Homeಅಂಕಣಗಳುಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

ಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

"ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ 'ಕ್ರೀಮಿಲೇಯರ್' ಎಂಬ ವಾಮನನನ್ನು ಎಳೆದು ತರಲಾಗಿದೆ"

- Advertisement -
- Advertisement -

1975 ರಲ್ಲಿ ಪಂಜಾಬ್ ಸರ್ಕಾರವು ಅಲ್ಲಿನ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದಿದ್ದ ಮಜಬಿ ಸಿಖ್ ಸಮುದಾಯಕ್ಕೆ ಒಳಮೀಸಲಾತಿ ಘೋಷಿಸಿ ಆದೇಶಿಸಿದಾಗ ಆರಂಭವಾದ ಒಳಮೀಸಲಾತಿ ಪರ ವಿರೋಧದ ಚರ್ಚೆಯು ಪರಸ್ಪರ ಹೋರಾಟವಾಗಿ ಮಾರ್ಪಟ್ಟು 5 ದಶಕಗಳ ಕಾಲ ಮುಂದುವರೆಯಿತು. ಈ ನಡುವೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಾದಿಗ ದಂಡೋರ ನೇತೃತ್ವದ ಒಳಮೀಸಲಾತಿ ಪರ ಹೋರಾಟವು ಇಡೀ ದೇಶದ ರಾಜಕಾರಣದಲ್ಲಿ ಮೈಲುಗಲ್ಲಾಗಿ ನಿಂತಿದೆ. ಎರಡೂ ರಾಜ್ಯದ ಸರ್ಕಾರಗಳನ್ನು ಏಳಿಸುವ ಹಾಗೂ ಬೀಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಈ ಸಂಘಟನೆ ವಹಿಸಿದೆ. ಹಾಗಾಗಿ , ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿ ಪರ ತೀರ್ಪನ್ನು ಮಾದಿಗ ದಂಡೋರದಂತೆ ದೇಶದಾದ್ಯಂತ ಒಳಮೀಸಲಾತಿ ಪರ ಹೋರಾಟದ ಕಿಚ್ಚು ಹಚ್ಚಿದ ಹೋರಾಟಗಾರರಿಗೆ ಅರ್ಪಿಸಬೇಕಿದೆ.

ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿಯ ವಿರುದ್ಧ ತೀರ್ಪಿತ್ತಿತ್ತು. ಪಂಜಾಬಿನ ಧವಿಂದರ್ ಪ್ರಕರಣದಲ್ಲಿ ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ಪರ ತೀರ್ಪು ನೀಡಿತ್ತು. ಹೀಗಾಗಿ ಒಳಮೀಸಲಾತಿಯ ಪ್ರಶ್ನೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠದ ಮುಂದೆ ಬಂದಿತ್ತು. ಈ ಪೀಠದ ಮುಂದೆ ಬಹುಮುಖ್ಯವಾದ ಎರಡು ಪ್ರಶ್ನೆಗಳಿದ್ದವು.

1. ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವಿದೆಯೇ?

2. ಸಂವಿಧಾನಕ್ಕನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಉಪವರ್ಗೀಕರಣ (ಒಳಮೀಸಲಾತಿ) ಮಾಡಬಹುದೇ?

ಈ ಎರಡು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ದಿನಾಂಕ 01.08.2024ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು ತೀರ್ಪು ನೀಡಿದೆ. 6:1ರ ಬಹುಮತದೊಂದಿಗೆ ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ನೀಡಲಾಗಿದ್ದ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ತೀರ್ಪನ್ನು ರದ್ದುಗೊಳಿಸಿದೆ. ಈ ಮೂಲಕ ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡಬಹುದು. ಹೀಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ದಲಿತ ಪರ ತೀರ್ಪು ನೀಡಿದೆ. ಈ ಮೂಲಕ ಒಳಮೀಸಲಾತಿ ಜಾರಿಗಾಗಿ ಉಷಾ ಮೆಹ್ರಾ ಸಮಿತಿಯ ಶಿಫಾರಸಿನಂತೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡುವ ಅವಶ್ಯಕತೆ ಇಲ್ಲದಂತೆ ಮಾಡಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ರಾಜ್ಯ ಸರ್ಕಾರಗಳೇ ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿ ಮಾಡಬಹುದಾಗಿದೆ.

ಒಳಮೀಸಲಾತಿ ಜಾರಿ ಹೇಗೆ?

ಸುಪ್ರೀಂ ಕೋರ್ಟ್ ತೀರ್ಪಿನಂತೆ 7 ಜನ ನ್ಯಾಯಾಧೀಶರಲ್ಲಿ ಏಕೈಕ ಮಹಿಳಾ ನ್ಯಾಯಾಧೀಶೆಯಾಗಿರುವ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿಯವರನ್ನು ಹೊರತುಪಡಿಸಿದರೆ, ಉಳಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ, ಜಿ.ಎ.ಗವಾಯ್, ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾ ಇವರುಗಳು ರಾಜ್ಯಗಳಿಗೆ ಒಳಮೀಸಲಾತಿಯನ್ನು ನೀಡುವ ಅಧಿಕಾರವಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ, ಒಳಮೀಸಲಾತಿ ನೀಡಲು ನಿರ್ದಿಷ್ಟ ಸಮುದಾಯದ ಪ್ರಾತಿನಿಧ್ಯದ ಕೊರತೆಯನ್ನು ದೃಢಪಡಿಸಿಕೊಳ್ಳಲು ಅಂಕಿ ಅಂಶ ಸಂಗ್ರಹಿಸಲು ತಿಳಿಸುತ್ತಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಮನೋಜ್ ಮಿಶ್ರಾರವರು ಪ್ರಾತಿನಿಧ್ಯದ ಹಿಂದುಳಿದಿರುವಿಕೆಯನ್ನು ತಿಳಿದುಕೊಳ್ಳಲು ರಾಜ್ಯವು ‘ರಾಜ್ಯ ಸರ್ಕಾರದ ಉದ್ಯೋಗ’ಗಳ ಅಂಕಿ ಅಂಶವನ್ನು ಸಂಗ್ರಹಿಸಬೇಕೆಂದು ನಿರ್ದಿಷ್ಟವಾಗಿಯೇ ತಿಳಿಸಿದ್ದಾರೆ. ಉದಾಹರಣೆಗೆ, ಕರ್ನಾಟಕ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದ್ದು, ಜಸ್ಟೀಸ್ ಸದಾಶಿವ ಆಯೋಗದ ಮಾದರಿಯಲ್ಲಿಯೇ ಅಥವಾ ಅದಕ್ಕಿಂತಲೂ ಸಮರ್ಥವಾದ ಆಯೋಗವನ್ನು ರಚಿಸಿ ಅಂಕಿ ಅಂಶಗಳನ್ನು ಕ್ರೋಡೀಕರಿಸಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ.

ಈ ತೀರ್ಪಿನಲ್ಲಿ ಒಂದು ಅನ್ಯಾಯವೂ ಇದೆ

ಈಗಾಗಲೇ ಹೇಳಿದಂತೆ 6:1ರ ಬಹುಮತದೊಂದಿಗೆ ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ ‘ಕ್ರೀಮಿಲೇಯರ್’ ಎಂಬ ವಾಮನನನ್ನು ಎಳೆದು ತರಲಾಗಿದೆ. ಈ ವಾಮನ ‘ಕ್ರೀಮಿಲೇಯರ್’ ಅನ್ನು ಮೊದಲು ಪ್ರಸ್ತಾಪಿಸಿರುವ ನ್ಯಾಯಾಧೀಶರು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಜಿ.ಎ ಗವಾಯ್ ಅವರೇ ಆಗಿದ್ದಾರೆ! ಇವರು ಒಳಮೀಸಲಾತಿಗೆ ಒಪ್ಪಿಗೆ ನೀಡುತ್ತಾ, “ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೂ ಕ್ರೀಮಿಲೇಯರ್ ತತ್ವವನ್ನು ಅಳವಡಿಸಬೇಕು. ಹೀಗೆ ಅಳವಡಿಸುವಾಗ ಹಿಂದುಳಿದ ವರ್ಗಗಳ ಅನುಸರಿಸಿರುವ ಕ್ರೀಮಿಲೇಯರ್ ಮಾನದಂಡಗಳ ಬದಲಾಗಿ ಇತರೆ ಮಾನದಂಡಗಳನ್ನು ಅಳವಡಿಸಿಕೊಳ್ಳಬಹುದು” ಎಂದಿದ್ದಾರೆ. ಈ ಮೂಲಕ ಕಬಾಬಿನಲ್ಲಿ ಮುಳ್ಳಿಡುವ ಕೆಲಸವನ್ನು ಇವರೇ ಮಾಡಿದ್ದಾರೆ. ಮುಂದೆ ತೀರ್ಪು ಬರೆದಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾರವರು ಗವಾಯ್ ಅವರ ತೀರ್ಪನ್ನು ಉಲ್ಲೇಖ ಮಾಡುತ್ತಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೂ ‘ಕ್ರೀಮಿಲೇಯರ್’ ತತ್ವವನ್ನು ಅಳವಡಿಸಬೇಕೆಂದು ತೀರ್ಪಿತ್ತಿದ್ದಾರೆ. ಅಲ್ಲಿಗೆ ಪರಿಗಣನೆಯಲ್ಲಿ ಇಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ. ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಂತೂ ತಮ್ಮ ತೀರ್ಪಿನಲ್ಲಿ ಚಾತುರ್ವರ್ಣ ಪದ್ಧತಿಯನ್ನು ಸಮರ್ಥಿಸಿಕೊಳ್ಳಲು ಭಗವದ್ಗೀತೆ, ಸ್ಕಂಧ ಪುರಾಣವನ್ನೂ ಎಳೆದು ತಂದಿದ್ದಾರೆ. ಜಾತಿ ಸೃಷ್ಠಿಗೆ ಚಾತುರ್ವರ್ಣ ಪದ್ಧತಿ ಕಾರಣವಲ್ಲ, ಈ ಪದ್ಧತಿಯು ಗುಣಗಳ ಆಧಾರದ ಮೇಲಿತ್ತು, ಜನ್ಮದ ಆಧಾರವಲ್ಲ ಎಂಬ ಹಳತು ಹಿಂದುತ್ವ ಉಪದೇಶವನ್ನೂ ಮಾಡಿದ್ದಾರೆ. ಗಾಂಧೀಜಿಯವರ ಹರಿಜನ ಪದವನ್ನು ಸಮರ್ಥಿಸಿಕೊಂಡಿರುವ ನ್ಯಾಯಮೂರ್ತಿ ಮಿತ್ತಲ್ ಅಪ್ಪಿತಪ್ಪಿಯೂ ಅಂಬೇಡ್ಕರರನ್ನು ಉಲ್ಲೇಖಿಸುವುದಿಲ್ಲ.

ಮಿತ್ತಲ್ ಗವಾಯಿಯವರನ್ನು ಉಲ್ಲೇಖಿಸುತ್ತಲೇ ಪೂರ್ವಾಗ್ರಹ ಪೀಡಿತರಾಗಿ ಅಭಿಪ್ರಾಯಿಸಿದ್ದಾರೆ. ಹಿಂದುಳಿದ ವರ್ಗಗಳವರು ಐಎಎಸ್‌, ಐಪಿಎಸ್‌ ಅಥವಾ ಇತರೆ ಯಾವುದೇ ಅಖಿಲ ಭಾರತ ಮಟ್ಟದ ಸೇವೆಯಲ್ಲಿದ್ದು, ತಮ್ಮ ಸ್ಥಾನವನ್ನು ಮೇಲ್ಮಟ್ಟಕ್ಕೆರಿಸಿಕೊಂಡಿದ್ದರೆ, ಅಂತಹವರ ಮಕ್ಕಳೂ ಸಹ ಮುಂದೆ ಮೀಸಲಾತಿ ಪಡೆಯುತ್ತಾರೆ. ಅಂತವರ ಮಕ್ಕಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಳಲು ಸಾಧ್ಯವೇ? ಎಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ಪ.ಜಾ/ಪ.ಪಂ ದವರನ್ನು ಮೀಸಲಾತಿಯಿಂದ ಹೊರಗಿಡಬೇಕು. ಸೈಂಟ್ ಸ್ಟೀಫನ್ ಕಾಲೇಜು ಅಥವಾ ನಗರದ ಉತ್ತಮ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿ ಒಂದೇ ಅಲ್ಲ ಎನ್ನುವ ಇವರಿಗೆ, ವರ್ಗ ಮತ್ತು ಜಾತಿಯ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಅಸ್ಪೃಶ್ಯರೆಂಬ ಕಾರಣಕ್ಕೆ ರಾಷ್ಟ್ರಪತಿಯವರನ್ನೇ ಅವಮಾನಿಸುವ ಸಮಾಜದಲ್ಲಿ ಸಾಮಾಜಿಕ ಸಮಾನತೆ ಇರಲು ಸಾಧ್ಯವೇ ಇಲ್ಲ ಎಂಬ ಸಣ್ಣ ಅಂಶವೂ ನ್ಯಾಯಾಧೀಶರ ಗಮನಕ್ಕೆ ಬರದಿರುವುದು ವಿಷಾದನೀಯ. ಇಂತಹ ಅಭಿಪ್ರಾಯಗಳನ್ನು ನೀಡುವ ಮಿತ್ತಲ್ ಅವರು ಮತ್ತೊಂದು ಹೆಬ್ಬಂಡೆಯನ್ನು ಪರಿಶಿಷ್ಟರ ಮೀಸಲಾತಿ ಮೇಲೆ ಹಾಕಿದ್ದಾರೆ. ಅದೆಂದರೆ ಮೀಸಲಾತಿಯು ಒಂದೇ ಪೀಳಿಗೆಗೆ ಸಾಕಂತೆ! ಇದಕ್ಕೆ ಪದೇ ಪದೇ ಗವಾಯಿಯವರ ಅಭಿಪ್ರಾಯಕ್ಕೆ ಮೊರೆ ಹೋಗಿದ್ದಾರೆ. ಈ ಅಭಿಪ್ರಾಯ ಎಷ್ಟು ಬಾಲಿಶವಾಗಿದೆ ಎಂದರೆ, ಪಿಯುಸಿಯಲ್ಲಿ ಮೀಸಲಾತಿ ಪಡೆದಿರುವ ಪೋಷಕರ ಮಗ/ಮಗಳು ಪದವಿ ಓದುವಾಗ ಮೀಸಲಾತಿ ಪಡೆಯುವಂತಿಲ್ಲ! ಒಮ್ಮೆ ಮೀಸಲಾತಿ ಪಡೆದ ಡಿ ಗ್ರೂಪ್ ನೌಕರ/ಳ ಮಗ/ಮಗಳು ಮುಂದೆ ಉನ್ನತ ಹುದ್ದೆ ಪಡೆಯಲು ಮೀಸಲಾತಿ ಪಡೆಯುವಂತಿಲ್ಲ! ಇಂತಹ ಅವೈಜ್ಞಾನಿಕ ಹಾಗೂ ಸಮಾಜ ವಿರೋಧಿ ಅಭಿಪ್ರಾಯವನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ಒಟ್ಟಾರೆ ಇದೊಂದು ಸಮಾಧಾನಕರ ತೀರ್ಪು. ಆದರೆ, ದಲಿತರು ಎಚ್ಚರವಾಗಿರಬೇಕು. ಅಪ್ಪಿತಪ್ಪಿಯೂ ‘ಕ್ರೀಮಿಲೇಯರ್’ ಹೇರಲು ಬಿಡಬಾರದು. 8 ಲಕ್ಷ ಆದಾಯವಿದ್ದರೂ ಮೇಲ್ಜಾತಿಗಳಿಗೆ ಇಡಬ್ಲ್ಯುಎಸ್‌ ಮೂಲಕ ಶೇ. 10 ಮೀಸಲಾತಿ ನೀಡಲು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಬ್ರಾಹ್ಮಣರು, ಬನಿಯಾಗಳು ಎನ್ನುವ ಕಾರಣಕ್ಕೆ ಸಾಮಾಜಿಕ-ಆರ್ಥಿಕವಾಗಿ ಮುಂದುವರೆದಿರುವಿಕೆಯನ್ನು ಪರಿಗಣಿಸಲೇ ಇಲ್ಲ. ಹಾಗೆಯೇ ದಲಿತರ ವಿಚಾರದಲ್ಲಿ ಆರ್ಥಿಕ ಮುಂದುವರೆದಿರುವಿಕೆಯನ್ನು ಹಾಗೂ ಕೋಟ್ಯಾಧಿಪತಿ ದಲಿತರ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗಣನೆಗೂ ತೆಗೆದುಕೊಳ್ಳುವುದಿಲ್ಲ. ಇದಾವ ನ್ಯಾಯ? ಬ್ಯಾಂಕ್ ಖಾತೆಯಲ್ಲಿ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ದಲಿತ/ದಲಿತೆ, ಅದೇ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ಬ್ರಾಹ್ಮಣ, ಬನಿಯಾ, ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ವಿಶ್ವಕರ್ಮ ಮುಂತಾದವರಿಗೆ ಸಮಾನರೇ? ಇಂತಹ ಕನಿಷ್ಠ ತಿಳುವಳಿಕೆಯೂ ಆ ನಾಲ್ವರು ನ್ಯಾಯಾಧೀಶರಿಗೆ ಇಲ್ಲದಾಯಿತೆ? ಏಕೈಕ ದಲಿತ ನ್ಯಾಯಾಧೀಶರಿಗೂ ತಿಳಿಯದಾಯಿತೆ?

ಇದನ್ನೂ ಓದಿ : ಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ ಅರೋಲಿಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...