ತೆಲುಗು ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್ಟಿಆರ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ, ಎಸ್.ಎಸ್. ರಾಜಮೌಳಿ ನಿರ್ದೇಶನದ ರೌದ್ರಂ ರಣಂ ರುಧಿರಂ (RRR) ಚಿತ್ರವು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ಬಂಡಿ ಸಂಜಯ ಕುಮಾರ್ ಬೆದರಿಕೆ ಹಾಕಿದ್ದಾರೆ.
ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ಪ್ರಸ್ತುತ ಟೀಸರ್ನಲ್ಲಿ ಜೂನಿಯರ್ ಎನ್ಟಿಆರ್ ಬುಡಕಟ್ಟು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ನ ಒಂದು ಭಾಗದಲ್ಲಿ ಅವರು ಮುಸ್ಲಿಂ ವೇಷಭೂಷಣದಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಭುಗಿಲೆದ್ದ ಪ್ರತಿಭಟನೆ; ಪೊಲೀಸ್ ಪ್ರಧಾನ ಕಚೇರಿ ಸೇರಿದಂತೆ 2 ಚರ್ಚುಗಳಿಗೆ ಬೆಂಕಿ!
ರಾಜಮೌಳಿ “ಐತಿಹಾಸಿಕ ಸಂಗತಿಗಳನ್ನು ವಿರೂಪಗೊಳಿಸುತ್ತಾರೆ” ಎಂದು ಆರೋಪಿಸಿದ ಬಿಜೆಪಿ ನಾಯಕ, “ವಿವಾದ ಸೃಷ್ಟಿಸಲು ರಾಜಮೌಳಿ ಕೊಮರಾಮ್ ಭೀಮ್ನ ತಲೆಯ ಮೇಲೆ ಟೋಪಿ ಹಾಕಿದರೆ, ನಾವು ಸುಮ್ಮನಿರುತ್ತೇವೆಯೇ? ಅದು ಎಂದಿಗೂ ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಎಸ್.ಎಸ್.ರಾಜಮೌಳಿ ಮೇಲೆ ದೈಹಿಕವಾಗಿಯೂ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, “ನೀವು ಕೋಮರಾಮ್ ಭೀಮ್ ಅವರನ್ನು ದುರ್ಬಲಗೊಳಿಸುವ ಮೂಲಕ, ಆದಿವಾಸಿಗಳ ಭಾವನೆಗಳನ್ನು ಹಾಳು ಮಾಡುವ ಮೂಲಕ ಚಿತ್ರ ಮಾಡಲು ಹೊರಟರೆ, ನಿಮ್ಮ ಮೇಲೆ ಹಲ್ಲೆ ನಡೆಸುತ್ತೇವೆ. ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ, ಚಿತ್ರ ಪ್ರದರ್ಶನ ಮಾಡುವ ಪ್ರತಿಯೊಂದು ಚಿತ್ರಮಂದಿರಕ್ಕೂ ನಾವು ಬೆಂಕಿ ಹಚ್ಚುತ್ತೇವೆ” ಎಂದು ಬಂಡಿ ಸಂಜಯ್ ಕುಮಾರ್ ಎಚ್ಚರಿಸಿದ್ದಾರೆ.
RRR ನಿರ್ಮಾಪಕರು ಇತ್ತೀಚೆಗೆ ಬಿಡುಗಡೆ ಮಾಡಿರುವ ಟೀಸರ್ನಲ್ಲಿ ಕೋಮರಾಮ್ ಭೀಮ್ ಪಾತ್ರದಾರಿ ಆಗಿರುವ ಜೂನಿಯರ್ ಎನ್ಟಿಆರ್ ಸುರ್ಮಾ, ತಾಯತ ಮತ್ತು ತಲೆಗೆ ಟೋಪಿ ಧರಿಸಿದ್ದರು. ಇದು ಬಲಪಂಥೀಯ ಗುಂಪುಗಳನ್ನು ಕೆರಳಿಸಿದೆ.
ಆದರೆ ನಿರ್ದೇಶಕ ರಾಜಮೌಳಿ, “ಈ ಚಿತ್ರವು ಕೋಮರಾಮ್ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಎಂಬ ಇಬ್ಬರು ಅಪ್ರತಿಮ ಬುಡಕಟ್ಟು ನಾಯಕರನ್ನು ಆಧರಿಸಿ ನಿರ್ಮಿಸುತ್ತಿರುವ ಚಿತ್ರವಾಗಿದ್ದರೂ ಸಹ ಜೀವನಚರಿತ್ರೆಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ’ಥೂ… ನಿಮ್ಮ ಯೋಗ್ಯತೆಗಿಷ್ಟು ಬೆಂಕಿ ಹಾಕ’; ಸಚಿವ ಸುಧಾಕರ್ಗೆ ಮಹಿಳಾ ವೈದ್ಯೆ ಛೀಮಾರಿ
ಟೀಸರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಅದನ್ನು ವಿರೋಧಿಸುತ್ತಿದ್ದಾರೆ ಮತ್ತು ನಿರ್ದೇಶಕ ರಾಜಮೌಳಿಯನ್ನು ವಾಚಾಮಗೋಚರವಾಗಿ ತೆಗಳುತ್ತಿದ್ದಾರೆ.
ಮೊಟ್ಟಮೊದಲನೆಯದಾಗಿ ಇದು ಸಂಪೂರ್ಣವಾಗಿ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಂರವರ ಜೀವನಾಧಾರಿತ ಚಿತ್ರವಲ್ಲ, ಆದರೆ ಅವರ ಜೀವನದ ಕೆಲ ಘಟನೆಗಳನ್ನು ಫ್ಲಾಷ್ಬ್ಯಾಕ್ನಲ್ಲಿ ತೋರಿಸಲಾಗುತ್ತದೆ. ಇಂದಿನ ಕಾಲಘಟ್ಟದ ಪಾತ್ರಗಳಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರಧಾರಿಯಾದ ರಾಂಚರಣ್ ಒಬ್ಬ ಪೊಲೀಸ್ ಪಾತ್ರಧಾರಿಯಾಗಿಯೂ, ಕೊಮರಂ ಭೀಂ ಪಾತ್ರಧಾರಿ ಜ್ಯೂ.ಯನ್ ಟಿ ಆರ್ ಮುಸ್ಲಿಂ ಯುವಕನ ಪಾತ್ರಧಾರಿಯಾಗಿಯೂ ನಟಿಸುತ್ತಿದ್ದಾರೆ. ಅದನ್ನರಿಯದೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇನ್ನು ಇದರ ಕುರಿತಾಗಿ ವಿವರಣೆ ನೀಡಬೇಕಾದ ನಿರ್ದೇಶಕ ರಾಜಮೌಳಿ, ಈ ವಿವಾದಾತ್ಮಕ ಚರ್ಚೆಗಳಿಂದ ಚಲನಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮತ್ತು ಜನರಲ್ಲಿ ಪ್ರಚಾರ ಸಿಗುತ್ತದೆಂದು ಸುಮ್ಮನಿದ್ದಾರೆ. ಚಲನಚಿತ್ರರಂಗದ ಬಹುತೇಕರು ಬಯಸುವುದು ಇಂತಹದ್ದನ್ನೇ ಅಲ್ಲವೆ?
ಸಧ್ಯಕ್ಕೆ ನಮ್ಮಲ್ಲಿಯೇ ಮೊದಲು ಎಂದು ಬ್ರೇಕಿಂಗ್ ನ್ಯೂಸ್ಗಳ ಯಾವ ಮೀಡಿಯಾಗಳೂ ಬಂದಿಲ್ಲವೆಂಬುದೇ ಸಮಾಧಾನದ ವಿಷಯ….
ವಿಶ್ವನಾಥ ಎನ್ ಅಮಾಸ