”ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಎನ್ನುತ್ತೀರಿ. ಆದರೆ ಮನೆಯಲ್ಲಿ ಒಂದು ಬಡಿಗೆ ಇಲ್ಲ, ಚಾಕು ಸಹ ಇಲ್ಲ. ಎಲ್ಲ ಹಿಂದೂಗಳು ಮನೆಯಲ್ಲಿ ಒಂದು ತಲವಾರ್ ಇಟ್ಟುಕೊಳ್ಳಿ” ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ಕೊಟ್ಟಿದ್ದಾರೆ. ಅಲ್ಲದೇ ಒಂದು ಹಿಂದೂ ಹುಡುಗಿ ಹೋದರೆ ಹತ್ತು ಮುಸ್ಲಿಂ ಹುಡುಗಿಯರನ್ನು ಹಾರಿಸಿಕೊಂಡು ಹೋಗಿ ಎಂದು ಜಿಹಾದ್ ವಿಚಾರವಾಗಿ ನಾಲಿಗೆ ಹರಿಬಿಟ್ಟಿದ್ದಾರೆ.
ಫೆಬ್ರುವರಿ 19ರಂದು ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುತಾಲಿಕ್, ”ಆಯುಧ ಪೂಜೆ ಅಂದ್ರೆ ನಟ್, ಸ್ಕ್ರೂ ಡ್ರೈವರ್, ಕಂಪಾಸು, ಸ್ಪಾನರು, ಸುಡುಗಾಡು, ಸಂತಿ ಪೂಜಾ ಮಾಡುತ್ತೀರಿ. ಶಸ್ತ್ರ ಅಂದರೆ ತಲವಾರ್, ಕತ್ತಿ, ಕುರುಪಿ, ಕೊಡಲಿ, ಚಾಕು. ಇವನ್ನೆಲ್ಲ ಇಟ್ರೆ ಪೊಲೀಸ್ ಬಿಡ್ತಾರೇನ್ರೀ ಅಂತೀರಿ. ಪೊಲೀಸರು ಅರೆಸ್ಟ್ ಮಾಡೋದಾದರೆ ದುರ್ಗಾಮಾತೆ ಕೈಯಲ್ಲಿ ಹತ್ತು ಶಸ್ತ್ರಗಳಿವೆ, ಮೊದಲು ದುರ್ಗೆಯನ್ನು ಅರೆಸ್ಟ್ ಮಾಡಲಿ. ಹನುಮನ ಕೈಯಲ್ಲಿ ಗದೆ ಇದೆ, ಮೊದಲು ಹನಮಂತನ ಅರೆಸ್ಟ್ ಮಾಡಲಿ, ಈಶ್ವರನ ಕೈಯಲ್ಲಿ ತ್ರಿಶೂಲ ಇದೆ, ಈಶ್ವರನನ್ನು ಅರೆಸ್ಟ್ ಮಾಡಲಿ.. ಪ್ರತಿ ಹಿಂದೂ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಬೇಕು. ಆ ಖಡ್ಗ ತಲವಾರ್ ಹೊಡೆಯೋದಕ್ಕಲ್ಲ, ಗೋರಕ್ಷಣೆಗಾಗಿ, ನಮ್ಮ ಅಕ್ಕ-ತಂಗಿಯರ ರಕ್ಷಣೆಗಾಗಿ, ರಾಷ್ಟ್ರ ರಕ್ಷಣೆಗಾಗಿ, ಮಠಮಂದಿರಗಳ ರಕ್ಷಣೆಗಾಗಿ” ಎಂದು ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಕಾರ್ಕಳದಲ್ಲಿ ಸ್ಪರ್ಧಿಸುವುದಾಗಿ ಪ್ರಮೋದ್ ಮುತಾಲಿಕ್ ಘೋಷಣೆ: ಕ್ಷೇತ್ರದ ರಾಜಕೀಯ ಚಿತ್ರಣ ಹೀಗಿದೆ…
ಇದೇ ವೇಳೆ ಲವ್ ಜಿಹಾದ್ ವಿಚಾರ ಪ್ರಸ್ತಾಪಿಸಿ, ”ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ಇದಕ್ಕೆ ಒಂದು ಉಪಾಯ ನಮ್ಮ ಬಳಿ ಇದೆ. ಲವ್ ಜಿಹಾದ್ ನಲ್ಲಿ ಒಂದು ಹಿಂದೂ ಹುಡುಗಿ ಹೋದರೆ, ಇದಕ್ಕೆ ಪ್ರತಿಯಾಗಿ 10 ಮುಸ್ಲಿಂ ಹುಡುಗಿಯರನ್ನು ಹಾರಿಸಬೇಕು” ಎಂದು ಮುತಾಲಿಕ್ ಕರೆ ನೀಡಿದ್ದಾರೆ.
ಲವ್ ಜಿಹಾದ್ಗೆ ಕೌಂಟರ್ ಕೊಡಲು ಮುಸ್ಲಿಂ ಯುವತಿಯರನ್ನು ಹಾರಿಸಿಕೊಂಡು ಹೋಗಿ. ನಾವು ನಿಮಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳುವ ಮೂಲಕ ಪ್ರಮೋದ್ ಮುತಾಲಿಕ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
”ಅವರಿಗೆ (ಮುಸ್ಲಿಂ ಸಮುದಾಯ) ಎಚ್ಚರಿಕೆ ಕೊಡಬೇಕಾಗಿದೆ. ನಮಗೂ ಲೈನ್ ಹೊಡೆಯೋದು ಗೊತ್ತು. ನಾನಲ್ಲ, ಇಲ್ಲಿ ಸೇರಿರುವ ಎಲ್ಲರಿಗೂ ನಾನು ಆಹ್ವಾನ ಕೊಡುತ್ತಿದ್ದೇನೆ. ಒಂದು ಹಿಂದೂ ಹುಡುಗಿ ಹೋದರೆ 10 ಮುಸ್ಲಿಂ ಹುಡುಗಿಯರನ್ನು ಹಾರಿಸಬೇಕು. ನಿಮಗೆ ಎಲ್ಲಾ ರೀತಿಯ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು” ಎಂದು ಹೇಳಿದ್ದಾರೆ.
”ಹಿಂದೂ ಹೆಣ್ಣುಮಕ್ಕಳಿಗೆ ಲವ್ ಜಿಹಾದ್ ಬಗ್ಗೆ ಎಚ್ಚರಿಕೆ ನೀಡುವುದು ಶ್ರೀರಾಮ ಸೇನೆಯ ಕರ್ತವ್ಯವಾಗಿದೆ. ‘ಲವ್ ಜಿಹಾದ್’ನಿಂದ ಶೋಷಣೆಗೆ ಒಳಗಾಗಿ ದೇಶಾದ್ಯಂತ ನೂರಾರು ಹೆಣ್ಣು ಮಕ್ಕಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಹುಡುಗಿಯರನ್ನು ಎಚ್ಚರಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬೇಕು” ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಹಿಂದೂ ಸಂಘಟನೆಗಳ ಒಕ್ಕೂಟದಿಂದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಬಿಜೆಪಿಯಿಂದ ಹಿಂದೂ ಹೋರಾಟಗಾರರಿಗೆ 25 ಸೀಟು ಕೊಡುವಂತೆ ಆಗ್ರಹ ಮಾಡಿದ್ದೇವೆ. ನಮ್ಮ ಮನವಿಗೆ ಬಿಜೆಪಿ ನಮಗೆ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ.
”ರಾಜ್ಯದ 25 ಕಡೆಗೆ ಹಿಂದೂ ಸಂಘಟನೆಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ನನಗೆ ಬಾಗಲಕೋಟೆಯ ತೇರದಾಳ ಹಾಗೂ ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಬಂತು. ಆದರೆ ಕಾರ್ಕಳ ವಿಧಾನಸಭೆ ಕ್ಷೇತ್ರ ಫೈನಲ್ ಆಗಿದೆ. ನೂರಕ್ಕೆ ನೂರು ಗೆದ್ದು ಹಿಂದುತ್ವದ ಪತಾಕೆಯನ್ನು ಕಾರ್ಕಳದ ಮೂಲಕ ಹಾರಿಸುತ್ತೇನೆ” ಎಂದು ಪ್ರಮೋದ್ ಮುತಾಲಿಕ್ ಹೇಳಿದರು.
”ಇತ್ತೀಚೆಗೆ ಒಬ್ಬ ರಾಷ್ಟ್ರಮಟ್ಟದ ನಾಯಕರು ಒಂದು ಮಾತನ್ನು ಹೇಳಿದರು. ಅದರಿಂದ ನನಗೆ ಬಹಳ ದುಃಖವಾಯಿತು. ನೋವಿನ ಜೊತೆಗೆ ಸಿಟ್ಟು ಕೂಡ ಬಂತು. ಏಕೆಂದರೆ ಹಿಂದೂ ಸಮಾಜ ಮುಸ್ಲಿಂರ ಜೊತೆ ಹೊಂದಿಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಅವರು ನಾವು ಅಣ್ಣತಮ್ಮಂದಿರ ತರಹ ಇರಬೇಕು ಅಂದ್ರು. ಇದೇ ಮಾತನ್ನು ಜೀಜಾಮಾತಾ ತನ್ನ ಮಗನಿಗೆ ಹೇಳಿದ್ರೆ ಏನಾಗ್ತಿತ್ತು? ನಾನು ಆ ರಾಷ್ಟ್ರೀಯ ಚಿಂತಕರಿಗೆ ಹೇಳುತ್ತೇನೆ. ನೀವು ತಪ್ಪು ಹೆಜ್ಜೆ ಇಡುತ್ತಿದ್ದೀರಾ. ಗೋಹಂತಕರ ಜೊತೆ ಹೊಂದಿಕೊಂಡು ಹೋಗಬೇಕಾ? ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಮಸೀದಿ ಮೇಲೆ ಮೈಕ್ ಹಾಕೊಂಡು ಅಲ್ಲಾ ಎನ್ನುವವರ ಜೊತೆ ಹೊಂದಿಕೊಂಡು ಹೋಗಬೇಕಾ” ಎಂದು ಪರೋಕ್ಷವಾಗಿ ಹೆಸರು ಹೇಳದೇ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ ವಿರುದ್ಧ ಕಿಡಿಕಾರಿದ್ದಾರೆ.