗಳನ್ನು ತುಂಬುತ್ತಾರೆ ಎಂದು ಟೀಕಾಕಾರರು ಹೇಳುತ್ತಾರೆ. ಸಂಶಯ ತುಂಬಿದ ಗುಂಪುಗಳು ಸಮೀಕ್ಷೆದಾರರನ್ನು ಹೊಡಿಬಡಿಯಲು ಶುರುಮಾಡಿದರೆ, ಇದು ಇನ್ನಷ್ಟು ತೀವ್ರವಾಗಿ ಬಿಗಡಾಯಿಸಬಹುದು.

ಮಹಾರಾಷ್ಟ್ರ, ಕೇರಳ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಂತಾದ ಹಲವಾರು ರಾಜ್ಯಗಳು ಸಿಎಎ, ಎನ್‌‌ಆರ್‌ಸಿ, ಎನ್‌ಪಿಆರ್ ಈ ಮೂರರಲ್ಲಿ ಒಂದೆರಡನ್ನು ಅಥವಾ ಮೂರನ್ನೂ ಜಾರಿಗೊಳಿಸಲು ನಿರಾಕರಿಸಿವೆ. ಬಿಜೆಪಿಯು ಕೆಲವು ಪ್ರಶ್ನೆಗಳನ್ನು- ಉದಾಹರಣೆಗೆ ಹೆತ್ತವರ ಜನ್ಮಸ್ಥಾನದ ಕುರಿತ ಪ್ರಶ್ನೆಗಳನ್ನು ಕೈಬಿಡುವ ಪ್ರಸ್ತಾಪ ಮುಂದಿಟ್ಟಿದೆ.  ಜನರ ಕೋಪ- ಭಯವನ್ನು ಶಮನ ಮಾಡಲು ಅಖಿಲ ಭಾರತ ಮಟ್ಟದಲ್ಲಿ ಎನ್‌ಆರ್‌ಸಿ ಕುರಿತು ಇನ್ನೂ ನಿರ್ಧಾರ ಮಾಡಲಾಗಿಲ್ಲ ಎಂದು ಹೇಳುತ್ತಿದೆ. ಆದರೆ, ಅಮಿತ್ ಶಾ ಅದು ನಡೆಯಲಿದೆ ಎಂದು ದೃಢವಾಗಿ ಶಪಥ ಮಾಡಿದಂದಿನಿಂದ ಹೆಚ್ಚಿನವರಿಗೆ ಅದು ನಡೆಯಲಿದೆ ಎಂದು ಖಚಿತವಾಗಿದೆ ಮತ್ತು ಅದನ್ನು ವಿಫಲಗೊಳಿಸಲು ಜನರು ಸಜ್ಜಾಗಿದ್ದಾರೆ.

ಬಿಜೆಪಿಯು ಬಾಂಗ್ಲಾದೇಶದಿಂದ ಬಂದ ಮುಸ್ಲಿಂ “ಗೆದ್ದಲು ಹುಳುಗಳನ್ನು” ಮತ್ತು “ನುಸುಳುಕೋರರನ್ನು” ದೇಶದಿಂದ ಹೊರದಬ್ಬುವ ಭರವಸೆ ನೀಡುವ ಮೂಲಕ ಮತಗಳನ್ನು ಗಳಿಸಲು ಯತ್ನಿಸುತ್ತಿದೆ. ಆದರೆ, ಅಸ್ಸಾಮಿನಲ್ಲಿಯೇ 19 ಲಕ್ಷದಷ್ಟು ಭಾರೀ ಪ್ರಮಾಣದ ಜನರು ತಾವು ಭಾರತೀಯರು ಎಂದು ಸಾಬೀತುಪಡಿಸಲು ವಿಫಲರಾದರು. ಅವರಲ್ಲಿ 12 ಲಕ್ಷ ಹಿಂದೂಗಳು, ಆರು ಲಕ್ಷ ಮುಸ್ಲಿಮರು ಮತ್ತು ಒಂದು ಲಕ್ಷ ಆದಿವಾಸಿಗಳು. ಇದರಿಂದಾಗಿ ಈ ಸಮೀಕ್ಷೆಯು ದಾಖಲೆ ಇಲ್ಲದವರನ್ನು ಪತ್ತೆಹಚ್ಚಿದೆಯೇ ಹೊರತು, ಕಾನೂನು ಬಾಹಿರವಾಗಿ ವಾಸಿಸುತ್ತಿರುವವರನ್ನಲ್ಲ ಎಂಬುದು ಸ್ಪಷ್ಟವಾಗಿದೆ.

ಸಿಎಎ ತ್ವರಿತವಾಗಿ ಎಲ್ಲಾ ಮುಸ್ಲಿಮೇತರರನ್ನು ಸಿಂಧುಗೊಳಿಸುವ ಭರವಸೆ ನೀಡುತ್ತದೆ. ಅಂದರೆ, ಕೇವಲ ಮುಸ್ಲಿಮರನ್ನು ಮಾತ್ರ ದೇಶಭ್ರಷ್ಟರೆಂದು ಘೋಷಿಸಿ, ನಿರಾಶ್ರಿತರ ಶಿಬಿರಗಳಿಗೆ ತಳ್ಳಲಾಗುತ್ತದೆ. ಅಸ್ಸಾಮಿನ ಅನುಭವದ ಪ್ರಕಾರ ರಾಷ್ಟ್ರೀಯ ಮಟ್ಟದಲ್ಲಿ ಒಂದು ಕೋಟಿ ಮುಸ್ಲಿಮರೂ ಸೇರಿದಂತೆ ಎಂಟು ಕೋಟಿ ಜನರನ್ನು ಹಿಡಿಯಲು 50,000 ಕೋಟಿ ರೂ. ಖರ್ಚಾಗುತ್ತದೆ. ಅಷ್ಟು ಜನರನ್ನು ನಿರಾಶ್ರಿತರ ಶಿಬಿರಗಳಿಗೆ ತಳ್ಳಿದರೆ ಅದೊಂದು ಮಹಾ ಮಾನವಹಕ್ಕು ಕರ್ಮಕಾಂಡವಾಗಿ ಅಂತರರಾಷ್ಟ್ರೀಯವಾಗಿ ಭಾರತದ ಮುಖಕ್ಕೆ ಮಸಿಬಳಿಯಲಿದೆ ಮತ್ತು ಜಾಗತಿಕವಾಗಿ ದಿಗ್ಬಂಧನವನ್ನೂ ಎದುರಿಸಬೇಕಾದೀತು.

ಇವೆಲ್ಲದರ ಅಡ್ಡಪರಿಣಾಮ ಎಂದರೆ, ಅಂಕಿಅಂಶಗಳ ಸಂಗ್ರಹ ಮತ್ತು ವಿಶ್ಲೇಷಣಾ ವ್ಯವಸ್ಥೆಗೆ ಸಂಪೂರ್ಣ ಹಾನಿ ಮತ್ತು ಅಭಿವೃದ್ಧಿ ಕುರಿತ ಸುಳ್ಳುಗಳಿಗೆ ಹಾದಿ. ದೇಶದ ಜಿಡಿಪಿಯನ್ನು 2.5 ಶೇಕಡಾದಷ್ಟು ಹೆಚ್ಚಾಗಿ ತೋರಿಸಲಾಗಿದೆ ಎಂದು ಇತ್ತೀಚೆಗೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ಹೇಳಿದ್ದರು. ಇತ್ತೀಚಿನ ಸಮೀಕ್ಷೆಯೊಂದು ನಿರುದ್ಯೋಗವು ಮೂರುಪಟ್ಟು ಹೆಚ್ಚಳವಾಗಿ 6.1 ಶೇಕಡಾ ತಲುಪಿದೆ ಎಂದು ಹೇಳಿತ್ತು. ಆದರೆ ಈ ವರದಿಯನ್ನು ತಡೆಹಿಡಿದ ಸರಕಾರ ನಂತರ ಅದು ದೋಷಪೂರಿತ ಎಂದು ತಳ್ಳಿಹಾಕಿತ್ತು. ನಂತರ ಎನ್‌ಎಸ್‌ಎಸ್‌ಓ ಸಮೀಕ್ಷೆಯು ಜನರ ತಲಾವಾರು ಕೊಳ್ಳುವ ಶಕ್ತಿಯಲ್ಲಿ ಕುಸಿತವಾಗಿದೆ ಮತ್ತು ಜಿಡಿಪಿಯ “ಪವಾಡಸದೃಶ” ಹೆಚ್ಚಳದ ಹೊರತಾಗಿಯೂ ಬಡತನದಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು ಹೇಳಿದಾಗ, ಈ ವರದಿಯನ್ನೂ ಮೊದಲಿಗೆ ಮುಚ್ಚಿಹಾಕಿ, ನಂತರ ದೋಷಪೂರಿತವಾಗಿದೆ ಎಂದು ತಿರಸ್ಕರಿಸಲಾಗಿತ್ತು.

ಅಂಕಿಅಂಶ ವ್ಯವಸ್ಥೆಯನ್ನು ಸುಧಾರಿಸಿ ಪುನರ್ರಚನೆ ಮಾಡಲು ಗೌರವಾನ್ವಿತ ಅರ್ಥಶಾಸ್ತ್ರಜ್ಞ ಪ್ರೊಣಬ್ ಸೇನ್ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು. ಆದರೆ, ಕೋಮುವಾದಿ ಧ್ರುವೀಕರಣದಿಂದಾಗಿ ಸಮೀಕ್ಷೆದಾರರಿಗೆ ನಾಗರಿಕರು ಹೊಡೆದರೆ, ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರೆ, ರಾಜ್ಯ ಸರಕಾರಗಳು  ಸಮೀಕ್ಷೆಗಳನ್ನು ಜಾರಿಗೊಳಿಸಲು ನಿರಾಕರಿಸಿದರೆ ಪ್ರೊಣಬ್ ಸೇನ್ ಅಸಹಾಯಕರಾಗುತ್ತಾರೆ. ಸುಪ್ರೀಂಕೋರ್ಟ್ ಈ ಸಿಎಎಯನ್ನು ರದ್ದುಗೊಳಿಸಿ, ಇತಿಹಾಸದ ಅತ್ಯಂತ ಕರಾಳ ಅಧ್ಯಾಯವೊಂದನ್ನು ಕೊನೆಗೊಳಿಸುತ್ತದೆ ಎಂದು ಆಶಿಸಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...